
ಬರಹಗಾರ: ಪೂರ್ಣಚಂದ್ರ ತೇಜಸ್ವಿ
ಈ ಪುಸ್ತಕದಲ್ಲಿರುವ ಡಾಕ್ಟರ್ ಕ್ರೆಸ್ಟೆನ್ ಕತೆ ‘ಮಂತ್ರಹಸ್ತ’ ಹಲವು ಕಾರಣಗಳಿಂದ ಓದುಗರ ಮನಸ್ಸನ್ನು ಆಳವಾಗಿ ಕಲಕುವ ವಿಚಿತ್ರವಾದ ಕಥೆ. ಕ್ರೆಸ್ಟೆನ್ ಒಬ್ಬ ಮಂತ್ರವಾದಿಯಂಥ ವಿಚಿತ್ರ ವೈದ್ಯ. ತನ್ನ ಚಿಕಿತ್ಸೆಯ ಮಾಂತ್ರಿಕ ಗುಣದಿಂದ ಹಿಮ್ಲರನಂಥ ಪರಮ ಕ್ರೂರಿ ಮತ್ತು ಆದರ್ಶವಾದಿಯ ಅತ್ಯಂತ ಆಪ್ತರಲ್ಲೊಬ್ಬನಾಗುತ್ತಾನೆ. ಹಿಮ್ಲರ್ ಎಂದರೆ ಮೂರು ಲೋಕವೂ ನಡುಗುತ್ತಿದ್ದಂಥ ರಾಕ್ಷಸ. ಹಿಟ್ಲರನ ಪಾಶವೀ ಕಲ್ಪನೆಗಳನ್ನೆಲ್ಲ ಕಾರ್ಯಗತಗೊಳಿಸುತ್ತಿದ್ದ ದುಷ್ಟ. ಅವನ ಕೃತ್ಯಗಳನ್ನು, ಆದರ್ಶಗಳನ್ನು, ಧ್ಯೇಯ ಧೋರಣೆಗಳೆಲ್ಲವನ್ನೂ ಸಾರಾಸಗಟಾಗಿ ತಿರಸ್ಕರಿಸಿದ್ದ, ಅಸಹ್ಯಪಡುತ್ತಿದ್ದ ಮಾನವತಾವಾದಿ ಡಾಕ್ಟರ್ ಕ್ರೆಸ್ಟೆನ್. ನಿರಾಸೆ, ಸಾವು, ಹಿಂಸೆ, ಅಸಹಾಯಕತೆ ನಡುವೆ ತಿರುಗಿ ಬೀಳುವ, ಪ್ರತಿಭಟಿಸುವ, ಅಥವಾ ತಪ್ಪಿಸಿಕೊಂಡು ಓಡಿಹೋಗುವ ಯಾವ ಮಾರ್ಗವನ್ನೂ ಆಯ್ಕೆ ಮಾಡದೆ ತನ್ನ ಕೈಲಾದ ಒಳ್ಳೆಯದನ್ನು ಮಾಡುತ್ತಾ, ನರಕದ ದಾರಿಯಲ್ಲಿ ಹಿಮ್ಲರನಿಗೆ ಚಿಕಿತ್ಸೆ ಕೊಡುವ ನೆವದಲ್ಲಿ ಕ್ರೆಸ್ಟೆನ್ ಹಿಂಬಾಲಿಸುತ್ತಾನೆ. ಪ್ರಾಮಾಣಿಕನಾದ ಅವನಿಗೆ ಶತ್ರುಗಳ ಗೂಢಚಾರನಾಗುವುದೂ ಸಾಧ್ಯವಿರಲಿಲ್ಲ. ಒಳ್ಳೆಯವನಾದ ಅವನಿಗೆ ಹಿಮ್ಲರನನ್ನು ಕುತಂತ್ರದಿಂದ ಕೊಲ್ಲುವುದೂ ಸಾಧ್ಯವಿರಲಿಲ್ಲ. ಜಗತ್ತನ್ನು ಉದ್ಧಾರ ಮಾಡುತ್ತೇವೆಂದೇ ನಾಜಿಗಳು ನಿರ್ಮಿಸುತ್ತಾ ಹೋದ ಭೀಕರ ನರಕ ಕೂಪವನ್ನು ನಟ್ಟ ನೋಟದಲ್ಲಿ ನೋಡುತ್ತಾ ಹೋದ ಕ್ರೆಸ್ಟೆನ್ನ ಆಶಾವಾದ, ಕರ್ತವ್ಯ ಪ್ರಜ್ಞೆ ಯಾರಿಗೂ ಸುಲಭವಾಗಿ ಅರ್ಥವಾಗುವಂಥದಲ್ಲ. ಆಶಾವಾದ, ನಿರಾಶಾವಾದಗಳನ್ನೆಲ್ಲ ಮೀರಿದ ಮಾನವೀಯತೆ ಕ್ರೆಸ್ಟೆನ್ ತೋರಿಸುತ್ತಾನೆ. ಯುದ್ಧಜ್ವಾಲೆಯ ನೆತ್ತಿಯಲ್ಲಿ ನಿಂತು ಮನುಷ್ಯನ ಹಣೆಬರಹವನ್ನು ಪರಿಶೀಲಿಸುತ್ತಾ, ಪಾತಕಿಗಳ ನಡುವೆ ಪುಣ್ಯಾತ್ಮರನ್ನು ಹುಡುಕುತ್ತಾ, ತನ್ನ ಧ್ಯೇಯ ಧೋರಣೆಗಳ ಬಗ್ಗೆ ಹಿಮ್ಲರನ ಬಳಿ ಸಹ ಯಾವ ಮುಚ್ಚು ಮರೆ ಮಾಡದೆ, ನಿಸ್ಸಹಾಯಕರ, ನಿರಪರಾಧಿಗಳ, ಮುಗ್ಧರ ವಕ್ತಾರನಾಗಿ ಮಾತಾಡುತ್ತಾ, ಯುದ್ಧದ ಮಹಾಜ್ವಾಲೆಯಲ್ಲಿ ಜರ್ಮನಿ ದಗ್ಧವಾಗುವುದನ್ನು ನೋಡುತ್ತಾನೆ. ಯುದ್ಧ ಶುರುವಾದ ಹಾಗೇ ನಿಲ್ಲುತ್ತದೆ. ಕ್ರೆಸ್ಟೆನ್ ಪಾಲಿಗೆ ಅದು ಯಾರ ಜಯವೂ ಅಲ್ಲ, ಸೋಲೂ ಅಲ್ಲ. ಮನುಷ್ಯನ ಪೈಶಾಚಿಕ ಕಾಮನೆಗಳ ರುದ್ರಾಟ್ಟಹಾಸ. ಎಲ್ಲರೂ ಎಲ್ಲರನ್ನೂ ಕೊಲ್ಲಲೆತ್ನಿಸುತ್ತಿರುವಾಗ, ತಾನು ಸಜೀವವಾಗಿರುವುದೇ ಕೇವಲ ಆಕಸ್ಮಿಕವೆನ್ನಿಸಿದರೂ, ಕ್ರೆಸ್ಟೆನ್ ತನ್ನ ಚಿಕಿತ್ಸೆಯಿಂದ, ತನ್ನ ಸದ್ಭಾವನೆ, ಸನ್ನಡತೆಗಳಿಂದ, ಸ್ನೇಹದಿಂದ ಮನುಷ್ಯರನ್ನು ಬದುಕಿಸಲು ಪ್ರಯತ್ನಿಸುತ್ತಲೇ ಹೋಗುತ್ತಾನೆ. ಇದರಿಂದಾಗಿಯೇ ಡಾಕ್ಟರ್ ಕ್ರೆಸ್ಟೆನ್ ವ್ಯಕ್ತಿತ್ವ ಆಲ್ಬರ್ಟ್ ಕಾಮೂನ ನೊಬೆಲ್ ಪ್ರಶಸ್ತಿವಿಜೇತ ಕಾದಂಬರಿ ‘ದಿ ಪ್ಲೇಗ್’ ಮೇಲೆ ಪ್ರಭಾವ ಬೀರಿದ್ದು.
- ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ಪುಟಗಳು: 95
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !