
ಬರಹಗಾರ: ಪೂರ್ಣಚಂದ್ರ ತೇಜಸ್ವಿ
ಎಷ್ಟೋ ಜನ ನನ್ನ ಮಿತ್ರರು ನಮ್ಮ ಸುತ್ತಲಿನ ಬಡತನ, ಜಾತೀಯತೆ, ಅನಕ್ಷರತೆ, ಭ್ರಷ್ಟಾಚಾರ, ಕೊಳಕು, ಇದನ್ನೆಲ್ಲ ನೋಡಿ ರೋಸಿಹೋಗಿ ಪ್ರಜಾಪ್ರಭುತ್ವವನ್ನು ಬಯ್ದು ಇಲ್ಲಿ ಮಿಲಿಟರಿ. ಆಳ್ವಿಕೆಯೋ, ಸರ್ವಾಧಿಕಾರಿ ಆಡಳಿತವೋ ಬಂದರೆ ಮಾತ್ರ ಎಲ್ಲ ಸರಿ ಹೋಗುತ್ತದೆಂದು ಕೋಪದಿಂದ ಬಿಸುಸುಯ್ಯುತ್ತಾರೆ. ಸಮಭಾಜಕ ವೃತ್ತದ ಅಡಿ ಇರುವ ನೂರಾರು ಹಿಂದುಳಿದ ರಾಷ್ಟ್ರಗಳಲ್ಲಿ ಇವರು ಹೇಳುವ ಎಲ್ಲ ರೀತಿಯ ಆಡಳಿತಗಳೂ ಇವೆ, ಖಾಯಿಲೆಗಳು ಮಾತ್ರ ಒಂದೇ! ಆಡಳಿತ ವಿಧಾನ ಬದಲಿಸಿದ ಮಾತ್ರಕ್ಕೆ ದೇಶ ಬದಲಾಗುವುದಿಲ್ಲ ಎಂಬುದು ಕೋಪದಲ್ಲಿ ಅವರಿಗೆ ಮರೆತೇ ಹೋಗುತ್ತದೆ. ಇದಕ್ಕಾಗಿ ` ಅವರನ್ನು ಟೀಕಿಸುವ ಅಗತ್ಯವಿಲ್ಲ. ನಾನು ಹುಟ್ಟಿ ಸಲ್ಪ ದಿನಕ್ಕೇ ಭಾರತ ಸ್ವತಂತ್ರವಾಯ್ತು. ಹಾಗಾಗಿ ನಮಗೆಲ್ಲಾ ಇದು ಹುಟ್ಟಿದೆಲ್ಲರಿಗೂ ಅನಾಯಾಸವಾಗಿ ದೊರಕುವ ಸಹಜ ಸ್ಥಿತಿ ಎಂದು ಅಲಕ್ಷಿಸುವ ಮಟ್ಟಕ್ಕೆ ಹೋಗಿದ್ದೇವೆ. ನನಗೂ ಸ್ವಾತಂತ್ರ್ಯದ ಬಗ್ಗೆ ನಮ್ಮ ಜೋಭದ್ರಗೇಡಿ ರಾಜಕಾರಣಿಗಳು ತಮ್ಮ ಚರ್ವಿತಚರ್ವಣ ಭಾಷೆಯಲ್ಲಿ ಉದ್ದುದ್ದ ಭಾಷಣ ಕೊಡುವಾಗ ಅವರು ಹೊಗಳುತ್ತಿರುವ ಸ್ವಾತಂತ್ರ್ಯ ಇದ್ದರೆಷ್ಟು ಹೋದರೆಷ್ಟು ಎನ್ನುವ ಉದಾಸೀನ ಮೂಡುತ್ತದೆ.
ನನಗೆ ನಿಜವಾಗಿಯೂ ನಮ್ಮ ಸ್ವಾತಂತ್ರ್ಯದ ಅಮೂಲ್ಯತೆಯ ಬಗ್ಗೆ ಅರಿವು, ಅಭಿಮಾನ ಮೂಡುವುದು ಮಹಾ ಯುದ್ಧದ ಮತ್ತು ಅನಂತರ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ನಡೆದ ಕಡ್ಡಾಯ ಶ್ರಮಶಿಬಿರಗಳ ಕತೆಗಳನ್ನು ಕೇಳಿದಾಗ, ಮತ್ತು ಓದಿದಾಗ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಪಣವಾಗಿಟ್ಟು ಅಲ್ಲಿಂದ ಹೇಗಾದರೂ ಮಾಡಿ ಗಡಿ ದಾಟಿ ಸ್ವಾತಂತ್ರ್ಯದ ಉಸಿರಾಡಲು ತವಕಿಸಿದವರ ಕತೆಗಳನ್ನು ಓದಿದಾಗ, ಬಡತನ, ಅನಕ್ಷರತೆ ಇತ್ಯಾದಿ ಪರಿಹಾರ ಸಾಧ್ಯವಾದ ಸಮಸ್ಯೆಗಳಿಗೆ ನಾವು ನಮ್ಮ ಸ್ವಾತಂತ್ರ್ಯವನ್ನೇ ಒತ್ತೆಯಿಡಲು ತಯ್ಯಾರಾಗುವುದು ಅಕ್ಷಮ್ಯ ಎಂದೆನಿಸುತ್ತದೆ. ಈ ಪುಸ್ತಕದ ಹಲವಾರು ಕತೆಗಳನ್ನು ಓದಿ ಮುಗಿಸಿದಾಗ ನಿಮಗೂ ಹಾಗೇ ಅನ್ನಿಸುತ್ತದೆಂದು ಭಾವಿಸಿದ್ದೇನೆ.
-ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪುಟಗಳು: 100
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !