Click here to Download MyLang App

ತೂಗು ತೊಟ್ಟಿಲು,  ಚನ್ನಕೇಶವ,  tugu tottilu,  tugu totelu,  Toogu tottilu,  Chennakeshava,

ತೂಗು ತೊಟ್ಟಿಲು ಮತ್ತು ಇತರ ನಾಟಕಗಳು (ಇಬುಕ್)

e-book

ಪಬ್ಲಿಶರ್
ಚನ್ನಕೇಶವ
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ತೂಗು ತೊಟ್ಟಿಲು ಮತ್ತು ಕಾಡಿನಲ್ಲಿ ಕಥೆ: ಇವೆರಡೂ ಬಹಳ ರಸವತ್ತಾದ ಮಕ್ಕಳ ನಾಟಕಗಳು. ಇವನ್ನು ಚನ್ನಕೇಶವ ಅವರು ಧಾರವಾಡದ ಬಾಲಬಳಗಕ್ಕೆ ಮತ್ತು ಶಿರಸಿಯಲ್ಲಿ ಮಾಡಿಸಿದ್ದರು ಎಂಬ ಸೂಚನೆ ನಾಟಕದಲ್ಲೇ ಬರುತ್ತದೆ. ಮಕ್ಕಳ ನಾಟಕ ಹೇಗಿರಬೇಕು ಎಂಬುದಕ್ಕೆ ಬಹಳ ಒಳ್ಳೆಯ ಉದಾಹರಣೆ ಈ ಎರಡೂ ನಾಟಕಗಳು. ಜನಪ್ರಿಯ ದೇವರಾದ ಗಣಪತಿಯ ವಾಹನವಾದ ಇಲಿಯೊಂದು ಅಷ್ಟುದೊಡ್ಡ ಡೊಳ್ಳುಹೊಟ್ಟೆಯನ್ನು ಹೊತ್ತುಕೊಂಡ ಗಣಪ ತನ್ನಂತಹ ಚಿಕ್ಕದಾದ ಕ್ಷುದ್ರಜೀವಿಯನ್ನು ತನ್ನ ವಾಹನವಾಗಿ ಇಟ್ಟುಕೊಂಡು ಮಾಡುತ್ತಿರುವ ಶೋಷಣೆಯಿಂದ ನೊಂದು ಒಂದು ದಿನ ಅವನಿಂದ ತಪ್ಪಿಸಿಕೊಂಡು ತನ್ನ ಸಂಸಾರ ಸಮೇತ ಒಬ್ಬ ಮುದಿ ದಂಪತಿಗಳ ಮನೆಯಲ್ಲಿ ವಾಸವಾಗಿರುತ್ತವೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳಿಸಿ ಇಲ್ಲಿ ಒಂಟಿಯಾಗಿರುವ ಈ ಮುದಿ ದಂಪತಿಗಳು ಏಕತಾನತೆ ಕಳೆಯಲು ಒಂದು ಬೆಕ್ಕನ್ನು ತಂದು ಸಾಕತೊಡಗುತ್ತಾರೆ. ಇದರಿಂದ ದಿಕ್ಕೆಟ್ಟ ಇಲಿಯ ಸಂಸಾರ ಅಲ್ಲಿಯೂ ತಮ್ಮ ನೆಲೆ ಕಳೆದುಕೊಂಡು ಕಾಡಿಗೆ ಹೋಗುತ್ತವೆ.

ಇಲ್ಲಿಂದ ಮತ್ತೊಂದು ನಾಟಕವಾದ ಕಾಡಿನಲ್ಲಿ ಕಥೆ  ಶುರುವಾಗುತ್ತದೆ. ಕಾಡಿನಲ್ಲಿ ಮತ್ತೊಂದು ಬಗೆಯ ಕಷ್ಟಗಳನ್ನು ಆ ಇಲಿಗಳು  ಅನುಭವಿಸುತ್ತವೆ! ಕಾಡಿನ ಅನೇಕ ಪ್ರಾಣಿ ಪಕ್ಷಿಗಳೇ ಇಲ್ಲಿ ಪಾತ್ರಧಾರಿಗಳು. ಈ ಭಾಗವನ್ನು ಮೇಲಿನ ನಾಟಕದ ಮುಂದುವರಿದ ಭಾಗವಾಗಿಯೂ ಆಡಬಹುದು ಅಥವಾ ಪ್ರತ್ಯೇಕ ನಾಟಕವನ್ನಾಗಿಯೂ ಆಡಬಹುದು. ಮಕ್ಕಳ ನಾಟಕ ಎಂದ ಕೂಡಲೆ ಕೆಲವರು ಒಂದೋ ಬೋಧನೆಗಳನ್ನು ಹೇಳುವುದೋ ಅಥವಾ ಅತಿಯಾದ ಅತಿಮಾನುಷ ಪಾತ್ರಗಳ ಭ್ರಮಾಲೋಕ ಸೃಷ್ಟಿಸುವಂತೆ ಮಾಡುವುದು ಎಂದುಕೊಂಡಿರುತ್ತಾರೆ; ಅನೇಕ ನಾಟಕಕಾರರು ಹಾಗೆಯೇ ಬರೆದಿದ್ದಾರೆ ಕೂಡ. ಆದರೆ ಈ ನಾಟಕ ರಂಜನೆಯ ಮೂಲಕವೇ ನಮ್ಮ ಸುತ್ತ ಮುತ್ತ ನಡೆಯುತ್ತಿರುವ ವರ್ಣಭೇದ, ಜಾತಿ ಭೇದ, ಕೋಮುವಾದ ಮೊದಲಾದ ಜಟಿಲ ವಸ್ತು ವಿಷಯಗಳನ್ನು ಬಹಳ ಸರಳವಾಗಿ ಮಕ್ಕಳಷ್ಟೆ ಅಲ್ಲ ಅದನ್ನು ನೋಡುವ ದೊಡ್ಡವರಿಗೂ ಮನಮುಟ್ಟುವಂತೆ ಹೇಳುತ್ತದೆ!

ಅಕಟ ವಿಕಟ ಪ್ರಹಸನ: ಇದು ಪ್ರಖ್ಯಾತ ಕಲಾವಿದರಾದ ಕೆ ಜಿ ಸುಬ್ರಹ್ಮಣ್ಯನ್ ರವರ ‘ಫ್ರೆಂಡ್ಸ್ ದಿ ಆಗರ‍್ಸ್’ ಎಂಬ ಇಂಗ್ಲಿಷ್ ಕತೆಯ ನಾಟಕ ರೂಪ. ಅಕಟ ಹಾಗೂ ವಿಕಟ ಎಂಬ ದೈತ್ಯ ಆಧುನಿಕ ರಾಕ್ಷಸರ ಕಥೆ ಇದು. ಚಿತ್ರ ಕಲಾವಿದರಾದ ಸುಬ್ರಹ್ಮಣ್ಯನ್ ರವರು ಮಕ್ಕಳಿಗಾಗಿ ಇಂಥ ಅನೇಕ ಸಣ್ಣ ಸಣ್ಣ ಕತೆಗಳನ್ನು ಬರೆದು ಪ್ರಕಟಿಸಿದ್ದಾರೆ. ಅವರ ಕಥೆಗಳು ಬಹುತೇಕ ಚಿತ್ರವತ್ತಾಗಿರುತ್ತ ಪ್ರಸ್ತುತ ದೇಶ ಕಾಲದ ಸನ್ನಿವೇಶಗಳನ್ನು ವ್ಯಂಗ್ಯದ ಧಾಟಿಯಲ್ಲಿ ಹೇಳುತ್ತಿರುತ್ತವೆ. ಈ ಕಥೆಯಲ್ಲೂ ಸಹ ಮಿತಿಮೀರಿದ ಕೈಗಾರಿಕೀಕರಣ, ಬಂಡವಾಳಶಾಯಿಂದ ಉದ್ಭವಿಸುವ ಆಧುನಿಕ ಕಾಲದ ಸಂಕಷ್ಟವನ್ನು ಈ ಕತೆ ವ್ಯಂಗ್ಯವಾಗಿ ಹೇಳುತ್ತದೆ. ಇದರಲ್ಲಿ ಮನುಷ್ಯರ ಜೊತೆಗೆ ಬಸ್ಸು, ರೋಡು, ಹೈವೇ, ರೈಲು, ಏರೋಪ್ಲೇನು, ಬಿಲ್ಡಿಂಗು ಮೊದಲಾದವುಗಳು ಪಾತ್ರಗಳಾಗಿ ಬರುತ್ತವೆ! ಸಂಗೀತ ಹಾಗೂ ನಾಟಕದ ಮೇಳದ ಗುಂಪು, ರಂಗವಿನ್ಯಾಸ, ರಂಗಸಜ್ಜಿಕೆ, ವಸ್ತ್ರ, ವೇಷಭೂಷಣ ಇವೆಲ್ಲವೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುವ ನಾಟಕವಿದು. ಸ್ವತಃ ಕಲಾವಿದರಾಗಿರುವ ಚನ್ನಕೇಶವ ಅಂಥವರು ಮಾತ್ರ ಇಂಥ ಕಥೆಗಳನ್ನು ತೆಗೆದುಕೊಂಡು ರಂಗದ ಮೇಲೆ ಸಶಕ್ತವಾಗಿ ತರಬಲ್ಲರು ಎನಿಸುತ್ತದೆ.

ಇವಿಷ್ಟೂ ನಾಟಕಗಳನ್ನು ಓದಿದ ನಂತರ ಚನ್ನಕೇಶವ ಅವರ ರಂಗ ಅಭಿರುಚಿಯೂ ಸಹ ಇದರಲ್ಲಿ ಗೋಚರವಾಗುತ್ತದೆ. ಅವರು ಬರಿದೆ ಮನರಂಜನೆಯನ್ನು ನೀಡುವ ನಾಟಕಗಳನ್ನು ಆಯ್ಕೆ ಮಾಡಿಕೊಂಡಿಲ್ಲ. ಎಲ್ಲವೂ ಆಂತರ್ಯದಲ್ಲಿ ಆಯಾ ಕಾಲದ ಏರಿಳಿತಗಳನ್ನು ಧ್ವನಿಸುವಂತಹ ನಾಟಕಗಳನ್ನೇ ಆರಿಸಿಕೊಂಡು ಬರೆದುಕೊಂಡಿದ್ದಾರೆ. ಮತ್ತು ಈ ಎಲ್ಲಾ ನಾಟಕಗಳಲ್ಲಿ ಬರೀ ನಟರೇ ಮುಖ್ಯವಾಗಿರದೆ ನಾಟಕೀಯತೆಯೇ ಪ್ರಧಾನವಾಗಿವೆ. ಸಂಗೀತ, ಸಂಗೀತದ ಮೇಳ, ಸೂತ್ರಧಾರ, ಅವರ ಹಿಮ್ಮೇಳ, ಇವೆಲ್ಲವೂ ಗ್ರೀಕ್ ನಾಟಕಗಳಲ್ಲಿ ಹಾಗೂ ನಮ್ಮ ಜನಪದ ನಾಟಕಗಳಲ್ಲಿ ಕಾಣಬಹುದಾದ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಯಶಸ್ವೀ ನಾಟಕೀಯ ತಂತ್ರಗಳಾಗಿವೆ. ಈ ತಂತ್ರಗಳನ್ನು ಚನ್ನಕೇಶವ ಅವರು ತಮ್ಮ ಬಹುತೇಕ ನಾಟಕಗಳಿಗೆ ಬಹಳ ಯಶಸ್ವಿಯಾಗಿ ಕಸಿಮಾಡಿಕೊಂಡಿದ್ದಾರೆ.

ಇನ್ನು ಅವರು ಸ್ವತಃ ಚಿತ್ರ ಕಲಾವಿದರಾಗಿರುವುದರಿಂದ ಇಡೀ ರಂಗವನ್ನೇ ಒಂದು ಕ್ಯಾನ್ವಾಸಿನಂತೆ ಮಾಡಿಕೊಂಡು ರಂಗಭೂಮಿಯ ರಂಗಸಜ್ಜಿಕೆ, ಪರಿಕರ, ವೇಷಭೂಷಣ, ನಟನಟಿಯರು, ಬೆಳಕು ಹೀಗೆ ಎಲ್ಲಾ ರಂಗ ಸಂಪನ್ಮೂಲಗಳನ್ನು ಯಶಸ್ವಿಯಾಗಿ ಬಳಸಿಕೊಂಡು ತಮ್ಮ ಕಲಾಕೃತಿಗಳನ್ನು ಕಟ್ಟಬಲ್ಲವರಾಗಿದ್ದರು. ಅವರ ಈ ನಾಟಕಗಳಲ್ಲಿ ಬರುವ ಗುಂಪು ಗುಂಪು ಸನ್ನಿವೇಶಗಳು, ಸಂಗೀತದ ಮೇಳ ಇವೆಲ್ಲವೂ ಬರಿದೆ ಅವರ ರಂಗದ ಮೇಲಿನ ನಾಟಕಕ್ಕಷ್ಟೆ ಸಂಬಂಧಿಸಿದ್ದಲ್ಲದೆ ಒಟ್ಟೂ ಅವರ ರಂಗಜೀವನವನ್ನೇ ಸೂಚಿಸುವಂತಿದೆ. ಅವರ ನಾಟಕಗಳಲ್ಲಿ ರಂಗದ ಮೇಲೆ ಕಾಣುವ ನಟನಟಿಯರ ಗುಂಪಿಗಿಂತ ದುಪ್ಪಟ್ಟು ನಾಟಕದ ಹೊರಗೆ, ಹಿಂದೆ, ಮುಂದೆ, ಅಕ್ಕ-ಪಕ್ಕ ಸದಾ ಅವರೊಂದಿಗೆ ಕಾಣಬಹುದಾಗಿತ್ತು. ಇದು ಅವರ ರಂಗ ಕೃಷಿಗೆ ಒಂದು ಉದಾಹರಣೆ. ಇಲ್ಲಿನ ಯಾವ ನಾಟಕವನ್ನೂ ಅವರು ಬೆಂಗಳೂರಿನಂತಹ ಕೇಂದ್ರದಲ್ಲಿ ಕುಳಿತು ಮಾಡಿದ ನಾಟಕಗಳಲ್ಲ. ಎಲ್ಲವೂ ಕರ್ನಾಟಕದ ಬೇರೆ ಬೇರೆ ಊರುಗಳ ಬೇರೆ ಬೇರೆ ತಂಡಗಳಿಗೋಸ್ಕರ ಬರೆದು ಮಾಡಿದಂತವು. ಹಾಗೆ ನಾಟಕ ಆಡಿಸಲು ಹೋಗುವಾಗ ಅವರೊಬ್ಬರೇ ಎಲ್ಲೋ ಯಾವುದೋ ಊರಿಗೆ, ತಂಡಕ್ಕೆ ಹೋಗಿ ನಾಟಕ ಮಾಡಿಸಿ ಬಂದ ಉದಾಹರಣೆಗಳೇ ನಮಗೆ ಸಿಗುವುದಿಲ್ಲ. ರಂಗಭೂಮಿ ಎಂಬುದು ಒಂದು ಸಮಷ್ಠಿ ಪ್ರಕ್ರಿಯೆ ಎಂಬುದು ಅವರ ನಾಟಕದ ಪ್ರಾಸೆಸ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಬಹಳ ಚೆನ್ನಾಗಿ ಅನುಭವಕ್ಕೆ ದಕ್ಕುವ ವಿಷಯವಾಗಿತ್ತು. ಇಂಥ ಸಂದರ್ಭಗಳಲ್ಲಿಯೇ ನಿಜವಾದ ‘ರಂಗಪುರಾಣಗಳ’ ಹೇಳಿಕೆ ಕೇಳಿಕೆ, ಕಟ್ಟುವಿಕೆ, ಕೆಡವುವಿಕೆಗಳು ನಡೆಯುತ್ತಿದ್ದವು! ಇವೆಲ್ಲವೂ ಸಹ ಎಲ್ಲರನ್ನೂ ರಂಗಭೂಮಿಯಲ್ಲಿ ಇನ್ನೂ ನಿಖಟವಾಗಿ, ಆಪ್ತವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಿತ್ತು. ಅಂಥ ಪ್ರೇರೇಪಣೆಯ ಕೇಂದ್ರ ಬಿಂದುವಾಗಿದ್ದರು ಚನ್ನಕೇಶವ ಅವರು.

ಇದೀಗ ರಂಗಭೂಮಿಗೆ ಬಂದ ಹೊಸ ಹುಡುಗ ಹುಡುಗಿಯರಿಂದ ಹಿಡಿದು ಹತ್ತಾರು ವರ್ಷಗಳು ಕೆಲಸ ಮಾಡಿಕೊಂಡಿರುವ ರಂಗಕರ್ಮಿಗಳ ಸಮೇತ ಎಲ್ಲರಿಗೂ ಅವರು ಒಬ್ಬ ಒಳ್ಳೆಯ ಗೆಳೆಯ, ಗುರು, ಮಾರ್ಗದರ್ಶಕ, ರಂಗಪುರಾಣದ ಅದ್ವರ್ಯು, ಹೀಗೆ ಎಲ್ಲವೂ ಆಗಿದ್ದರು. ಈ ಗುಣ ಅವರ ಫಾರ್ಮ್‌ಗೂ ಸಹಜವಾಗಿ ವ್ಯಾಪಿಸಿತ್ತು. ಅದಕ್ಕೆ ಉದಾಹರಣೆಯಾಗಿ ಇಲ್ಲಿನ ನಾಟಕಗಳನ್ನು ನೋಡಬಹುದಾಗಿದೆ. ಇಲ್ಲಿನ ಬಹುತೇಕ ನಾಟಕಗಳು ಅತ್ತ ಸಾಹಿತ್ಯ ಕೃತಿಗಳಂತೆ ಘನವೂ ಅಲ್ಲದ, ಜಡವೂ ಅಲ್ಲದ, ತಾಲೀಮು ಪಠ್ಯ ಅಥವಾ ಪ್ರೊಡಕ್ಷನ್ ಸ್ಕ್ರಿಪ್ಟ್ ಎಂದು ನಾವೇನು ಕರೆಯುತ್ತೇವೋ ಅವನ್ನು ಹೋಲುತ್ತಿರುವಂತಿವೆ. ಇದೇ ಕಾರಣದಿಂದ ಚನ್ನಕೇಶವ ಅವರು ಇವನ್ನು ಪ್ರಕಟಿಸುವ ಗೋಜಿಗೆ ಹೋಗಿರಲಿಲ್ಲ ಎಂದು ಕಾಣುತ್ತದೆ. ಮೊದಲೇ ನಾಟಕಗಳ ಅಭಾವವಿರುವ ಈ ಸಂದರ್ಭದಲ್ಲಿ ಏನಿಲ್ಲದೆ ಹೋದರೂ ಕನ್ನಡ ರಂಗಭೂಮಿಗೆ ಎಂಟು ಹೊಸ ನಾಟಕ ಕೃತಿಗಳು ಸಿಕ್ಕಂತಾಗುತ್ತದೆ. ಆ ದೃಷ್ಟಿಯಿಂದ ಇವನ್ನೆಲ್ಲ ಆರಿಸಿ, ಸಂಕಲನ ಮಾಡಿ, ಮುತುವರ್ಜಿಯಿಂದ ಪ್ರಕಟಿಸುತ್ತಿರುವ ಥಿಯೇಟರ್ ತತ್ಕಾಲ್ ಬುಕ್ಸ್ ಪ್ರಕಾಶನಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಮೌನೇಶ ಬಡಿಗೇರ

 

ಪುಟಗಳು : 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)