
ಒಂದೂವರೆ ವರ್ಷದ ಬಳಿಕ 'ಸ್ಮೃತಿ ಪಟಲದಿಂದ' ಎಂಬ ಬರಹದ ಮೂರನೆಯ ಸಂಪುಟವನ್ನು ವಾಚಕರ ಮುಂದಿರಿಸುತ್ತಿದ್ದೇನೆ. ಅದರಿಂದ ಒಬ್ಬರಲ್ಲ ಒಬ್ಬರಿಗೆ ಸ್ವಲ್ಪವಲ್ಲ ಸ್ವಲ್ಪ ಪ್ರಯೋಜನ ಸಿಗಬಹುದು. ನನ್ನ ಜೀವನದ ಆಸಕ್ತಿಯ ಆರೆಂಟು ಪ್ರಧಾನ ಕ್ಷೇತ್ರಗಳನ್ನಾಯ್ದು ಅವುಗಳಿಗೆ ನಾನು ಆಕರ್ಷಿತನಾದ ಬಗೆಯನ್ನೂ ಅವುಗಳ ವಿಚಾರದಲ್ಲಿ ನಾನು ತೊಳಲಾಡಿದ ಬಗೆಯನ್ನೂ ಅವು ನನಗೆ ಕೊಟ್ಟ ಸಂತೋಷವನ್ನೂ, ಅಥವಾ ಇನ್ನಿತರ ಪ್ರಯೋಜನಗಳನ್ನೂ ಕುರಿತು ಬರೆಯುವ ಕಾಲದಲ್ಲಿ ನನಗೆ ತೋಚಿದಂತೆ, ಎಂದರೆ ಸ್ಮರಣೆಯ ಎಟುಕಿಗೆ ಸಿಕ್ಕಿದಂತೆ ಬಣ್ಣಿಸಿದ್ದೇನೆ. ಅದು ಅವೇ ವಿಷಯಗಳಲ್ಲಿ ಕುತೂಹಲವುಳ್ಳವರಿಗೆ ಪ್ರಯೋಜನವಾದೀತು ಎಂಬ ನಂಬುಗೆಯಿಂದ, ಅಷ್ಟಾಗದೆ ಹೋದರೂ, ಇದೂ ತಮ್ಮ ಪರಿಗಣನೆಗೆ ತಂದುಕೊಳ್ಳಬೇಕಾದ ವಿಷಯ ಎಂದು ಓದುಗರಿಗೆ ಅನಿಸಿದರೂ ಸಾಕು.
ಈ ಮೂರನೆಯ ಸಂಪುಟದ ಮೊದಲನೆಯ ಎರಡು ಖಂಡಗಳಲ್ಲಿ ನನ್ನ ಸುತ್ತಣ ಜೀವಂತ ಸಮಾಜದೊಡನೆ, ಆ ಸಮಾಜದ ಹಲವಾರು ವ್ಯಕ್ತಿಗಳೊಡನೆ ನಾನು ಪಡೆದು ಬಂದ ಸಂಬಂಧವನ್ನೂ ನಾನು ಬೆಸೆದುಕೊಂಡ ಸಂಬಂಧವನ್ನೂ ಸಾಕಷ್ಟು ತಿಳಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಸ್ನೇಹ, ಪರಿಚಯಗಳಿಗೊದಗಿದ ನೂರಾರು ಮಂದಿಗಳಲ್ಲಿ ಒಂದಷ್ಟು ಮಂದಿ ಎಳೆತನದಲ್ಲಿ ಕಂಡು ಮರವೆಯಾದವರು; ಸಾಕಷ್ಟು ಮಂದಿ ಅಲ್ಲಿ, ಇಲ್ಲಿ ಒಂದು ದಿನವೋ ನಾಲ್ಕು ದಿನವೋ ಸ್ನೇಹಕ್ಕೆ ಸಿಕ್ಕಿ ಅನಂತರ ಕಾಣದಾದವರು. ಇನ್ನು ಕೆಲಕೆಲವರು ದೀರ್ಘಾವಧಿಯಲ್ಲಿ ಮೇಲಿಂದ ಮೇಲೆ ಕಾಣಸಿಕ್ಕಿದವರು. ಅನೇಕರ ವಿಷಯದಲ್ಲಿ 'ಇವರನ್ನು ಕುರಿತು ಅಷ್ಟೆಲ್ಲ ಹೇಳಲು ಏನಿದೆ?' ಎಂದು ಓದುಗರಿಗೆ ಅನಿಸಲೂಬಹುದು. ಲೋಕದ ಜನಜಂಗುಳಿಯಲ್ಲಿ ಪ್ರತ್ಯೇಕವಾಗಿ ಕಾಣಿಸಲಾರದ, ನಾನು ಬಣ್ಣಿಸಿದ ಹಲವು ಮಿತ್ರರು ಸೇರಿಕೊಂಡಿರುವುದು ಸಾಧ್ಯ. ಅಂಥವರಲ್ಲಿ ಎಷ್ಟು ಜನಗಳನ್ನು ಉದ್ದೇಶಪಡದೆಯೇ ನನ್ನ ನೆನಪು ಮರೆತಿದೆಯೋ ಏನೋ ! ಆದಷ್ಟು ಹೆಚ್ಚಿಗೆ ನೆನಪನ್ನು ತಂದುಕೊಳ್ಳುವುದಕ್ಕೆ ಪ್ರಯತ್ನಿಸಿ ಅವರನ್ನು ಕುರಿತು ಎರಡೋ, ನಾಲ್ಕೋ ಮಾತುಗಳನ್ನು ಇಲ್ಲಿ ಹೇಳಿದ್ದುಂಟು. ವಿವಿಧ ಸಂದರ್ಭಗಳಲ್ಲಿ ಅಂಥವರು ನನ್ನ ಬದುಕಿಗೆ ಒಂದಲ್ಲ ಒಂದು ಸಂಗತಿಯಲ್ಲಿ ಸಂತೋಷವನ್ನು ಕೊಟ್ಟಿದ್ದಾರೆ ; ತಿಳಿವನ್ನು ಕೊಟ್ಟಿದ್ದಾರೆ; ಪೋಷಣೆಯನ್ನು ಕೊಟ್ಟಿದ್ದಾರೆ. ಆ ಬದುಕು ಸಹನೀಯವಾಗುವುದಕ್ಕೆ ಪ್ರತ್ಯಕ್ಷವೋ, ಅಪ್ರತ್ಯಕ್ಷವೋ ಆದ ಉಣಿಸನ್ನಿತ್ತಿದ್ದಾರೆ. ಅವರಿಲ್ಲದೆ ಹೋಗಿದ್ದರೆ ಇಂದಿನ ನಾನು ನಾನಾಗುತ್ತಿರಲಿಲ್ಲ. ಆ ಒಬ್ಬ ನಾನು ಸುತ್ತಣ ಸಾಮಾಜಿಕರಿಗೆ ಎಷ್ಟೊಂದು ಋಣಿಯಾಗಿದ್ದೇನೆ ಎಂಬುದನ್ನು ನಾನು ಮರೆಯುವಂತೆ ಇಲ್ಲ.
ಇಷ್ಟು ಮಾತುಗಳನ್ನು ಹೇಳಿ ಸಮಾಜಕ್ಕೆ, ಅದರಲ್ಲಿಯೂ ಕನ್ನಡ ಓದಬಲ್ಲ ಸಮಾಜಕ್ಕೆ, ನನ್ನ ಬದುಕಿನ ಅನುಭವಗಳ ಸಾರವನ್ನು, ಚಿಂತನೆಗಳನ್ನು ನಮ್ರನಾಗಿ ಅರ್ಪಿಸಿ ವಿರಮಿಸುತ್ತೇನೆ.
- ಶಿವರಾಮ ಕಾರಂತ
ಪುಟಗಳು: 228
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !