ಓದುತ್ತಾ.......ಓದುತ್ತಾ......ಕುತೂಹಲ
ಎಂದಿನಂತೆ ಸಂಜೆ ಐದು ಗಂಟೆಯ ಸಮಯಕ್ಕೆ ನಮ್ಮ ಮನೆಯಿಂದ ಒಂದು ಕಿ. ಮೀ. ದೂರದಲ್ಲಿರುವ ಉದ್ಯಾನವನಕ್ಕೆ ವಾಯು ವಿಹಾರಕ್ಕೆಂದು ಹೋಗುವುದು ವಾಡಿಕೆ, ಜೊತೆಗೆ ನನ್ನ ಸ್ನೇಹಿತ
ಕಲ್ಲೂರಯ್ಯ ಬೇರೆ..... ರಾತ್ರಿ ಏಳರವರೆಗೂ ಅಲ್ಲಿಯ ಕೆಲವು ಸಮಾನಮನಸ್ಕ ಗೆಳೆಯರೊಡನೆ ಹರಟೆ, ಹಾಸ್ಯ, ರಾಜಕೀಯ ವಿಷಯಗಳ ಚರ್ಚೆ ನಡೆಸಿ ಹಿಂತಿರುಗಿ ಬರುವಾಗ ಅಲ್ಲೊಂದು ಬಜ್ಜಿ ಸೆಂಟರ್ನಲ್ಲಿ. ಒಂದೆರಡು ಬಿಸಿ ಬಿಸಿ ಬಜ್ಜಿ, ಒಂದರ್ಧ ಫಿಲ್ಟರ್ ಕಾಫಿ ಸೇವಿಸಿ ಬರೋದು .......ಈಗ್ಗೆ ಐದಾರು ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ.
ಈ ಕೊರೋನ ಸಮಯದಲ್ಲಿ ಸ್ವಲ್ಪ ಈ ಪದ್ದತಿ ಏರುಪೇರಾಗಿದ್ದು ನಿಜ, ಈಗ ಒಂದೂವರೆ ವರ್ಷದಿಂದ ಯಥಾಪ್ರಕಾರ ಸಾಂಗವಾಗಿ ನಡೆದುಕೊಂಡು ಬರುತ್ತಿದೆ, ಈಗಂತೂ ಉದ್ಯಾನವನದಲ್ಲಿ ಕೇವಲ ರಾಜಕೀಯದ್ದೇ ಮಾತುಕತೆಗಳು, ಚರ್ಚೆಗಳು, ಅವರು ಹೀಗಂದ್ರು, ಇವರು ಹಾಗಂದ್ರು , ಇವನು ಈಬಾರಿ ಗೆದ್ದೇಗೆಲ್ತಾನೆ, ಅವನಿಗೆ ಈ ಬಾರಿ ಸೋಲು ಗ್ಯಾರಂಟಿ,
ಇವರಿಗೆ ಖಂಡಿತಾ ಇಷ್ಟು ಓಟು ಬೀಳುತ್ತದೆ, ಅವರಿಗೆ ಟಿಕೆಟ್ ಇಲ್ಲ, ಇವರು ಆ ಪಕ್ಷಕ್ಕೆಹೋಗ್ತಾರಂತೆ, ಈಬಾರಿ ಇದೇ ಪಕ್ಷ ಅಧಿಕಾರಕ್ಕೆ ಬರೋದು......ಇವರದೇ ಸರ್ಕಾರ, ಮತ್ತೆ ಡಬಲ್ ಇಂಜೆನ್ ಸರ್ಕಾರ, ಇಲ್ಲ ಅತಂತ್ರ ಸ್ಥಿತಿ, ಅವರೇ ಮುಖ್ಯಮಂತ್ರಿ, ಇವರೇ ಗೃಹಮಂತ್ರಿ, ಹಾಗೇ...ಹೀಗೆ.....ಇದೇ ಮಾತುಗಳು.
ಸರಿ ಈ ಮೂರು ದಿನಗಳ ಹಿಂದೆ ರಾಜ್ಯದ ಚುನಾವಣೆ ಘೋಷಣೆಯಾಯ್ತಲ್ವಾ.......ಅದರ ಮರುದಿನ........ಎಂದಿನಂತೆ ಉದ್ಯಾನವನಕ್ಕೆ ಹೋದೆವು ನಾನು ಹಾಗೂ ಸ್ನೇಹಿತ ಕಲ್ಲೂರಯ್ಯ, ಎಲ್ಲಾ ಮುಗಿದ ನಂತರ, ರಾತ್ರಿ ಏಳರ ಸಮಯ, ಅಂದು, ಅವನು ರಾತ್ರಿಯಾಗುತ್ತಲೇ , ನನಗೆ ಬೇರೆ ಸ್ವಲ್ಪ ಕೆಲಸವಿದೆಯೆಂದು ಹೇಳಿ ಉದ್ಯಾನವನದಿಂದ ನೇರವಾಗಿ ಮನೆಗೆ ಬಾರದೆ ಹಾಗೇ ಹೊರಟುಹೋದನು.
ಈಗ್ಗೆ ಒಂದು ತಿಂಗಳಿನಿಂದಲೂ ಪೊಲೀಸಿನವರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯಲ್ಲಿ, ಮುಖ್ಯ ರಸ್ತೆಗಳಲ್ಲಿ, ಚೆಕ್ ಪೋಸ್ಟ್, ಬ್ಯಾರಿಕೇಡ್ ಗಳನ್ನು ಹಾಕಿ, ಈ ಚುನಾವಣೆಯಲ್ಲಿ, ಒಂದು ಸ್ಥಳದಿಂದ ಮತ್ತೊಂದು
ಸ್ಥಳಕ್ಕೆ, ವಾರಸುದಾರರಿಲ್ಲದ, ದಾಖಲೆ ಇಲ್ಲದ ಹಣ, ಚಿನ್ನ, ಇತರೆ ಉಡುಗೊರೆಗಳನ್ನು ತುಂಬಾ ಸಾಗಿಸುತ್ತಿದ್ದಾರೆ......ಎಂದು ತುಂಬಾ ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಿದ್ದರು, ಈಗ ಚುನಾವಣೆ ಘೋಷಣೆಯಾಗಿದ್ದೇ ತಡ, ಮತ್ತಷ್ಟು ಬಿಗಿ ಕ್ರಮಗಳನ್ನು ಕೈಕೊಂಡು, ಕೋಟ್ಯಾಂತರ ಹಣ, ಮದ್ಯ, ಚಿನ್ನ, ಬೆಳ್ಳಿ, ನಾನಾ ರೀತಿಯ ಉಡುಗೊರೆ ಬಾಕ್ಸ್ ಗಳನ್ನು ವಶಪಡಿಸಿಕೊಂಡರೂ, ಗಲ್ಲಿ ಗಲ್ಲಿಗಳಲ್ಲಿ, ರಸ್ತೆಗಳಲ್ಲಿ ಸಹ ತಪಾಸಣೆ ಹೆಚ್ಚಿದಂತೆ ಸಾಗಿಸುವವರಿಗೂ ಎದೆಯಲ್ಲಿ ನಡುಕ ಹೆಚ್ಚಿ , ಈ ಸಾಗಿಸುವ ಕೆಲಸಗಾರರಲ್ಲೂ ಇಂಥಾ ಸಮಯದಲ್ಲಿ ಸ್ವಲ್ಪ ಹಣ ಮಾಡಿಕೊಳ್ಳುವ ಬುದ್ದಿವಂತರು ಇರ್ತಾರೆ. ಅವರ ಮಾಲೀಕರು ಐದಾರು ಬ್ಯಾಗ್, ಅಥವಾ ಲಕ್ಷಾಂತರ ಹಣ ಕೊಟ್ಟು ಕಳಿಸಿದರೆ , ಸೇರುವವರಿಗೆ ಅದರಲ್ಲಿ ಅರ್ಧವೇ ಸೇರುವುದು, ಅದನ್ನು ಈ ಮಧ್ಯವರ್ತಿಗಳು ತಮ್ಮ ಕೈಚಳಕ ತೋರಿಸಿ, ಅವರೂ ಸ್ವಲ್ಪ ಹಣ ಮಾಡಿಕೊಳ್ತಾರೆ, ಯಾರದೋ ದುಡ್ಡು ಮತ್ಯಾರದೋ ಜಾತ್ರೆ......ಎನ್ನುವಂತೆ.
ಅದರಂತೆ ನೆನ್ನೆಯ ಸಂಜೆ ವಾಯುವಿಹಾರ, ಬಜ್ಜಿ, ಕಾಫಿ, ಸೇವಿಸಿ, ಸ್ನೇಹಿತನಾದ ಕಲ್ಲೂರಯ್ಯ ನನ್ನು ಅತ್ತ ಬೀಳ್ಕೊಟ್ಟು, ನಾನು ಮನೆಯ ಕಡೆ ಒಬ್ಬನೇ ನಡೆದು
ಬರುತ್ತಿದ್ದೆ, ಆ ರಸ್ತೆಯಲ್ಲಿ ಜನರ ಓಡಾಟ ತುಂಬಾ ಕಡಿಮೆ, ನಿರ್ಜನ ಪ್ರದೇಶ ಹಾಗೂ ರಸ್ತೆಯಲ್ಲಿ ಬೀದಿದೀಪದ ಕಂಬಗಳು ಇದ್ದರೂ ಲೈಟು ಮಾತ್ರ ಇರದೆ, ತುಂಬಾ ಕತ್ತಲಿನ ಸನ್ನಿವೇಶ ಏರ್ಪಟ್ಟಿತ್ತು, ಕೇವಲ ವಾಹನಗಳ ಓಡಾಟ ಮಾತ್ರ ಹೆಚ್ಚಿತ್ತು, ಅದೂ ಅಲ್ಲದೆ ಆ ರಸ್ತೆಯ ಒಂದು ಭಾಗದಲ್ಲಿ ತುಂಬಾ ಗಿಡ, ಮರಗಳು ಬೆಳೆದು......ಒಂದು ರೀತಿಯ ಕಾಡಿನ ನಡುವೆಯ ಹಾದಿಯಂತಾಗಿತ್ತು, ನಾನು ನನ್ನ ಮನೆ ತಲುಪಲು ಆ ದಾರಿಯಿಂದಲೇ ಹೋಗಬೇಕು, ಆ ಕತ್ತಲು ಹಾದಿ ದಾಟಿದ ನಂತರ ನನ್ನ ಮನೆ .
ಸರಿ ನಾನು ಬರಬರನೇ ಬರುತ್ತಿರುವೆ, ಆಗ ಸುಮಾರು ಐನೂರು ಅಡಿಗಳಿಗಿಂತಲೂ ದೂರದಲ್ಲಿದ್ದೇನೆ ನಾನು, ಅಷ್ಟರಲ್ಲಿ ಅನತಿ ದೂರದಲ್ಲಿ ಒಂದು ಹಳದಿ ಬೋರ್ಡ್ ಇದ್ದ ಒಂದು ಬಿಳಿಬಣ್ಣದ ಕಾರು ವೇಗವಾಗಿ ನನ್ನ ಮುಂದೆಯೇ ಹೋಗಿ ಅಷ್ಟು ದೂರದಲ್ಲಿ ನಿಂತಿತು, ಆ ರಸ್ತೆಯಲ್ಲಿ, ಆ ಜಾಗದಲ್ಲಿ ಯಾವುದೇ ವಾಹನ ನಿಲ್ಲುವುದಿಲ್ಲ, ಅದು ನನಗೂ ತಿಳಿದಿತ್ತು, ಆದರೆ ಆ ಕಾರು ನಿಲ್ಲುತ್ತಿದ್ದಂತೆ
ನನಗೂ ಕುತೂಹಲ ಹೆಚ್ಚಾಗಿ ಅದರ ಕಡೆಯೇ ನನ್ನ ದೃಷ್ಟಿ ಹೋಯಿತು, ಆದರೆ ಅದರಲ್ಲಿದ್ದವರಿಗೆ ಆ ಕತ್ತಲಿನಲ್ಲಿ ನಾನು ಆಗಲೀ ಬೇರೆಯವರಾಗಲೀ
ಕಾಣುತ್ತಿರಲಿಲ್ಲ , ಅವರಿಗೆ ಅದು ಬೇಕೂ ಇರಲಿಲ್ಲ ತುಂಬಾ ಆತುರಾತುರವಾಗಿದ್ದರು.
ನಾನೂ ಆ ಕಾರನ್ನು ಹಾಗೂ ಅದರಲ್ಲಿದ್ದವರನ್ನು ಗಮನಿಸುತ್ತಲೇ ಇದ್ದೆ ಎಂದೆನಲ್ಲಾ.......ಆಗ ಇದ್ದಕ್ಕಿದ್ದಂತೆ ಕಾರು ನಿಲ್ಲುತ್ತಿದ್ದಂತೆ ಅದರೊಳಗಿನಿಂದ ಒಬ್ಬ ಮಧ್ಯವಯಸ್ಸಿನ ಯುವಕ ಇಳಿದನು, ಕಾರಿನೊಳಗೆ ಮತ್ತು ಮೂವರಿದ್ದರು, ಇಳಿದವನ ಕೈಯಲ್ಲಿ ಒಂದು ಭಾರವಾದ ದೊಡ್ಡದಾದ ಕಾಲೇಜು ಬ್ಯಾಗು ಒಂದಿತ್ತು, ಆತ ಆ ಬ್ಯಾಗ್ ಹೊರುವ ರೀತಿ ನೋಡಿಯೇ..... ಅದರ ತುಂಬಾ ಏನೇನೋ ವಸ್ತುಗಳಿವೆ ಎನಿಸಿತು.........ನನಗೆ.
ಆ ಯುವಕನಾದರೋ ಕಾರಿನಿಂದ ಬ್ಯಾಗ್ ಸಮೇತ ಇಳಿದವನು ನೇರವಾಗಿ ಹೆದ್ದಾರಿ ಪಕ್ಕದ ಮೋರಿ ಕಾಲುವೆ ಅದರ ಪಕ್ಕದಲ್ಲಿ ಒಂದು ದೊಡ್ಡದಾದ ಮರ, ಆ ಮರದ ಪಕ್ಕದಲ್ಲಿದ್ದ ದೊಡ್ಡದಾದ ಕಸದ ತೊಟ್ಟಿಯೊಂದನ್ನು ಇಟ್ಟಿದ್ದರು, ಅಲ್ಲಿಗೆ ಹೋಗಿ ಆ ಬ್ಯಾಗನ್ನು ಜೋಪಾನವಾಗಿ ಇರಿಸಿದ ನಂತರ ಸುತ್ತಲೂ ಯಾರೂ ಇಲ್ಲವೆಂದು ಅರಿತವನು ನೇರವಾಗಿ ಅವಸರ ಅವಸರವಾಗಿ ಕಾರಿನ ಬಳಿ ಬಂದವನೇ ಕಾರು ಏರಿದನು. ಆ ನಂತರ ಕಾರು ಬಂದಷ್ಟೇ ವೇಗವಾಗಿ ಬಂದ ದಾರಿಯಲ್ಲೇ ಹೊರಟುಹೋಯಿತು.
ಈಗ ನನಗೆ ಆ ಬ್ಯಾಗಿನ ಮೇಲೆ ತಡೆಯಲಾರದಷ್ಟು ಕುತೂಹಲ, ಅದು ಚುನಾವಣೆಗೆ ಸಾಗಿಸಲೆಂದೇ ಹಣದ ಬ್ಯಾಗು ಇರಬಹುದಾ.......ಅಥವಾ ಬೇರೇನಾದರೂ ಇರಬಹುದಾ...... ಹಣವಿದ್ದರೂ ಎಷ್ಟಿರಬಹುದು......ಅಥವಾ....... ಈಗ್ಗೆ ಸ್ವಲ್ಪ ದಿನಗಳ ಹಿಂದೆ ಟಿ.ವಿ.ಯಲ್ಲಿ ತೋರಿಸಿದಂತೆ, ಆ ಬ್ಯಾಗಿನ ತುಂಬಾ ಏಳೆಂಟು ಕೆ.ಜಿ. ಚಿನ್ನದ ಬಿಸ್ಕೇಟ್ ಗಳೇನಾದರೂ ಇರಬಹುದಾ.......ಅದಾವುದೂ ಇರದೆ........ಒಂದು ಪಕ್ಷ ಯಾವುದಾದರೂ ಭಯೋತ್ಪಾದಕ ಚಟುವಟಿಕೆಯಲ್ಲೂ ಇರಿಸಿದ ಬಾಂಬ್ ಏನಾದರೂ ಇದ್ದರೆ........ ಭಗವಂತಾ.......ನಾನು ಹೋಗಿ ಅದನ್ನು ಪರಿಶೀಲಿಸುವಾಗ ಅದು ಡಂ...... ಡಂ...... ಎಂದು ಬಡಿದು, ನಾನು.........ಏನಾದರೂ ಅದಕ್ಕೆ ಬಲಿಯಾದರೆ.........ಏನೇನೋ ಊಹೆಗಳು, ಕೆಟ್ಟ ಯೋಚನೆಗಳು ನೆನಪಿಗೆ ಬಂದಂತೆ......ನನ್ನ ಹೆಂಡತಿ, ಮಕ್ಕಳು, ಸೊಸೆ, ಅಳಿಯ, ಮೊಮ್ಮಕ್ಕಳು, ಸಂಬಂಧಿಗಳು, ಗೆಳೆಯರು ಎಲ್ಲರೂ ಒಮ್ಮೆ ನನ್ನ ಕಣ್ಣಮುಂದೆ ಬಂದು ಮಾರ್ಚ್ ಫಾಸ್ಟ್ ಮಾಡಿದಂತೆ, ನನ್ನ ಕಣ್ಣುಗಳು ಕತ್ತಲೆಗೆ ತಿರುಗಿದವು, ಅಯ್ಯೋ.....ಈ ಬ್ಯಾಗು ಬೇಡ, ಅದರಲ್ಲಿರುವ ಹಣ, ಚಿನ್ನ, ಬೆಲೆಬಾಳುವ ವಸ್ತುಗಳೂ ಬೇಡ, ಬಡವಾ.......ನೀ.....
ಮಡಗ್ದಾಂಗಿರು........ಎಂದು ನನಗೆ ನಾನೇ
ಸಮಾಧಾನ ಪಟ್ಟುಕೊಂಡು ಹಾಗೇ ಹೊರಟು ಹೋಗಿಬಿಡೋಣವಾ......ಎಂದುಕೊಂಡೆ, ಆದರೂ......ಅದೇ ಯೋಚನೆಯಲ್ಲಿಯೇ ಆ ಕಸದ ತೊಟ್ಟಿವರೆಗೂ ನಡೆದುಬಂದೆ, ಈಗ ಎರಡು ಮನಸ್ಸುಗಳಲ್ಲಿ ನನಗೆ ........
ಒಂದು ಹೇಳಿತು, ಇದಾವುದೂ ಬೇಡ, ಹಾಗೇ ಮನೆ ದಾರಿ ಹಿಡಿದು ಹೊರಟು ಹೋಗು....... ಎಂದು.
ಮತ್ತೊಂದು ಮನಸ್ಸು ಹೇಳಿತು.......ಛೀ......ಹುಚ್ಚಾ.......ಇಂಥಾ ಕೈಗೆ ಬಂದ ತುತ್ತು, ಅದೃಷ್ಟ ಕಳೆದುಕೊಳ್ಳುವೆಯಾ......ನಿನಗೆ ಈಗ ಅರವತ್ತು ದಾಟಿದರೂ ನಿನ್ನದು ಅಂತ ಬೆಂಗಳೂರಿನಲ್ಲಿ ಒಂದು ಸ್ವಂತದ್ದು ಮನೆ ಸಹ ಮಾಡಿಲ್ಲ, ಆಗಾಗ ನಿನ್ನ ಮಕ್ಕಳು ನಿನಗೆ ಶಾಪ ಹಾಕುತ್ತಲೇ ಇರ್ತಾರೆ......
"ನಮ್ಮ ತಂದೆ ಬೆಂಗಳೂರಲ್ಲಿ ಒಂದು ಸ್ವಂತ ಮನೆ ಮಾಡಿಲ್ಲ", ಎಂದು.......ಈಗಲಾದರೂ ಅದಾಗಿಯೇ ಬಂದ ಅದೃಷ್ಟ ಕಳೆದುಕೊಳ್ಳಬೇಡ, ಅದೇನು ಹುಂಬನಂತೆ.......ಬಾಂಬು, ಭಯೋತ್ಪಾದಕ, ಸಾವು, ಸಂಬಂಧಿಕರು, ಹಾಗೆ, ಹೀಗೆ, ಏನೇನೋ ಬಡಬಡಿಸುತ್ತಿರುವೆ, ಈಗಲೇ ಹೋಗಿ ಆ ಬ್ಯಾಗ್ ತೆಗೆದು ಅದರಲ್ಲಿ ಏನಿದೆ ಎಂದು ನೋಡು, ಈ ಜನರೇ ಓಡಾಡದ ಏಕಾಂತ ಸ್ಥಳದಲ್ಲಿ ಅದಾವ ಭಯೋತ್ಪಾದಕ ನಿನ್ನನ್ನು ಸಾಯಿಸಲೆಂದೇ ಬಾಂಬು ಇಡಲು
ಬರ್ತಾನೆ......ನೀನೇನು ಈ ದೇಶದ ರಾಜಕಾರಣಿಯಾ.....ಸೆಲೆಬ್ರಟಿಯಾ....... ನಿನ್ನನ್ನು ಸಾಯಿಸಿ ಅವನಿಗೇನು ಲಾಭ.......ಎಂದು ಎರಡನೇ ಮನಸ್ಸು ಹೇಳಿದಂತಾದಾಗ ನನಗೂ ಅದು ಸರಿ ಎನಿಸಿತು.
ಹೌದು......ನಾನೂ ಈಗ ಅರವತ್ತು ಆದರೂ ಇನ್ನೂ ಬಾಡಿಗೆ ಮನೆಯಲ್ಲಿಯೇ ಇದ್ದೇನೆ, ಸಾಲಸೋಲ ಮಾಡಿ ಹೆಣ್ಣು ಮಗಳ ಮದುವೆ ಮಾಡಿದ್ದೇನೆ, ಇನ್ನು ಮಗ......ಅವನನ್ನು ವೈದ್ಯ, ವಕೀಲನನ್ನಾದರೂ ಮಾಡಿದ್ದೇನಾ.....ಅದೂ ಇಲ್ಲ, ಅವನು ಬಿ.ಎಸ್ಸಿ., ಮಾಡಿ ಯಾವುದೋ ನನ್ನ ಹಾಗೆ ಖಾಸಗಿ ಕಂಪೆನಿಯಲ್ಲಿ ಒದ್ದಾಡುತ್ತಿದ್ದಾನೆ.
ಈ ಎರಡನೇ ಮನಸ್ಸು ಹೇಳಿದ್ದು ಸರಿಯಾಗಿಯೇ ಇದೆ, ಈಗಲೇ ಧೈರ್ಯ ಮಾಡಿ ಆ ಬ್ಯಾಗ್ ತೆಗೆದುಕೊಂಡು ಮನೆಕಡೆಗೆ ಓಡೋದೇ ಸರಿ, ಆನಂತರ ಮನೆಯಲ್ಲಿ ಹೋಗಿ, ಇದರಲ್ಲಿ ಏನಿರಬಹುದು ಎಂದು ಮನೆಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ತೆರೆದು ನೋಡಿದರಾಯಿತು. ಇಂಥಾ ಚುನಾವಣೆಯ ಸಮಯದಲ್ಲಿ ಅದರಲ್ಲಿ ಬೇರೇನು ಇರಲು ಸಾಧ್ಯ ಹೇಳಿ......ಇದ್ದರೆ ಅಧಿಕ ಮೊತ್ತದ ಹಣ
ಇರಲೇ ಬೇಕು.
ಎಂದು ಧೈರ್ಯ ಮಾಡಿ ಕತ್ತಲಿನಲ್ಲಿಯೇ ನಿಧಾನವಾಗಿ ಅತ್ತ ಇತ್ತ ನೋಡಿ, ಯಾರು ನನ್ನನ್ನು ಗಮನಿಸುತ್ತಿಲ್ಲ ಎಂದು ಖಾತರಿಪಡಿಸಿಕೊಂಡು ಆ ಬ್ಯಾಗ್ ಬಳಿ ಹೋಗಿ ಬ್ಯಾಗಿಗೆ ಕೈ ಹಾಕಿದರೆ........ಅದು ಈ ಮೊದಲೇ ಕಸದ ತೊಟ್ಟಿ ಅಲ್ಲವೇ......ಅದಕ್ಕೆ ನನ್ನ ಕೈಗೆ ಏನೇನೋ ತಗುಲಿದಂತೆ ಭಾಸವಾಯಿತು, ಕೈಯೆಲ್ಲಾ ಗಲೀಜು.....ಗಲೀಜು..... ಕತ್ತಲು ಬೇರೆ
ಏನೂ ಕಾಣ್ತಿಲ್ಲ, ಒಂಥರಾ ಗಬ್ಬು ನಾರುವ ವಾಸನೆ, ಅದೂ ದನದ ಸೆಗಣಿಯಾ, ಅಥವಾ.....ಇನ್ನಾವ ಸೆಗಣಿಯಾ........ಎನಿಸಿತು, ಆದರೂ ಕೈಗಳನ್ನು ಅದೇ ತೊಟ್ಟಿಗೆ ಒರೆಸುತ್ತಾ, ಮತ್ತೆ ಮತ್ತೆ ಹುಡುಕಾಡಿದೆ, ಗಬ್ಬುನಾರುವ ಕೈಗಳಲ್ಲಿ, ಅದೇ ಕತ್ತಲಿನಲ್ಲಿ, ನನ್ನ ಮೊಬೈಲ್ ಬ್ಯಾಟರಿ ಆನ್ ಮಾಡಿ ಬೆಳಕಿನಲ್ಲಿ ನೋಡೋಣವೆಂದರೆ...... ಮತ್ತೆ ಯಾರಾದರೂ ನೋಡಿಬಿಟ್ಟರೆ......ಅಥವಾ ಆ ಕಾರನ್ನು ಹಿಂಬಾಲಿಸಿಕೊಂಡು ಯಾವುದಾದರೂ ಪೊಲೀಸಿನವರು ಗಮನಿಸುತ್ತಿದ್ದರೆ.....ಇದೇ ಆತಂಕದಲ್ಲಿ ಮೊಬೈಲ್ ಬೆಳಕು ಬೇಡ ಎಂದುಕೊಂಡು ಕತ್ತಲಿನಲ್ಲಿಯೇ ತಡಕಾಡಿದೆ.....ಆಗ ಬ್ಯಾಗಿನ ಹಿಡಿ ನನ್ನ ಕೈಗೆ ಸಿಕ್ಕಿತು, ಆ ಕೂಡಲೇ ಅದನ್ನು ಎತ್ತಿಕೊಂಡು ಹೊರಡೋಣವೆಂದರೆ.....ಆ ಬ್ಯಾಗು ನಾನು
ಎಣಿಸಿದಂತೆ ಇರುವುದಕ್ಕೂ ಹೆಚ್ಚು ಭಾರವಾಗಿದೆ, ಮತ್ತೆ ನನಗೆ ಆರು ತಿಂಗಳ ಹಿಂದಿನ ಒಂದು ಘಟನೆ ನೆನಪಿಗೆ ಬಂದಿತು, ಇದರಲ್ಲಿ ಹಣ, ಒಡವೆ ಬದಲಿಗೆ ಅಬ್ಬಾ.......ಅದರಲ್ಲಿ ಯಾವುದಾದರೂ ಶವವನ್ನು ಕತ್ತರಿಸಿ ಕೈಮಾ ಮಾಡಿ ಈ ಬ್ಯಾಗಿನಲ್ಲೇನಾದರೂ ತುಂಬಿ, ತಂದು ಈ ಕಸದ ತೊಟ್ಟಿಯಲ್ಲಿ ಏನಾದರೂ ಎಸೆದು ಹೋದನಾ.......ಆ ಪಾಪಿ, ಎಂದು, ಆದರೂ ಅಖಾಡಕ್ಕೆ ಇಳಿದಾಗಿದೆ, ಈಗ ಏನಾದರೊಂದು ಆಗಲೀ ಅನುಭವಿಸಲೇಬೇಕು, ಎಂದು ಭಂಡ ಧೈರ್ಯ ಮಾಡಿ ಹೇಗೋ ಗಲೀಜಿನಿಂದಾದ ಎರಡೂ ಕೈಗಳಿಂದಲೇ ಆ ಬ್ಯಾಗ್ ಹಿಡಿದು ಮೇಲೆ ಎತ್ತುವಲ್ಲಿ ಸಫಲವಾದೆ, ಅಲ್ಲದೇ ಅದನ್ನು ಹೊರಗೆ ತಂದು ಹಾಗೂ ಹೀಗೂ ಮಾಡಿ ಎತ್ತಿಕೊಂಡು ಮೋರಿ ದಾಟಿ ಬಂದು ನನ್ನ ಮನೆಯ ದಾರಿ ಹಿಡಿದೆ, ಈಗ ನನ್ನ ಮನೆ ಇನ್ನೂ ಅರ್ಧ ಕಿ. ಮೀ. ಅಂತರವಿದೆ, ಅಲ್ಲಿವರೆಗೂ ನಾನೊಬ್ಬನೇ ಈ ಬ್ಯಾಗನ್ನು ಸಾಗಿಸಲು ಆಗದು, ಹಾಗೆ ಹೊತ್ತು ಕೊಂಡು ಹೋಗುವಾಗ ಯಾರಾದರೂ ನೋಡಿಬಿಟ್ಟರೆ.....ಅಥವಾ ಇಂಥಾ ಚುನಾವಣೆಯ ಸಮಯದಲ್ಲಿ,ಕತ್ತಲಿನಲ್ಲಿ ಏನಾದರೂ ಕೆಟ್ಟಕೆಲಸಗಳು ನಡೆಯುತ್ತಿವೆ ಎಂದು ಗುಮಾನಿಯಿಂದ ಪೊಲೀಸರೇನಾದರೂ ಗಸ್ತು ತಿರುಗಲು ಇದೇ ದಾರಿಯಲ್ಲಿ ಬಂದರೆ........ಅಥವಾ ನನಗೆ ತಿಳಿದವರೇ
ಯಾರಾದರೂ ಎದುರು ಬಂದರೆ.......ಅದೂ ಬೇಡಾ.....ಆ ಬ್ಯಾಗು ಇಟ್ಟ ಮಹಾಶಯರೇ ಇಲ್ಲಿಗೆ ಬಂದು ನನ್ನ ಕೈಯಲ್ಲಿರುವ ಬ್ಯಾಗ್ ನೋಡಿ.....ನಾಲ್ಕು ತದುಕಿ, ಕಿತ್ತುಕೊಂಡುಹೋದರೆ.......
ಅಬ್ಬಾ.....ಮೊದಲಬಾರಿಗೆ ಯಾವುದಾದರೂ ಒಂದು ಅಕ್ರಮ ಕೆಲಸಕ್ಕೆ ಇಳಿಯುವಾಗ ಅದೆಷ್ಟು ಕಹಿ ನೆನಪುಗಳು ನಮ್ಮನ್ನು ಕಾಡುತ್ತವೆ......ಎಂದು ಯೋಚಿಸಿದ ನನಗೆ ನನ್ನ ಮಗನು ನೆನಪಾದನು, ಕೂಡಲೇ ಅವನಿಗೆ ಒಂದು ಫೋನುಕರೆ ಮಾಡಿ, ಇಲ್ಲೇ ಇರುವೆ, ಬಾ..... ಸ್ವಲ್ಪ ಜರೂರು ಕೆಲಸವಿದೆ......ಇದೇ ರಸ್ತೆಯಲ್ಲಿ ನಮ್ಮ ಮನೆಯ ರಸ್ತೆಯಲ್ಲಿಯೇ ಎಂದು ಲ್ಯಾಂಡ್ಮಾರ್ಕ್ ಹೇಳಿ ಹಾಗೇ ಒಂದು ಮರದ ಬುಡದಲ್ಲಿ ಕತ್ತಲಿನಲ್ಲಿ ನಿಂತು,ಅವನು ಬರೋವರೆಗೂ ಆತಂಕದ ಕ್ಷಣಗಳಿಂದ ಮರದ ಬುಡಕ್ಕೆ ನಿಂತು ಮೂತ್ರ ವಿಸರ್ಜನೆಗೆ ನಿಂತರೆ........ಆ ಭಯದಲ್ಲಿ ಅದೂ ಸಲೀಸಾಗಿ ಆಗಲಿಲ್ಲ, ಅಷ್ಟರಲ್ಲಿ ನನ್ನ ಮಗನು , ನನಗೇ ಏನಾಗಿದೆಯೋ, ಇಂಥಾ ಸಮಯದಲ್ಲಿ...... ಇಂಥಾ ರಾತ್ರಿಯಲ್ಲಿ...... ಎಂದು ಆತಂಕದಿಂದಲೇ ಬೈಕ್ ಓಡಿಸಿಕೊಂಡು ನನ್ನನ್ನೂ ಹುಡುಕಿಕೊಂಡು ಬಂದವನೇ ನಾನು ನಿಂತ ಮರದ ಪಕ್ಕವೇ ನಿಂತನು, ಅಷ್ಟರಲ್ಲಿ ನಾನು , ಹ್ಹೇ.....ಇಲ್ಲಿ ಬಾ.....ಎಂದು ಅವನನ್ನು ಹತ್ತಿರಕ್ಕೆ ಕತ್ತಲಿನಲ್ಲಿಯೇ ಕರೆದೆ, ನಾನು ಕರೆದ ಕೂಗಿಗೆ
ಭಯಪಟ್ಟು ನನ್ನ ಹತ್ತಿರ ಬಂದವನೇ....ಅಪ್ಪಾ...... ಎನಾಗಿದೆಯಪ್ಪಾ.....ನಿನಗೆ.......ಎಂದವನೇ ಭಯದಿಂದಲೇ ನನ್ನನ್ನು ಕೂಗಿದ, ನಾನು ಆಗ ನಡೆದ ವಿಷಯವನ್ನು ಎಲ್ಲಾ ಅವನಿಗೆ ಆತುರಾತುರವಾಗಿ ವಿವರಿಸಿ, ಆ ಬ್ಯಾಗ್ ತಮ್ಮ ಬೈಕಿನಲ್ಲಿಟ್ಟುಕೊಂಡು ನೇರವಾಗಿ ನಮ್ಮ ಮನೆಯೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡು ಮತ್ತೆ ಸವಿವರವಾಗಿ ನನ್ನ ಮಗನಿಗೆ, ಹೆಂಡತಿಗೆ, ಸೊಸೆ ಮೂವರಿಗೂ ಹೇಳಿದೆ, ಅವರಂತೂ ಆನಂದದಿಂದಕುಣಿದು ಕುಪ್ಪಳಿಸೋದೊಂದು ಬಾಕಿ, ಎಲ್ಲರೂ ಸೇರಿ, ಅದನ್ನು ತೆರೆದು ನೋಡಿದರೆ....... ಅಬ್ಬಾ....... ಎಲ್ಲವೂ ಗರಿಗರಿಯಾದ ನೋಟುಗಳೇ ತುಂಬಿವೆ......ಬಹಳಷ್ಟು ಎರಡು ಸಾವಿರದ ಕಂತೆಗಳಿದ್ದರೆ, ಮತ್ತಷ್ಟು ಐನೂರರ ನೋಟಿನ ಕಂತೆಗಳೇ ತುಂಬಿವೆ, ನಮಗ್ಯಾರಿಗೂ ನಂಬಲೇ ಆಗುತ್ತಿಲ್ಲ, ನನ್ನ ಕೈಗಳನ್ನು ನಾನೇ ಚಿವುಟಿಕೊಂಡೆನು, ಹೌದು ಇದು ಕಟು ಸತ್ಯ , ನಮ್ಮೆದುರಿನಲ್ಲಿಯೇ ಕೋಟಿ ಕೋಟಿ ಹಣ ಸಿಕ್ಕಿತ್ತು ನಮಗೆ.
ನಾವು ನಾಲ್ಕೂ ಜನ ಯೋಚಿಸಿದವು, ಅಬ್ಬಾ ಇಷ್ಟು ದಿನಗಳ ಕಷ್ಟ ಈ ದಿನ ತೀರಿತು, ಈ ಚುನಾವಣೆ ನೆಪದಲ್ಲಾದರೂ ನಾವು ಕೋಟ್ಯಾಧೀಶ್ವರರೂ ಆದೆವಲ್ಲಾ...... ಎಂದು ಖುಷಿಯಾಯಿತು. ಇಂಥಾ
ದಾಖಲೆ ಇಲ್ಲದ, ವಾರಸುದಾರರಿಲ್ಲದ ಹಣವನ್ನು ಯಾರೂ ಹುಡುಕಿಕೊಂಡು ಬರೋಲ್ಲ, ಇನ್ನು ಪೊಲೀಸರಿಗಂತೂ ತಿಳಿದೇ ಇರೊಲ್ಲ, ಅವರೂ ಬರೋಲ್ಲ, ಈ ಹಣವನ್ನು, ಚುನಾವಣೆ ನಂತರ ನಾವು ಯಾರಿಗೂ ತಿಳಿಯದಂತೆ ಆರಾಮವಾಗಿ, ಖರ್ಚು ಮಾಡಬಹುದು, ಒಂದು ಸ್ವಂತದ ಮನೆಯನ್ನಾದರೂ ಕೊಂಡುಕೊಳ್ಳೋಣ, ಎಂದುಕೊಂಡು ಊಟವನ್ನೂ ಮಾಡದೇ....... ನಾಲ್ಕೂ ಜನ ಆ ಬ್ಯಾಗಿನ ಸುತ್ತಲೂ ಕುಳಿತು ಆ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಯಾರೋ ಡಬ ಡಬ್ ಅಂತ ಬಾಗಿಲು ಬಡಿದ ಶಬ್ದ, ಆದರೆ ನಮಗ್ಯಾರಿಗೂ ಅದರ ಪರಿವೆಯೇ ಇಲ್ಲ, ಎಲ್ಲರ ಚಿತ್ತ ಈ ಅನಾಯಾಸವಾಗಿ ಸಿಕ್ಕ ಹಣದತ್ತ.
ಮತ್ತೆ ಮತ್ತೆ ಬಾಗಿಲು ಬಡಿಯುವುದು ಜಾಸ್ತಿಯಾದಂತೆ ಈಗ ನಾಲ್ವರಿಗೂ ಆತಂಕ, ಎದೆ ಡಬ್ ಡಬ್ ಅಂತ ಬಡಿದುಕೊಳ್ಳಲು ಆರಂಭಿಸಿತು. ಆಗ ರಾತ್ರಿ ಹನ್ನೆರಡರ ಮಧ್ಯರಾತ್ರಿ ಸಮಯ, ನಾವು ನಾಲ್ಕೂ ಜನ ಕೂಡಲೇ ಹಣದ ಬ್ಯಾಗ್ ನ್ನು ಒಂದು ಮಂಚದ ಕೆಳಕ್ಕೆ ತಳ್ಳಿದೆವು, ಕೂಡಲೇ ಧೈರ್ಯ ಮಾಡಿದ ನನ್ನ ಮಗ ಬಾಗಿಲು ತೆರೆಯಲು ಬಂದ, ಅವನ ಹಿಂದೆ ಸೊಸೆ, ಅವಳ ಹಿಂದೆ ನನ್ನ ಹೆಂಡತಿ,
ಅವಳ ಹಿಂದೆ ನಾನು...... ನಡುಗುತ್ತಾ, ಹೀಗೆ ಬಂದು ಭಯದಿಂದಲೇ ಬಾಗಿಲು ತೆರೆದರೆ.......ನಾಲ್ಕು ಜನ ದಾಂಡಿಗರು ನಿಂತಿದ್ದಾರೆ, ನಾವು ನಾಲ್ಕೂ ಜನ ಭಯದಿಂದಲೇ ಬೆವರುತ್ತಾ.......ಕೇಳಿದೆವು, ಯಾ.......ಯಾರು, ಯಾರು ಏನಾಗಬೇಕಿತ್ತು, ಇಷ್ಟು ಮಧ್ಯ ರಾತ್ರಿಯಲ್ಲಿ...... ಏನು ಸಮಾಚಾರ, ಎಂದು......
ಅವರು ಹೇಳಿದರು......ನಮ್ಮ ಬ್ಯಾಗು ನಿಮ್ಮ ಮನೆಯಲ್ಲಿ ಇದೆಯೆಂದೂ....... ನಮಗೆ GPS ಮುಖಾಂತರ ತಿಳಿದಿದೆ.......ನಾವುಗಳು ಆ ಬ್ಯಾಗ್ ಗೆ GPS ಅಳವಡಿಸಿರುವೆವು. ನೀವು ನಮ್ಮ ಬ್ಯಾಗ್ ಹಾಗೂ ಅದರಲ್ಲಿರುವ ಅಷ್ಟೂ ಹಣದ ಸಮೇತ ನಮಗೆ ಕೊಡಿ, ಇಲ್ಲವೆಂದರೆ......ಎಂದು, ಅದರಲ್ಲೊಬ್ಬ ಒಂದು ಹರಿತವಾದ, ಚೂಪಾದ ಚೂರಿ ತೋರಿಸಿದ , ಅದನ್ನು ನೋಡಿದಕ್ಕೇ ನನಗೆ ಒಂದು, ಎರಡು, ಮತ್ತಷ್ಟು ಆದವು.ಆಗ ನಾನು ಭಯದಿಂದಲೇ ಅಬ್ಬಾ....ಏನೂ ಮಾಡಬೇಡಿ, ನಮ್ಮನ್ನು ಏನೂ ಮಾಡಬೇಡಿ ಎಂದು ಕಿರುಚಿಕೊಳ್ಳುತ್ತಿದ್ದೆ,
ಈ ರೀತಿ ಕಿರುಚಿದ ನನ್ನ ಮೇಲೆ ನನ್ನ ಹೆಂಡತಿ, ಒಂದು ಬಕೆಟ್ ತಣ್ಣೀರು ತಂದು ಸುರಿದಾಗಲೇ ನನಗೆ ಎಚ್ಚರವಾಗಿ ಹಾಸಿಗೆಯಿಂದ ಮೇಲೆದ್ದಿದ್ದೆ. ಆಗ ಗಡಿಯಾರದಲ್ಲಿ ನೋಡಿದರೆ...... ಸಮಯ ಬೆಳಿಗ್ಗೆ
ಹತ್ತುಗಂಟೆ. ಅಂದಿನ ಈ ಕನಸಿನಿಂದಾಗಿ, ನನಗೆ ಉದ್ಯಾನವನಕ್ಕೆ ಹೋಗೋದು, ಅಲ್ಲಿ ಬೆಳಗಿನ ಬಿಸಿ ಬಿಸಿತಟ್ಟೆ ಇಡ್ಲಿ, ಕಾಫಿ ಸವಿಯುವುದು, ಎಲ್ಲವೂ ಕಾಣೆಯಾಗಿತ್ತು.
ಅದಿರಲಿ ಕಂತೆ, ಕಂತೆ ಹಣ ನನಗೆ ಸಿಕ್ಕಿದ್ದು
ನಿಜವೆಂದುಕೊಂಡಿರಾ..........ಹ್ಹಹಹಹಹಹಹಹಹಹ
ಎಲ್ಲವೂ ಏಪ್ರಿಲ್ ಪೂಲ್........ ಏಪ್ರಿಲ್ ಪೂಲ್...... ಏಪ್ರಿಲ್ ಪೂಲ್.........
-ರಾಜೇಂದ್ರ ಕುಮಾರ್ ಗುಬ್ಬಿ
ಕನಸುಗಳ ಕಥೆಗಾರ
]]>ಭಾಗ-1
ಮಾವಾ.......ಮಾವಾ.......ಎಂದು ಕೂಗಿದಳು ಸೊಸೆ ವೇದಾಂತಿ, ಇದೇನು.......ಇಂದು ಸೊಸೆ, ಅಪರೂಪಕ್ಕೆ ಮಾವಾ......ಅಂತ ಕೂಗ್ತಿದ್ದಾಳಲ್ಲಾ......ಇದುವರೆಗೂ ನನ್ನನ್ನು ಕಂಡರೆ ಮುಖ ಸಿಂಡರಿಸಿಕೊಂಡು ಹೋಗ್ತಿದ್ದವಳು........ ಇಂದು ಮಾವಾ......... ಅಂತ ಕೂಗ್ತಿದ್ದಾಳಲ್ಲಾ......
ಎಂದು ಹಿಂತಿರುಗಿ ನೋಡಿದ ಮಾವ ಬುಜಂಗಯ್ಯನವರಿಗೆ, ಸ್ವಲ್ಪ ಜೋರಾಗಿಯೇ ಹೇಳಿದಳು ಸೊಸೆ ವೇದಾಂತಿ, ನೀವಿನ್ನು ನಾಳೆಯಿಂದ ನನ್ನ ಮಗ ತ್ರಿಶೂಲ್ ನನ್ನು ನೋಡಿಕೊಳ್ಳೋದು ಏನೂ ಬೇಡಾ....... ಇಂದು ರಾತ್ರಿಯಿಂದಲೇ, ಅದಕ್ಕಾಗಿಯೇ ನನಗೆ ತಿಳಿದ ಒಬ್ಬಾಕೆ........ ಕಮಲೀ....... ಅಂತಾ....... ಮನೆಗೆ ಬರ್ತಿದ್ದಾಳೆ.......ಅವಳೇ ಇನ್ನು ಮುಂದೆ ತ್ರಿಶೂಲ್ ನನ್ನು ನೋಡಿಕೊಳ್ತಾಳೆ, ಎಂದು
ಸೊಸೆ ವೇದಾಂತಿ ಹೇಳಿದಾಗ, ಎಪ್ಪತ್ತೈದರ ಹರೆಯದ ಬುಜಂಗಯ್ಯನವರು, ತನ್ನ ಕಣ್ಣುಗಳಿಗೆ ಹಾಕಿಕೊಂಡಿದ್ದ ಹಳೆಯ ಕನ್ನಡಕ ಒಮ್ಮೆ ತೆಗೆದು ಅದನ್ನು ತಮ್ಮ ಹೆಗಲ ಮೇಲಿನ ಟವೆಲ್ ನಿಂದಾ ಒರೆಸಿಕೊಳ್ಳುತ್ತಾ.......ಹಾಗೇ ಕಣ್ಣುಗಳಿಂದ ಹೊರಗೆ ಬರಲು ಇಣುಕಿದ ಎರಡು ಹನಿ ನೀರನ್ನೂ ಹೊರಗೆ ಹೋಗದಂತೆ ಅಲ್ಲೇ ಅದುಮಿಕೊಳ್ಳುತ್ತಾ........ಸರಿ ಅಮ್ಮಾ.......ಎಂದು ಮರು ಮಾತನಾಡದೆ, ಬಾಗಿಲು ದಾಟಿ, ತಮ್ಮ ಮನೆಯಿಂದ ಅನತಿ ದೂರದಲ್ಲಿದ್ದ ಉದ್ಯಾನವನಕ್ಕೆ ತಿರುಗಾಡಲು ಹೊರಟರು,ಆಗ ಸಂಜೆ ಐದರ ಸಮಯ.
ಅವರಿಗೆ ಮೂವರು ಮಕ್ಕಳು, ಮೊದಲನೆಯವಳು
ಕಲ್ಪನಾ......ಅವಳು ಬೆಂಗಳೂರಿನಲ್ಲಿ ಇದ್ದಾಳೆ, ಅವಳ ಗಂಡ, ಅತ್ತೆ, ಮಾವ ತುಂಬಾ ಒಳ್ಳೆವರು, ತಮ್ಮ ಸೊಸೆ.....ಕಲ್ಪನಾ ಹಾಗೂ ಬುಜಂಗಯ್ಯನವರನ್ನು ಕಂಡರೆ ಅಪಾರ ಪ್ರೀತಿ ಅವರೆಲ್ಲರಿಗೆ.
ಎರಡನೆಯವನು...... ವಿರೂಪಾಕ್ಷ......ಈಗ್ಗೆ ಹತ್ತು ವರ್ಷಗಳ ಹಿಂದೆ ಯಾವುದೋ ಬೇರೆ ಜಾತಿಯ ಹುಡುಗಿಯನ್ನು, ಇವರುಗಳ ವಿರೋಧದ ನಡುವೆಯೂ ಮದುವೆಯಾಗಿ, ಯಾರಿಗೂ ಹೇಳದೇ ಕೇಳದೇ ಹೈದರಾಬಾದಿಗೆ ಹೋದವನು ಇಂದಿಗೂ ಪತ್ತೆಯಿಲ್ಲ.
ಇನ್ನು ಈ ಮೂರನೆಯವನು ಕರುಣಾಕರ...... ಬುಜಂಗಯ್ಯನವರ ಹಾಗೂ ಕಾವೇರಮ್ಮ ನವರ ಅತ್ಯಂತ ಪ್ರೀತಿ ಮಗ ಇವನು......ಕೊನೆಯ ಮಗನಲ್ವೇ ಅದಕ್ಕೇ......ಅವನೇನೋ ಚೆನ್ನಾಗಿ ಓದಿ ಸರ್ಕಾರೀ ಸೇವೆಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದಾನೆ, ಮದುವೆಯಾದೊಡನೆ ಬೆಂಗಳೂರಿನಲ್ಲಿ ಬಂದು, ಪ್ರತಿಷ್ಠಿತ ಬಡಾವಣೆಯಲ್ಲಿ ದೊಡ್ಡದೊಂದು ಮನೆ ಕಟ್ಟಿಸಿ ಅಲ್ಲೇ ವಾಸವಾಗಿದ್ದನು.
ಅವನ ಹೆಂಡತಿ......ವೇದಾಂತಿಯೂ ಸರ್ಕಾರೀ ಅಧಿಕಾರಿ, ಆದರೆ ಇವರಿಬ್ಬರಿಗೂ ಇರುವ ದೌಲತ್ತು ಇಡೀ ಊರಿಗೇ ಹಂಚಬಹುದು ಅಷ್ಟಿದೆ, ಅದೆಲ್ಲಾ ಅವರ ಅಧಿಕಾರದ ದರ್ಪದಿಂದ, ಅವರ ಈ ದುರ್ಬುದ್ಧಿ ಇಡೀ ಅವರ ಕುಟುಂಬದಲ್ಲಿ ಮಾತ್ರವಲ್ಲದೆ ಏಲ್ಲಾ ಸಂಬಂಧಿಕರಿಗೂ ತಿಳಿದು, ಯಾರೂ ಇವರ ಮನೆ ಹೊಸ್ತಿಲಿಗೂ ಬರುತ್ತಿರಲಿಲ್ಲ, ಇನ್ನು ಕರುಣಾಕರನ ಅಕ್ಕ, ಕಲ್ಪನಾ ಹಾಗೂ ಅವಳ ಗಂಡನ ಮನೆಯವರೂ ಬರುತ್ತಿರಲಿಲ್ಲ, ಅಷ್ಟೊಂದು ಅಹಂಕಾರದ ದಂಪತಿಗಳು ಈ ಕರುಣಾಕರ-ವೇದಾಂತಿ.
ಎಪ್ಪತ್ತೈದರ ಹರೆಯದ ಬುಜಂಗಯ್ಯನವರು
ಸೋಮಾಪುರದ ಹಿರಿಯ ವ್ಯವಸಾಯಗಾರರು, ಸುಮಾರು ತೋಟ ತುಡಿಕೆ ಹೊಂದಿ ಚೆನ್ನಾಗಿ ಬಾಳಿ, ಬದುಕಿದವರು. ಅವರ ಹೆಂಡತಿ ಕಾವೇರಮ್ಮ ಸಹ ಬುಜಂಗಯ್ಯನವರ ಭುಜಕ್ಕೆ ಭುಜ ಕೊಟ್ಟು ಐವತ್ತು ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ಜೀವ.
ಆದರೂ ಒಂದು ದಿನವೂ ಹಳ್ಳಿಗೆ, ತಾನು ಹುಟ್ಟಿದ ಊರಿಗೆ, ಮನೆಗೆ ಹೋಗಲು ಏನೋ ಒಂಥರಾ ಅಸಡ್ಡೆ....ಇನ್ನು ಅವನ ಹೆಂಡತಿ.....ವೇದಾಂತಿ...... ಅವಳೂ ಹೋಗುತ್ತಿರಲಿಲ್ಲ, ಎಷ್ಟು ಬಾರಿ ಕರೆದರೂ ಹೋಗಲೇ ಇಲ್ಲ ಹಳ್ಳಿಗೆ, ಮಗ ಹಾಗೂ ಸೊಸೆಯ ಈ ದುರ್ಬುದ್ಧಿ ಅವನ ತಾಯಿ ಕಾವೇರಮ್ಮನವರಿಗೆ ತುಂಬಾ ಬೇಸರ ಉಂಟು ಮಾಡಿತ್ತು, ಹೋಗಲಿ.......ಹೆತ್ತ ತಂದೆ, ತಾಯಿಯನ್ನಾದರೂ ತಮ್ಮ ಮನೆಗೆ ಕರೆಯುವರೇ.....ಅದೂ ಇಲ್ಲ, ಸರಿ...... ಏನು ಮಾಡುವುದು, ನಮ್ಮ ಕರ್ಮ ಎಂದು ಮನದಲ್ಲೇ ನೊಂದು ನೊಂದೂ ಬೇಸರವಾಗಿ, ಬದುಕಲೇಬೇಕಲ್ವಾ
ಎಂದು ಇರಬೇಕಾದರೆ ಇದೇ ನೋವಿನಿಂದ ಚಿಂತಿಸಿ, ಹೃದಯಾಘಾತವಾಗಿ ಮೃತರಾದರು, ಅವರೇನೋ ಬಾರದ ಲೋಕಕ್ಕೆ ಹೊರಟುಹೋದರು, ಅವರ ಸಾವಿನ ಸುದ್ದಿ ತಿಳಿದ ಎಲ್ಲರೂ ಸಾವಿನ ಮನೆಗೆ ಬೇಗನೇ ಬಂದರೂ.....ಎಷ್ಟು ಫೋನು ಕರೆಗಳನ್ನು
ಮಾಡಿದರೂ ಕರುಣಾಕರ-ವೇದಾಂತಿ ದಂಪತಿಗಳು, ಅವಳ ಹೆತ್ತವರ ಕುಟುಂಬದವರು ಮಾತ್ರ ಬೇಗನೆ ಬರಲೇ ಇಲ್ಲ.
ಇನ್ನು ಬುಜಂಗಯ್ಯನವರ ದುಃಖ ಹೇಳತೀರದು, ಹಿರಿಯ ಮಗನಿಗೆ ಹೇಳೋಣವೆಂದರೆ ಅವನ ವಿಳಾಸ ಹೇಳುವವರಾರೂ ಇಲ್ಲ, ಇನ್ನು ಕಿರಿಯ ಮಗ...... ಅವನೋ ಅವನ ಅಹಂಕಾರವೋ......ಹೇಳತೀರದು,
ಮಗಳು ಕಲ್ಪನಾ ಅವಳ ಕುಟುಂಬದವರು ಹಾಗೂ ಸಂಬಂಧಿಕರುಗಳು ಮಾತ್ರ ಈ ಸಮಯದಲ್ಲಿ ಭಾಗಿಯಾದರು.
ಎಷ್ಟು ಸಮಯ ಅಂತ ಈ ಶವವನ್ನು ಇಟ್ಟುಕೊಳ್ಳುವುದು, ಹಳ್ಳಿಗಳಲ್ಲಿ ಅವರದೇ ಆದ ಕಟ್ಟುಪಾಡುಗಳಿರ್ತಾವೆ, ಅದರಂತೆ ಸರಿಯಾದ ಸಮಯಕ್ಕೆ ಶವಸಂಸ್ಕಾರ ಮಾಡಿ ಮುಗಿಸಬೇಕು, ನಗರ, ಪಟ್ಟಣಗಳಲ್ಲಿ ಆದರೆ ಶವದ ವಿದ್ಯುತ್ ಶೀತಲೀಕರಣ ಬಾಕ್ಸ್ ತಂದು ಎಷ್ಟು ದಿನವಾದರೂ ಶವವನ್ನು ಇಡಬಹುದು, ಇಲ್ಲಿ ಹಾಗಲ್ಲ, ಆದರೆ ಮಧ್ಯಾಹ್ನ ಮುಗಿಯುತ್ತಾ ಬಂದರೂ, ಅವರ ಸುಳಿವಿಲ್ಲ, ಸರಿ ಊರಿನ ಮುಖಂಡರು, ಸಂಬಂಧಿಕರುಗಳು, ಹಿರಿಯರ ಒತ್ತಾಯದ ಮೇರೆಗೆ
ಶವವನ್ನು ಸಾಗಿಸಿ, ಸಮಾಧಿ ಮಾಡಲು ಅವರ ತೋಟದ ಜಮೀನಿನವರೆಗೂ ಶವಯಾತ್ರೆ ಹೊರಟಿತು, ಅವರುಗಳು ಬಂದರೆ ಅಲ್ಲೇ ನೋಡಲಿ, ಅಥವಾ ಅವರು ಬರುವವರೆಗೂ ಅಲ್ಲೇ ಕಾಯಬಹುದು ಎಂದು, ಎಲ್ಲರ ತೀರ್ಮಾನದಂತೆ ಶವಯಾತ್ರೆ ಹೊರಟಿತು, ಆಗ ಸಮಯ ಸಂಜೆಯ ಐದು ಗಂಟೆ, ಇನ್ನು ಸೂರ್ಯ ಮುಳುಗುವ ಮೊದಲು ಶವ ಸಂಸ್ಕಾರ ಮಾಡಿ ಮುಗಿಸಬೇಕು, ಅದಕ್ಕಿಂತ ಹೆಚ್ಚು ಸಮಯ ಕಾಯುವಂತೆ ಇಲ್ಲ, ಆದರೂ ಕರುಣಾಕರ ಅವನ ಕುಟುಂಬ ಮಾತ್ರ ಪತ್ತೆಯಿಲ್ಲ, ಎಲ್ಲರ ಫೋನುಗಳೂ ಸ್ವಿಚ್ಆಫ್. ಬುಜಂಗಯ್ಯನವರು ಹಾಗೂ ಕಲ್ಪನಾ ರ ದುಃಖ ಮುಗಿಲುಮುಟ್ಟಿದೆ, ಹಿರಿಯ ಮಗನಂತೂ ದೇಶಾಂತರ ಹೋದ, ಇನ್ನು ಇರುವ ಒಬ್ಬ ಮಗ, ಕೊನೆಯ ಸಲವಾದರೂ ತಾಯಿಯ ಶವವನ್ನು ನೋಡಲಿ ಎಂದು ಎಲ್ಲರ ಆಸೆ, ಆಗ......ಇನ್ನು ಕೆಲವೇ ನಿಮಿಷಗಳಲ್ಲಿ ಕಾವೇರಮ್ಮನವರ ಶರೀರ ಮಣ್ಣಲ್ಲಿ ಮಣ್ಣಾಗುವ ಸಮಯ...... ಅಷ್ಟರಲ್ಲಿ ನಾಲ್ಕೈದು ಕಾರುಗಳು ಧೂಳೆಬ್ಬಿಸುತ್ತಾ ಹಳ್ಳಿಯ ಕಚ್ಛಾ ರಸ್ತೆಯನ್ನು ಸೀಳಿಕೊಂಡು ಬುರ್ರೆಂದು ಬಂದವು.
ಕರುಣಾಕರನ ಸಂಬಂಧಿಕರ ಕಾರುಗಳು ಸೋಮಾಪುರದ ಬುಜಂಗಯ್ಯನವರ ಮನೆಗೆ ಬಂದು
ಅಲ್ಲಿ ಕಾವೇರಮ್ಮನ ಶವ ಆಗಲೇ ಸ್ಮಶಾನಕ್ಕೆ ಕೊಂಡೊಯ್ದರು ಎಂದು ಹೇಳಿದ್ದನ್ನು ಕೇಳಿ ಕೋಪದಿಂದಲೇ ಸ್ಮಶಾನಕ್ಕೆ ಬಂದಿಳಿದ ಕರುಣಾಕರ, ವೇದಾಂತಿ ಹಾಗೂ ಅವನ ಕಡೆಯವರು, ಅದೂ ಅವರುಗಳ ಧಿರಿಸು....... ಅಬ್ಬಬ್ಬಾ.......ಯಾವುದೋ ಮದುವೆಗೋ, ಮುಂಜಿಗೋ ಹೋಗುವಹಾಗಿದೆ, ಅವನ ಹಾಗೂ ವೇದಾಂತಿಯ ಸ್ಟೈಲ್, ಕಣ್ಣುಗಳಿಗೆ ಕಪ್ಪು ಕನ್ನಡಕ, ಗರಿಗರಿಯಾಗಿ ಇಸ್ತ್ರಿ ಮಾಡಿದ ಬಟ್ಟೆಗಳು, ಕಾಲಿಗೆ ಹೊಳೆಯುವ ಶೂ ಗಳು. ಅದು ತಾಯಿಯ ಶವವನ್ನು ನೋಡಲು ಬರುವ ರೀತಿಯಾ..... ಎಂದು ಕೊಂಡರು ಎಲ್ಲರೂ....... ಹೋಗಲಿ ಬಿಡಿ, ಅವರು ಸರ್ಕಾರೀ ಅಧಿಕಾರಿಗಳಲ್ವೇ...... ಅಂದುಕೊಂಡರು ಮತ್ತಷ್ಟು ಜನರು. ಹೋಗಲಿ ಬಂದವರು
ಸುಮ್ಮನಿದ್ದಾರಾ.......ಅದೂ ಇಲ್ಲ, ಅಲ್ಲಿದ್ದ ಎಲ್ಲರೊಡನೆ ಕೂಗಾಡಿ ರಂಪಾಟ ಮಾಡಿದರು. ತಾವುಗಳು ಬರುವುದಕ್ಕೆ ಮುಂಚೆಯೇ ಶವಯಾತ್ರೆ ಮಾಡಲು ಯಾರು ಅನುಮತಿ ಕೊಟ್ಟರು ಎಂದು.
ಆದರೆ ಕೆಲವು ಹಿರಿಯರ ಮಧ್ಯಸ್ಥಿಕೆಯಿಂದ ಕೋಪ ತಣ್ಣಗಾಗಿ, ಕರುಣಾಕರ ಹಾಗೂ ಅವನ ಕಡೆಯವರೆಲ್ಲಾ ಶವವನ್ನು ಅಂತಿಮ ದರ್ಶನ
ಪಡೆದರು, ಆದರೆ ಇನ್ನೂ ಶವ ಸಂಸ್ಕಾರ ಸಂಪೂರ್ಣ ಆಗುವ ಮೊದಲೇ ಎಲ್ಲರನ್ನೂ ಹೊರಡಿಸಿಕೊಂಡು ಹೊರಟನು ಕರುಣಾಕರ, ಅದಕ್ಕೊಂದು ಕಾರಣ ಹೇಳಿದನು, ಈಗ ನಮ್ಮಿಬ್ಬರಿಗೂ ಕಛೇರಿಗಳಲ್ಲಿ ಹಗಲು ರಾತ್ರಿ ಚುನಾವಣಾ ಕೆಲಸ ಕಾರ್ಯಗಳಿರುವುದರಿಂದ ನಾವು ಈ ಕೂಡಲೇ ಹೊರಡಬೇಕು, ನಾನು ನೋಡಿದ್ದು ಆಯ್ತಲ್ಲಾ....... ಇನ್ನು ಮುಂದಿನದನ್ನು ನೋಡೋಣ.......ತುಂಬಾ ಕೆಲಸಗಳ ಒತ್ತಡವಿದೆ, ನೀವುಗಳು ಶವ ಸಂಸ್ಕಾರ ಮಾಡಿ ಮುಗಿಸಿ, ಹಾಗೇ......ಮೂರು ದಿನದ ಹಾಗೂ ಹದಿನೈದನೇ ದಿನದ ತಿಥಿ ಕಾರ್ಯಗಳನ್ನು ಸಹ ನೀವುಗಳೇ ಎಲ್ಲಾ ಮಾಡಿ ಮುಗಿಸಿಬಿಡಿ, ನಾವುಗಳು ಕೆಲಸ ಕಾರ್ಯಗಳನ್ನು ಬಿಟ್ಟು ಪದೇ ಪದೇ ಬರಲಾಗದು ಈ ಹಳ್ಳಿಗೆ.......ಆಯ್ತಾ.......ಎಂದು ಕಡ್ಡಿ ತುಂಡಾಗುವಂತೆ ಹೇಳಿ, ತಂದೆ ಬುಜಂಗಯ್ಯನವರು ಹಾಗೂ ಅಕ್ಕ ಕಲ್ಪನಾ, ಅಲ್ಲಿದ್ದ ಹಿರಿಯರೆಲ್ಲರೂ ಎಷ್ಟು ಹೇಳಿದರೂ ಯಾರ ಮಾತಿಗೂ ಮನ್ನಣೆ ಕೊಡದೆ, ಸತ್ತವರು ಮತ್ತೆ ಎದ್ದು ಬರ್ತಾರೇನೂ...... ಎಲ್ಲಾ ಕೆಲಸ ಬಿಟ್ಟು ಹೀಗೆ ಕುಳಿತರೆ ಬದುಕಿರುವವರನ್ನು ಯಾರು ಕೇಳ್ತಾರೆ......ಎಂದು ಹೇಳಿ ಕಾರು ಹತ್ತಿ ಹೊರಟೇಬಿಟ್ಟನು. ಅವನ ಹಿಂದೆ ಆ ಕಾರುಗಳೂ ಹೊರಟವು,
ಅಂದಿನ ಶವಸಂಸ್ಕಾರ, ಮೂರುದಿನದ ಹಾಗೂ ತಿಥಿ ಕಾರ್ಯಗಳೆಲ್ಲದಕ್ಕೂ ಎಷ್ಟು ಕರೆದರೂ, ಯಾರು ಕರೆದರೂ ಕರುಣಾಕರ ಅವನ ಹೆಂಡತಿ ವೇದಾಂತಿ ಅವರ ಸಂಬಂಧಿಗಳು ಮಾತ್ರ ಯಾರೂ ಇತ್ತಕಡೆ ತಲೆಹಾಕಿಯೂ ಮಲಗಲಿಲ್ಲ. ಇವನ ಈ ದುರ್ನಡೆಯಿಂದ ಬುಜಂಗಯ್ಯನವರು ತುಂಬಾ ನೊಂದು ಅದೇ ಯೋಚನೆಯಲ್ಲಿಯೇ ಹಾಸಿಗೆ ಹಿಡಿದರು, ಬುಜಂಗಯ್ಯನವರು ತಮ್ಮ ಹಳ್ಳಿ...... ಸೋಮಾಪುರದಲ್ಲಿಯೇ ಒಬ್ಬರೇ ಇದ್ದರು, ಮಗಳು ಕಲ್ಪನಾ ಎಷ್ಟು ದಿನ ಅಂತ ಗಂಡನ ಮನೆ ಬಿಟ್ಟು ಹಳ್ಳಿಯಲ್ಲಿ ತಂದೆಯನ್ನು ನೋಡಿಕೊಳ್ತಾಳೆ, ಅವಳಿಗೂ ಗಂಡ, ಅತ್ತೆ, ಮಾವ, ಮಕ್ಕಳು ಅಂತ ಸಂಸಾರ ಇದ್ದಿದ್ದರಿಂದ, ಬುಜಂಗಯ್ಯನವರು ಸ್ವಲ್ಪ ಸುಧಾರಿಸಿಕೊಂಡ ನಂತರ ಬೆಂಗಳೂರಿಗೆ ಬಂದಳು.
ತಂದೆ ಬುಜಂಗಯ್ಯನವರ ಆರೋಗ್ಯ ಸುಧಾರಿಸಿದ್ದರೂ ಸಹ ತುಂಬಾ ಬಳಲಿದ್ದರು, ಒಬ್ಬರೇ ಸ್ವತಂತ್ರವಾಗಿ ಇರಲು ಆಗುತ್ತಿರಲಿಲ್ಲ, ಅವರ ಬಗ್ಗೆ ಕರುಣಾಕರನ ಅತ್ತೆ, ಮಾವ ಹೇಳಿದ್ದರಿಂದ ಸ್ವಲ್ಪ ತಗ್ಗಿದ ಕರುಣಾಕರ ಹಾಗೂ ವೇದಾಂತಿ, ಅವರ ಒತ್ತಾಯಕ್ಕೆ ಮಣಿದು ತನ್ನ ತಂದೆಯನ್ನು ಬೆಂಗಳೂರಿನ ತಮ್ಮ ಮನೆಗೆ ತಂದು ಇಟ್ಟುಕೊಳ್ಳಲು ತೀರ್ಮಾನಿಸಿದರು,
ಊರಿನ ಜಮೀನು , ಮನೆ ಎಲ್ಲವನ್ನೂ ಮಾರಾಟ ಮಾಡಿದ ಕರುಣಾಕರ ಅಕ್ಕ ಕಲ್ಪನಾಗೆ ಸೇರಬೇಕಿದ್ದ ಹಣವನ್ನು ಅವಳಿಗೆ ಕೊಟ್ಟನು. ಆದರೆ ಬುಜಂಗಯ್ಯನವರನ್ನು ನೋಡುವ ನೆಪದಲ್ಲಿ ಅಕ್ಕ ಕಲ್ಪನಾ ಆಗಲೀ ಭಾವ ಹಾಗೂ ಯಾವುದೇ ಸಂಬಂಧಿಕರು ತಮ್ಮ ಮನೆಗೆ ಆಗಾಗ ಭೇಟಿ ಕೊಡುವುದು ಆಗಲೀ ಮಾಡಬಾರದೆಂದು ಈ ಮೊದಲೇ ತಿಳಿಸಿಬಿಟ್ಟಿದ್ದ, ಅದರಿಂದ ಕಲ್ಪನಾ ಹಾಗೂ ಇತರರು ಯಾರೂ ಬುಜಂಗಯ್ಯನವರನ್ನು ನೋಡುವುದಕ್ಕೆ ಆಗುತ್ತಿರಲಿಲ್ಲ, ಬರುತ್ತಿರಲಿಲ್ಲ.
ಬುಜಂಗಯ್ಯನವರಿಗೆ, ಮಗ ಕರುಣಾಕರನ ಮನೆ ಒಂದು ರೀತಿಯ ಚಿನ್ನದ ಪಂಜರದಂತೆ ಭಾಸವಾಯಿತು, ಆಳುಗಳೇನೋ, ಇವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಅವರು ಕುಳಿತುಕೋ ಎಂದರೆ ಕುಳಿತುಕೊಳ್ಳೋದು, ನಿಲ್ಲು ಎಂದರೆ ನಿಲ್ಲೋದು, ತಿನ್ನು ಎಂದರೆ ತಿನ್ನೋದು ಇದೇ ಅವರ ದಿನಚರಿ ಆಯಿತು. ಅವರ ಕಡೆಯವರಾರೂ ಇರಲಿಲ್ಲವಾದ್ದರಿಂದ ಕೇವಲ ಅವರ ಧರ್ಮಪತ್ನಿ ಕಾವೇರಮ್ಮ ನ ನೆನಪಿನಲ್ಲಿಯೇ ಬದುಕಲಾರಂಭಿಸಿದರು. ಇಂತಹ ಸಮಯದಲ್ಲಿ ಅವನ ಮನೆಯಲ್ಲಿ ಒಂದು ಜಾದೂ ನಡೆಯಲಾರಂಭಿಸಿತು, ಬುಜಂಗಯ್ಯನವರನ್ನು ಅವರ
ಮೊಮ್ಮಗ ತ್ರಿಶೂಲ್, ತುಂಬಾ ನೆಚ್ಚಿಕೊಂಡುಬಿಟ್ಟನು,
ಅವನಿಗೆ ಬುಜಂಗಯ್ಯನವರು ತನ್ನ ತಾತನೆಂದು ತಿಳಿದೋ ತಿಳಿಯದೆಯೋ ಅವರ ಪ್ರೀತಿಯಲ್ಲಿ ಬಿದ್ದು ಬಿಟ್ಟಿದ್ದನು. ಬೆಳಿಗ್ಗೆ ಬುಜಂಗಯನವರು ನಿದ್ರೆಯಿಂದ ಏಳುವ ಮುನ್ನವೇ ತ್ರಿಶೂಲ್ ಶಾಲೆಗೆ ಹೋಗುತ್ತಿದ್ದ, ಆದರೆ ಅವನು ಮಧ್ಯಾಹ್ನ ಶಾಲೆಯಿಂದ ಹಿಂತಿರುಗಿ ಬರುವಷ್ಟರಲ್ಲಿ ಅವರು ಎದ್ದು ಮನೆಯ ವರಾಂಡದಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದರೆ, ಅವರನ್ನು ನೋಡಿದೊಡನೆ ತಾತಾ...... ತಾತಾ.......ಎಂದು ಕೂಗಿ
ಕೊಂಡು ಓಡಿಬಂದು ಅವರ ತೊಡೆಯಮೇಲೆ ಕುಳಿತು, ಊಟ, ಪಾಠ, ತಿಂಡಿ, ನಿದ್ರೆ ಎಲ್ಲವೂ ಮಾಡುತ್ತಿದ್ದನು, ಇದನ್ನು ಗಮನಿಸಿದ ಮನೆಯ ಆಳುಗಳು, ಅಯ್ಯೋ.....ಹೋಗಲಿ ಬಿಡಿ , ಪಾಪ ಅವರು ಅವನ ತಾತ ತಾನೆ ಅಂದುಕೊಂಡು ಅವರಿಬ್ಬರ ಸಲುಗೆಗೆ ಹಸಿರು ನಿಶಾನೆ ಕೊಟ್ಟಿದ್ದರು, ಇದೆಲ್ಲದರ ಪ್ರಭಾವದಿಂದ ಬುಜಂಗಯ್ಯನವರಿಗೆ, ಸಧ್ಯ.......ಮಗ, ಸೊಸೆ..... ತನ್ನನ್ನು ಪ್ರೀತಿಸುತ್ತಿಲ್ಲ,
ನನ್ನ ಕಡೆಯವರನ್ನೂ ಬರದಂತೆ ನಿರ್ಭಂದಿಸಿದ್ದಾರೆ ನನ್ನ ಮಗ ಸೊಸೆ........ಆದರೆ ದೇವರ ದಯೆ ನನಗೆ ಮೊಮ್ಮಗನ ಪ್ರೀತಿಯನ್ನಾದರೂ ಕರುಣಿಸಿರುವನಲ್ಲಾ,
ಎಂದು ಕೊಂಚ ಸಮಾಧಾನದಿಂದ ಇದ್ದರು. ಹೀಗೆ ಅವರ ಆರೋಗ್ಯ ಬರುಬರುತ್ತಾ ಸುಧಾರಿಸಿ ಈ
ಮೊದಲಿನ ಬುಜಂಗಯ್ಯನವರೇ ಆದರು, ಆದರೆ ಇಷ್ಟೆಲ್ಲಾ ಬೆಳವಣಿಗೆಗಳಾಗುತ್ತಿದ್ದರೂ ತ್ರಿಶೂಲ್ ನ ಹೆತ್ತವರಾದ ಕರುಣಾಕರ ಹಾಗೂ ವೇದಾಂತಿಗಳಿಗೆ ಇದಾವುದೂ ಮಾತ್ರ ತಿಳಿದಿರಲಿಲ್ಲ, ಕಾರಣ ಅವರುಗಳು ಸರ್ಕಾರೀ ಅಧಿಕಾರಿಗಳಾಗಿದ್ದರಿಂದ ಅವರುಗಳಿಗೆ ಕಛೇರಿ ಕೆಲಸಗಳಲ್ಲಿ ಇಂತಿಷ್ಟು ಅಂತ ಸಮಯವಿರಲಿಲ್ಲ, ಯಾವಾಗಲೋ ಮನೆಗೆ ಬರುತ್ತಿದ್ದರು,ಯಾವಾಗಲೋ ಮನೆಯಿಂದ ಹೊರಗೆ ಹೋಗುತ್ತಿದ್ದರು. ಅವರುಗಳಿಗೆ ಮಗ ತ್ರಿಶೂಲ್ ಬಗ್ಗೆಯಾಗಲೀ , ಬುಜಂಗಯ್ಯನವರ ಬಗ್ಗೆಯಾಗಲೀ ಯೋಚಿಸುವಷ್ಟು ವ್ಯವಧಾನವಿರಲಿಲ್ಲ ,
ಆದರೆ ಒಮ್ಮೆ ಅವನಿಗೆ ಶೀತದಿಂದ ಆರೋಗ್ಯ ತುಂಬಾ ಹದಗೆಟ್ಟು ಆಸ್ಪತ್ರೆ ಸೇರಿಸುವಷ್ಟರವರೆಗೂ ಸಮಸ್ಯೆ ಆಯಿತು, ಕರುಣಾಕರನ ಮನೆಯ ಆಳುಗಳೇ ತ್ರಿಶೂಲ್ ನನ್ನು ಅವನ ಹೆತ್ತವರ ಅನುಮತಿ ಮೇರೆಗೆ ಆಸ್ಪತ್ರೆಗೆ ಸೇರಿಸಿ ಉತ್ತಮ ಚಿಕಿತ್ಸೆ ಕೊಡಿಸಲು ಪ್ರಾರಂಭಿಸಿದರು, ಆಗ ತ್ರಿಶೂಲ್ ಒಬ್ಬನೇ ಆಸ್ಪತ್ರೆಯಲ್ಲಿ ಇರಲು ತುಂಬಾ ಹಠ ಮಾಡಿದನು, ಯಾರು ಎಷ್ಟು ಸಮಾಧಾನಪಡಿಸಿದರೂ ತನಗೆ ತನ್ನ ತಾತನು ಬೇಕೇಬೇಕು ಎಂದು ಔಷಧಿ, ಊಟ, ತಿಂಡಿ ತೆಗೆದುಕೊಳ್ಳದೆ ಅಳತೊಡಗಿದನು, ಇಷ್ಟೆಲ್ಲಾ ಆದರೂ ಅವನ ಹೆತ್ತವರು ಗಂಭೀರವಾಗಿ ಯೋಚಿಸಲಿಲ್ಲ,
ಎಲ್ಲವನ್ನೂ ತಮ್ಮ ಮನೆಯ ಆಳುಗಳಿಗೆ ವಹಿಸಿ, ತಾವು ಯಥಾಪ್ರಕಾರ ಕೆಲಸದ ಮೇಲೆ ನಿಗಾ ವಹಿಸಿದ್ದರು, ಒಂದು ದಿನವೂ ತಮ್ಮ ಮಗನನ್ನು ನೋಡಲು ಆಸ್ಪತ್ರೆಗೆ ಭೇಟಿ ಕೊಡಲಿಲ್ಲ, ಕೇವಲ ಅವರ ಹಣದ ಮದ, ಅಧಿಕಾರದ ದಾಹ , ಅದರ ಮುಂದೆ ಮತ್ತೇನೂ ಇಲ್ಲ ಎನ್ನುವಂತೆ ಕ್ರೂರ ಮೃಗಗಳಂತೆ ವರ್ತಿಸತೊಡಗಿದರು, ಇವರ ಈ ನಡೆಯಿಂದ ಆಳುಗಳೂ ಅವರಿಷ್ಟದಂತೆ ಆ ತ್ರಿಶೂಲನಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಈಗ ಆ ಮಗು ತನ್ನ ತಾತನನ್ನು ಕೇಳುತ್ತಿದೆ ಎಂದು ಅರಿತು ತ್ರಿಶೂಲ್ ನ ತಾತ ಬುಜಂಗಯ್ಯನವರನ್ನು ಆಸ್ಪತ್ರೆಗೆ ಕರೆತಂದು ಮೊಮ್ಮಗನ ಜೊತೆ ಇರುವಂತೆ ನೋಡಿಕೊಂಡರು, ಆಗ
ತ್ರಿಶೂಲ್ ಆರೋಗ್ಯ ಬಲುಬೇಗ ಸುಧಾರಿಸಿ, ಅವನನ್ನು ಆಸ್ಪತ್ರೆಯಿಂದ ಕರೆದುಕೊಂಡು ಮನೆಗೆ ಹೋದರು ಕರುಣಾಕರನ ಆಳುಗಳು, ಅಂದಿನಿಂದ ಮತ್ತಷ್ಟು ಹತ್ತಿರವಾದರು ತಾತ ಮೊಮ್ಮಗ.
ಈ ಎಲ್ಲಾ ಬೆಳವಣಿಗೆಗಳು ಬರುಬರುತ್ತಾ ಅವರಿವರ ಬಾಯಿಯಿಂದ ಕರುಣಾಕರ ದಂಪತಿಗಳಿಗೂ ಬಿದ್ದು ಅವರುಗಳು ತುಂಬಾ ಕೋಪಗೊಂಡರು. ಅಲ್ಲದೇ ಆ ಆಳುಗಳನ್ನು ಜೊತೆಗೆ ಬುಜಂಗಯ್ಯ ನವರನ್ನು ತರಾಟೆಗೆ ತೆಗೆದುಕೊಂಡರು.
ಇದುವರೆಗೂ ಕರುಣಾಕರ, ವೇದಾಂತಿ ದಂಪತಿಗಳು, ಬುಜಂಗಯ್ಯನವರು ತ್ರಿಶೂಲನ ತಾತ ನೆಂದು ಎಂದೂ ಹೇಳಿರಲಿಲ್ಲ, ಆದರೆ ದೈವದ ವಿಧಿಯೇ ಅವರಿಬ್ಬರನ್ನು ಒಂದುಗೂಡಿಸಿದ್ದು ಕಂಡು, ಕೇಳಿ ತುಂಬಾ ಕುಪಿತಗೊಂಡರು, ಹಾಗೂ ಇದನ್ನು ಹೀಗೇ ಬಿಟ್ಟರೆ ತಮ್ಮ ಮಗನು ಒಂದು ದಿನ ನಮ್ಮನ್ನೆಲ್ಲಾ ದೂರ ಮಾಡಿ ತಾತನನ್ನು ಪ್ರೀತಿಸುವನು, ಎಂದು ಅರಿತು , ತಾತ ಬುಜಂಗಯ್ಯನವರಿಂದ ಮೊಮ್ಮಗ ತ್ರಿಶೂಲನನ್ನು ದೂರಮಾಡಲು ಯೋಚಿಸಿದರು.
ಆಗಲೇ ಬುಜಂಗಯ್ಯನವರಿಗೆ ಅವರ ಸೊಸೆ ವೇದಾಂತಿ...... ಕಠಿಣ ಶಬ್ಧಗಳಲ್ಲಿ ಎಚ್ಚರಿಸಿದ್ದು.
ಮಾವಾ.......ಮಾವ........ ನೀವಿನ್ನು ನನ್ನ ಮಗ ತ್ರಿಶೂಲ್ ನನ್ನು ನೋಡಿಕೊಳ್ಳೋದು ಏನೂ ಬೇಡಾ.
ಎಂದು.
ಸರಿ ಅಮ್ಮಾ......ಎಂದವರೇ ಬುಜಂಗಯ್ಯನವರು
ಹಾಗೇ ಉದ್ಯಾನವನದ ಕಡೆಗೆ ಅದೇ ಯೋಚನೆಯಲ್ಲಿಯೇ ಹೋಗಿ, ಅಲ್ಲಿ ಕಲ್ಲುಬೇಂಚಿನ ಮೇಲೆ ಕುಳಿತು ತಮ್ಮ ಮಗ, ಸೊಸೆ, ಮೊಮ್ಮಗನ ಬಗ್ಗೆಯೇ ಯೋಚಿಸತೊಡಗಿದರು. ಸರಿ ಅವರಿಗೆ ಮಗನ ಮನೆಗೆ ಹೋಗಲು ಏಕೋ ಬೇಜಾರಾಯಿತು,
ತುಂಬಾ ನೊಂದು ಕೊನೆಗೊಂದು ನಿರ್ಧಾರಕ್ಕೆ ಬಂದು ಮನೆಯನ್ನು ತೊರೆದು ಎಲ್ಲಿಗಾದರೂ ಹೋಗಿ ಬಿಡೋಣವೆಂದು ಉದ್ಯಾನವನದಿಂದ ಹೊರಗೆ ಬಂದು, ಹಾಗೇ ನಡೆಯುತ್ತಾ ರಸ್ತೆಯಲ್ಲಿ ಹೋಗುತ್ತಿರಬೇಕಾದರೆ, ತುಂಬಾ ಬಳಲಿ ತಲೆ ಸುತ್ತು ಬಂದು ನೆಲಕ್ಕೆ ಬಿದ್ದು ಬಿಟ್ಟರು. ಅವರನ್ನು ನೋಡಿದ ದಾರಿಹೋಕರು ಅವರನ್ನು ಹಾರೈಕೆ ಮಾಡಿ, ನೀರು ಕುಡಿಸಿ , ರಸ್ತೆ ಪಕ್ಕದ ಒಂದು ಮರದ ಕೆಳಗೆ ಕುಳ್ಳಿರಿಸಿ, ಅವರ ಕಡೆಯವರಾರಾದರೂ ಬರುವರಾ.....ಎಂದು ಅಕ್ಕ ಪಕ್ಕ ನೋಡತೊಡಗುವಷ್ಟರಲ್ಲಿ, ಅದೇ ಮಾರ್ಗವಾಗಿ ಬಂದರು, ಬುಜಂಗಯ್ಯನವರ ಮಗಳು ಕಲ್ಪನಾ ಳ ಮಾವ, ಬುಜಂಗಯ್ಯನವರ ಬೀಗರು, ಅವರ ಮನೆಯೂ ಅಲ್ಲೇ ಹತ್ತಿರದಲ್ಲಿ ಇದ್ದಿತಂತೆ, ಅವರು ಈ ಬುಜಂಗಯ್ಯನವರನ್ನು ಗುರುತು ಹಿಡಿದು, ಮೊದಲು ಸೊಸೆ ಕಲ್ಪನಾಳಿಗೆ ಫೋನು ಕರೆ ಮಾಡಿ ಅವಳನ್ನು ಕರೆಸಿಕೊಂಡು, ಕೂಡಲೇ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು, ಆದರೆ ಈ ವಿಷಯವನ್ನು ಕರುಣಾಕರನಿಗೆ ಹೇಳದೇ ಸುಮ್ಮನಾದರು.
ಇತ್ತ ಕರುಣಾಕರ್ ಮನೆಯಲ್ಲಿ ವೇದಾಂತಿ ಹೇಳಿದಂತೆ ಅವರ ಮನೆಗೆ ತ್ರಿಶೂಲನನ್ನು
ನೋಡಿಕೊಳ್ಳಲು, ಕಮಲಿಯೇನೋ ಬಂದಳು, ಆದರೆ ಕಮಲಿಯೊಂದಿಗೆ ತ್ರಿಶೂಲ್ ನು ಹೊಂದಿಕೊಳ್ಳಲಿಲ್ಲ, ಅಂದು ಇಡೀ ದಿನ ಅವನ ತಾತ ಇಲ್ಲದಿದ್ದದ್ದು ಅವನಿಗೆ ತುಂಬಾ ದುಃಖ ತರಿಸಿತು. ಆದರೆ....... ತ್ರಿಶೂಲ್ ನಿಗೆ ಮತ್ತೆ ಆರೋಗ್ಯ ಹದಗೆಟ್ಟು ತುಂಬಾ ನಿತ್ರಾಣ ಗೊಂಡು ಆಸ್ಪತ್ರೆಗೆ ದಾಖಲಾದನು, ಈ ಮೊದಲು ಅವನ ತಾತ ಇದ್ದಿದ್ದರಿಂದ ಬಹುಬೇಗನೆ ಚೇತರಿಸಿಕೊಂಡಿದ್ದನು, ಆದರೆ ಈಗ ಅವರು ಇಲ್ಲ, ಅದರಿಂದಲೇ ಅವನಿಗೆ ಆರೋಗ್ಯ ದಲ್ಲಿ ಮತ್ತಷ್ಟು ಏರುಪೇರಾಗಿದ್ದು, ಅದೂ ಉಲ್ಬಣಗೊಂಡಿದ್ದು ಈಗಂತೂ ಹೆತ್ತವರಿಗೆ ಚಿಂತೆ ಆವರಿಸಿತು. ಇದುವರೆಗೂ ತ್ರಿಶೂಲನ ಬಗ್ಗೆ ಅಷ್ಟೊಂದು ಮಹತ್ವ ಕೊಡದೆ ಇದ್ದವರು, ಈಗ ಅವನ ಸ್ಥಿತಿ ನೋಡಿ ತುಂಬಾ ಗಾಬರಿ ಯಾದರು.
ಇತ್ತ ಅಂದು ಸಂಜೆ ಮನೆ ಬಿಟ್ಟ ಬುಜಂಗಯ್ಯನವರ ಬಗ್ಗೆ ಅವರ ಆಳುಗಳ ಮುಖಾಂತರ ಕರುಣಾಕರ, ವೇದಾಂತಿ ದಂಪತಿಗಳಿಗೆ ತಿಳಿಯಿತು, ಅವರು ಇಂಥಾ ಸಮಯದಲ್ಲಿ ಎಲ್ಲಿಗೆ ಹೋದರು.....ಎಂದು ತುಂಬಾ ತಲೆಕೆಡಿಸಿಕೊಂಡನು ಕರುಣಾಕರ. ಯಾರಿಗೆ ಅಂತ ವಿಚಾರಿಸುವುದು, ಯಾರೊಡನೆಯೂ ತನಗೆ ಈಗಂತೂ ಸಂಬಂಧವಿಲ್ಲ,
ಯಾವುದೇ ಸಂಬಂಧಿಕರು ಇರಲಿ..... ತನ್ನ ಒಡಹುಟ್ಟಿದ ಅಕ್ಕನೊಂದಿಗೂ ಯಾವುದೇ ಸಂಪರ್ಕವಿಟ್ಟುಕೊಂಡಿಲ್ಲ, ಇನ್ನು ಯಾರ ಮೊಬೈಲ್ ನಂ.ಸಹ ಇಲ್ಲ, ಸರಿ ಪೊಲೀಸು ಸ್ಟೇಶನ್ ಗೇ ಹೋಗೋದು ಎಂದು ತೀರ್ಮಾನಿಸಿದನು ಕರುಣಾಕರ.
ಒಂದು ಕಡೆ ತ್ರಿಶೂಲನ ಆರೋಗ್ಯ ಹದಗೆಟ್ಟಿದೆ, ಅದು ಹತೋಟಿಗೇ ಬರುತ್ತಿಲ್ಲ, ಮತ್ತೊಂದೆಡೆ ತನ್ನ ತಂದೆ ಕಾಣೆಯಾಗಿದ್ದಾರೆ, ಹಾಗೇ.......ಕಾರು ಚಾಲನೆ ಮಾಡಿಕೊಂಡು ನೇರವಾಗಿ ಪೊಲೀಸ್ ಸ್ಟೇಷನ್ ಗೆ ಹೋದನು, ಮೊದಲೇ ಸರ್ಕಾರೀ ಉನ್ನತಾಧಿಕಾರಿ ಯಾಗಿದ್ದರಿಂದ ಅವರ ಅಹವಾಲು ಸ್ವೀಕರಿಸಿದರು, ಕಾಣೆಯಾಗಿರುವ ಕರುಣಾಕರನ ತಂದೆ, ಬುಜಂಗಯ್ಯನವರ ಒಂದು ಫೋಟೊ ಒಂದನ್ನು ಕೊಟ್ಟು, ಅದನ್ನು ಎಲ್ಲಾ ಕಡೆ ಮುದ್ರಿಸಿ ಪ್ರಚಾರ ಮಾಡುವಂತೆ ಹೇಳಿ ಪೊಲೀಸ್ ಠಾಣೆಯಿಂದ ಮನೆಗೆಹೋಗಿ ತನ್ನ ಮಗ ತ್ರಿಶೂಲನ ಆರೋಗ್ಯ ವಿಚಾರಿಸಲು ನೇರವಾಗಿ ಆಸ್ಪತ್ರೆಗೆ ಹೋದನು, ಆದರೆ ತ್ರಿಶೂಲನ ಆರೋಗ್ಯ ತುಂಬಾ ಗಂಭೀರವಾಗಿತ್ತು, ಅವನು ನಿದ್ದೆಯಲ್ಲೂ ತಾತ.....ತಾತ......ಎಂದು ಕನವರಿಸುತ್ತಾ, ತುಂಬಾ ಜ್ವರದಿಂದ ನಿತ್ರಾಣಗೊಂಡಿದ್ದನು, ವೈದ್ಯರು ಹೇಳಿದರು, ನೋಡಿ ಕರುಣಾಕರ್......ಈಗಿನ ಪರಿಸ್ಥಿತಿಯಲ್ಲಿ ಯಾವುದೇ
ಚಿಕಿತ್ಸೆ ಫಲಿಸದು, ಈಗೇನಿದ್ದರೂ ಅವನ ತಾತನೇ ಚಿಕಿತ್ಸೆ, ಅವರೇ ಔಷಧಿ, ಅವರ ಆಲಿಂಗನದಿಂದಲೇ ಮಗುವಿನ ಈ ಜ್ವರ ಕಡಿಮೆಯಾಗಬಹುದೇ ವಿನಃ ಬೇರಾವುದೇ ಔಷಧಿ ಇದಕ್ಕೆ ಮದ್ದಲ್ಲ......ಎಂದು ಈ ಕೂಡಲೇ ತ್ರಿಶೂಲನ ತಾತ ಎಲ್ಲಿದ್ದರೂ ಕರೆತನ್ನಿರೆಂದು ವೈದ್ಯರು, ಕರುಣಾಕರನಿಗೆ ಹೇಳಿದರು.
ಪೊಲೀಸರೇನೋ ಬುಜಂಗಯ್ಯನವರ ಫೋಟೋ ಮುದ್ರಿಸಿ , ಅವರು ಕಾಣೆಯಾಗಿದ್ದಾರೆ, ಎಂಬ ಜಾಹೀರಾತನ್ನು ಇಡೀ ಐದಾರು ಕಿ.ಮೀ. ಅಂತರದಲ್ಲಿ ಅಂಟಿಸಿ, ಮತ್ತು ಸ್ಥಳೀಯ ದಿನಪತ್ರಿಕೆಗಳು, ಟಿ.ವಿ. ಚಾನಲ್ ಗಳಲ್ಲೂ ಜಾಹಿರಾತು ನೀಡಿದರು. ಆದರೂ ಏನೊಂದೂ ಪ್ರಯೋಜನವಾಗಲಿಲ್ಲ.
ಬುಜಂಗಯ್ಯನವರು ತನ್ನ ಮಗಳು ಕಲ್ಪನಾ ಳ ಮನೆಯಲ್ಲಿ ಆರಾಮದಾಯಕ ಜೀವನ ನಡೆಸುತ್ತಿದ್ದರು,
ಅವಳ ಗಂಡನ ಮನೆಯವರೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು, ಅವರನ್ನು ಹೊರಗಡೆ ಎಲ್ಲೂ ತಿರುಗಾಡಲು ಬಿಡದೆ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದರು. ಕಲ್ಪನಾಳಿಗೆ ಇಬ್ಬರು ಮಕ್ಕಳು, ಒಂದು ಹೆಣ್ಣು, ಮತ್ತೊಂದು ಗುಂಡು, ಇವರೀರ್ವರಿಗೂ ಮತ್ತೊಬ್ಬ ತಾತ ಸಿಕ್ಕಿದ್ದು ತುಂಬಾ
ಖುಷಿಯಾಗಿ ಅವರೊಡನೆ ಆಟವಾಡಿಕೊಂಡಿದ್ದರು.
ತಮ್ಮ ಮಗ ತ್ರಿಶೂಲನ ಆರೋಗ್ಯ ಹಾಗೂ ಅವನ ತಾತನ ವಿಷಯದಲ್ಲಿ, ಕರುಣಾಕರ ವೇದಾಂತಿ ತುಂಬಾ ತಪ್ಪು ನಿರ್ಣಯ ಕೈಗೊಂಡು ತುಂಬಾ ಸೋತುಹೋಗಿದ್ದರು. ಈಗ ಬರುಬರುತ್ತಾ ಅವರ ಯೊಜನೆಗಳೆಲ್ಲವೂ ಅವರಿಗೆ ತಿರುಗುಬಾಣ ಆಗಿದ್ದವು,
ಒಂದುಕಡೆ ತ್ರಿಶೂಲನ ಆರೋಗ್ಯ ಸುಧಾರಿಸುತ್ತಿಲ್ಲ, ಮತ್ತೊಂದೆಡೆ ಬುಜಂಗಯ್ಯನವರು ಕಾಣೆಯಾಗಿದ್ದಾರೆ, ಎಲ್ಲಿ ಹೋದರು, ಏನಾದರು, ಏನಾದರೂ ಆಗಿದ್ದರೆ.....
ಪೊಲೀಸರಿಗೆ ಮಾಹಿತಿ ಈಗಾಗಲೇ ಸಿಗಬೇಕಿತ್ತು, ಆದರೆ ಅವರು ಮತ್ತೆಲ್ಲಿ ಹೋದರು.......ಎಂಬುದೇ ಯಕ್ಷಪ್ರಶ್ನೆಯಾಯಿತು, ನಾವು ಅವರನ್ನು ತ್ರಿಶೂಲನಿಂದ ಬೇರ್ಪಡಿಸಬಾರದಿತ್ತು, ಎಂದು ಈಗ ಕರುಣಾಕರನಿಗೆ ಮನವರಿಕೆಯಾಗಿ, ಪಶ್ಚಾತ್ತಾಪ ಕೂಡ ಆಗುತ್ತಿತ್ತು, ಇದುವರೆಗೂ ತಾವು ತಮ್ಮ ಅಧಿಕಾರ, ದರ್ಪ, ಹಣ, ಅಂತಸ್ತು, ಎಂದು ಕರುಣಾಕರ ದಂಪತಿಗಳು ತಮ್ಮ ಕುಟುಂಬ, ತಮ್ಮ ತಂದೆ ಇರಲಿ ತಮ್ಮ ಏಕೈಕ ಮಗುವನ್ನೂ ನೋಡಿಕೊಳ್ಳದಷ್ಟು ಕಠಿಣ ಹೃದಯಿಗಳಾಗಿ, ಕಾಡು ಮೃಗಗಳಂತೆ ವರ್ತಿಸುತ್ತಿದ್ದರು.
ಈಗ ತಮ್ಮ ಮಗು ಯಾವಾಗ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಎಷ್ಟು ಹಣ ಖರ್ಚು ಮಾಡುತ್ತೇನೆಂದರೂ ಅದು ವ್ಯರ್ಥ ಎಂದು ತಿಳಿದರು.
ಮುಂದಿನ ಸಂಚಿಕೆಯಲ್ಲಿ..........ಓದಿ
________________
]]>
ಇದೇ ಬೋಗಿಯಲ್ಲಿ ನಾಲ್ಕು ಜನ ಯುವಕರ ಗುಂಪೊಂದು ತಮ್ಮ ಕೆಲಸಗಳಿಗೆ ರಜೆ ಇದ್ದಿದ್ದರಿಂದ ಅವರು ಬೆಳಗಾವಿ ಕಡೆಗೆ ಪ್ರವಾಸಕ್ಕೆಂದು ಹೊರಟಿತ್ತು.ಇವರುಗಳೂ ಅವರೊಡನೆ ಕೆಲವೇ ಅತ್ಯಲ್ಪ ಸಮಯದಲ್ಲಿ ಸಲುಗೆ ಬೆಳೆಸಿಕೊಂಡು ಆತ್ಮೀಯರಂತಾಗಿಬಿಟ್ಟರು. ಇವರುಗಳು ಸಮಾನ ವಯಸ್ಕರರ ಜೊತೆ ಇಸ್ಪೀಟು ಆಡುವುದು, ಅವರೊಂದಿಗೆ ಅಂತ್ಯಾಕ್ಷರಿ ಹಾಡುವುದು, ಅವರೊಡನೆ ರೈಲು ನಿಂತ ನಿಲ್ದಾಣಗಳಲ್ಲಿ ಅಲ್ಲಲ್ಲಿ ಕಾಫಿ, ಟೀ ಹೀರುವುದು ಹಾಸ್ಯ ಪ್ರಸಂಗಗಳನ್ನು ಹೇಳುವುದು ಹೀಗೆಯೇ ಪ್ರಯಾಣ ಸಾಗಿತ್ತು. ಆಗ ಈಗಿನಂತೆ ಕೈಲಿ ಮೊಬೈಲುಗಳಿಲ್ಲ, ಎಲ್ಲರೂ ವಿಳಾಸ ಪಡೆಯಲು, ಕೇವಲ ಎದುರಿಗೆ ಸಿಕ್ಕಾಗ ಅವರೊಂದಿಗೆ ಸ್ನೇಹ ಬೆಳೆಸಿಕೊಂಡು ನಂತರ ಮರೆತುಬಿಡುವುದು, ಅಥವಾ ಅವರ ಮನೆಯ ವಿಳಾಸ ಬರೆದುಕೊಳ್ಳುವ, ಅವರ ವಿಳಾಸದ ಕಾರ್ಡುಗಳನ್ನು ಪಡೆಯುವ ಪದ್ಧತಿಯಿತ್ತು.
ಹೀಗೇ ರೈಲು ಚಲಿಸುತ್ತಾ ಚಲಿಸುತ್ತಾ ಬಂದೇ ಬಿಟ್ಟಿತು ಮದುವೆಯ ದಿಬ್ಬಣದ ಜನರೆಲ್ಲಾ ಇಳಿದುಕೊಳ್ಳುವ ಹುಬ್ಬಳ್ಳಿ ರೈಲು ನಿಲ್ದಾಣ.
ಎಲ್ಲರೂ, ಒಂದು ಕಡೆ ಮದುವೆಯ ಸಂಭ್ರಮವಾದರೆ,
ಮತ್ತೊಂದೆಡೆ ಹುಬ್ಬಳ್ಳಿಗೆ ಪ್ರಪ್ರಥಮ ಬಾರಿಗೆ ಹುಬ್ಬಳ್ಳಿಗೆ ಬರುತ್ತಿರುವ ಖುಷಿ.
ಅಷ್ಟೂ ಜನರೆಲ್ಲಾ ಒಂದೆಡೆ ಸೇರುತ್ತಿರುವ ಸಂಭ್ರಮದಲ್ಲಿ ಎಲ್ಲರೂ ರೈಲು ನಿಂತೊಡನೆ ಆತುರಾತುರವಾಗಿ ತಂತಮ್ಮ ಬ್ಯಾಗುಗಳನ್ನು ತೆಗೆದುಕೊಳ್ಳುವುದು, ಇಳಿಯುವುದು. ಹಿರಿಯರ , ಮಕ್ಕಳ ಕೈ ಹಿಡಿದು ಇಳಿಸುವುದು , ಜಾಗ್ರತೆಯಿಂದ ತಾವುಗಳು ತಂದ ಬ್ಯಾಗುಗಳ ಮೇಲೆ ನಿಗಾ ಇಡುವುದು ಇವೆಲ್ಲವುಗಳನ್ನು ಕಾಪಾಡಿಕೊಂಡು ಗಡಿಬಿಡಿಯಿಂದ ಇಳಿಯುವಾಗ ಆ ನಾಲ್ಕುಜನರಿಗೆ ಹೇಳುವುದು ಮರೆತೇಬಿಟ್ಟರು ಎಲ್ಲರೂ , ಈ ಮೊದಲು ಮದುವೆಗೆ ಆಮಂತ್ರಣ ಕೇವಲ ಬಾಯಿ ಮಾತಿನಿಂದ ಹೇಳಿದ್ದರು, ಇಳಿಯುವಾಗ ಆಹ್ವಾನ ಪತ್ರಿಕೆ ಕೊಡುವುದಾಗಿಯೂ, ತಾವುಗಳು ಪ್ರವಾಸ ಎರಡುದಿನ ಮೊಟಕುಗೊಳಿಸಿ ಈ ನಮ್ಮ ಮದುವೆಗೆ ಬರಲೇ ಬೇಕೆಂದು ಮದುವೆ ವರನೇ ಖುದ್ದು ಹೇಳಿದ್ದು. ಆದರೆ ಗಡಿಬಿಡಿಯಿಂದ ಇಳಿಯುವಾಗ ಅವರಿಗೆ ಆಹ್ವಾನ ಪತ್ರಿಕೆ ಕೊಡುವುದಿರಲಿ ಅವರುಗಳ ವಿಳಾಸವನ್ನೂ ಬರೆದುಕೊಳ್ಳಲಿಲ್ಲ, ರೈಲೂ ಬೆಳಗಾವಿ ಕಡೆಗೆ ಹೊರಟೇ ಬಿಟ್ಟಿತು. ಇತ್ತ ಅವರನ್ನೆಲ್ಲಾ ಕೊಂಚ ಬೇಜಾರಿನಿಂದಲೇ ಬೀಳ್ಕೊಟ್ಟ ಆ ಯುವಕರುಗಳೂ ಅವರೊಡನೆ ಇಷ್ಟೊತ್ತು ಕಳೆದ ಒಂದೊಂದು ಕ್ಷಣವನ್ನೂ ಮೆಲುಕು ಹಾಕುತ್ತಾ ಪ್ರಯಾಣ ಮುಂದುವರೆಸಿತು.
ರಾತ್ರಿ ಒಂಬತ್ತು ಗಂಟೆಗೆ ಹುಬ್ಬಳ್ಳಿಯಲ್ಲಿ ಇಳಿದ ಮದುವೆ ದಿಬ್ಬಣ ಹುಬ್ಬಳ್ಳಿಯ ಒಂದು ಲಾಡ್ಜ್ ಗೆ ಹೋಗಿ ತಂಗಿತು .ರೈಲು ಪ್ರಯಾಣದಿಂದ ಆಯಾಸಗೊಂಡಿದ್ದ ಎಲ್ಲರೂ ತಿಂಡಿಯಾದ ನಂತರ ನಿದ್ರೆಗೆ ಜಾರಿದರು ಎಲ್ಲಾ ವಿಶ್ರಮಿಸಿಕೊಳ್ಳುವಾಗ ವರನ ತಾಯಿಗೆ ಬೆಳಗಿನಜಾವಕ್ಕೇ ಎಚ್ಚರವಾಯಿತು ಅವರಿಗೆ ಯಾವುದೋ ಒಂದು ಬ್ಯಾಗು ಕಾಣುತ್ತಿಲ್ಲ ಎಂಬುದು ಮನಸ್ಸಿಗೆ ಬಂದು ಥಟಂತ ಹೊಳೆಯಿತು. ಅವರು ಆ ಹೋಟೆಲಿಗೆ ಬಂದಾಗ ಎಲ್ಲಾ ಬ್ಯಾಗುಗಳನ್ನು ಆತುರಾತುರವಾಗಿ ಎಣಿಕೆ ಮಾಡಿಕೊಂಡಿದ್ದರು, ಆಗಿನಿಂದ ಅವರ ಮನದಲ್ಲಿ ಯಾವುದೋ ಒಂದು ಬ್ಯಾಗು ಕಾಣೆಯಾಗಿರುವುದು ಹೊಳೆಯಿತು. ಅದೂ ಪ್ರಮುಖ ವಸ್ತುಗಳಿದ್ದ ಬ್ಯಾಗು ಅದು. ಅದಿಲ್ಲದಿದ್ದರೆ ಮದುವೆಯೇ ನಡೆಯದು, ಅದರಲ್ಲೇ ವರನ, ವಧುವಿನ ಒಡವೆಗಳು, ತಾಳಿ, ಎಲ್ಲಾ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗು ಕಾಣೆಯಾಗಿದೆಯಲ್ಲಾ , ಅದನ್ನು ಯಾರಿಗೂ ಕೊಡದೆ ತನ್ನ ಹತ್ತಿರವೇ ಇಟ್ಟುಕೊಂಡಿದ್ದು , ಆದರೂ ಅದೇಗೆ
ಕಾಣೆಯಾಯಿತು ಎಂದು ಅದೇ ಗುಂಗಿನಲ್ಲಿ ಅವರು ಅದೇ ನಿದ್ರೆಯಿಂದ ಬೆಳಗಿನಜಾವಕ್ಕೇ ಎಚ್ಚರಗೊಂಡಿದ್ದರು. ಬೆಳಗಾಗುವುದರೊಳಗೆ ವಿಷಯ ಒಬ್ಬರಿಂದೊಬ್ಬರಿಗೆ ಹರಡಿ ಇಡೀ ಕುಟುಂಬದೊಳಗೆ ಗುಸುಗುಸು ಮಾತುಗಳು ಶುರುವಾಯಿತು .ನಾವ್ಯಾರೂ ಆ ಬ್ಯಾಗು ನೋಡೆಇಲ್ಲವೆಂದೂ ತಮಗೂ ಆ ಬ್ಯಾಗಿಗೂ ಸಂಬಂಧವೇ ಇಲ್ಲವೆಂದೂ ಹಲವರು ವಾದಿಸತೊಡಗಿದರೆ, ಮತ್ತೆ ಕೆಲವರು ತಮ್ಮ ಬಳಿ ಆ ಬ್ಯಾಗು ಇಲ್ಲವೆಂದೂ ತಮ್ಮ ಮೇಲೆ ಅಪವಾದ ಬರದ ರೀತಿಯಲ್ಲಿ ವರ್ತಿಸತೊಡಗಿದರು,
ವರನೂ ಅವನ ತಂದೆಯೂ , ವರನ ತಾಯಿಯನ್ನು ಜೋರಾಗಿ ಬೈಯತೊಡಗಿದರು. ಅವರ ಬೈಗುಳದಿಂದ ಆಕೆ ಕಣ್ಣಂಚಲಿ ನೀರು ಬಂತು. ಇಡೀ ವರನ ಕುಟುಂಬದಲ್ಲಿ ಒಬ್ಬರ ಮೇಲೊಬ್ಬರಿಗೆ ಅನುಮಾನವುಂಟಾಯಿತು. ಆಗ ವರನೇ ಹೇಳಿದ ಈಗ ರೈಲು ಎಲ್ಲಿ ಹೋಗಿ ತಲುಪಿರುತ್ತದೆ ಎಂದು, ಆಗ ಸಮಯ ನೋಡಿದರೆ ಬೆಳಿಗ್ಗೆ 7-00ಗಂಟೆ
ಆಗ ರೈಲು ಬೆಳಗಾವಿ ತಲುಪಿ ಸುಮಾರು ಒಂದು ಗಂಟೆಯಾಗಿತ್ತು. ಮತ್ತೂ ಗಾಬರಿಯಾಯಿತು ಎಲ್ಲರಿಗೂ ಅದೆಷ್ಟು ಜನ ರೈಲು ಇಳಿದರೋ ಅದೆಷ್ಟು ಮಂದಿ ಹತ್ತಿದರೋ ಆ ಬ್ಯಾಗು ಯಾರ ಕೈಗೆ ಸಿಕ್ಕಿತೋ , ಅದು ನೆನೆಸಿಕೊಂಡರೇ ಭಯವಾಯಿತು. ಅದೇ ರೈಲಿನಲ್ಲಿ ಇವರುಗಳ ಜೊತೆ ಪ್ರಯಾಣಮಾಡಿದ ಆ ನಾಲ್ವರು ಯುವಕರೂ ಜ್ಞಾಪಕಕ್ಕೆ ಬಂದರು, ಆದರೇನು ರೈಲು ಬೆಳಗಾವಿ ಬಿಟ್ಟು ಬಹುದೂರ ಹೋಗುತ್ತಿತ್ತು. ಅಲ್ಲದೆ ಅವರುಗಳ ಬಗ್ಗೆ ಯಾವುದೇ ಗುರುತುಗಳಾಗಲೀ ಆವರ ಪರಿಚಯಪತ್ರವಾಗಲೀ ಇರಲಿಲ್ಲ.
ವರನ ಕಡೆಯವರು ಈ ಮದುವೆಗೇ ಮುಂಚೆಯೇ ಈ
ಶುಭಕಾರ್ಯದಲ್ಲಿ ಅದೇನು ಅಪಶಕುನವಾಯಿತೆಂದು ಬೇಸರ ಪಟ್ಟುಕೊಂಡು ಈಗ ಇದ್ದಕ್ಕಿದ್ದಂತೆ ಅಷ್ಟೂ ಒಡವೆ , ಬಟ್ಟೆ ಬರೆ ಎಲ್ಲಾ ಹೇಗೆ ಮಾಡಿಸುವುದು ಲಕ್ಷಾಂತರ ರೂಪಾಯಿ ಮೌಲ್ಯದ ಬ್ಯಾಗು ಅದು ಎಂದು ಬೇಸರಪಟ್ಟುಕೊಂಡರು.
ಈ ವಿಷಯ ಹೆಣ್ಣಿನ ಕಡೆಯವರಿಗೆ ತಿಳಿದು ಅವರೂ ಹೋಟೆಲಿಗೆ ಬಂದರು ವಿಷಯ ತಿಳಿದು ತಮಗೆ ತಿಳಿದವರ ಮುಖಾಂತರ ಪೊಲೀಸರಿಗೆ ಕಂಪ್ಲೇಂಟ್ ಕೊಡಲು ತೀರ್ಮಾನಿಸಿದರು.
ಇತ್ತಕಡೆ ಬೆಳಗಾವಿ ತಲುಪಿದ ರೈಲಿನಲ್ಲಿದ್ದ ಆ ಯುವಕರು ತಂತಮ್ಮ ಬ್ಯಾಗುಗಳನ್ನು ತೆಗೆದುಕೊಂಡು ಹೊರಡಲು ಅನುವಾದರು, ಆಗ ಅವರ ಬ್ಯಾಗ್ ಕೆಳಗಡೆ ಮತ್ತೊಂದು ತೂಕದ ಬ್ಯಾಗು ಇರುವುದು ಅವರ ಅರಿವಿಗೆ
ಬಂತು, ಎಲ್ಲಾ ಪ್ರಯಾಣಿಕರು ಇಳಿದಮೇಲೆ ಇಡೀ ಆ ಡಬ್ಬಿಯಲ್ಲಿದ್ದದ್ದು ಇವರು ಮಾತ್ರ, ಮತ್ತೆ ಪ್ರಯಾಣಿಕರು ಈ ರೈಲಿಗೆ ಹತ್ತಲು ತುಂಬಾ ಸಮಯವಿದೆ, ಮತ್ತೆ ಮುಂದೆ ಈ ರೈಲು ಹೋಗುತ್ತದೆ.ಆದ್ದರಿಂದ ಈ ಬ್ಯಾಗು ಇನ್ನು ಇಲ್ಲೇ ಬಿಟ್ಟರೆ ಅದು ಸಂಬಂಧಪಟ್ಟವರಿಗೆ ಸಿಗದಿದ್ದರೆ ಹೇಗೆ ಎಂದು ಯೋಚಿಸಿ ಆ ಬ್ಯಾಗ್ ಕೈಯಲ್ಲಿಡಿದು ರೈಲಿಳಿದು ಮೊದಲು ತಾವು ಬುಕ್ ಮಾಡಿದ ಹೋಟೆಲಿನ ರೂಂಗೆ ಹೋಗಿ ನಂತರ ಪರಿಶೀಲಿಸಿ ಅದರ ಸಂಬಂಧಪಟ್ಟವರಿಗೆ ತಲುಪಿಸುವ ಅಂದುಕೊಂಡು ಹೊರಟರು.
ಹುಬ್ಬಳ್ಳಿ ಯಲ್ಲಿ ಮದುವೆ ಮನೆಯವರು ತ್ವರಿತವಾಗಿ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟು ರೈಲಿನಲ್ಲಿ ಪರೀಕ್ಷಿಸಲು ಮನವಿ ಮಾಡಿಕೊಂಡಿದ್ದರಿಂದ ಆ ಸಮಯದಲ್ಲಿ ರೈಲು ಯಾವ ನಿಲ್ದಾಣದಲ್ಲಿದೆಯೆಂದು ತಿಳಿದು ಪೊಲೀಸರು ಕ್ರಮ ಕೈಗೊಂಡರು.
ಆ ಯುವಕರು ತಾವು ರೂಂ ಮಾಡಿದ ಹೋಟೆಲ್ ಗೆ ಹೋಗಿ ಸ್ವಲ್ಪ ವಿಶ್ರಮಿಸಿ ಸಾವಧಾನದಿಂದ ಈ ತೂಕದ ಬ್ಯಾಗು ತೆರೆದು ನೋಡಿದಾಗ ಆಶ್ಚರ್ಯ ಕಾದಿತ್ತು, ಕಾರಣ ಅದರಲ್ಲಿ
ಬೆಲೆಬಾಳುವ ಒಡವೆಗಳ ಚಿಕ್ಕ ಚಿಕ್ಕ ಪೆಟ್ಟಿಗೆಗಳು ಮತ್ತೂ ಮದುವೆಗೆ ಬೇಕಾದ ಅತ್ಯುಪಯುಕ್ತ ಬೆಲೆಬಾಳುವ ವಸ್ತುಗಳು ಇದ್ದವು ಜೊತೆಗೆ ಕೆಲವು ಲಗ್ನಪತ್ರಿಕೆಗಳಿದ್ದವು. ಅದನ್ನು ನೋಡಿದ ಯುವಕರು ಇದು ನಾವು ರೈಲಿನಲ್ಲಿ ಭೇಟಿಯಾದ ಆ ಮದುವೆಯ ಕುಟುಂಬದವರದೇ ಎಂದೂ, ಮದುವೆ ಮನೆಯ ವಿಳಾಸಕೂಡ ಅದರಲ್ಲಿದ್ದಿದ್ದರಿಂದ ಆ ಬ್ಯಾಗನ್ನು ಅವರಿಗೆ ತಲುಪಿಸುವ ಯೋಚನೆ ಮಾಡಿದರು, ಆದರೆ ಇವರು ಬಂದಿರುವುದು ರಜಾದಿನಗಳನ್ನು ಮಜಾ ಮಾಡಲು, ಈಗ ಹುಬ್ಬಳ್ಳಿಗೆ ಹೋದರೆ ಅಲ್ಲಿಗೆ ಈ ಪ್ರವಾಸ ಅಷ್ಟೇ , ಏನೊಂದೂ ತಿಳಿಯದೆ ಒಂದು ನಿರ್ಧಾರಕ್ಕೆ ಬಂದ ಆ ಯುವಕರು ಪ್ರವಾಸ ಮೊಟಕುಗೊಳಿಸಿ, ಮೊದಲು ಹುಬ್ಬಳ್ಳಿಯ ಮದುವೆ ಮನೆಗೆ ಈ ಬ್ಯಾಗಿನ ಸಮೇತ ಹೋಗಿ ಇದನ್ನು ಅವರ ಕೈಗಿಟ್ಟು ನಾವುಗಳೂ ಆ ಮದುವೆಯಲ್ಲಿ ಪಾಲ್ಗೊಂಡು ನಂತರ ಬೆಂಗಳೂರು ಕಡೆಗೆ ಹೊರಡುವುದೆಂದು ತೀರ್ಮಾನಕ್ಕೆ ಬಂದರು, ಅಲ್ಲದೇ ಈ ಬ್ಯಾಗಿನ ಬಗ್ಗೆ ಅದೆಷ್ಟು ಚಿಂತಾಕ್ರಾಂತರಾಗಿದ್ದಾರೋ ಮದುವೆ ಮನೆಯವರು ನೆನೆದರೆ ಭಯವಾಗುತ್ತದೆ , ಇನ್ನು ತಡಮಾಡಬಾರದು ಅಂದುಕೊಂಡು ಕೂಡಲೇ ಆ ಹೋಟೆಲಿನವರಿಗೆ ಈ ಪರಿಸ್ಥಿತಿ ವಿವರಿಸಿ ರೂಂ ಖಾಲಿ ಮಾಡಿ ಹುಬ್ಬಳ್ಳಿಯ ಮದುವೆ ಮನೆ ವಿಳಾಸ ಹಿಡಿದು ಹೊರಟು ಸಂಜೆ ವೇಳೆಗೆ ಹುಬ್ಬಳ್ಳಿಯ ಅವರ
ಮನೆ ತಲುಪಿದರು . ಇವರು ತಲುಪುವಷ್ಟರಲ್ಲಿ ಆ ಮನೆಯಲ್ಲಿ ಮದುವೆಯ ಸಂಭ್ರಮವೇ ಇಲ್ಲ ಎಲ್ಲರೂ ಆ ಬ್ಯಾಗಿನ ವಿಚಾರವಾಗಿ ಚಿಂತಿತರಾಗಿದ್ದಾರೆ. ಇವರನ್ನು ಮೊದಲು ಆ ವರನ ತಂದೆಯೇ, ಅವರು ಆ ಯುವಕರ ಕೈಲಿದ್ದ ಬ್ಯಾಗನ್ನು ನೋಡಿದ ಕ್ಷಣ ಜೋರಾಗಿ ಖುಷಿಯಾಗಿ ಕೂಗಿಬಿಟ್ಟರು. ಇವರ ಕೂಗಿಗೆ ಮನೆಯೊಳಗಿದ್ದವರೆಲ್ಲರೂ ಹೊರಗೆ ಓಡಿಬಂದರು ಎಲ್ಲರೂ ಆ ಬ್ಯಾಗು, ಯುವಕರನ್ನು ನೋಡಿ ನಿಟ್ಟುಸಿರು ಬಿಟ್ಟರು ಒಬ್ಬೊಬ್ಬರು ಒಂದೊಂದು ಪ್ರಶ್ನೆ ಗಳ ಸುರಿಮಳೆ ಸುರಿಸುತ್ತಿದ್ದಾರೆ, ಆಗ ವರ ಮತ್ತು ಅವನ ತಂದೆ ತಾಯಿ ಆ ಯುವಕರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಆ ಬ್ಯಾಗಿನ ಬಗ್ಗೆ ವಿಚಾರಿಸತೊಡಗಿದರು. ಯುವಕರು ಬ್ಯಾಗನ್ನು ವರನ ತಾಯಿಯ ಕೈಗಿತ್ತು ನಡೆದ ವಿಷಯವನ್ನೆಲ್ಲಾ ಹೇಳಿದರು .
ವರನ ಕಡೆಯವರಂತೂ ಈ ಯುವಕರ ಕಾರ್ಯಕ್ಕೆ ಅವರನ್ನು ಬಹಳವಾಗಿ ಕೊಂಡಾಡಿಬಿಟ್ಟರು, ಈ ವಿಷಯ ತಿಳಿದ ಹೆಣ್ಣಿನ ಕಡೆಯವರೂ ಆ ಯುವಕರನ್ನು ಬಹಳ ಪ್ರಶಂಸೆ ಮಾಡಿ, ಧನ್ಯವಾದ ತಿಳಿಸಿ, ನಂತರ ಅವರಿಗೆ ತಿನ್ನಲು ತಿಂಡಿ ಕೊಟ್ಟು ಕೆಲಕಾಲ ವಿಶ್ರಾಂತಿ ಪಡೆಯಲು ಒಂದು ರೂಂ ಬಿಟ್ಟುಕೊಟ್ಟರು.
ಈಗ ಎಲ್ಲಾ ಗೊಂದಲಗಳು ಕಳೆದು ಮದುವೆಯ ಸಮಯ ಬಂದೇಬಿಟ್ಟಿತು ಸಾಂಗವಾಗಿ ಮದುವೆ ನಡೆದು ಆ ಮದುವೆಗೆ ಈ ಯುವಕರೇ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಮದುವೆಯ ನಂತರ ಮನೆಯವರು ಆ ಯುವಕರಿಗೂ ಚೆಂದದ ಬಟ್ಟೆಗಳನ್ನು , ಉಡುಗೊರೆಯಾಗಿ ಕೊಟ್ಟು ಸನ್ಮಾನಿಸಿ ಆದರದಿಂದ ಬೀಳ್ಕೊಟ್ಟರು.
ಯುವಕರ ಬಗ್ಗೆ ವಿಷಯ ತಿಳಿದ ಪೊಲೀಸರೂ ಸಹ ಈ ಯುವಕರ ಪ್ರಾಮಾಣಿಕತೆಗೆ ಮೆಚ್ಚಿ ಸನ್ಮಾನಿಸಿ, ಪತ್ರಿಕೆಗಳಲ್ಲಿ ಪ್ರಕಟಿಸಿದರು,
ಯುವಕರ ರಜಾದಿನಗಳು ಈರೀತಿ ಶುಭಕಾರ್ಯಕ್ಕೆ ವಿನಿಯೋಗವಾಗಿದ್ದು ಅವರಲ್ಲೂ ಆತ್ಮ ವಿಶ್ವಾಸ ಹೆಚ್ಚಿ ಮುಂದೆ ಸತ್ಪ್ರಜೆಗಳಾಗಿ ಬಾಳಿದರು.
]]>
ಅಲ್ಯೂಮಿಜಾರಿ ನದಿಯ ಪಕ್ಕದ ಕಾಡು ಕೊರಕಲು ಜಾಗದಲ್ಲಿದ್ದ ರಾಸಾಯನಿಕ ನಿರ್ಮಿಸುವ ಕಾರ್ಖಾನೆಯಿಂದ,ಕೆಲಸ ಮುಗಿದ ಕಡುಗತ್ತಲಲ್ಲೂ ಚಿಮಣಿ ಪ್ರಕೃತಿಯನ್ನು ಗುಂಡಿನಿಂದ ಸುಟ್ಟ ಬಂದೂಕು ನಳಿಕೆಯಂತೆ ಸಣ್ಣ ಹೊಗೆಯನ್ನು ಸೂಸುತ್ತಲಿತ್ತು. ಫ್ಯಾಕ್ಟರಿಯ ಪಹರೆ ಕಾಯುವ ಅಂಥೋಣಿ ಚಳಿಯ ತೀವ್ರತೆಗೆ ಒಳಗೊಳಗೆ ಕುಕ್ಕುತ್ತಿದ್ದ ಒಡಲೊಳಗಿನ ಜಲವನ್ನು ಹೊರಹಾಕಲು ನದಿತಟದ ಪೊದೆಗೆ ಸರಿದ. ಅಲ್ಯೂಮಿಜಾರಿಯ ಸೇತುವೆಯ ಇನ್ನೊಂದು ಬದಿಯ ಬೀದಿದೀಪದ ಬುರುಡೆ ಗೋಚರವಾಗುತ್ತಿತ್ತು. ಕತ್ತಲೆಗೆ ಹೊಂದಿಕೊಂಡಿದ್ದ ಅವನ ಕಣ್ಣುಗಳಿಗೆ ದೂರದ ಚಿಕ್ಕ ಬೆಳಕೂ ಅಸಹನೀಯವಾಗಿ, ಮತ್ತೆ ಖಾಲಿ ಕತ್ತಲೆಯ ಲೋಕಕ್ಕೆ ಬಂದ
ಅರ್ಧ ಬತ್ತಿದ ನದಿಯ ಮರಳು ತೆಗೆಯಲು ಲಾರಿಯೊಂದಿಗೆ ಬಂದ ಇಬ್ಬರು ಅಪರಿಚಿತರು. ಗಾಡಿಯ ದೀಪ ಆರಿಸಿದರು.ಮೇಲಿರುವ ಕಾಲುವೆಗೆ ತಾಕಿ, ಉಳಿದ ಬೆಳಕು ಕೆಳಗೆ ಹರಿಯುತ್ತಿದ್ದ ಜಾಗವದು . ಮರಳು ತೆಗೆಯಲು ಸುಲಭ, ತೆಗೆದದ್ದು ತಿಳಿಯುವುದಿಲ್ಲ ನದಿಯಲ್ಲಿನ್ನೂ ಅರ್ಧ ನೀರಿದೆ.ಆ ಮಂದ ಬೆಳಕು ಕತ್ತಲಿನ ಕಣ್ಣಿಗೆ ಸಾಕು, ಕಿಡಿ ಹುಡುಕುವ ಕಂಗಳಿಗೆ ಏನೂ ಕಾಣದು. ಸಣ್ಣಗೆ ಹರಿಯುವ ನದಿ ಕರಾಳ ಮೌನದಲ್ಲಿ ಭೋರ್ಗರೆದು ಹರಿವ ಸದ್ದು.ಹಸಿ ಮರಳಿನ ಭಾರವನ್ನು ಲೆಕ್ಕಿಸದೆ ತುಂಬಿಸುತ್ತಿದ್ದವು ಆ ಆಕೃತಿಗಳು.
ಸೈಕಲಿನ ಪೆಡಲುಗಳ ತುಳಿ ತುಳಿದು ಬರುತ್ತಿದ್ದ ವೃದ್ಧ ಅಲ್ಯೂಮಿಜಾರಿಯ ಸೇತುವೆಯ ಮೇಲೆ ಹೋಗುತ್ತಿದ್ದ,ಡೈನಮೋದ ಬೆಳಕನ್ನು ಮೀರಿಸುವ ಬೀದಿದೀಪದ ಬೆಳಕು ದಾರಿಯನ್ನು ದೃಗ್ಗೋಚರ ಗೊಳಿಸಿತ್ತು. ಸೈಕಲ್ಲಿನ ಸೀಟು ಹತ್ತಿ ಹೊತ್ತು ಸುಮಾರು ಕಳೆದಿತ್ತು ಆದರೆ ಅಲ್ಯೂಮಿಜಾರಿಯ ಅತ್ತ ಕಡೆ ತಲುಪಬೇಕಿತ್ತು, ಆದಷ್ಟು ಬೇಗ ಮುಟ್ಟಬೇಕಿತ್ತು ಆ ಕಾರ್ಗತ್ತಲನ್ನು.
ಸಂತ ಜೋಸೆಫ್ ಆಸ್ಪತ್ರೆಯ ಹಸಿರು ಹಾಸಿಗೆಯ ಮೇಲೆ ಗರ್ಭವತಿ ಟೆಸ್ಸಾಳ ಆರ್ತನಾದ ಮುಗಿಲು ಮುಟ್ಟಿತ್ತು. ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಹೆರಿಗೆ ನೋವು ಅವಳ ದೇಹದ ಇಂಚಿಂಚಿನ ಪ್ರಾಣವನ್ನೂ ಹಿಂಡುತ್ತಿತ್ತು. ಆ ನಡು ರಾತ್ರಿಯಲ್ಲಿ ತನ್ನ ಗಂಡನಿಲ್ಲದೆ ಒಬ್ಬಂಟಿ ಹೆಂಗಸು ಜಗದ ನೋವನ್ನೆಲ್ಲ ಹೇಗೆ ಸಹಿಸಿಯಾಳು?. ಪರೀಕ್ಷಿಸಿದ ಡಾಕ್ಟರ್ ಕೂಡ ಶಸ್ತ್ರಚಿಕಿತ್ಸೆ ಮಾಡಲೇಬೇಕು, ಸಹಜ ಪ್ರಸೂತಿ ಅಸಾಧ್ಯ ಎಂಬ ನಿರ್ಧಾರಕ್ಕೆ ಬಂದಿದ್ದರು.
ಅಲ್ಯೂಮಿಜಾರಿಯ ಮರಳ ಕಣಿವೆಯಿಂದ ಒಂದೇ ಸಮನೆ ಮೇಲೆ ಹತ್ತಿದ ಮರಳ ಲಾರಿ ಇಬ್ಬರು ಹತ್ತಿದ್ದ ಸೈಕಲ್ಲಿನ ಮೇಲೆ ನುಗ್ಗಿತು ಅದೃಷ್ಟವಶಾತ್ ಜೀವಾಪಾಯ ಇರಲಿಲ್ಲ, ಆದರೂ ಚಿಕ್ಕ ಪುಟ್ಟ ಗಾಯಗಳಾಗಿದ್ದವು. ತಮ್ಮ ಮರಳ ದಂಧೆಯ ಮೇಲೆ ಕೆಟ್ಟಗಣ್ಣು ಬೀಳದಿರಲಿ ಎಂದು ಅವರೇ ಊರಿನ ಒಂಟಿ ಹಾಸ್ಪಿಟಲಿಗೆ ಸೇರಿಸಿ ಬಂದರು
ವೃದ್ಧ ಆ ಸೇತುವೆಯನ್ನು ದಾಟಿ ಸೀದಾ ಫ್ಯಾಕ್ಟರಿಯ ಮುಂದೆ ನಿಂತಿದ್ದ ಅಂಥೋಣಿಯ ಕಾಲಿಗೆ ತಾಕಿಸಿದ. ಸೈಕಲ್ಲಿನ ಬ್ರೇಕು ವೃದ್ಧ ಯೋಜಿಸಿದ ಪರಿಣಾಮ ಬೀರಲಿಲ್ಲ. ಆದರೆ ಗಕ್ಕನೆ ನಿಂತುಬಿಟ್ಟಿತ್ತು.
"ಏಯ್ ಮುದುಕ ಈಗ ಹೊತ್ತಲ್ಲಿ, ಇಲ್ಲಿಗ್ಯಾಕೋ ಬಂದೆ "
"ನಿನ್ನ ಮಗು… "
"............................"ಗೇಟಿನ ಬೀಗ ಭದ್ರಪಡಿಸಿ ಅಂಥೋಣಿ ತಾನೆ ಸೈಕಲ್ಲು ತುಳಿಯಲು ಅಣಿಯಾದ ವೃದ್ಧ ಹಿಂದಿನ ಕಬ್ಬಿಣದ ಅಡ್ಡೆಯ ಮೇಲೆ ಕುಳಿತ.
ಸೈಕಲ್ಲು ಅಲ್ಯೂಮಿಜಾರಿಯ ಇನ್ನೊಂದು ತುದಿ ತಲುಪಲಿತ್ತು.
ಇತ್ತ ಟೆಸ್ಸಾಳ ಕಂದನ ಮೊದಲ ಉಸಿರು ಅಳುವಿನ ಮೂಲಕ ಹೊರಳುತ್ತಿರುವಾಗಲೇ, ಕೈಗಾದ ಗಾಯದ ಇರುವು ಮರೆತು ಅಂಥೋಣಿ ಸಂತಸಗೊಂಡಿದ್ದ.ಹೆಣ್ಣು ಹೆತ್ತ ಸಂಭ್ರಮ ಟೆಸ್ಸಾಳ ಮೂರ್ಛೆಯ ಮನದಲ್ಲೂ ಕುಣಿದಾಡುತ್ತಿತ್ತು.
ಅತ್ತ ಕಡೆಯುಸಿರೆಳೆದು ಕೊನೆಯ ಕಿರುನಗುವನ್ನು ಬೀರದೆ ಪರಲೋಕಕ್ಕೆ ಹೊರಟ ಪತ್ನಿಯನ್ನು ಕಂಡು ವೃದ್ಧ ಬಿಕ್ಕಿ ಬಿಕ್ಕಿ ಅಳುತ್ತಿದ್ದ.
ಅಂಥೋಣಿ ತನ್ನ ಮಗುವಿನ ಹುಟ್ಟನ್ನು ಸಂಭ್ರಮಿಸಬೇಕೋ, ಅಥವಾ ವೃದ್ಧನು ತನ್ನ ಪತ್ನಿಯ ಸಾವನ್ನೂ ಬದಿಗಿಟ್ಟು ನನ್ನನ್ನು ಕರೆತಂದ ವೃದ್ಧನ ಕಂಬನಿಗೆ ಮರುಗಬೇಕೋ ತಿಳಿಯಲಿಲ್ಲ.
ಬೆಳಕು ಹರಿದ ಮೇಲೆ ಖುಷಿ ದುಃಖಗಳ ಟೆಲಿಗ್ರಾಮು ಕಳಿಸುವ ದ್ವಂದ್ವ ಸಂಕಷ್ಟ ಅಂಥೋಣಿಯದು. ವಿಳಾಸ ಅದಲು ಬದಲಾಗದಂತೆ ಎಚ್ಚರ ವಹಿಸಿದ್ದ.
******
ವೃದ್ಧ ಯಾರೋ, ಅವನ ಪತ್ನಿ ಯಾರೋ ಅಂಥೋಣಿಗೆ ತಿಳಿದಿಲ್ಲ, ಆದರೆ ಒಂದು ಹೆಣ ಹೊರಲೂ ಕೂಡ ಅವರ ಕಡೆಯವರು ಯಾರೂ ಇಲ್ಲ ಎಂಬುದು ತಿಳಿದಿತ್ತು. ತನ್ನ ಧಣಿಗಳ ಮನೆಗೆ ತೆರಳಿ ಫ್ಯಾಕ್ಟರಿಯ ಬೀಗ ಕೊಟ್ಟು ವಿಷಯವನ್ನು ಅರುಹಿದ. ಧಣಿಗಳು ಗಾಡಿಯ ವ್ಯವಸ್ಥೆ ಮಾಡುವುದಾಗಿ ಹೇಳಿದರು
ವೃದ್ಧನ ಪತ್ನಿಯ ಶವ ಅಲ್ಯೂಮಿಜಾರಿಯ ಸೇತುವೆ ಮೇಲೆ ಶಾಂತವಾಗಿ ಸಾಗುತ್ತಿತ್ತು. ಕುದುರೆಯ ಸಾರೋಟು ಓಡಿಸುತ್ತಿದ್ದವನನ್ನು ಕೇಳಿದ ಅಂಥೋಣಿ
"ನೆನ್ನೆ ರಾತ್ರಿ ಲಾರಿಯಲ್ಲಿ ಗುದ್ದಿದ್ದು ನಿಮ್ಮ ತಪ್ಪಲ್ಲ, ನಮ್ಮದೇ ಸೈಕಲ್ ಬೇಕೆಂದಾಗ ನಿಲ್ಲಲಿಲ್ಲ. ನೀವು ಆಸ್ಪತ್ರೆಗೆ ಕರೆದೊಯ್ದದ್ದು ಒಳ್ಳೆಯದಾಯಿತು. ಧನ್ಯವಾದಗಳು.
ಅದು ಸರಿ, ಆ ರಾತ್ರಿ ಏನೂ ಕೆಲಸ "
" ಆ… ಅದು ಬಾಡಿಗೆಗೆ " ತಡವರಿಸುತ್ತ.
"............." ಅಂಥೋಣಿಗೆ ಅಂದಾಜು ಸಿಕ್ಕಿತ್ತು
"ಮರಳಿಗೆ ಒಳ್ಳೆಯ ಬೆಲೆಯೇನೋ? " ಕೇಳಿದ.
"ಮರಳಿಗೆ ಬೆಲೆ ಯಾಕೆ ಅದು ಶಹರಗಳಿಗೆ ಮಾತ್ರ, ಹಳ್ಳಿಗಳಲ್ಲಿ ಮಣ್ಣ ಮನೆ ಮಾಡುತ್ತಾರೆ,ನಮಗೆ ಅಲ್ಯೂಮಿಜಾರಿಯ ಮರಳು ಅಷ್ಟೇ ಬೇಕಾದದ್ದು"
ಸ್ಮಶಾನದ ಪಕ್ಕ ಕಟ್ಟಿದ ಕಾರ್ಖಾನೆ, ಊರಲಿಲ್ಲದ ಒಂಟಿ ದೀಪದ ವ್ಯವಸ್ಥೆ, ಲಟಾರಿ ಮಶೀನುಗಳಿಗೆ ತನ್ನ ರೂಪದಲ್ಲಿ ಒಬ್ಬ ಕಾವಾಲುಗಾರ, ಅಲ್ಯೂಮಿಜಾರಿ ಪಕ್ಕದಲ್ಲೇ ಕಾರ್ಖಾನೆ,ಧಣಿಗಳ ಲಾರಿ, ಚಾಲಕ ಮತ್ತು ಅವರ ಅಗಣಿತ ಸಂಪತ್ತು. ವಿಷಯ ಬಹಳ ದೊಡ್ಡದಿತ್ತು ಎಂಬುದು ಅಂಥೋಣಿಗೂ ತಿಳಿದಿತ್ತು. ವೃದ್ಧನ ಕಣ್ಣೀರು, ಟೆಸ್ಸಾಳ ಸಂತೃಪ್ತ ಮುಖಗಳೆರಡು ಒಟ್ಟೊಟ್ಟಿಗೆ ಮೂಡಿ. ತನ್ನಂತಹ ಸಾಮಾನ್ಯ ಮನುಷ್ಯ ತನ್ನ ಸಾಮಾನ್ಯ ಜೀವನವನ್ನು ಬಿಟ್ಟು ಹೊರಬರಲಾರ ಎಂಬುದನ್ನು ಅರಿತು ಸುಮ್ಮನಾದ.
ದೂರದ ಬೀದಿದೀಪ ಹಗಲಾದರೂ ಇನ್ನೂ ಬೆಳಗುತ್ತಿತ್ತು.
]]>
ಅಮ್ಮಾ..........ಅಮ್ಮಾ.........ನಿನಗಾಗಿ ನಾವು
ಅತ್ತೆ ನಾಳೆ ಶನಿವಾರ ಅಲ್ವಾ ಅತ್ತೇ........ಎಂದು ಹಿರಿಯ ಸೊಸೆ ಸೋನಿಯಾ ತನ್ನ ಐಶ್ವರ್ಯ ರೈ ಥರದ ಸೊಂಟ ಬಳುಕಿಸುತ್ತಾ.......ರಾಗವಾಡಿದಳು, ಹೌದಮ್ಮಾ.....ಏನಿವಾಗ.........ಏಕೆ........ಶನಿವಾರ ಏನಾದರೂ.........ಬದಲಾಗುತ್ತದೆಯಾ.....ಅಥವಾ ನನಗೇನಾದರೂ ನೆನಪಿನ ಶಕ್ತಿ ಕುಂದಿದೆ ಎಂದು ಪರೀಕ್ಷೆ ಮಾಡ್ತಾ ಇದ್ದೀಯಾ.......ಎಂದು ಸ್ವಲ್ಪ ಖಾರವಾಗಿಯೇ ಠಕ್ಕರ್ ಕೊಟ್ಟು, ಏಕೆ.....ಎಲ್ಲರೂ..... ಎಲ್ಲಾದ್ರೂ.........ಹೊರಗೆ........ಎಂದು ಅತ್ತೆ ಜಾನಕಮ್ಮನವರೂ ಸಹ ಕೊಂಕಿನಿಂದಲೇ ಪ್ರತಿ ರಾಗವಾಡಿದರು.
ಅಷ್ಟರಲ್ಲಿ ಅಲ್ಲಿಗೆ ಬಂದ ಕಿರಿಯ ಸೊಸೆ ಸೌಂದರ್ಯ. ಅವಳೂ ತನ್ನ ಶಿಲ್ಪಾ ಶೆಟ್ಟಿಯ ಥರದ ಸೊಂಟ ಮತ್ತಷ್ಟು ಬಳ್ಳಿಯಂತೆ ಬಳುಕಿಸುತ್ತಾ ಹೌದಕ್ಕಾ......ನಾಳೆ ಶನಿವಾರವೇ....... ಎಂದು ಹಿರಿಯ
ಸೊಸೆಯ ಧ್ವನಿಗೆ ಧ್ವನಿ ಸೇರಿಸಿದಳು.
ಓಹೋ......ನನಗೆ ನೆನಪಿಲ್ಲ......ಪಾಪ.....ನೀನೂ ಜ್ಞಾಪಿಸುತ್ತಿರುವೆ.....ಹೌದಲ್ವಾ.....ನಾಳೆ ಶನಿವಾರವೇ....ಎಂದು ಕಿರಿಯ ಸೊಸೆ ಸೌಂದರ್ಯಳಿಗೂ ಬ್ಯಾಡಗಿ ಮೆಣಸಿನಕಾಯಿಂತೆ ಖಾರವಾಗಿಯೇ ಹೇಳಿ ತಮ್ಮ ಅಡುಗೆ ಕೆಲಸದಲ್ಲಿ ತೊಡಗಿಕೊಂಡರು.
ಮತ್ತೆ ಸೌಂದರ್ಯಳೇ ಮಾತು ಮುಂದುವರೆಸಿದಳು.
ಅತ್ತೇ.......ತುಂಬಾ ದಿನಗಳಾಯಿತು ಹೊರಗೆ ಎಲ್ಲರೂ ಹೋಗಿ ಬರೋಣ್ವಾ........ಅಂತ, ಇನ್ನು ನೀವಂತೂ ಈ ಅಡುಗೆ ಮನೆ ಬಿಟ್ಟು ಹೊರಗೆ ಎಲ್ಲೂ ಬರೋಲ್ಲ...... ಬೇಕಿದ್ರೆ ನೀವೇ ಹೋಗಿ ಬನ್ನಿ......ಅಂತ ಹೇಳ್ತೀರಾ...... ಅದಕ್ಕೇ......ಅದಕ್ಕೇ......ಎಂದು ಇವಳು ರಾಗವಾಡುತ್ತಾ ಮೈಯನ್ನು ಮತ್ತಷ್ಟು ಬಳುಕಿಸುತ್ತಾ ತನ್ನ ಅತ್ತೆಯವರನ್ನು ರೇಗಿಸುತ್ತಿದ್ದಾಗ.......
ಮತ್ತೆ ಈ ಸಂಭಾಷಣೆ ಕೇಳಿಸಿಕೊಂಡ ಜಾನಕಮ್ಮನವರ ದೊಡ್ಡ ಮಗ ಜಾನಿ @ ಜನಾರ್ಧನ,
ಏನ್ರಮ್ಮಾ.....ಅದು ಏನಾದ್ರೂ ಎರಡು ದಿನ ಹೊರಗಡೆ ಹೋಗುವ ಪ್ಲಾನ್ ಏನಾದ್ರೂ ಇದೆಯಾ..... ಎನ್ನುವಷ್ಟರಲ್ಲಿ , ಜಾನಕಮ್ಮನವರು , ಹೌದಪ್ಪಾ, ಎಲ್ಲಾ ಈ ಮೊದಲೇ ಪ್ಲಾನ್ ಮಾಡಿಬಿಟ್ಟು ಇಲ್ಲಿ ಈಗ ಕೀ
ಕೊಟ್ಟ ಗೊಂಬೆಯಂತೆ ಬಂದಿರುವೆ........ನೀವೆಲ್ಲಾ...... ಹೋಗಿ ಎರಡು ದಿನವೇಕೆ.......ಇಡೀ ವಾರವೇ ಹೋಗಿ ಎಲ್ಲರೂ.....ನಾನೊಬ್ಬಳು ಇದ್ದೀನಲ್ವಾ......ಕತ್ತೆ ಥರಾ ದುಡಿಯಲು, ಎಂದಾದರೂ, ಎಲ್ಲಿಗಾದರೂ ಬರ್ತೀಯಾ....ಅಮ್ಮಾ...ಎಂದು ಒಬ್ಬರಾದರೂ ಕರೀತೀರಾ......ವಾರದ ಐದು ದಿನ ನಿಮ್ಮ ಗಳ ತಿಂಡಿ, ಊಟ, ನೋಡ್ಕೊಳ್ತೀನಿ, ವಾರದ ಕೊನೆಗೆ ಎರಡು ದಿನಗಳು ನನಗೂ ಹೇಳದೇ ಎಲ್ಲರೂ ಮೆಲ್ಲಗೆ ಆ ಊರು, ಈ ಊರು ಸುತ್ತೋದಕ್ಕೆ ಹೋಗ್ಬಿಡ್ತೀರಿ, ಇನ್ನು ಅವರಿದ್ದಾರೋ........ಆ ನಿಮ್ಮ ಅಪ್ಪ......ವಾರದ ಆರೂ ದಿನ ಹೊರಗೆ ದುಡಿದು ಬಂದು ಭಾನುವಾರವೂ ಮನೆಯಲ್ಲಿ ಯಾರಾದರೊಬ್ಬ ಗೆಳೆಯ , ತಮ್ಮ, ಅಣ್ಣ, ಚಿಕ್ಕಪ್ಪ, ತಾತ......ಅವರು ಬರ್ತಾರೆ, ಇವರು ಬರ್ತಾರೆ.....ಅದು ಮಾಡು, ಇದು ಮಾಡು ಅಂತ ಹೆಚ್ಚು ಹೆಚ್ಚು ಅಡುಗೆ ಮನೆ ಕೆಲಸಗಳನ್ನು ನನಗೇ ಕೊಡ್ತಾರೆ, ನನ್ನನ್ನೇನು........
ಅಂದುಕೊಂಡಿದ್ದೀರಾ...... ನೀವೆಲ್ಲಾ........ಎಂದು ಕಣ್ಣಂಚಿನವರೆಗೂ ಬಂದ ಕಣ್ಣೀರಿನ ಹನಿಗಳಿಗೆ ಅಲ್ಲೇ ತಡೆದು ನಿಲ್ಲಿಸಿ, ಯಥಾಪ್ರಕಾರ ಈರುಳ್ಳಿ ತರಲು ಉಗ್ರಾಣದಂತಿದ್ದ ಪಕ್ಕದ ಕೋಣೆಗೆ ಹೋದರು, ಅಷ್ಟರಲ್ಲಿ ಇದೆಲ್ಲವನ್ನೂ ಕೇಳಿಸಿಕೊಂಡ ಜಾನಕಮ್ಮನವರ ಕಿರಿಯ ಮಗ ಲೋಕಿ @ ಲೋಕೇಶ ಮತ್ತಷ್ಟು ಚೇಡಿಸಲೆಂಬಂತೆ ಹೌದಮ್ಮಾ......ನಾಳೆ,
ನಾಡಿದ್ದು ನಾವು ನಾಲ್ಕೂ ಜನ....... ಎರಡೂ ಮಕ್ಕಳು ಜೊತೆಗೆ ಅಪ್ಪನೂ ಸೇರಿ ಅಜ್ಜೀ ಊರಿನ ತೋಟದ ಮನೆಗೆ ಕಾರಿನಲ್ಲಿ ಹೋಗ್ತಿದ್ದೀವಿ, ನಿನಗಂತೂ ಆ ಅಜ್ಜಿ ಮನೆ ಎಂದರೆ ಅಲರ್ಜಿ, ಅದಕ್ಕೇ ನೀನು ಇಲ್ಲೇ ಇರು, ಆದರೆ ನಮಗೆಲ್ಲಾ ಒಂದಿಷ್ಟು........ಕರಿದ........ತಿಂಡಿ........ ಏನಾದ್ರೂ........ಮಾಡಿಕೊಡ್ತೀಯ ತಾನೇ......ಎಂದು ಕೇಳಿದ, ಇದುವರೆಗೂ ತಮ್ಮ ಕೋಣೆಯಲ್ಲಿ ಕಾಫಿ ಹೀರುತ್ತಾ ದಿನಪತ್ರಿಕೆ ಕೈಲಿಡಿದು ಒಂದಕ್ಷರವನ್ನೂ ಬಿಡದಂತೆ ಓದುತ್ತಿದ್ದ ಜಾನಕಮ್ಮನವರ ಪತಿ ಶ್ರೀರಾಮಚಂದ್ರಯ್ಯನವರು ಒಳಗಿನಿಂದಲೇ ಜೋರಾಗಿ ಜಾನೂ......ಜಾನೂ.....ಎಂದು ಏನನ್ನೋ ಕೇಳುವವರಂತೆ ನಟಿಸುತ್ತಾ ಬಂದರು.
ಇವರ ಈ ಕೂಗಿಗೆ ಉತ್ತರ ಕೊಡುತ್ತಾ ಜಾನಕಮ್ಮನವರು ಸರಿ, ಸರಿ, ಕಾಫಿ ಕೊಟ್ಟಿದ್ದೀನಲ್ಲಾ ಮತ್ತಿನ್ನೇನು.......ಜಾನೂ, ಜಾನೂ ಅಂತ ರಾಗ ನಿಮ್ಮದು, ಇನ್ನು ನೀವೊಬ್ಬರೇ ಬಾಕಿ ಬನ್ನಿ....ನೀವೂ ಸೇರ್ಕೊಂಡ್ಬಿಟ್ರಾ......ಇವರ ಜೊತೆ......ಅದೆಲ್ಲಿಗೋ ಹೋಗ್ತೀರಂತೆ ......ಎಲ್ಲರೂ .... ಎರಡು ದಿನ......ನನಗೆ ತಿಳಿಯದಂತೆ, ನಿಮ್ಮ ತಾಯಿ ಮನೆಗೆ........ತಾನೇ, ಹೋಗಿಬನ್ನಿ.....ಪಾಪ...ನಾನ್ಯಾಕೆ
ನಿಮ್ಮತಾಯಿ, ನಿಮ್ಮಗಳ ಮಧ್ಯೆ.......ಜೊತೆಗೆ ಆ ಕಾತ್ಯಾಯಿನಿಯನ್ನೂ ಅವಳ ಗಂಡ ಜೊತೆಗೆ ಅವರ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಹೋಗ್ರಪ್ಪಾ...... ಯಾರು ಬೇಡ ಅಂತಾರೆ, ನಾನ್ಯಾರು, ಹೋಗೋರು ನೀವು, ಕರೆದಿರೋದು ಅವರು, ಎಂದು ಖಾರವಾಗಿ ನುಡಿದರು ಉಗ್ರಾಣದಿಂದಲೇ ಜಾನಕಮ್ಮನವರು.
ಅವರಿಗೂ ಗೊತ್ತು, ವಾರದ ಐದು ದಿನಗಳು ಕಛೇರಿಗಳಿಗೆ, ಅವರುಗಳು ಹೋಗುವುದಕ್ಕೆ ಮುಂಚೆಯೇ ಅವರವರ ತಿಂಡಿ, ಊಟ ತಯಾರು ಮಾಡಿ, ಅವರುಗಳು ಕೊಂಡುಹೋಗಲು ಟಿಫಿನ್ ಬಾಕ್ಸ್ ಗೆ ಹಾಕಿ ಅವರೆಲ್ಲರೂ ಹೋಗೋವರೆಗೂ ಒಬ್ಬಳೇ ಅಡುಗೆ ಮನೆಯಲ್ಲಿ ನಿಂತು ತಾನೊಬ್ಬಳೇ ಕಷ್ಟಪಡುತ್ತಿದ್ದರು ಜಾನಕಮ್ಮನವರು. ಅವರುಗಳು ಎಲ್ಲಾ ಹೋದ ನಂತರ ಒಂದರೆಕ್ಷಣ ವಿಶ್ರಾಂತಿ ಬಯಸದ ಜಾನಕಮ್ಮನವರು ಮತ್ತೆ ಅದೇ ಮನೆಯನ್ನೆಲ್ಲ ಗುಡಿಸಿ, ಸಾರಿಸಿ, ಮೊಮ್ಮಕ್ಕಳು ಆಟವಾಡಿ ಅಲ್ಲಲ್ಲೇ ಬಿಸಾಕಿದ್ದ ಆಟದ ಸಾಮಾನುಗಳನ್ನು ಒಂದೆಡೆ ಎತ್ತಿಟ್ಟು, ಸೇರದಿದ್ದರೂ ಒಂದಿಷ್ಟು ತಿಂಡಿ ತಿಂದು, ಬಟ್ಟೆಗಳನ್ನೆಲ್ಲಾ ವಾಷಿಂಗ್ ಮೆಷಿನ್ ಗೆ ಹಾಕಿ, ನಂತರ ಸ್ನಾನ ಮುಗಿಸಿ, ಬಂದು ದೇವರ ಪೂಜೆ ಮಾಡೋದೇ ಮದ್ಯಾಹ್ನ ಒಂದು
ಗಂಟೆಗೆ, ಇನ್ನೆಲ್ಲಿಯ ಬಿಡುವು, ಟಿ.ವಿ. ನೋಡಲೂ ಆಗೊಲ್ಲ, ಮೊಬೈಲು.....ಅದೆಲ್ಲಿಯದು, ಅದಂತೂ ಕನಸಿನ ಮಾತೇ......ಈ ಕೆಲಸದ ಒತ್ತಡದಲ್ಲಿ.
ಅವರೆಲ್ಲಾ ದಿನದ ಎಂಟು ಗಂಟೆ ಕೆಲಸ ಮಾಡಿ, ಆರು, ಏಳು ಗಂಟೆಗೆಲ್ಲಾ ಒಬ್ಬೊಬ್ಬರೇ ಬರ್ತಾರೆ, ಅವರುಗಳು ಕಾಫಿ, ಟೀ, ಕುರುಕಲು ತಿಂಡಿ ಏನಾದ್ರೂ ಕೇಳ್ತಾರೆ.......ಹೋಗಲಿ ಬಿಡಿ...... ಅದಕ್ಕೂ ಮುಂಚೆ ಮೊಮ್ಮಕ್ಕಳು ಆಟೋದಲ್ಲಿ ಇನ್ನೇನು ಬಂದುಬಿಡುತ್ತಾರೆ, ಅವರು ಬರೋದ್ರಲ್ಲಿ ಬಿಸಿ ಬಿಸಿ ಅಡುಗೆ ಏನಾದ್ರೂ ಹೊಸರುಚಿ ಮಾಡಬೇಕು, ಇಲ್ಲಾಂದ್ರೆ ಅದೇ ಇದೆಯಲ್ಲಾ ಮ್ಯಾಗಿ ನೂಡಲ್ಸ್, ಪಿಜ್ಜಾ ಬರ್ಗರ್ ಅದೂ ಇದೂಂತ ಅವರ ತಂದೆಯರಿಗೆ ಹೇಳಿ ತರಿಸಿ ತಿಂದು ಹೊಟ್ಟೆ ಕೆಡಿಸಿಕೊಳ್ತಾರೆ, ಪಾಪ......ಅದಕ್ಕೇ ಮೊದಲೇ ಏನಾದ್ರೂ ಹೊಸ ತಿಂಡಿ ಮಾಡಿಡಬೇಕು, ಮೊಮ್ಮಕ್ಕಳು ಅಲ್ವಾ......ಸರಿ ಇನ್ನೆಲ್ಲಿ ನನಗೆ ವಿಶ್ರಾಂತಿ, ಈಗ ವಯಸ್ಸು ಐವತ್ತೈದು ಆದರೂ ಇನ್ನೂ ಚಾಕರಿ ಮಾಡ್ತಾನೇ ಇದ್ದೀನಿ, ಇನ್ನು ಊಟದ ಸಮಯ , ಬಿಸಿ ಬಿಸಿ ಮಾಡಿ ಊಟ ಮಾಡೋಣವೆಂದರೆ ನನಗೊಬ್ಬಳಿಗೇ ಅಂತ ಎಷ್ಟು ಮಾಡಿ ತಿನ್ನೋದು, ಸಂಜೆಗೆ ಮಾಡಿದರೆ ಎಲ್ಲರೂ ಬಂದು ಬಿಸಿ ಊಟ ಮಾಡ್ತಾರೆ, ಪಾಪ ಮಕ್ಕಳು,
ಸೊಸೆಯಂದಿರಲ್ವಾ......ಅದಕ್ಕೇ ಊಟದ ಸಮಯಕ್ಕೆ ಉಳಿದ ತಿಂಡಿ ಏನಾದರೂ ಮಿಕ್ಕಿದ್ದರೆ.......ಅದನ್ನೇ ತಿಂದ್ಕೊಳೋದು.
ಇಷ್ಟೆಲ್ಲಾ ಒಂದು ನಿಮಿಷ ವಿಶ್ರಾಂತಿ ಇಲ್ಲದೆ ಕೆಲಸಗಳನ್ನು ಬೆಳಿಗ್ಗೆ ಐದರಿಂದ ರಾತ್ರಿ ಹತ್ತರವರೆಗೂ ಮಾಡ್ತಾನೇ ಇರ್ತೀನಿ, ನನಗೋ ಹೊರಗೆ ಎಲ್ಲಾದರೂ ಹೋದರೆ ತಲೆ ನೋವು, ಆಯಾಸ ವಿಪರೀತ, ದೂರದ ಪ್ರಯಾಣ ವೆಂದರೆ.......ವಾಂತಿ , ಮೈಕೈ ನೋವು ಬಂದುಬಿಡುತ್ತೆ , ಮತ್ತೆ ಆಸ್ಪತ್ರೆಯಲ್ಲಿ ಒಂದು ವಾರ ಅಡ್ಮಿಟ್ ಆಗಿ ಅನುಭವಿಸೋದೇಕೆ ಎಂದು ಮನೆಯಲ್ಲಿಯೇ ಇರೋದು.....ಆರಾಮ ಅನಿಸುತ್ತದೆ. ಅದಕ್ಕೇ ನಾನು ಎಲ್ಲಿಯೂ ಹೋಗೋಲ್ಲ, ಅದನ್ನೇ ನೆಪ ಮಾಡಿಕೊಂಡು ನನ್ನನ್ನು ಇಲ್ಲಿ ಬಿಟ್ಟು ಎಲ್ಲರೂ ಕಾರಿನಲ್ಲಿ ಎರಡು ದಿನ ಅಜ್ಜಿ ಮನೆಗೆ ಅಂತ ಹೊರಟು ಕುಳಿತಿದ್ದಾರೆ.........ಇನ್ನು ಆ ಅತ್ತೆನೋ...... ನನ್ನನ್ನು ಕಂಡರೆ ಉರಿದು ಬೀಳ್ತಾರೆ, ಮೊದಲಿನಿಂದಲೂ, ಅದೇನು ದ್ವೇಷವೋ, ಆ ಮುದುಕಿಗೆ, ನಾನು ಹೋಗದಿದ್ದರೇ ಅವರಿಗೆ ಸಮಾಧಾನ, ಇವರುಗಳೂ ಹಾಗೇ ಮಾಡ್ತಾರೆ, ಅದೇನೋ ಗಾದೆ ಇದೆಯಲ್ಲಾ......ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಅದನ್ನೇ.......ಎನ್ನುವಂತೆ.....ಎಲ್ಲಾ
ನನ್ನ ಗ್ರಹಚಾರ.
ಸರಿ ಎಲ್ಲರೂ ಹೋಗಿಬನ್ನಿ ಎಂದು ಹೇಳಿ ತಮ್ಮ ಕೆಲಸದಲ್ಲಿ ತಾವು ತಲ್ಲೀನರಾಗಿದ್ದರು ಜಾನಕಮ್ಮನವರು. ಆದರೂ ಅಷ್ಟೂ ಜನ ಅವರನ್ನು ಚೇಡಿಸುವುದೂ ಮುಂದುವರೆದಿತ್ತು, ಜಾನಕಮ್ಮನವರೂ ಹೊರಗೆ ತೋರಿಸಿಕೊಳ್ಳದಿದ್ದರೂ, ಅಳು ಬಂದರೂ ಒಳಗೇ ಅದುಮಿಟ್ಟುಕೊಂಡು ಹೊರಗೆ ನಟನೆ ಮಾಡುತ್ತಾ ಇರಬೇಕಾದರೆ ಜಾನಕಮ್ಮನವರ ಮೊಬೈಲ್ ಗೆ ಅವರ ಮಗಳು ಕಾತ್ಯಾಯಿನಿ ಕರೆ ಮಾಡುತ್ತಾಳೆ.
ಅವರ ಕಿರಿಯ ಮಗ ಲೋಕಿ.... ಅಮ್ಮ......ಅಮ್ಮ
ಅಕ್ಕ ಕಾತ್ಯಾಯಿನಿ ಫೋನು..... ಎಂದು ಅಮ್ಮನ ಕೈಗೆ ಫೋನು ಕೊಟ್ಟು, ಎಲ್ಲರೂ ಮುಸಿ ಮುಸಿ ನಗುತ್ತಿರಬೇಕಾದರೆ....... ಜಾನಕಮ್ಮನವರು ಫೋನಿನಲ್ಲಿ ಮಾತನಾಡಲು ಮತ್ತೆ ಉಗ್ರಾಣದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಳ್ತಾರೆ.
ಹಾಗೆ ಹೋಗಿ ಹೀಗೆ ಬಂದ ಜಾನಕಮ್ಮನವರು ಫೋನನ್ನು ಅಲ್ಲೇ ಮಂಚದ ಮೇಲೆ ಎಸೆದು ಕೋಪದಿಂದ ಇವಳೊಬ್ಬಳು ಬಾಕಿ ಇದ್ದಳು, ಇವರ
ಜೊತೆ ಸೇರಿಕೊಂಡು ಇವಳು ಸಹ ಏನೇನೋ ಮಸಲತ್ತು ಮಾಡಿದ್ದಾಳೆ,.........ಎಂದು ಮಗಳು ಕಾತ್ಯಾಯಿನಿಯನ್ನು ಮನದಲ್ಲೇ ಶಪಿಸುತ್ತಾ ಮತ್ತೆ ಈರುಳ್ಳಿ ಕತ್ತರಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರು.
ಆಗ ಎಲ್ಲರೂ ಏನಮ್ಮಾ, ಕಾತ್ಯಾಯಿನಿ ಏನೇಳಿದಳು ಎಂದು ಚೇಡಿಸುತ್ತಲೇ ಕೇಳಿದರು ಮಕ್ಕಳು, ಹೊಗ್ರೋ.......ಅವಳು, ನೀವೆಲ್ಲಾ ಸೇರಿ ಏನ್ ಮಾಡ್ತಾ ಇದ್ದೀರಾ ಅನ್ನೋದು ತಿಳಿಯಿತು, ಎಂದು, ಕೂಗಾಡಿದರು, ಇದೇ ಒತ್ತಡದಲ್ಲಿ ಇದ್ದ ಜಾನಕಮ್ಮನವರು ಚಾಕುವಿನಿಂದ ಕೈ ಬೆರಳು ಕತ್ತರಿಸಿಕೊಂಡು ಅಮ್ಮಾ..... ಎಂದು ಕೂಗುತ್ತಾ, ಬೆರಳನ್ನು ಬಾಯಿಗೆ ಇಟ್ಟುಕೊಂಡ ಅವರು ಇವರನ್ನೆಲ್ಲಾ ಗಮನಿಸಿ....ಏನೋ ನಡೆಸ್ತಿದ್ದಾರೆ, ಅದೇನು ಬೈಕೊಂಡರೋ ಏನೋ, ಇವರೆಲ್ಲಾ ಎಂದು ಮನದಲ್ಲೇ ಯೋಚಿಸಿ, ಕೈ ಬೆರಳಿನ ನೋವಿನ ನೆಪ ಹೇಳಿ, ಜೊತೆಗೆ ಇವರೆಲ್ಲರ ಮಾತುಗಳಿಂದ ಕೋಪಗೊಂಡು ಕೋಣೆಯಲ್ಲಿ ವಿಶ್ರಾಂತಿ ಪಡೆಯಲು ಹೋಗಿ ಮಲಗಿದರು.
ಅಷ್ಟರಲ್ಲಿ ಅವರ ಮಕ್ಕಳು, ಸೊಸೆಯಂದಿರು, ಎಲ್ಲಾ ಸೇರಿ ಮಾತನಾಡಿಕೊಂಡು ಅಂದಿನ ರುಚಿಕಟ್ಟಾದ ಅಡುಗೆ ಮಾಡಿದರು, ಇನ್ನು ಊಟದ ಸಮಯ, ರಾತ್ರಿ ಎಂಟು ಗಂಟೆ, ಬಿಸಿ ಬಿಸಿ ಊಟ
ತಯಾರಾಗಿದೆ, ಪ್ರತೀದಿನ ರಾತ್ರಿಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದು ಅವರ ಮನೆಯ ವಾಡಿಕೆ, ಅದರಂತೆ ಮೊಮ್ಮಕ್ಕಳನ್ನು ಕಳಿಸಿದರು, ಅವರುಗಳು ಹೋಗಿ.....ಅಜ್ಜಿ....ಅಜ್ಜೀ....ಎದ್ದೇಳು ಎಂದು ಎಬ್ಬಿಸಿ ಜಾನಕಮ್ಮನವರನ್ನು ಕರೆಯಲು ಹೋದರೆ........ಗಳ ಗಳ ಅಂತ ಅಳು ಮಾತ್ರ ಕೇಳುತ್ತಿದೆ, ನಿಜವಾಗಿಯೂ ಅಜ್ಜಿ ಕಣ್ಣಲ್ಲಿ ನೀರು ಧಾರಾಕಾರವಾಗಿ ಬರುತ್ತಿದೆ ಎಂದು ಹೇಳಿದರು, ಮೊಮ್ಮಕ್ಕಳು.
ಅವರ ಹೆಣ್ಣು ಹೃದಯ ❤️ ಖಂಡಿತವಾಗಿಯೂ ನೊಂದಿದೆ, ಎಂದು ಎಲ್ಲರೂ ಅರಿತು......ಇನ್ನು ಅಮ್ಮನನ್ನು ಅಳಿಸಬಾರದು ಎಂದರಿತರು ಎಲ್ಲರೂ .
ಆಗ ಜಾನಕಮ್ಮನವರ ಪತಿ ಶ್ರೀರಾಮಚಂದ್ರಯ್ಯನವರು ಮೊದಲು ಸಮಾಧಾನ ಮಾಡಲು ಹೋದರು, , ಖಂಡಿತವಾಗಿಯೂ ಜಾನಕಮ್ಮನವರು ದುಃಖಿತರಾಗಿದ್ದರು, ಅವರ ಹಿಂದೆಯೇ ಎಲ್ಲರೂ ಬಂದು ಜಾನಕಮ್ಮನವರನ್ನು ಸುತ್ತುವರೆದು ಸಮಾಧಾನಪಡಿಸಲು ಪ್ರಯತ್ನಪಟ್ಟರೂ ಅವರ ಕೋಪ ಮಾತ್ರ ಕಡಿಮೆಯಾಗಲಿಲ್ಲ, ಆಗ ಹಿರಿಯ ಸೊಸೆ ಸೋನಿಯಾ ಹಾಗೂ ಕಿರಿಯ ಸೊಸೆ ಸೌಂದರ್ಯ ಇಬ್ಬರೂ ತಮ್ಮ ಅತ್ತೆಯನ್ನು
ತಬ್ಬಿಕೊಂಡು ಅತ್ತೆ ನಮ್ಮದು ತಪ್ಪಾಯಿತು, ನಿಮ್ಮನ್ನು ಬೇಕೆಂತಲೇ ರೇಗಿಸಿದ್ದು, ನಾಳೆ ಏನು ವಿಶೇಷ ಹೇಳಿ...
ಎಂದು ಕೇಳಿದರು ಆಗ ಜಾನಕಮ್ಮನವರು , ನಾಳೆ....ಇನ್ನೇನು ಶನಿವಾರ ತಾನೆ....ಎಂದು ಕೇಳಿದರು.
ಶನಿವಾರ ಸರಿ.......ಆದರೆ......ನಾಳೆ....... ನಾವುಗಳೆಲ್ಲಾ ಸೇರಿ
ವಿಶ್ವ ಮಹಿಳಾ ದಿನವನ್ನು ನಾಳೆ ಆಚರಿಸ್ತೇವೆ...... ನಮಗೆಲ್ಲರಿಗೂ ರಜೆ ಇರುವ ಕಾರಣ. ಎಂದು ಇಬ್ಬರೂ ಸೊಸೆಯರು ಜೊತೆಗೆ ಅವರ ಮಕ್ಕಳು, ಮೊಮ್ಮಕ್ಕಳು ಸಮೇತ ಶ್ರೀ ರಾಮಚಂದ್ರಯ್ಯ ನವರು ಒಕ್ಕೋರಲಿನಿಂದ ಹೇಳಿದರು. ಹಾಗೆಂದರೇನು.....ಎಂದು ಕೇಳಿದರು ಜಾನಕಮ್ಮನವರು ತುಸು ಮುನಿಸಿನಿಂದಲೇ, ಅಂದರೆ ಮಾರ್ಚ್ 8ರಂದು ವಿಶ್ವ ಮಹಿಳಾ ದಿನ
ನಿಮ್ಮ ಸಲುವಾಗಿ ಇದೇ ಮನೆಯಲ್ಲಿ ನಿಮಗೋಸ್ಕರವೇ ಆಚರಣೆ ಮಾಡ್ತೀವಿ,
ಅದರಿಂದ ನನಗೇನು ಪ್ರಯೋಜನ,ಅದೇ ಗಾದೆ ಇದೆಯಲ್ಲಾ....... "ಯಾವುದೇ ಸರ್ಕಾರ ಬಂದರೂ ನಾವು ರಾಗಿ ಬೀಸೋದು ತಪ್ಪಲ್ಲ" ಅನ್ನುವಂತೆ ಏನೇ ಆದರೂ ನಾನೇ ಅಡುಗೆ ಮನೆಯಲ್ಲಿ ಕಷ್ಟ ಪಡಬೇಕು.
ಎಂದು ಮತ್ತೆ ಮುನಿಸಿನಿಂದಲೇ.
ಆಗ ಮತ್ತೆ ಎಲ್ಲರೂ ಜಾನಕಮ್ಮನವರಿಗೆ ಸ್ವಲ್ಪ ಅರ್ಥವಾಗುವಂತೆ ಹೇಳಿದರು, ಆದರೆ ಇಂದಿನಿಂದ ಪ್ರತೀ ಶನಿವಾರ ಭಾನುವಾರಗಳಂದು ಅಮ್ಮನಿಗೆ ಎಲ್ಲಾ ರೀತಿಯ ಕೆಲಸಗಳಿಂದ ವಿರಾಮ, ಇನ್ನು ನಾವೆಲ್ಲಾ ಸೇರಿ ವಾರದ ಕೊನೆ ಎರಡು ದಿನ ಇಡೀ ಮನೆಯ ಕೆಲಸಗಳನ್ನು ಮಾಡ್ತೀವಿ, ನಿಮಗೆ ಆ ಎರಡೂ ದಿನ ವಿಶ್ರಾಂತಿ, ನೀವು ಯಾವುದೇ ಕೆಲಸ ಮಾಡಬಾರದು ತಿಳಿಯಿತಾ.........ಎಂದು ಎಲ್ಲರೂ ಅಮ್ಮ ಒಪ್ಪಿಕೊಳ್ಳುವವರೆಗೂ ಬಿಡದೆ ಅವರೂ ಒಪ್ಪಿಕೊಂಡರು, ಎಲ್ಲರೂ ಅವರನ್ನು ಅಪ್ಪಿಕೊಂಡು ಮುದ್ದಾಡಿದರು. ಆಗ ಅವರ ಮುಖ ನಾಚಿ ನೀರಾಯಿತು. ಆಗ ಹೋಗ್ರೀ ......ನನ್ನನ್ನು ಬಕ್ರಾ ಮಾಡಿ ನೀವುಗಳೆಲ್ಲಾ ತಮಾಷೆ ನೋಡ್ತೀರಾ...... ಎಂದು ನಾಚಿಕೆಯಿಂದ ತಲೆ ತಗ್ಗಿಸಿ ಹೇಳಿದರು.
ಹೌದಮ್ಮಾ....ನೀನು ಹೇಗೆ ಕೋಪ ಮಾಡ್ಕೋತೀಯಾ ನೋಡೋಣ ಎಂದು ನಾವೆಲ್ಲರೂ ನಿನ್ನನ್ನು ಚೇಡಿಸಿದ್ದು, ನಮ್ಮನ್ನು ಕ್ಷಮಿಸಿ, ಈಗ ನಾವು ಹೇಳ್ತಿರೋದೆಲ್ಲಾ ಸತ್ಯ, ನೀನು ಇಡೀ ವಾರ ನಮಗಾಗಿ ಅದೆಷ್ಟು ಅಕ್ಕರೆಯಿಂದ ನಾವು ಕೇಳಿದ್ದನ್ನೆಲ್ಲಾ ಮಾಡಿ ಕೊಡ್ತೀಯ, ನಮ್ಮ ಮಕ್ಕಳನ್ನು ಸಹ ಅದೆಷ್ಟು
ಪ್ರೀತಿಯಿಂದ ನೋಡ್ಕೋತೀಯಾ, ನಮಗೋ ವಾರಕ್ಕೆ ಎರಡು ದಿನ ರಜೆ ಇರುತ್ತದೆ....... ಆದರೆ ನಿನಗೆ ಇಡೀ ಜೀವನದಲ್ಲಿ ಒಮ್ಮೆಯಾದರೂ, ಒಂದು ದಿನವಾದರೂ ರಜೇ ಇಲ್ಲ, ನೀನೂ ಕೇಳೊಲ್ಲ, ನಾವುಗಳೂ ಇನ್ನುಮೇಲೆ ಈ ಶನಿವಾರದಿಂದ ಮತ್ತೆಂದೂ ಹೊರಗೆ ಹೋಗೊಲ್ಲಾ......ಯಾವ ಅಜ್ಜಿ ಮನೆಗೂ ಹೋಗೋಲ್ಲ, ಯಾವುದೇ ಪ್ರವಾಸಕ್ಕೂ ಹೋಗೋಲ್ಲ, ಹೋಗುವುರಾದರೆ ನಿನ್ನ ಜೊತೆಗೆ ಮಾತ್ರ, ಇಂದಿನಿಂದ ಎಲ್ಲರೂ ಸೇರಿಕೊಂಡು ವಾರದ ಕೊನೆಯ ಎರಡು ದಿನ ನಿನಗಾಗಿ ಇಡೀ ಮನೆಯ ಉಸ್ತುವಾರಿ ನೋಡಿಕೊಂಡು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ನಿಶ್ಚಯಿಸಿರುವೆವು.
ಹೌದು ಕಣೇ..... ಮಾರಾಯ್ತಿ ಮಕ್ಕಳು ಹೇಳ್ತಿರೋದೆಲ್ಲಾ ನಿಜ ನಿನಗೂ ಇನ್ನು ವಾರಕ್ಕೆ ಐದೇದಿನ ಕೆಲಸ ಏನಂತೀಯಾ......
ಎಂದು ತನ್ನ ಧರ್ಮಪತ್ನಿಯನ್ನು ಉಧ್ದೇಶಿಸಿ ಹೇಳಿದರು, ಶ್ರೀರಾಮಚಂದ್ರಯ್ಯ ನವರು.
ಅಷ್ಟರಲ್ಲಿ ಮತ್ತೆ ಜಾನಕಮ್ಮನವರ ಮಗಳು ಕಾತ್ಯಾಯಿನಿಯ ಫೋನು ಅರಚಿಕೊಂಡಿತು, ಆಗ ಮತ್ತೆ ಮೊಮ್ಮಕ್ಕಳೇ ಮೊಬೈಲ್ ತಂದು ಅಜ್ಜಿ ಕೈಗೆ
ಕೊಡುತ್ತಾ.....ಅಜ್ಜಿ....ಅಜ್ಜಿ.....ಅತ್ತೆಯ ಕರೆ ಎಂದರು, ಜಾನಕಮ್ಮನವರು ಮಾತನಾಡುವುದಕ್ಕೆ ಮುಂಚೆಯೇ ಅಮ್ಮಾ......ಕ್ಷಮಿಸು, ನಾವು ಇದುವರೆಗೂ ಮಾಡಿದ್ದು ಕೇವಲ ತಮಾಷೆಗಾಗಿ, ನಾವುಗಳೆಲ್ಲಾ ಸೇರಿ ನಿನ್ನೊಬ್ಬಳನ್ನೇ ಬಿಟ್ಟು ಎಲ್ಲಿಗೂ ಪ್ರವಾಸ ಅಂತ ಏನೂ ಹೋಗೋಲ್ಲ, ನಾಳೆ ನಾವೂ ಸಹ ತವರು ಮನೆಗೆ ಬರ್ತೀವಿ, ನಿನಗೆ ಎರಡು ದಿನ ವಿಶ್ರಾಂತಿ ಕೊಟ್ಟು ಎಲ್ಲರೂ ಸೇರಿ ನಿನಗಾಗಿ
ವಿಶ್ವ ಮಹಿಳಾ ದಿನಾಚರಣೆ
ಮಾಡ್ತೀವಿ. ಎಂದಾಗ ಮದುವೆಯಲ್ಲಿ ನವ ವಧುವಿನ ಮುಖದಂತೆ ನಾಚಿ ನೀರಾಯಿತು ಜಾನಕಮ್ಮನವರ ಮುಖ.
ನೀತಿ: ದಿನದ ಇಪ್ಪತ್ನಾಲ್ಕು ಗಂಟೆಗಳು, ವಾರದ ಏಳೂ ದಿನಗಳು ನಿರಂತರ ವಿಶ್ರಾಂತಿ ಪಡೆಯದ ಜೀವ ಎಂದರೆ....... ಅದು ಹೆಣ್ಣು , ಮಹಿಳೆ,
ಅವರಿಗಾಗಿ ವಾರದ ಕೊನೆಯ ಒಂದು ದಿನ ವಿಶ್ರಾಂತಿ ಕೊಟ್ಟರೆ ......ನೋಡಿ....... ಆಗ ಅವರ ದೈನಂದಿನ ಲವಲವಿಕೆ ಹೇಗಿರುತ್ತದೆ ಎಂದು.
ಹೊರಗೆ ದುಡಿಯುವ ಮಹಿಳೆಗೆ ವಾರದ ಕೊನೆಯ
ಒಂದು ಅಥವಾ ಎರಡು ದಿನ ವಿಶ್ರಾಂತಿ ಬೇಕೆಂದಾದರೆ....... ಮನೆಯಲ್ಲಿಯೇ ದುಡಿಯುವ ಮಹಿಳೆಗೆ ಏಕಿಲ್ಲ ವಿಶ್ರಾಂತಿ.
ವಿಶ್ವ ಮಹಿಳಾ ದಿನದ ವಿಶೇಷ ಕಥೆ
-ರಾಜೇಂದ್ರ ಕುಮಾರ್ ಗುಬ್ಬಿ
ಕನಸುಗಳ ಕಥೆಗಾರ
]]>
ಅರುಣಾ ದೇವಿ.....ಎಂದರೆ ಈ ಹೆಸರಿನವರು ಊರಿನಲ್ಲಿ ಸಾವಿರಾರು ಜನರಿದ್ದಾರೆ,
ಡಾll ಅರುಣಾ ದೇವಿ......ಎಂದರೂ ಸುಮಾರು ಜನರಿದ್ದಾರೆ ಅವರ ಹೆಸರಿನವರು. ಆದರೆ........
ಡಾll ಅಂಬೆಗಾಲು ಅರುಣಾ ದೇವಿ....... ಎಂದರೆ ಬಹುಶಃ ಇಡೀ ಭಾರತಕ್ಕೆ ಇವರು ಒಬ್ಬರೇ ಒಬ್ಬರು ಇರುವುದು.
ಇವರೇ ಕನ್ನಡದ ಖ್ಯಾತ ಬರಹಗಾರ್ತಿ, ಕವಿಯಿತ್ರಿ, ಸಾಹಿತಿ, ತಾಯಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಅವರಿಗೆ ಈಗ ಎಪ್ಪತ್ತೈದರ ಹರೆಯ, ಈಗಲೂ ಅವರು ಕುಳಿತಿರುವ ಕುರ್ಚಿ, ಮೇಜಿನ ಸುತ್ತಲೂ ಇಡೀ ವಿಶ್ವದ ಖ್ಯಾತ ಬರಹಗಾರರು ಬರೆದ ಎಲ್ಲಾ ರೀತಿಯ, ಎಲ್ಲಾ ಭಾಷೆಯ ಪುಸ್ತಕಗಳು, ಬರಹಗಳೇ ತುಂಬಿರುತ್ತವೆ, ಈಗಲೂ ಅವರು ಕನ್ನಡಕವನ್ನು ಉಪಯೋಗಿಸುವುದಿಲ್ಲ, ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುವ ಇವರು ಮಲಗುವುದಂತೂ ಯಾವುದೇ ಇಂತಿಷ್ಟು ಅಂತ ಸಮಯವಿಲ್ಲ, ಅವರು
ತಮ್ಮ
ಯಾವಾಗಲಾದರೂ ಯಾವುದಾದರೊಂದು ಪುಸ್ತಕವನ್ನು ಓದುತ್ತಿರುತ್ತಾರೆ ಅಥವಾ ಯಾವುದಾದರೊಂದು ವಿಷಯದ ಬಗ್ಗೆ ಲೇಖನಗಳನ್ನು ಬರೆಯುತ್ತಿರುತ್ತಾರೆ. ಇದು ಅವರ ಈ ಹತ್ತು, ಹದಿನೈದು ವರುಷಗಳಿಂದ ನಡೆದುಕೊಂಡು ಬಂದ ದಿನಚರಿ.
ಇವರ ಈ ಆರೋಗ್ಯಕರ ನಡೆಗೆ ಅವರ ಇಬ್ಬರು ಗಂಡುಮಕ್ಕಳೂ ಅವರ ಹೆಂಡತಿಯರು ಹಾಗೂ ಅವರ ಮಕ್ಕಳು ಕಾರಣ....... ಅವರುಗಳು ಯಾವಾಗಲೂ ದೇಶ, ವಿದೇಶ ಅಂತ ಪ್ರವಾಸಕ್ಕೆ ಹೋಗುತ್ತಿರುತ್ತಾರೆ, ಇವರನ್ನು ಕೇಳದೆ ಇವರಿಗೂ ಹೇಳದೇ..........ಇವರ ಸಹಾಯಕ್ಕೆಂದು ಒಬ್ಬ ಸಹಾಯಕಿಯನ್ನು ಇವರೊಡನೆ ಬಿಟ್ಟು.
ಹೀಗೇ ಒಂದು ದಿನ ಅರುಣಾ ದೇವಿಯವರನ್ನು ಬಿಟ್ಟು ಎಲ್ಲರೂ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದರು, ಆದರೆ ಆಗ ಇವರ ಸಹಾಯಕ್ಕೆಂದು ಇದ್ದ ಸಹಾಯಕಿ ವಿಮಲಾ ಬಾಯಿ, ಇದ್ದಕ್ಕಿದ್ದಂತೆ ಅನಾರೋಗ್ಯದ ಕಾರಣ ಕೆಲಸಕ್ಕೆ ಹೇಳದೇ ಕೇಳದೇ ರಜೆ ಹಾಕಿದ್ದಳು, ಇಷ್ಟುದಿನ ಇದಾವುದರ ಬಗ್ಗೆ ಚಿಂತಿಸದ ಡಾll ಅರುಣಾ ದೇವಿಯವರಲ್ಲಿ ಈಗ
ಒಂಟಿತನದ ಚಿಂತೆ ಕಾಡತೊಡಗಿತು, ತನ್ನ ಕೆಲಸಗಳನ್ನೆಲ್ಲಾ ತಾನೇ ಮಾಡಿಕೊಳ್ಳಬೇಕಾಯಿತು, ಒಂಟಿ ಜೀವನ ಎಂದರೇನು ಎಂದು ಈ ಎಪ್ಪತ್ತೈದು ವರ್ಷಗಳ ಕಾಲ ಯೋಚಿಸಿರದ ಈ ಅರುಣಾ ದೇವಿಯವರಲ್ಲಿ ಈಗ ಅರ್ಥವಾಗುತ್ತಿದೆ, ಕಾರಣ ಅವರನ್ನು ಗಮನಿಸುವವರಾರೂ ಅವರ ಹತ್ತಿರವಿರಲಿಲ್ಲ, ಒಂದು ಲೋಟ ನೀರು ಬೇಕೆಂದರೂ ಅಡುಗೆ ಕೋಣೆಗೆ ಸ್ವತಃ ತಾನೇ ಎದ್ದು ಹೋಗಿ ಕುಡಿದು ಬರಬೇಕು, ಇನ್ನು ತನ್ನ ಮಕ್ಕಳಾಗಲೀ, ಸೊಸೆಯರಾಗಲೀ, ಮೊಮ್ಮಕ್ಕಳಾಗಲೀ ತನ್ನ ಜೊತೆ ಇರದೆ ಎಲ್ಲೋ ಸುತ್ತಾಡಲು ಹೋಗಿದ್ದಾರೆ, ತಾನು ಸರಿಇದ್ದರೆ ಎಲ್ಲವೂ ಸರಿ ಇರುವುದು, ಎಂದು ಬಹಳ ಬೇಗ ತಿಳಿದುಕೊಂಡರು.
ಈ ಕೆಲಸದಾಕೆ......ಪಾಪ ಅವಳೂ ಮನುಷ್ಯಳಲ್ಲವೇ..........ಅವಳಿಗೂ ಖಾಯಿಲೆ ಕಸಾಲೆ ಎಲ್ಲಾ ಸಹಜತಾನೆ ಎಂದು ತನಗೆ ತಾನೇ ಸಮಾಧಾನ ಪಟ್ಟುಕೊಂಡರು, ಆಗ ಇದೇ ಊರಿನಲ್ಲಿರುವ ತನ್ನ ಮಗಳು, ಅಳಿಯರಿಗೆ ಫೋನು ಕರೆ ಮಾಡಿದರು ಅರುಣಾದೇವಿಯವರು, ಅತ್ತಲಿಂದ ಉತ್ತರ ಬಂದಿತು, ಅಮ್ಮಾ ನಾವಿಬ್ಬರೂ ಹೈದರಾಬಾದಿಗೆ ಮದುವೆಗೆ ಬಂದಿರುವೆವು, ಬರುವುದು ಇನ್ನೂ ಒಂದು ವಾರವಾಗುವುದು, ಮನೆಯಲ್ಲಿ ಮಗ
ಪ್ರಶಾಂತನಿದ್ದಾನೆ ಅವನಿಗೆ ಫೋನು ಕರೆ ಮಾಡಿ ನಿಮ್ಮಲ್ಲಿಗೆ ಬರುವಂತೆ ತಿಳಿಸುವೆ, ಎಂದು ಹೇಳಿ ಅವರ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಫೋನು ಕರೆ ಕಡಿತಗೊಳಿಸಿದರು.
ಈಗಂತೂ ಅರುಣಾ ದೇವಿಯವರು ಮತ್ತಷ್ಟು ಚಿಂತಿಸುವಂತಾಯಿತು, ತಾನು ಆರೋಗ್ಯದಿಂದಿದ್ದಾಗ ಎಲ್ಲರೂ ನಾ ಮುಂದು ತಾ ಮುಂದು ಎಂದು ಆರೈಕೆ ಮಾಡುತ್ತಾರೆ, ಆದರೆ ನಾನು ಕೈಲಾಗದೇ ಮೂಲೆಯಲಿ ಕುಳಿತರೆ ಯಾರೂ ಬರುವುದಿಲ್ಲವಲ್ಲಾ......ಎಂದು ತುಂಬಾ ನೊಂದರು, ಹಾಗೂ ಅವರ ಬಾಲ್ಯಾವಸ್ಥೆಯಿಂದ ಇದುವರೆಗೂ ಅವರ ಜೀವನದ ಕಥೆಯನ್ನೊಮ್ಮೆ ಸ್ಮೃತಿಪಟಲದಲ್ಲಿ ತಂದುಕೊಂಡರು.
"ಡಾll ಅಂಬೆಗಾಲು ಅರುಣಾ ದೇವಿ" ಯವರು
ಸ್ವಾತಂತ್ರ್ಯ ಹೋರಾಟಗಾರರಾದ ದ್ವಾರಸಮುದ್ರ ಧರ್ಮಯ್ಯ ನವರ ಮೊಮ್ಮಗಳು, ಅವರ ನಾಲ್ಕು ಜನ ಮಕ್ಕಳು, ಮೊದಲೆರಡು ಹೆಣ್ಣು ಮಕ್ಕಳು, ನಂತರ ಇಬ್ಬರು ಗಂಡು ಮಕ್ಕಳು, ಈ ಗಂಡು ಮಕ್ಕಳಲ್ಲಿ ಕೊನೆಯ ಮಗನ ಮಗಳೇ ಅರುಣಾ ದೇವಿಯವರು, ಮೊದಲೆರಡು ಹೆಣ್ಣು ಮಕ್ಕಳ ಮಕ್ಕಳುಗಳೇ ಬ್ಯಾರಿಸ್ಟರ್ ಬಲರಾಂ ಹಾಗೂ ಮೇಜರ್ ಮನೋಜ್
ಕುಮಾರ್, ಈ ಇಬ್ಬರೂ ಅರುಣಾ ದೇವಿಯವರನ್ನು ಪ್ರೀತಿಸಿ ಮದುವೆಯಾಗಲು ಹಾತೊರೆಯುತ್ತಿದ್ದವರು.
"ಡಾll ಅಂಬೆಗಾಲು ಅರುಣಾ ದೇವಿ" ಯಾರು ಎಂದು ಕೇಳಿದರೆ ಭಾರತೀಯ ಸಾಹಿತ್ಯ ವಲಯದಲ್ಲಿ ಚಿರಪರಿಚಿತ ಹೆಸರು. ಕಾರಣ ಅವರು ಸಾಹಿತ್ಯ ಕೃಷಿ ಪ್ರಾರಂಭ ಮಾಡಿದಾಗ ಪ್ರಪ್ರಥಮವಾಗಿ ಬರೆದ ಕೃತಿ "ಅಂಬೆಗಾಲು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಡಾll ಅರುಣಾ ದೇವಿ ಯವರು ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದು ಡಾಕ್ಟರ್ ಆದವರಲ್ಲ, ಅವರು ಅತ್ಯುತ್ತಮ ಬರಹಗಾರರೆಂದು ವಿಶ್ವವಿದ್ಯಾಲಯಗಳೇ ನೀಡಿದ ಡಾಕ್ಟರೇಟ್ ಪದವಿ. /
ಈ ಅಂಬೆಗಾಲು ಅರುಣಾ ದೇವಿಯವರು ತನ್ನ ಮೂವತ್ತನೇ ವಯಸ್ಸಿಗೆ ಎಲ್ಲಾ ಓದು ಮುಗಿದ ನಂತರ ಅವರು ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದ ನಂತರ ಮೊದಲಬಾರಿಗೆ ಈ "ಅಂಬೆಗಾಲು" ಎಂಬ ಕೃತಿ ಬರೆದರು, ಅತೀ ಚಿಕ್ಕ ವಯಸ್ಸಿಗೇ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದವರು. ಅದುವರೆಗೂ ಅವರು ಯಾರೆಂದು ಯಾರಿಗೂ ತಿಳಿಯದೇ ಇದ್ದವರು, ಅಂಥಾ ಸಮಯದಲ್ಲಿ ಅವರ ಈ ಕೃತಿಗೆ ಯಾವಾಗ ಕೇಂದ್ರ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತೋ..... ರಾತ್ರೋರಾತ್ರಿ ಪ್ರಸಿದ್ದಿಗೆ ಬಂದವರು ಈ
ಅರುಣಾದೇವಿಯವರು, ಅವರ ಜೊತೆ "ಅಂಬೆಗಾಲು" ಸೇರಿಕೊಂಡು "ಅಂಬೆಗಾಲು ಅರುಣಾ ದೇವಿ" ಆದರು.
ಅವರು ಇನ್ನೂ ಸಾಹಿತ್ಯ ಕ್ಷೇತ್ರದಲ್ಲಿ ಅಂಬೆಗಾಲಿಡುವ ಹಂತದಲ್ಲಿ ಅವರನ್ನು ಎತ್ತರಕ್ಕೆ ಕೊಂಡೊಯ್ದ ಈ ಕೃತಿ ಅವರ ಜೊತೆಜೊತೆಗೇ ಇದೆ, ಅಂದಿನಿಂದ ಅವರ ಸ್ನೇಹಿತರ ಬಳಗ ಹೆಚ್ಚಾಯಿತು, ಅವರಿಗಿಂತ ಹಿರಿಯರೂ ಅವರ ಈ ಕೃತಿ ಕೊಂಡು ಓದಿ ತಮ್ಮ ಮನದಾಳದ ಮೆಚ್ಚುಗೆ ಸೂಚಿಸತೊಡಗಿ, ಅವರ ಸ್ನೇಹಕ್ಕಾಗಿ ಹಾತೊರೆಯತೊಡಗಿದರು, ಅವರನ್ನು ಒಮ್ಮೆ ನೋಡಿ, ಅವರೊಡನೆ ಮಾತನಾಡಬೇಕೆಂದು ಇಡೀ ದೇಶದ ಎಲ್ಲಾ ತರಹದ ಕವಿಗಳು, ಬರಹಗಾರರು, ಸಾಹಿತಿಗಳು, ಕಾಯತೊಡಗಿದರು, ಅರುಣಾರವರೂ ಅವರ ಅಂತಸ್ತಿಗೆ ತಕ್ಕಂತೆ ಬೆಳೆಯತೊಡಗಿದರು, ಮೊದಲೇ ಸೌಂದರ್ಯದ ಖನಿಯಂತಿದ್ದ ಅವರ ಸೌಂದರ್ಯ, ಅವರ ಆ ತಾರುಣ್ಯದ ವಯಸ್ಸು ಅವರೊಡನೆ ಪ್ರೀತಿ ಪ್ರೇಮ, ಸಖ್ಯ ಎಲ್ಲವೂ ಒಂದೊಂದಾಗಿ ಒದಗಿಬಂದಂತೆ ಅವರ ಘನತೆ ಹೆಚ್ಚತೊಡಗಿದಂತೆ ಅವರ ಅಭಿಮಾನಿಬಳಗ ಹೆಚ್ಚತೊಡಗಿತು, ಹಾಗೇ ಅವರನ್ನು ಪ್ರೀತಿಸುವ ಪ್ರೇಮಿಗಳೂ ಹೆಚ್ಚಾದರು, ಹೀಗೆ ಅರುಣಾ ರವರನ್ನು ಪ್ರೀತಿಸುವಲ್ಲಿ ನಾ ಮುಂದು ತಾಮುಂದು
ಎಂದು ಪೈಪೋಟಿಯಲ್ಲಿ ಮುಂದಲೆಗೆ ಬಂದವರೆಂದರೆ,
ಡಾll ಅರುಣಾ ರವರ ತಂದೆಯ ಇಬ್ಬರು ಹಿರಿಯ ಸಹೋದರಿಯರ ಮಕ್ಕಳು.
ಒಬ್ಬರು : ಬ್ಯಾರಿಸ್ಟರ್ ಬಲರಾಂರವರು, ಅವರು ಪ್ರಖ್ಯಾತ ವಕೀಲರೆಂದು ಚಿಕ್ಕ ವಯಸ್ಸಿನಲ್ಲೇ ಹೆಸರು ಮಾಡಿದವರು, ಅವರು ವಾದ ಮಂಡಿಸುತ್ತಿದ್ದಾರೆ ಎಂದರೆ, ನ್ಯಾಯಾಧೀಶರೇ ಮೂಗಿನ ಮೇಲೆ ಬೆರಳಿಟ್ಟು ನೋಡುತ್ತಿದ್ದರು, ಆ ನ್ಯಾಯಾಲಯದಲ್ಲಿ ಇತರ ಹಿರಿಯ ವಕೀಲರುಗಳೂ ತಮ್ಮ ಕೆಲಸಕಾರ್ಯಗಳನ್ನು ಬದಿಗಿಟ್ಟು, ಇವರು ವಾದ ಮಂಡಿಸುವ ವೈಖರಿಯನ್ನು ನೋಡಲು ಬಂದು ಸೇರುತ್ತಿದ್ದರು, ಅವರಿಗೆ ಈ ಬ್ಯಾರಿಸ್ಟರ್ ಪದವಿ ಕೊಟ್ಟವರು ಬೇರಾರೂ ಅಲ್ಲ, ಅವರ ಅಭಿಮಾನಿಗಳೇ, ಅಂಥಾ ಖ್ಯಾತ ವಕೀಲರು
ಡಾll ಅಂಬೆಗಾಲು ಅರುಣಾರನ್ನು ಪ್ರೀತಿಸುತ್ತಿದ್ದರು, ಪ್ರೀತಿಸಿ, ತಮ್ಮ ತಾಯಿಯ ಕಡೆಯಿಂದ ಹೇಳಿಸಿ ಮದುವೆಯಾಗಲೂ ಪ್ರಯತ್ನಿಸುತ್ತಿದ್ದರು.
ಇವರ ಮತ್ತೊಬ್ಬ ಪ್ರತಿಸ್ಪರ್ಧಿ ಪ್ರೇಮಿ ಮೇಜರ್ ಮನೋಜ್ ಕುಮಾರ್ ರವರು, ಇವರೂ ಸಹ ಅತೀ ಚಿಕ್ಕ ವಯಸ್ಸಿಗೇ ಮೇಜರ್ ಹುದ್ದೆಗೇರಿದ್ದವರು, ಯಾವುದೇ ಕಠಿಣ ಸಂದರ್ಭಗಳು ಬಂದರೂ ಅದನ್ನು ತಾನೇ ಮುಂದಾಳತ್ವ ವಹಿಸಿ ಅತ್ಯಂತ ಸರಳವಾಗಿ
ನಿಭಾಯಿಸುತ್ತಿದ್ದುದ್ದರಿಂದ ಅವರಿಗೆ ಈ ಅಧಿಕಾರ ದೊರೆತಿತ್ತು.
ಈ ಮೂವರ ವೃತ್ತಿ, ಪ್ರವೃತ್ತಿಗಳು, ಹವ್ಯಾಸಗಳು ಬೇರೆಬೇರೆಯಾದರೂ ಒಬ್ಬರನ್ನೊಬ್ಬರು ಸಂಧಿಸುತ್ತಿದ್ದುದು, ಅವರುಗಳ ಕೆಲಸಗಳೆಲ್ಲಾ ಮುಗಿದ ನಂತರ ಸ್ನೂಕರ್ ಕ್ಲಬ್ ನಲ್ಲಿ, ಅಲ್ಲಿಯೂ ಇತರೆ ಎಲ್ಲಾ ಸದಸ್ಯರುಗಳಿದ್ದರೂ ಈ ಮೂವರೂ ಒಬ್ಬರಿಗಿಂತ ಒಬ್ಬರು ಈ ಸ್ನೂಕರ್ ಆಟದಲ್ಲಿ ಅತ್ಯಂತ ಪ್ರಾವೀಣ್ಯತೆ ಪಡೆದು, ಬಲಾಢ್ಯರಾಗಿದ್ದರು, ಈ ಅರುಣಾರವರು ಇಲ್ಲದಿದ್ದ ವೇಳೆ ಅವರನ್ನು ಮದುವೆಯಾಗಲು ಈ ಬ್ಯಾರಿಸ್ಟರ್ ಹಾಗೂ ಮೇಜರ್ ಆರೋಗ್ಯಕರ ಸ್ಪರ್ಧೆಗಳನ್ನು ಒಡ್ಡಿ, ಪೈಪೋಟಿ ಮೇಲೆ ತಮಾಷೆಗಾಗಿ ಪಂದ್ಯಗಳನ್ನು ಕಟ್ಟಿ ಯಾರು ಆಟ ಗೆಲ್ಲುವರೋ ಅವರಿಗೇ ಅರುಣಾ ದೊರಕುವಳೆಂದು........ಆದರೆ ವಿಪರ್ಯಾಸವೆಂದರೆ ಇಬ್ಬರೂ ಆಟವಾಡಿದ ಆಟಗಳಲ್ಲಿ ಒಮ್ಮೆ ಬಲರಾಂ, ಮತ್ತೊಮ್ಮೆ ಮನೋಜ್ ಗೆಲ್ಲುತ್ತಿದ್ದರು, ಈ ಅರುಣಾ ತನಗೇ ಸಿಗಬೇಕೆಂದು ತಮಾಷೆಗಾಗಿ ಜಗಳವಾಡುತ್ತಿದ್ದರು, ಆದರೂ ಅರುಣಾ ರವರು ಈ ಇಬ್ಬರನ್ನೂ ಸಮಾನವಾಗಿ ನೋಡುತ್ತಿದ್ದರು ಕಾರಣಇಬ್ಬರೂ ಸಂಬಂಧಿಗಳಾಗಿದ್ದರು, ಅಲ್ಲದೇ ಇಬ್ಬರಲ್ಲೂ ಸಮಾನವಾದ ಪ್ರತಿಭೆ, ಅಂದ,ಚೆಂದ, ಹಣ ಎಲ್ಲವೂ ಇದ್ದಿದ್ದರಿಂದಲೂ, ತಂದೆಯವರು
ಯಾರಿಗೆ ಮದುವೆ ಮಾಡುವರೋ ಅವರನ್ನೇ ಮದುವೆಯಾಗುವುದಾಗಿ ಹೇಳುತ್ತಿದ್ದರು ಈ ತ್ರಿಕೋನ ಪ್ರೇಮಕಥೆ ಅದೆಲ್ಲಿಗೆ ಹೋಗಿ ಮುಕ್ತಾಯವಾಗುವುದೋ ಎಂದು ಉಳಿದವರೆಲ್ಲರೂ ಕಾತರರಾಗಿ ಕಾಯುತ್ತಿದ್ದರು, ಇದರಿಂದ ಮೂರನೆಯವರು ಯಾರೂ ಅರುಣಾ ರವರನ್ನು ಪ್ರೀತಿಸಲು ಪ್ರಯತ್ನಿಸುತ್ತಿರಲಿಲ್ಲ.
ಹೀಗೇ ತ್ರಿಕೋನ ಪ್ರೇಮಕಥೆ ಬಹಳ ದಿನಗಳವರೆಗೆ ನಡೆಯುತ್ತಲೇಇತ್ತು, ಹೀಗೇ ತ್ರಿಕೋನ ಪ್ರೇಮಕಥೆ ಆಗಿಂದಾಗ್ಗೆ ವಿಚಿತ್ರ ತಿರುವುಗಳನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಮೇಜರ್ ಮನೋಜ್ ಕುಮಾರ್ ಅವರನ್ನು, ಭಾರತ-ಪಾಕ್ ಗಡಿಪ್ರದೇಶದಲ್ಲಿ ಉಗ್ರಗಾಮಿಗಳ ಉಪಟಳ ಜಾಸ್ತಿಯಾಗಿದ್ದುದರಿಂದ ಈ ಕೂಡಲೇ ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನಿಯೋಜನೆ ಮಾಡಿತ್ತು, ಆ ಆಹ್ವಾನದ ಮೇರೆಗೆ ಹೋಗಬೇಕಾಗಿ ಬಂದಿದ್ದರಿಂದ ಕೂಡಲೇ ಹೊರಟು ಬಿಟ್ಟರು.
ಈಗಂತೂ ಡಾll ಅರುಣಾ ದೇವಿ ಯವರ ಎದುರಿಗಿದ್ದವರು ಕೇವಲ ಬ್ಯಾರಿಸ್ಟರ್ ಬಲರಾಂ ಮಾತ್ರ, ಆದರೂ ಎಂದೋ ಒಮ್ಮೆ ತಿಂಗಳಿಗೋ, ಎರಡು ತಿಂಗಳಿಗೋ ಮೇಜರ್ ರವರಿಂದ ಫೋನು ಕರೆ ಬರುತ್ತಿತ್ತು. ಆದರೆ ಇದರ ಮಧ್ಯೆ ಬ್ಯಾರಿಸ್ಟರ್
ಬಲರಾಂ ಅವರು ತನ್ನ ಹೆತ್ತವರ ಮುಖಾಂತರ ಒತ್ತಡ ತಂದು ಅರುಣಾ ದೇವಿಯವರ ತಂದೆಯವರಲ್ಲಿ ಮಾತುಕಥೆ ನಡೆಸಿ, ಮದುವೆಗೆ ನಿಶ್ಚಯ ಮಾಡಿಯೇ ಬಿಟ್ಟರು, ಒಂದು ಕಡೆ ಮೇಜರ್ ರವರು ತನ್ನ ಕೆಲಸದ ಒತ್ತಡದಿಂದಾಗಿ ಅವರೂ ಈ ಪ್ರೇಮಕಥೆಯಲ್ಲಿ ಪಕ್ಕಕ್ಕೆ ಸರಿದು ಬಿಟ್ಟರು. //
ಇದರಿಂದ ಡಾllಅರುಣಾದೇವಿಯವರ ಮದುವೆ ಬ್ಯಾರಿಸ್ಟರ್ ಬಲರಾಂರವರೊಂದಿಗೆ ಪಕ್ಕಾ ಆಗಿಬಿಟ್ಟಿತು, ಆಗ ಅರುಣಾದೇವಿಯವರಿಗೆ ಸುಮಾರು ಮೂವತ್ತೆರಡು ವರ್ಷ ವಯಸ್ಸು ಇರಬೇಕು.
ಹೀಗೆ ಒಂದು ಸುಮುಹೂರ್ತದಲ್ಲಿ ಡಾ llಅರುಣಾ ದೇವಿ ಹಾಗೂ ಬ್ಯಾರಿಸ್ಟರ್ ಬಲರಾಂ ಅವರುಗಳ ಮದುವೆ ಅದ್ಧೂರಿಯಿಂದ ನಡೆದು, ಅರುಣಾ ದೇವಿಯವರ ಅಸಂಖ್ಯಾತ ಅಭಿಮಾನಿಗಳು ಈ ಮದುವೆಗೆ ಬಂದು ಹರಸಿ ಆಶೀರ್ವದಿಸಿದರು, ಆದರೆ ಕೆಲಸದ ಒತ್ತಡದಿಂದಾಗಿ ಮೇಜರ್ ಮನೋಜ್ ಕುಮಾರ್ ಬರಲಾಗಲೇ ಇಲ್ಲ, ಹಾಗೂ ಮನೋಜ್ ರವರ ಹೆತ್ತವರು ಸಹ ಬರಲಿಲ್ಲ, ಹೀಗೆ ಅರುಣಾದೇವಿ- ಬಲರಾಂ ದಂಪತಿಗಳ ಜೀವನ ಸಾಗಿತ್ತು, ಅವರೂ ತಮ್ಮ ಕೆಲಸಗಳ ಮಧ್ಯೆ ಸಾಹಿತ್ಯ ಕೃಷಿಯಲ್ಲೂ ಮುಂದುವರೆಯುತ್ತಾ, ಇಡೀ ದೇಶದಲ್ಲಿ ಮತ್ತಷ್ಟು
ಹೆಸರು ಮಾಡುತ್ತಾ, ದೇಶ ವಿದೇಶಗಳಲ್ಲಿ ಹೋಗಿ ಸನ್ಮಾನಗಳಿಗೆ ಭಾಜನರಾಗುತ್ತಿದ್ದರು.
ಹೀಗೇ ತುಂಬಾ ವರುಷಗಳು ಕಳೆಯಿತು.
ದಿನಗಳುರುಳಿದಂತೆ ಅವರಿಗೆ ಮೂವರು ಮಕ್ಕಳುಗಳಾದವು, ಮೊದಲೆರಡು ಗಂಡುಮಕ್ಕಳು, ಆನಂತರ ಒಂದು ಹೆಣ್ಣು ಮಗಳು, ಅವರುಗಳೂ ಚೆನ್ನಾಗಿ ಓದಿ, ಕೆಲಸಗಳಿಗೆ ಸೇರಿದ್ದರು,
ಈಗ ಅಂಬೆಗಾಲು ಅರುಣಾ ದೇವಿ, ಬ್ಯಾರಿಸ್ಟರ್ ಬಲರಾಂ ದಂಪತಿಗಳು ಮತ್ತಷ್ಟು ಉತ್ತುಂಗಕ್ಕೇರಿದ್ದರು, ಅವರ ಹೆಣ್ಣು ಮಗಳಿಗೆ ಮದುವೆಯೂ ನಡೆದು ಅವಳು ತನ್ನ ಗಂಡನ ಮನೆಗೆ ಹೋಗಿದ್ದಳು. ಹೀಗೇ ಇರುವಾಗ ಬಲರಾಂ ರವರು ತಮ್ಮ ನ್ಯಾಯಾಲಯದ ಕೆಲಸಗಳನ್ನು ಮುಗಿಸಿ ಸಂಜೆಯ ವೇಳೆಯಲ್ಲಿ ತಮ್ಮ ಕಾರಿನಲ್ಲಿ ಮನೆಯಕಡೆ ಬರುವಾಗ ಅವರು ತೀವ್ರತರನಾದ ಹೃದಯಾಘಾತವಾಗಿ ಕಾರು ಚಲಾಯಿಸುವಾಗಲೇ ನಿಧನರಾಗಿ ಅರುಣಾ ರವರನ್ನು ಹಾಗೂ ಅಪಾರ ಬಂಧು ಬಳಗವನ್ನು ತೊರೆದುಹೋದರು.
ಈಗಂತೂ ಅರುಣಾ ದೇವಿಯವರು ಒಂದರ್ಥದಲ್ಲಿ ಒಂಟಿಯಾಗಿದ್ದರು, ಆದರೂ ಅವರಿಗೆ ತುಂಬಾ ಜವಾಬ್ದಾರಿ ಹೊರಿಸಿಹೋಗಿದ್ದರು, ಬಲರಾಂ ರವರು,
ಅದೇ.....ಇಬ್ಬರು ಗಂಡುಮಕ್ಕಳ ಮದುವೆ...... ಹೆಣ್ಣು ಮಗಳೇನೋ ಗಂಡನ ಮನೆಯಲ್ಲಿ ಸುಖವಾಗಿದ್ದಳು, ಅವಳಿಗೂ ಒಂದು ಗಂಡು ಮಗು ಹುಟ್ಟಿತ್ತು. ಸರಿ ಇಬ್ಬರೂ ಗಂಡು ಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದರು, ಇಬ್ಬರಿಗೂ ಎರಡು ವರುಷಗಳ ಅಂತರ ಅಷ್ಟೇ..... ಆದ್ದರಿಂದ ಅವರೀರ್ವರಿಗೂ ಒಂದೇ ಬಾರಿ ಮದುವೆ ಮಾಡಲು ತಯಾರಿ ಮಾಡಿಕೊಂಡು ತಮಗೆ ತಿಳಿದ ಒಂದೇ ಮನೆಯಿಂದ ಅವಳಿ ಹೆಣ್ಣು ಮಕ್ಕಳನ್ನು ತಂದು ಮನೆಯ ಸೊಸೆಯರನ್ನಾಗಿ ಮಾಡಿಕೊಂಡು ಒಂದರ್ಥದಲ್ಲಿ ಅವರು ನಿರಾಳವಾದರು, ಈಗ ಜವಾಬ್ದಾರಿ ಸ್ವಲ್ಪ ಮಟ್ಟಿಗೆ ಕಡಿಮೆಯೇ ಆಗಿದ್ದರಿಂದ ಅದೂ ಅಲ್ಲದೆ ಅವರೂ ಆಗತಾನೆ ನಿವೃತ್ತರಾಗಿ ವಿಶ್ರಾಂತಿ ಜೀವನ ನಡೆಸಲು ಸಕಲ ಏರ್ಪಾಟುಗಳನ್ನು ಮಾಡಿಕೊಂಡರು, ಈಗಂತೂ ವಿಶ್ರಾಂತಿ ಜೀವನದಲ್ಲಿಯೂ ಅವರೇನೂ ವಿಶ್ರಾಂತಿ ಪಡೆಯುತ್ತಿರಲಿಲ್ಲ, ಅವರ ಸಾಹಿತ್ಯ ಕೃಷಿ ಮುಂದುವರೆದೇ ಇತ್ತು. ಅವರು ಹಗಲು ರಾತ್ರಿ ಎನ್ನದೇ ಕಥೆ, ಕವನ, ಬೇರೆ ಭಾಷೆಯ ಪುಸ್ತಕಗಳನ್ನು ಕನ್ನಡಕ್ಕೆ, ಕನ್ನಡದ ಪುಸ್ತಕಗಳನ್ನು ಬೇರೆ ಭಾಷೆಗೆ ತರ್ಜುಮೆ ಮಾಡುತ್ತಾ ಹಾಗೆಯೇ ಅವರಿವರ ಪುಸ್ತಕಗಳನ್ನು ಓದುತ್ತಾ, ಇಂದು ಈ ಊರಿನಲ್ಲಿ ಸನ್ಮಾನ, ನಾಳೆ ಮತ್ತೊಂದು ಊರಿನಲ್ಲಿ ಪುಸ್ತಕ
ಬಿಡುಗಡೆ ಹೀಗೆ ಹಗಲಿರುಳೆನ್ನದೆ ತಮ್ಮ ಬಿಡುವಿಲ್ಲದ ಕೆಲಸಗಳಿಂದ ಯಾವಾಗಲೂ ತೊಡಗಿಸಿಕೊಂಡಿದ್ದರು.
ಇದರ ಮಧ್ಯೆಯೇ ಅವರ ಇಬ್ಬರೂ ಗಂಡು ಮಕ್ಕಳಿಗೆ ಒಂದೊಂದು ಮಕ್ಕಳೂ ಆದವು, ಆ ಮೊಮ್ಮಕ್ಕಳನ್ನು ನೋಡಿಕೊಂಡು, ಅವರುಗಳ ಜೊತೆ ಸಮಯ ವ್ಯಯಮಾಡುವುದು ತುಂಬಾ ಸಂತೋಷದ ವಿಷಯವಾಯಿತು, ಆಗಾಗ ಅವರ ಮಗಳು, ಅಳಿಯ ಹಾಗೂ ಮೊಮ್ಮಗನೂ ಬಂದು ಎಲ್ಲರೊಡನೆ ಅವರು ಕಾಲ ಕಳೆಯುತ್ತಾ........ಹಾಗೂ ಹೀಗೂ ನಿವೃತ್ತಿ ಯಾಗಿ ಅರುಣಾ ದೇವಿಯವರು ಹದಿನೈದು ವರ್ಷಗಳು ಸಂದವು, ಈಗಂತೂ ಮತ್ತಷ್ಟು ಕೃಷವಾಗಿದ್ದರು, ಹೊರಗಡೆ ಹೋಗೋದು ಸ್ವಲ್ಪ ಕಡಿಮೆ ಮಾಡಿದ ಅವರು ಕೇವಲ ತಮ್ಮ ಕೊಠಡಿಯಲ್ಲಿಯೇ ಕುಳಿತು ಲೇಖನಗಳನ್ನು ಬರೆಯುವುದೂ, ಓದುವುದೂ ಹೆಚ್ಚು ಮಾಡುತ್ತಿದ್ದರು, ಅವರನ್ನು, ಅವರ ಆರೋಗ್ಯವನ್ನು ಗಮನಿಸಲು ಅವರಿಗೆ ಒಬ್ಬ ಸಹಾಯಕಿಯನ್ನು ಇಟ್ಟಿದ್ದರು ಅವರ ಮಕ್ಕಳು, ಕಾರಣ ಅವರ ಕುಟುಂಬದವರು ಆಗಾಗ ಪ್ರವಾಸಗಳಿಗೆ ಹೋಗುತ್ತಿದ್ದರು.
ಹೀಗೆ ಮಕ್ಕಳ ಇಡೀ ಕುಟುಂಬಗಳು ಒಮ್ಮೆ
ಪ್ರವಾಸ ಹೋದ ಸಂದರ್ಭದಲ್ಲಿ ಅರುಣಾ ದೇವಿ ಯವರ ಸಹಾಯಕಿ, ವಿಮಲಾ ಬಾಯಿ ಸಹಾ ತೀವ್ರ ಅನಾರೋಗ್ಯದಿಂದಾಗಿ ರಜೆ ಹಾಕಿದರು, ಈಗ ತನ್ನ ಜೀವನದ ಬಗ್ಗೆ ಮೊದಲಬಾರಿಗೆ ಚಿಂತಿಸುವಂತೆ ಮಾಡಿತು, ಇದುವರೆಗೂ ಈ ಎಪ್ಪತ್ತೈದು ವರ್ಷಗಳ ತುಂಬು ಜೀವನದಲ್ಲಿ ಒಮ್ಮೆಯಾದರೂ ತನ್ನ ಬಗ್ಗೆ ಯೋಚಿಸಿರದ ಅರುಣಾ ದೇವಿಯವರಿಗೆ ಒಂಟಿ ಜೀವನ ಎಂದರೇನು ಎಂದು ಮನವರಿಕೆಯಾಯಿತು.
ಅದರ ಬಗ್ಗೆಯೇ ಒಂದು ಲೇಖನ ಬರೆಯುವ ಮನಸ್ಸಾಯಿತಾದರೂ ಇಂಥಾ ಸಮಯದಲ್ಲಿ ಅದೂ ತಾನೇ ಅನುಭವಿಸುತ್ತಿರುವಾಗ ಹೇಗೆ ಬರೆಯಲು ಸಾಧ್ಯ, ಕೆಲವು ದಿನಗಳು ಕಳೆಯಲಿ ಮುಂದೆ ತನ್ನದೇ ಒಂದು ಜೀವನ ಚರಿತ್ರೆ ಬರೆಯೋಣ ಎನಿಸಿ, ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಹ ತುಂಬಾ ಶ್ರಮಪಡಬೇಕಾಯಿತು, ಆಗ ತನ್ನ ಮಗಳಿಗೆ ಫೋನು ಮಾಡಿದರು ಡಾll ಅರುಣಾ ದೇವಿಯವರು, ಅವರ ಮಗಳು ಅಳಿಯ ಹೈದರಾಬಾದಿಗೆ ಮದುವೆಗೆ ಹೋಗಿರುವುದಾಗಿ ಹೇಳಿದ ಅವರ ಮಗಳು, ತಮ್ಮ ಮಗ, ಅರುಣಾ ದೇವಿಯವರ ಮೊಮ್ಮಗ ಪ್ರಶಾಂತ್ ನಿಗೆ ಹೇಳಿ ಅಜ್ಜಿಯ ಆರೋಗ್ಯ ವಿಚಾರಿಸಿ ಕೊಳ್ಳುವ ಸಲುವಾಗಿ ಕಳಿಸಿದರು.
ಪ್ರಶಾಂತ ಬಂದನಂತರ ಸ್ವಲ್ಪ ಸಮಾಧಾನ ತಂದುಕೊಂಡರು ಅರುಣಾದೇವಿಯವರು, ಅವನೇ ಇವರ ಎಲ್ಲಾ ಕೆಲಸಗಳನ್ನು ಮಾಡುತ್ತಾ ಸಹಾಯ ಮಾಡುತ್ತಿದ್ದನು, ಈಗಂತೂ ಯಾವುದೇ ಸಾಹಿತ್ಯ ಕೆಲಸಗಳನ್ನು ಮಾಡುತ್ತಿರಲಿಲ್ಲ, ಹಾಗೂ ಯಾರೇ ಸಂಪರ್ಕಿಸಿದರೂ ಎಲ್ಲಿಗೇ ಕರೆದರೂ ಅವರು ಹೋಗುವುದಕ್ಕೆ ಆಗುತ್ತಿರಲಿಲ್ಲ, ಅವರ ಮನೆಗೆ ಹಲವಾರು ಜನ, ಇವರ ಅಭಿಮಾನಿಗಳು, ಸಾಹಿತ್ಯಾಸಕ್ತರು ಬಂದು ಇವರನ್ನು ಭೇಟಿಮಾಡಿ ಹೋಗುತ್ತಿದ್ದರು.
ಹೀಗೇ ಸಾಗಿತ್ತು ಅರುಣಾ ದೇವಿಯವರ ದಿನನಿತ್ಯದ ಬದುಕು, ಆಗ ಒಮ್ಮೊಮ್ಮೆ ಅವರ ಮೊಮ್ಮಗ ಪ್ರಶಾಂತ್ , ಇವರನ್ನು ಅವರ ಮನೆಯ ಹತ್ತಿರ ಇರುವ
ಉದ್ಯಾನವನಕ್ಕೆ ವಾಯುಸೇವನೆಗೆಂದು ಕರೆದುಕೊಂಡು ಹೋಗುವ ಪರಿಪಾಠ ಮಾಡಿ, ಅದರಂತೆ ಪ್ರತೀದಿನ ಹೋಗುತ್ತಿದ್ದರು, ಒಂದು ದಿನ ಅನತಿ ದೂರದಲ್ಲಿ ಒಬ್ಬರು ಪುರುಷರು ಒಂದು ಕಾಲು ಹಾಗೂ ಮತ್ತೊಂದು ಕೃತಕ ಕಾಲಿನಲ್ಲಿ ಕುಂಟುತ್ತಾ ಹೋಗುತ್ತಿದ್ದರು, ಅವರೊಡನೆ ಮತ್ತಿಬ್ಬರು ಯುವಕರು ಹೋಗುತ್ತಿದ್ದರು, ಆ ಒಂಟಿ ಕಾಲಿನ ಪುರುಷರು
ಹಾಗೂ ಇತರರು......ಈ ಅರುಣಾದೇವಿಯವರನ್ನು ದೂರದಿಂದಲೇ ನೋಡಿ ಅವರನ್ನು ಮುಖತಃ ಭೇಟಿಯಾಗದೆ ಮತ್ತೊಂದು ಮಾರ್ಗವಾಗಿ ಹೋಗುತ್ತಿದ್ದರು, ಈ ಅರುಣದೇವಿಯವರ ಕಣ್ಣು ಸ್ವಲ ಮಂದವಾಗಿತ್ತು, ಅದರಲ್ಲಿಯೇ ಅವರನ್ನು ಗಮನಿಸಿದರು, ಅವರು ಅರುಣಾದೇವಿಯವರನ್ನು ಮಾತನಾಡಿಸದೇ ಹೋದದ್ದು ತುಂಬಾ ಬೇಸರವಾಯಿತು, ಕಾರಣ ಅರುಣಾ ದೇವಿಯವರು ಉದ್ಯಾನವನಕ್ಕೆ ಬಂದರೆಂದರೆ ಜನರು ಮುತ್ತಿಗೆ ಹಾಕಿ, ಅವರೊಡನೆ ಮಾತನಾಡಲು, ಅವರೊಡನೆ ಫೋಟೋ ತೆಗೆಸಿಕೊಳ್ಳಲು, ತಾವುಗಳು ಬರೆದ ಪುಸ್ತಕಗಳನ್ನು ಓದಲು ಉಡುಗೊರೆಯಾಗಿ ಕೊಡಲು, ಹಾಗೂ ಅರುಣಾ ದೇವಿಯವರು ಈ ಪ್ರಸ್ತುತ ಯಾವ ಪುಸ್ತಕ ಬರೆದಿದ್ದಾರೆ ಎಂದು ವಿಚಾರಿಸಲು, ಅಲ್ಲದೆ ಅವರನ್ನು ತಮ್ಮ ಪುಸ್ತಕ ಬಿಡುಗಡೆಗೆ ಆಹ್ವಾನಿಸಲು ಅವರಿಗೆ ಸನ್ಮಾನಿಸುವುದಕ್ಕೆ ಆಹ್ವಾನಿಸಲು.......... ಹೀಗೆ ನಾನಾ ರೀತಿಯ ಜನರು ಅವರಿಂದ ಸುತ್ತುವರೆಯುತ್ತಿದ್ದರು, ಇದು ಅರುಣಾ ದೇವಿ ಯವರಿಗೂ ತುಂಬಾ ಖುಷಿಯ ವಿಚಾರವಾಗಿತ್ತು, ಆದರೆ......ಅವರ್ಯಾರೋ........ಈ ಹಿಂದೆ ನೋಡಿದ ಆಗಿದೆ, ಆದರೆ ಅವರು ನೋಡಿದರೆ ತನಗೆ ಮುಖ ತೋರಿಸಲು ಹಿಂಜರಿಯುತ್ತಿದ್ದಾರಲ್ಲಾ........
ಅವರ್ಯಾರು ನೋಡು ಸ್ವಲ್ಪ........ನನಗೆ ಕಣ್ಣು ಸ್ವಲ ಮಂಜು ಮಂಜಾಗಿ ಕಾಣ್ತಾ ಇದೆ, ಎಂದು ಪ್ರಶಾಂತನಿಗೆ ಹೇಳಿದರು, ಆಗ ಪ್ರಶಾಂತ..... ಹೇಳಿದನು, ಅವರು ನಮ್ಮ ಮಿಲ್ಟ್ರಿ ಅಜ್ಜ ಅಲ್ವಾ........ಅಜ್ಜಿ, ಅದೇ ಮೇಜರ್ ಮನೋಜ್ ತಾತ...... ಎನ್ನುತ್ತಿದ್ದಂತೆ ಅರುಣಾ ದೇವಿಯವರು ಮತ್ತೆ ನಲವತ್ಮೂರು ವರ್ಷಗಳ ಹಿಂದಕ್ಕೆ ಹೋದರು.
ಅರುಣಾ ದೇವಿಯವರ ವಿವಾಹ ಬ್ಯಾರಿಸ್ಟರ್ ಬಲರಾಂ ಅವರೊಡನೆ ನಿಶ್ಚಯವಾಗಿತ್ತು, ಆಗ ಮೇಜರ್ ಮನೋಜ್ ಅವರ ತಾಯಿ, ಅರುಣಾ ದೇವಿಯವರ ತಂದೆ......ತನ್ನ ಸಹೋದರನಲ್ಲಿ ಮಾತುಕತೆಗೆ ಬಂದಿದ್ದರು, ತನ್ನ ಮಗನಿಗೇ ಅರುಣಾ ದೇವಿಯವರನ್ನು ತಂದುಕೊಳ್ಳಬೇಕು, ಅವರನ್ನೇ ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬ ಅಭಿಲಾಷೆ ಹೊಂದಿದ್ದರು, ಅಂದರಂತೆ ಮೇಜರ್ ಮನೋಜ್ ಅವರ ಹೆತ್ತವರು ಮನೋಜ್ ರವರ ಅನುಪಸ್ಥಿತಿಯಲ್ಲಿ ಮಾತುಕಥೆ ಮಾಡಲು ಬಂದರೆ...... ಅಷ್ಟರಲ್ಲಿ ಬಲರಾಂ ಅವರೊಡನೆ ಮದುವೆ ನಿಶ್ಚಯವಾಗಿದ್ದರಿಂದ ಈ ವಿಷಯದ ಬಗ್ಗೆ ಮಾತನಾಡಲು, ಅರುಣಾ ದೇವಿಯ ಹೆತ್ತವರು ನಿರಾಕರಿಸಿದರು, ಈ ಎಲ್ಲಾ ಬೆಳವಣಿಗೆಗಳಿಂದ ಮೇಜರ್ ಮನೋಜ್ ಅವರ ಕುಟುಂಬದವರು
ಅರುಣಾ ದೇವಿಯವರ ಕುಟುಂಬ ಹಾಗೂ ಬಲರಾಂ ಅವರ ಕುಟುಂಬದೊಡನೆ ಜಗಳವಾಡಿ, ಅವೆರಡೂ ಕುಟಂಬದವರೊಡನೆ ಮಾತುಕಥೆ ನಿಲ್ಲಿಸಿ, ಆ ಇಬ್ಬರೂ ಮದುವೆಗೂ ಯಾರೂ ಬರಲಿಲ್ಲ, ಅಲ್ಲದೇ ಮೇಜರ್ ಮನೋಜ್ ಅವರೂ ತಮ್ಮ ಕೆಲಸಕಾರ್ಯಗಳ ಒತ್ತಡದಲ್ಲಿ ಮುಂದೆ ಮದುವೆಯಾಗಲೂ ಬಯಸಲಿಲ್ಲ, ಅವರು ಒಂಟಿಯಾಗಿಯೇ ಇರಬಯಸಿದರು. ಹೀಗೆ ಮಾತುಕತೆಗಳು ನಿಂತು ಇಂದಿಗೆ ನಲವತ್ಮೂರು ವರ್ಷಗಳು ಸಂದಿವೆ.
ಈ ಮಧ್ಯದಲ್ಲಿ ಅರುಣಾದೇವಿಯವರ ಮದುವೆಯಾಗಿ ಸುಮಾರು ಸುಮಾರು ವರ್ಷಗಳೇ ಸಂದಿರಬೇಕು, ಆಗ ಮೇಜರ್ ಮನೋಜ್ ರವರ ಜೀವನದಲ್ಲಿ ಒಂದು ದುರ್ಘಟನೆ ನಡೆಯಿತು, ಒಮ್ಮೆ ಕಾಶ್ಮೀರದ ಒಂದು ಭಾಗದಲ್ಲಿ ಉಗ್ರರನ್ನು ಸೆರೆಹಿಡಿಯುವ ಸಮಯದಲ್ಲಿ ಮೇಜರ್ ರವರ ಕಾಲಿಗೆ ಗುಂಡು ತಾಗಿ ಒಂದು ಕಾಲನ್ನೇ ಕತ್ತರಿಸಬೇಕಾಗಿ ಬಂದಿತ್ತು, ಅದನ್ನು ಧೈರ್ಯವಾಗಿ ನಿಭಾಯಿಸಿದರು ಮನೋಜ್ ರವರು .
ಈ ವಿಷಯ ಅರುಣಾದೇವಿಯವರಿಗೆ ತಿಳಿದರೂ ಮನೋಜ್ ಅವರನ್ನು ಬಂದು ನೋಡಲಾಗಲಿಲ್ಲ,
ಕಾರಣ ಅಷ್ಟರೊಳಗೆ ಅರುಣಾ ದೇವಿಯವರ ಹಾಗೂ ಮನೋಜ್ ರವರು ಕುಟುಂಬ ಬದ್ಧ ವೈರಿಗಳಾಗಿದ್ದರು, ಇದರಿಂದ ಅರುಣಾ ದೇವಿಯವರು ಮನೋಜ್ ರವರನ್ನು ಒಮ್ಮೆಯೂ ಭೇಟಿಯಾಗುವ ಸಂಭವವೇ ಬರಲಿಲ್ಲ, ////
ಆ ಕಹಿನೆನಪಿನಿಂದ ಮೇಜರ್ ಮನೋಜ್ ರವರು ಡಾll ಅರುಣಾದೇವಿಯವರನ್ನು ಮುಖತಃ ಭೇಟಿಯಾಗಲು ಮನಸ್ಸು ಬಾರದೇ ಹಾಗೇ ಮುಖ ಮರೆಮಾಚಿ ಹೋದದ್ದು ಅರುಣಾದೇವಿಯವರಿಗೆ ಸ್ವಲ್ಪ ಬೇಜಾರಾಗಿತ್ತು, ಆದರೂ ಇಂದಾದರೂ ಅವರನ್ನು ಮಾತನಾಡಿಸಲೇಬೇಕೆಂದೂ, ಅವರು ಕಾಲು ಕಳೆದುಕೊಂಡಾಗಲೂ ಮಾತನಾಡಿಸಲು ಕೆಲವು ಸಮಸ್ಯೆಗಳು ಎದುರಾಗಿದ್ದಿದ್ದರಿಂದ ಈಗಲಾದರೂ ಅವರನ್ನು ಭೇಟಿಯಾಗಲೇಬೇಕೆಂದು ತೀರ್ಮಾನಿಸಿ, ಪ್ರಶಾಂತನ ಮುಖಾಂತರ ಮನೋಜ್ ರವರನ್ನು ಕರೆಯಲು ಕಳಿಸಿ, ತಾವು ಅಲ್ಲಿ ಅವರನ್ನು ನೋಡಲು ಬಂದವರೊಡನೆ ಮಾತನಾಡುತ್ತಾ ಕಲ್ಲಿನ ಬೇಂಚಿನ ಮೇಲೆ ಕುಳಿತರು.
ಪ್ರಶಾಂತ ಓಡಿಹೋಗಿ ಮನೋಜ್ ತಾತ ರವರ ಬಳಿ ಬಂದು " ಮನೋಜ್ ತಾತ........ನಾನು ಡಾll
ಅರುಣಾ ದೇವಿಯವರ ಮೊಮ್ಮಗ" ಅಜ್ಜಿ ಅಲ್ಲಿ ನಿಮಗಾಗಿ , ನಿಮ್ಮನ್ನು ಮುಖತಃ ಭೇಟಿಯಾಗಿ ಮಾತನಾಡಿಸಲು ಕಾತುರರಾಗಿದ್ದಾರೆ, ದಯವಿಟ್ಟು, ಹಳೆಯದೆಲ್ಲವನ್ನು ಮರೆತು ಸ್ವಲ್ಪ ಬನ್ನಿ, ಎಂದು ಅವರನ್ನು ಬೇಡಿಕೊಂಡನು, ಇವನ ಕೋರಿಕೆಗೆ ಅವರ ಜೊತೆಯಲ್ಲಿದ್ದ ಅವರ ಅಣ್ಣನ ಮೊಮ್ಮಕ್ಕಳೂ ಸಹ ಹೇಳಿದರು ತಾತ.......ತಾತ...... ಅರುಣಾ ಅಜ್ಜಿ ಬಂದಿದ್ದಾರಂತೆ, ಅವರ ಹೆಸರು ತುಂಬಾ ಕೇಳಿದ್ದೇವೆ, ಆದರೆ ಅವರನ್ನು ನೋಡೇ ಇಲ್ಲ, ಒಮ್ಮೆ ಅವರನ್ನು ನೋಡೋಣ ಬನ್ನಿ......ಎಂದು ಗೋಗರೆದರು, ಇವರ ಈ ಕೋರಿಕೆಗೆ ಮನೋಜ್ ಅವರೂ ಸರಿ.....ನಡೆಯಿರಿ,
ಎಂದು ನಿಧಾನವಾಗಿ ಕುಂಟುತ್ತಾ ಅವರ ಅಣ್ಣನ ಮೊಮ್ಮಕ್ಕಳು ಹಾಗೂ ಪ್ರಶಾಂತನ ಜೊತೆ ಅರುಣಾ ದೇವಿಯವರ ಬಳಿ ಬಂದರು.
ಮೇಜರ್ ಮನೋಜ್ ಅವರದು ಸೈನ್ಯದ ಸದೃಢವಾದ, ಎತ್ತರವಾದ ಮೈಕಟ್ಟು, ಅಗಲವಾದ ಮುಖ, ದಟ್ಟವಾದ ಮಿಲಿಟರಿ ಮೀಸೆ, ಗಡಸು ಧ್ವನಿ, ನಿವೃತ್ತಿಯಾಗಿ ಇಪ್ಪತ್ತೈದು ವರ್ಷಗಳಾಗಿದ್ದರೂ ಅದೇ ಮೇಜರ್ ಗತ್ತು.
ಅವರು ಅರುಣಿದೇವಿಯವರ ಎದುರಿಗೆ
ಬಂದೊಡನೆ ಅರುಣಾ ದೇವಿಯವರೇ ಎದ್ದು ನಿಂತು ಎರಡೂ ಕೈಗಳನ್ನು ಎತ್ತಿ ನಮಸ್ಕರಿಸಿದರು, ಪ್ರತ್ಯುತ್ತರವಾಗಿ ಮೇಜರ್ ರವರೂ ವಂದಿಸಿದರು.
ಕ್ಷಣಕಾಲ ಅವರುಗಳು ಒಬ್ಬರನ್ನೊಬ್ಬರು ನೋಡುತ್ತಲೇ ನಿಂತರು, ಇಬ್ಬರ ಕಣ್ಣುಗಳಲ್ಲೂ ನೀರು ಧಾರಾಕಾರವಾಗಿ ಹರಿಯಿತು, ತಮ್ಮ ತಮ್ಮ ಹಳೆಯ ನೆನಪುಗಳೆಲ್ಲಾ ಕಣ್ಣು ಮುಂದೆ ಬಂದು ನಿಂತವು. ಇವರಿಬ್ಬರೂ ಸಂಧಿಸಿದ್ದು ಅರುಣಾ ದೇವಿಯವರ ಮದುವೆಗೂ ಮೊದಲು, ಆನಂತರದಲ್ಲಿ ಎಲ್ಲಿಯೂ, ಒಮ್ಮೆಯೂ ಭೇಟಿಯಾಗುವ ಪ್ರಮೇಯವೇ ಬಂದಿರಲಿಲ್ಲ. ಆನಂತರ ಅವರೀರ್ವರೂ ಉಭಯ ಕುಶಲೋಪರಿ ವಿಚಾರಿಸಿದ ನಂತರ ತಮ್ಮ ಜೊತೆಯಲ್ಲಿ ಬಂದಿದ್ದ ಅವರುಗಳ ಮೊಮ್ಮಕ್ಕಳನ್ನು ಪರಿಚಯ ಮಾಡಿಸಿದರು, ಆ ಹುಡುಗರು...... ಅವರುಗಳು ಹುಟ್ಟುವುದಕ್ಕೆ ಮೊದನಿಂದಲೂ ಈ ಎರಡೂ ಸಂಬಂಧಗಳು ತುಂಬಾ ದೂರವಾಗಿದ್ದವು, ಅವರುಗಳಿಗೆ ಒಬ್ಬರನ್ನೊಬ್ಬರು ಪರಿಚಯವೇ ಇರಲಿಲ್ಲ, ಅದೂ ಈ ಅರುಣಾದೇವಿಯವರ ಮದುವೆಯ ವಿಷಯದಲ್ಲಿ ದಾಯಾದಿಗಳ ಕಲಹ ಸುಮಾರು ನಲವತ್ಮೂರು ವರ್ಷಗಳ ಕಾಲ ನಡೆದು, ಈಗ ಒಂದು ಹಂತಕ್ಕೆ ಬಂದು ನಿಂತಿದೆ. ಆದರೆ
ಅರುಣಾ ದೇವಿಯವರಿಗೆ ಹಾಗೂ ಮನೋಜ್ ಅವರ ಅರಿವಿಗೇ ಬಾರದಂತೆ ಮೂರೂ ಮನೆಯ ಹಿರಿಯರ ಮಧ್ಯೆ ಜಗಳ ತಂದಿಟ್ಟಿದ್ದು ನಾಲ್ಕನೆಯವರು, ಅವರುಗಳು ಮಾಡಿದ ಅಚಾತುರ್ಯದಿಂದ, ಹಾಗೂ ಅವರ ತಂದಿಟ್ಟು ತಮಾಷೆ ನೋಡುವ ಬುದ್ಧಿಯಿಂದ ಇಷ್ಟು ದಿನ ಈ ಮೂರೂ ಮನೆಯವರು ತುಂಬಾ ದ್ವೇಷದಿಂದ ಬಹಳ ದೂರ ದೂರವಿದ್ದರು, ಅದು ಇಂದಿಗೆ ಬಹುಷಃ ಮುಗಿಯುವ ಲಕ್ಷಣಗಳು ಗೋಚರಿಸುತ್ತಿತ್ತು.
ಆ ಮೂವರೂ ಮೊಮ್ಮಕ್ಕಳು ಒಂದೆಡೆ ಸೇರಿ ತಮ್ಮ ಸಂಬಂಧಗಳ ಬಗ್ಗೆ ಕುತೂಹಲದಿಂದ ತಿಳಿದುಕೊಳ್ಳುವ ಬಗ್ಗೆ ಹಾಗೂ ಮುಂದೆ ಈ ಮೂರೂ ಸಂಸಾರಗಳನ್ನು ಒಂದು ಮಾಡುವ ಬಗ್ಗೆ ಚರ್ಚಿಸುತ್ತಿದ್ದರು.
ಮೇಜರ್ ಮನೋಜ್ ಹಾಗೂ ಅರುಣಾ ದೇವಿಯವರು ಒಂದು ಕಲ್ಲು ಬೇಂಚಿನ ಮೇಲೆ ಕುಳಿತು ತಮ್ಮ ನಲವತ್ಮೂರು ವರ್ಷಗಳ ಹಿಂದಿನಿಂದ ನಡೆದ ವಿದ್ಯಮಾನಗಳನ್ನೆಲ್ಲಾ ಮೆಲುಕು ಹಾಕತೊಡಗಿದರು, ಅರುಣಾ ದೇವಿಯವರ ಮದುವೆಯ ನಂತರ ಏನೇನೆಲ್ಲಾ ಘಟನೆಗಳು ತಮ್ಮಗಳ ಕುಟುಂಬದಲ್ಲಿ
ನಡೆದವು, ಹಾಗೂ ಇವರಿಬ್ಬರಿಗೂ ಏನೊಂದೂ ತಿಳಿಯದಂತೆ ನಡೆದು ಈ ಮೂರೂ ಕುಟುಂಬಗಳಲ್ಲಿ ಅಂತಃಕಲಹಕ್ಕೆ ಕಾರಣವಾಗಿದ್ದನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಟ್ಟರು.
ಮೇಜರ್ ಮನೋಜ್ ರವರು ತಮ್ಮ ನಿವೃತ್ತಿಯ ಮುಂಚಿನ ದಿನಗಳ ಸೇವೆಯಲ್ಲಿನ ಹಳೆಯ ನೆನಪುಗಳನ್ನು ಅರುಣಾ ದೇವಿಯವರ ಹತ್ತಿರ ಹೇಳಿಕೊಳ್ಳುತ್ತಿದ್ದರು. ಅರುಣಾದೇವಿಯವರೂ ಸಹ ತಮ್ಮ ಜೀವನದ ಅನುಭವಗಳನ್ನು ಹೇಳಿಕೊಂಡರು.
ಅಂದು ಸಮಯ ಬೆಳಗಿನಜಾವ, ಮೇಜರ್ ಮನೋಜ್ ರವರ ಮುಂದಾಳತ್ವದಲ್ಲಿ ಸೈನಿಕರು...... ಉಗ್ರವಾದಿಗಳು ಉಳಿದುಕೊಂಡಿದ್ದ ಹಳೇ ಕಟ್ಟಡದ ಸುತ್ತಲೂ ಸುತ್ತುವರೆದು ಅವರ ಗುಂಡಿನ ದಾಳಿಗೆ ಪ್ರತಿಗುಂಡು ಚಲಾಯಿಸುತ್ತಾ ಒಬ್ಬೊಬ್ಬರೇ ಉಗ್ರವಾದಿಗಳನ್ನು ಬಲಿಪಡೆಯುವತ್ತ ನುಗ್ಗುತ್ತಿರುವ ಸಮಯದಲ್ಲಿ ಸುತ್ತಲೂ ಕಗ್ಗತ್ತಲು , ಇನ್ನೇನು ಎಲ್ಲಾ ಉಗ್ರವಾದಿಗಳನ್ನು ಸದೆಬಡಿದಿದ್ದು, ಒಳಗಿನಿಂದ ಯಾವುದೇ ಪ್ರತಿರೋಧ ಬರದಿದ್ದರಿಂದ ಸ್ವತಃ ಮೇಜರ್ ಅವರೇ ಆ ಹಳೇ ಕಟ್ಟಡದ ಬಾಗಿಲು ಮುರಿದು ಮೊದಲು ಒಳನುಗ್ಗಿದ ಅವರಿಗೆ ಅದಾವುದೋ ಮೂಲೆಯಲ್ಲಿ ಒಬ್ಬ ಭಯೋತ್ಪಾದಕ
ಅವಿತು ಕುಳಿತಿದ್ದನೋ....... ಅವನು ಚಲಾಯಿಸಿದ ಒಂದು ಗುಂಡುಗಳು ನೇರವಾಗಿ ಅವರ ಬಲಭಾಗದ ತೊಡೆ ತೂರಿಕೊಂಡು ಹೋಗಿ ಬಲವಾದ ಆಘಾತವನ್ನು ಉಂಟುಮಾಡಿದವು, ಕೂಡಲೇ ಕುಸಿದುಬಿದ್ದರು, ಮೇಜರ್, ಅಷ್ಟರಲ್ಲಿ ಅವರ ಬೆಂಗಾವಲು ಸೈನಿಕನೊಬ್ಬ ಕೂಡಲೇ ತನ್ನ ಬಂದೂಕಿನಿಂದ ಆ ಉಗ್ರವಾದಿಯ ದೇಹಕ್ಕೆ ಗುಂಡಿಟ್ಟು ಹೊಡೆದುರುಳಿಸಿದನು. ಸುಮಾರು ಏಳೆಂಟು ಉಗ್ರಗಾಮಿಗಳು ಪ್ರಾಣ ಕಳೆದುಕೊಂಡು, ಅವರ ಅಪಾರ ಶಸ್ತ್ರ ಗಳು ಸೈನ್ಯದ ಪಾಲಾಗಿದ್ದವು.
ಕೂಡಲೆ ಮನೋಜ್ ರವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು, ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು, ಮೂರು ದಿನಗಳ ಚಿಕಿತ್ಸೆಯ ನಂತರ ಅಂತಿಮವಾಗಿ ಮೇಜರ್ ಅವರ ಬಲ ಕಾಲನ್ನು ತೊಡೆಯವರೆಗೂ ಕತ್ತರಿಸಿ ತೆಗೆದು ಹಾಕಿದರು,
ಈಗ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೋಜ್ ರವರು ಅಂತಿಮವಾಗಿ ಒಂದು ಕಾಲಿಲ್ಲದೇ ಅಂಗವಿಕಲರಿಗಾಗಿ, ಸೈನ್ಯದಿಂದ ನಿವೃತ್ತಿಯಾಗಿ, ಮನೆಗೆ ಹಿಂದಿರುಗಿ, ವಿಶ್ರಾಂತಿ ಪಡೆಯುತ್ತಿದ್ದರು.
ಅರುಣಾ ದೇವಿಯವರು ಕೇಳಿದರು "ಏಕೆ
ಮದುವೆಯಾಗಲಿಲ್ಲವೇ......ಎಂದು" ಅದಕ್ಕೆ ಮನೊಜ್ ರವರು ಈ ಸೈನ್ಯದ ಬಿಡುವಿರದ ಕೆಲಸಗಳ ಮಧ್ಯದಲ್ಲಿ ಅದೇಕೋ ಮದುವೆ, ಸಂಸಾರದ ಕಡೆಗೆ ಗಮನ ಹೋಗಲೇ ಇಲ್ಲ, ಎಂದರು.
ಆದರೆ ಅರುಣಾ ದೇವಿಯವರ ಪತಿ, ಬಲರಾಂ ಅವರು ಹೃದಯಾಘಾತವಾಗಿ ನಿಧನವಾದದ್ದು ಮನೋಜ್ ರವರಿಗೆ ತಿಳಿದಿತ್ತು, ಆಗ ಅವರು ಕಾಶ್ಮೀರದಲ್ಲಿ ಕರ್ತವ್ಯದ ಮೇಲಿದ್ದರು, ಬಂದು ಅರುಣಾದೇವಿಯವರಿಗೆ ಸಾಂತ್ವನ ಹೇಳಲೂ ಸಾಧ್ಯವಾಗಲಿಲ್ಲ ಎಂದು ಮನೋಜ್ ರವರು ಅರುಣಾದೇವಿಯವರಲ್ಲಿ ಕ್ಷಮೇಕೋರಿದರು.
ಅರುಣಾ ದೇವಿಯವರೂ ಸಹ ಮೇಜರ್ ರವರು ಉಗ್ರವಾದಿಗಳು ವಿರುದ್ಧ ದ ಹೋರಾಟದಲ್ಲಿ ತಮ್ಮ ಕಾಲು ಕಳೆದುಕೊಂಡಿದ್ದಕ್ಕೆ ಹಾಗೂ ಆ ವಿಷಯ ತಮಗೆ ತಿಳಿದಿದ್ದರೂ ಸಹ ಇದುವರೆಗೂ ತಾವು ಮನೋಜ್ ರವರನ್ನು ಒಮ್ಮೆಯೂ ಭೇಟಿಯಾಗದಿದ್ದಕ್ಕೆ ತುಂಬಾ ವ್ಯಥೆ ಪಟ್ಟು ಮನೋಜ್ ರವರಲ್ಲಿ ಕ್ಷಮೆ ಕೋರಿದರು.
ಅರುಣಾ ದೇವಿಯವರು ಹೇಳಿದರು " ಹೋಗಲಿ ಬಿಡಿ, ಎಲ್ಲಾ ಸಂಶಯಗಳು ತಿಳಿಯಾಗುವ ಸಂದರ್ಭ
ಬಂದಿದೆ ಮುಂದಾದರೂ ಎಲ್ಲರೂ ಒಂದಾಗಿ ಬಾಳುವ" ಎಂದು ಹೇಳಿ, ಮನೋಜ್ ರವರು ತಮ್ಮ ಕಾಲು ಕಳೆದುಕೊಂಡಿದ್ದು ತಿಳಿದಿದ್ದರೂ, ಅವರಿಗೆ ಒಮ್ಮೆ ಯೂ ಮನೋಜ್ ರವರನ್ನು ಭೇಟಿಯಾಗಲು ಸಾಧ್ಯವೇ ಆಗಲಿಲ್ಲ, ಕಾರಣ, ಈ ಮದುವೆ ಆದಂದಿನಿಂದಲೂ ಮನೋಜ್ ಅವರ ಕುಟುಂಬದವರು ಅರುಣಾ ದೇವಿ ಹಾಗೂ ಬಲರಾಂ ಅವರು ಕುಟುಂಬದವರೊಂದಿಗೆ ದ್ವೇಷ ಸಾಧಿಸುತ್ತಾ ಬಹಳ ವರುಷಗಳವರೆಗೂ ಅದು ಮುಂದುವರೆದಿತ್ತು, ಅದೂ ಅಲ್ಲದೇ ಅರುಣಾ ದೇವಿಯವರ ಈ ಬಿಡುವಿರದ ಸಾಹಿತ್ಯ ಕೃಷಿ ಹುಲುಸಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಅವರು ತುಂಬಾ ಉತ್ತುಂಗದಲ್ಲಿದ್ದರು ಹಾಗೂ ಅವರಿಗೆ ಈ ಸಂಸಾರಗಳ ತಾಪತ್ರಯಗಳ ಬಗ್ಗೆ ಗಮನವೇ ಇರಲಿಲ್ಲ, ಅಂಥಾ ಸಮಯದಲ್ಲಿ ಈ ಮೇಜರ್ ಮನೋಜ್ ಅವರ ಅಪಘಾತದ ವಿಷಯ ತಿಳಿದು ಮನದಲ್ಲಿ ತುಂಬಾ ನೊಂದಿದ್ದರು. ಆನಂತರದಲ್ಲಿ ಈ ವಿಷಯವನ್ನು ಎಲ್ಲರೂ ಮರೆತಿದ್ದರಿಂದ ಅರುಣಾದೇವಿಯವರೂ ಮರೆತಿದ್ದರು. ಇಂದು ಮನೋಜ್ ರವರನ್ನು ನೋಡುವವರೆಗೂ ಸಹ ಅವರು ತುಂಬಾ ಕಾತರರಾಗಿದ್ದರು.
ತಮ್ಮ ಮೂರೂ ಕುಟುಂಬಗಳ ಮಧ್ಯೆ ನಾಲ್ಕನೆಯವರ ಪ್ರವೇಶದಿಂದ ಈ ನಲವತ್ಮೂರು ವರ್ಷಗಳು, ಒಂದಕ್ಕೊಂದು ಕುಟುಂಬದ ಮಧ್ಯೆ ಬಿರುಕು ಬಿಡಲು ಕಾರಣವಾಗಿದ್ದು ಅದು ಈಗ ಅರ್ಥವಾಗಿತ್ತು.
ಡಾllಅಂಬೆಗಾಲು ಅರುಣಾ ದೇವಿಯವರು ಹಾಗೂ ಮೇಜರ್ ಮನೋಜ್ ಅವರ ಮಧ್ಯಸ್ಥಿಕೆಯಲ್ಲಿ ಬ್ಯಾರಿಸ್ಟರ್ ಬಲರಾಂ ಅವರ ಕೂಟುಂಬದವರನ್ನೂ ಮನವೊಲಿಸಿ ಮೂರೂ ಕುಟುಂಬಗಳ ಅಷ್ಟೂ ಮಂದಿ, ಅಂದರೆ ಸುಮಾರು ನೂರು ಮಂದಿ, ಒಂದು ದಿನ ಔತಣಕೂಟ ಏರ್ಪಡಿಸಿ ಸಂತೋಷದಿಂದ ತಮ್ಮ ತಮ್ಮ ಮನಸ್ತಾಪಗಳನ್ನು ಮರೆತು ಮತ್ತೆ ಮೊದಲಿನಂತೆ ಸಂಬಂಧಿಕರಾದರು.
-ರಾಜೇಂದ್ರ ಕುಮಾರ್ ಗುಬ್ಬಿ
ಕನಸುಗಳ ಕಥೆಗಾರ
]]>ಸುಮಿತ್ರೆಯನ್ನು ಮನೆಗೆ ಕರೆದುಕೊಂಡು ಹೋದದ್ದು ಏಡವಟ್ಟಾಯಿತು ಎಂಬುದು ತಿಳಿಯಲು ಫಿಲಿಪ್ ಕಾರ್ಡೆರೋಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಆ ಮಧ್ಯಾಹ್ನ, ಸೋಫಾದ ಎಡ ಮೂಲೆಯಲ್ಲಿ ಕುಳಿತು, ಬಲ ಮೂಲೆ ತುದಿಯಲ್ಲಿ ಮುದುರಿ ಕುಳಿತಿದ್ದ ಸುಮಿಯೆಡೆಗೆ ಕುತ್ತಿಗೆಯನ್ನಷ್ಟೇ ತಿರುಗಿಸಿ "ಯಾವ ಊರು?", "ತಂದೆಗೆಂತ ಕೆಲಸ?", "ಇವ ಹೇಗೆ ಗೊತ್ತು?", ಮೊದಲಾದ ಪ್ರಶ್ನೆಗಳನ್ನು ಒಂದಾದರೊಂದಂತೆ ಎಸೆಯುತ್ತಿದ್ದ ಮಮ್ಮಿಯ ಮುಖದಲ್ಲಿದ್ದ ಭಯಂಕರ ಅಸಡ್ಡೆ ಕಂಡಿದ್ದೇ ಕೆಲಸ ಕೆಟ್ಟಿದ್ದು ತಿಳಿಯಿತು. ಮಮ್ಮಿಯನ್ನು ನೋಡಲೂ ಧೈರ್ಯವಿಲ್ಲದೇ ಬೆಕ್ಕಿನ ಪಕ್ಕದಲ್ಲಿ ಬೆದರಿ ಕುಳಿತ ಇಲಿ ಮರಿಯಂತೆ ಕಾಣುತ್ತಿದ್ದ ಸುಮಿ, ಇವನು "ಹೊರಡುವಾ?" ಎಂದದ್ದೇ, ಬದುಕುಳಿದರೆ ಬೇಡಿಕೊಂಡು ತಿಂದೇನು ಎಂಬಂತೆ ಧಬ್ಬಲ್ಲನೆ ಎದ್ದಳು. ಅಲ್ಲೇ ಗೋಡೆಗೊರಗಿ ನಿಂತು, ಎಲ್ಲವನ್ನೂ ನೋಡುತ್ತಿದ್ದ ಇವನ ತಂಗಿ ಎಡ್ವಿನಾ ಕಿಸಕ್ಕನೇ ನಕ್ಕಳು. ಸುಮೀ ಹೊರಡುವಾಗ, "ಆಂಟೀ, ಹಲಸಿನ ಕಾಯಿ ಪಲ್ಯ ತುಂಬ ಚೆನ್ನಾಗಿತ್ತು" ಎಂದಳು. ಆಗ ಮಮ್ಮಿ, ಉದಾಸೀನದ ಮುಖಭಾವದಲ್ಲಿಯೇ, "ಎಂತ ಚಂದವೋ, ಉಪ್ಪೇ ಇರಲಿಲ್ಲ" ಎಂದದ್ದೇ ಇವನು ತಲೆ ಚಚ್ಚಿಕೊಂಡ. ಸುಮಿಯ ಜೊತೆಗೇ ಹೊರಟವನಿಗೆ, "ಅವಳಿಗೆ ಹೋಗ್ಲಿಕ್ಕೆ ಗೊತ್ತಾಗ್ತದಲ್ಲಾ, ನೀ ಎಂತಕ್ಕೆ" ಎಂದು ಗದರಿದಳು. ದೊಡ್ಡ ದನಿಯಲ್ಲಿ ನಗುತ್ತ ಮಾತನಾಡುವ ಮಮ್ಮಿ ಹೀಗೆ ದಿಗಿಲಿಕ್ಕಿಸುವ ಹೆಂಗಸಾಗಿ ಬದಲಾಗಿದ್ದನ್ನು ನೋಡಿ ಭಯವಾಗಿ ಮನೆಯಲ್ಲೇ ಉಳಿದನು. ಆನಂತರ ಮನೆಯಲ್ಲಿ ಸುಮಿಯ ಬಗ್ಗೆ ಹೆಚ್ಚಿನ ಮಾತಾಗಲಿಲ್ಲ. ಆಗಾಗ ಇವನನ್ನು ನೋಡಿ ವ್ಯಂಗ್ಯವಾಗಿ ನಗುತ್ತಿದ್ದ ಎಡ್ವಿನಾ, ಸಂಜೆ ಅಪ್ಪ ಬಂದಾಗ "ಫಿಲಿಯ ಲೌ ಕೇಸು ಬಂದಿತ್ತಲ್ಲಪ್ಪ ಇವತ್ತೂ" ಎಂದು ವರದಿಯೊಪ್ಪಿಸಿದ್ದಳು.
ಮಮ್ಮಿ ಅಪ್ಪ ಕೂಡ ಪ್ರೀತಿಸಿಯೇ ಮದುವೆಯಾದವರು ಎಂಬ ಉಮೇದಿನಲ್ಲಿ ಸುಮಿಯ ಬಗ್ಗೆ ಮನೆಯಲ್ಲಿ ತಿಳಿಸುವ ಹುರುಪಿನಲ್ಲಿದ್ದವ, ಹಿಂದಿನ ಸಂಜೆ, "ಮಮ್ಮಿ, ನಿಮ್ಮದು ಆ ಕಾಲದಲ್ಲೇ ಲೌ ಮ್ಯಾರೇಜಲ್ಲಾ..." ಎಂದಾಗ ಇರುಸು ಮುರಿಸುಗೊಂಡ ಮಮ್ಮಿ "ಎಂತ ಇಲ್ಲ, ಯಾರು ಹೇಳಿದ್ದು?" ಎಂದ ಬೆನ್ನಿಗೇ, "ಆ ಕಾಲದಲ್ಲಿ ಪ್ರೀತಿಗೆಲ್ಲ ಬೆಲೆ ಇತ್ತು, ಈಗೆಂತ ಇಲ್ಲ" ಎಂದಿದ್ದಳು. ಅವಳು ಬಂದು ಹೋದ ರಾತ್ರಿ ಊಟದ ನಂತರ ಮಾತು ತೆಗೆದವನ ಕಡೆಗೆ ನೋಡದೇ, "ನಿನಗೆಂತ ಅವಸರ. ನಾವು ಯೋಚಿಸುದು ಬೇಡ್ವಾ!" ಎಂದು ಎದ್ದು ಹೋದಳು. ಅಪ್ಪ ಎಂದಿನಂತೆ ಹೆಚ್ಚು ಮಾತಿಲ್ಲದೇ ಸುಮ್ಮನಿದ್ದರು. ಮೊದಲೆರೆಡು ದಿನ ಬಿಗುವಿನಲ್ಲಿದ್ದ ಮಮ್ಮಿ ಕ್ರಮೇಣ ಸರಿಹೋಗುವ ಲಕ್ಷಣ ತೋರಿತು. ಎಡ್ವಿನಾಳಿಗಾಗಿ ಮಟನ್ ಕೈಮಾ ಮಾಡುವ ತಯಾರಿಯಲ್ಲಿದ್ದವಳು, ಬಿಸಿಲಿನಲ್ಲಿ ಹರವಿದ್ದ ಹಾಸಿಗೆಗಳನ್ನು ಕೋಲಿನಿಂದ ಬಡಿಯುತ್ತಿದ್ದವನ ಬಳಿ ಬಂದು, "ಅವಳ ಹೆಸರೇನೆಂದೆ? ಸುಚಿತ್ರವೋ, ಸುನೇತ್ರವೋ?" ಎಂದು ವಿಚಾರಿಸಿ, "ಅವಸರ ಮಾಡ್ಲಿಕ್ಕಿಲ್ಲ, ನೋಡ್ವನ ಮುಂದೆ" ಎಂದು ಹೋದಳು.
ಎಲ್ಲವನ್ನೂ ಗಮನಿಸುತ್ತ, ಪೋಕರಿ ಮಕ್ಕಳಂತೆ ಇವನ ಕಾಲೆಳೆದುಕೊಂಡಿದ್ದ ಎಡ್ವಿನಾ, ಸುಮಿಯ ಕುರಿತು ಮಮ್ಮಿ ಮತ್ತು ಅಪ್ಪನ ನಿಲುವು ಮೆತ್ತಗಾಗಿದೆ ಎಂದು ತಿಳಿದದ್ದೇ, ಹೊಸತೇ ಕಿರಿಕಿರಿ ಶುರುಮಾಡಿದಳು. ಒಮ್ಮೆ ಥಟ್ಟನೇ, "ನಿಮ್ಮಮ್ಮನ ಹೆಸರು ಗೊತ್ತೇನಾ ನಿಂಗೇ?" ಎಂದು ಕೇಳಿಬಿಟ್ಟಳು. ಮಮ್ಮಿ ಏನೂ ಕೇಳದವಳಂತೆ ನಟಿಸುತ್ತಾ, ದಿನಪತ್ರಿಕೆಯನ್ನು ಅತಿಯಾದ ಏಕಾಗ್ರತೆಯಲ್ಲಿ ಓದುತ್ತಿದ್ದಳು. "ನಿಂಗೆ ನಿನ್ನ ಬಯಲಾಜಿಕಲ್ ಪೇರೆಂಟ್ಸಿನ ಮೇಲೆ ಪ್ರೀತಿ ಉಂಟಾ?", "ಅಮ್ಮನ ಹೆಸರೂ ಗೊತ್ತಿಲ್ಲವಾ?, ಶೇ ಪಾಪ", "ಸತ್ಯ ನೆನಪಿಲ್ವೇನಾ, ಎಂತಾರ ನೆನಪಿದ್ದೇ ಇರ್ತದೆ, ಹೆತ್ತ ಅಮ್ಮ" ಎಂದೆಲ್ಲ ಕಾಡುತ್ತಿದ್ದವಳನ್ನು ಮಮ್ಮಿ "ಏ ಹುಡುಗಿ, ಎಂತದೇ ಅದು ನಿನ್ನ ಕರ್ಮ" ಎಂದು ಗಂಟಲು ಮಾಡಿ ಸುಮ್ಮನಾಗಿಸಿದ್ದಳು. ಆದರೂ ಆ ರಾತ್ರಿ ಊಟ ಮುಗಿಸಿ ಕುಳಿತಿದ್ದವನ ಹತ್ತಿರ ಬಂದ ಎಡ್ವಿನಾ, "ಎಂತದಾ, ನಿನ್ನಮ್ಮನ ಹೆಸರು ಬೇಡ್ವೇನಾ ನಿಂಗೇ?" ಎಂದು ಗದರಿಸುವಂತೆ ಕೇಳಿದಳು. ಇವನಿಗೆ ರೇಗಿತು "ಏಯ್! ಎಂತದೇ! ಯಾವ ಅಮ್ಮನ ಹೆಸರು? ಬೇಡ ನನಗೆ, ಹೋಗೆ ಆಚೆ" ಎಂದು ಕೂಗಿಬಿಟ್ಟ. ಒಂದು ಕ್ಷಣ ಅಪ್ರತಿಭಳಾದಂತೆ ಕಂಡವಳು, "ಯಾರಿಗಾ ಹೋಗು ಅನ್ನದು ನೀನೂ? ಎಂತದಾ? ನನ್ನ ಅಮ್ಮನ ಮನೆಯಿಂದ ನಾನು ಹೋಗಬೇಕನಾ? ನನ್ನ ಸ್ವಂತ ಅಪ್ಪನ ಮನೆಯಿಂದ ಹೋಗಬೇಕನಾ? ಇದು ನನ್ನ ಮನೆ! ಬೇಕಾದ್ರೆ ನೀ ಹೋಗು" ಎಂದು ಕಿರುಚಿ ಸೋಫಾದ ಮೇಲೆ ಧೊಪ್ಪೆಂದು ಕುಳಿತಳು.
ತಾನು ಮಮ್ಮಿ ಡ್ಯಾಡಿಯ ಸ್ವಂತ ಮಗನಲ್ಲ ಎಂಬ ವಿಚಾರ ಅವನಿಗಾಗಲೀ, ಎಡ್ವಿನಾಗಾಗಲೀ ಹೊಸತೇನಲ್ಲ. ಚಿಕ್ಕವರಿದ್ದಾಗ ಜಗಳವಾದಾಗಲೆಲ್ಲ, 'ನಿನ್ನನ್ನು ಕೆಂಗೇರಿ ಮೋರಿಯಿಂದಲ್ಲವಾ ತಂದದ್ದು" ಎಂದೆಲ್ಲ ಎಡ್ವಿನಾ ಮೂದಲಿಸುತ್ತಿದ್ದಳಾದರೂ, ಅದನ್ನೆಲ್ಲ ಇವನು ತಲೆಗೇ ಹಚ್ಚಿಕೊಂಡಿರಲಿಲ್ಲ. ಏಳವೆಯಿಂದಲೂ ತಾಯಿ ತಂದೆ ಎಂದಾಗ ಮಮ್ಮಿ ಮತ್ತು ಅಪ್ಪನ ಚಿತ್ರಗಳೇ ಮೂಡುತ್ತಿದ್ದುವು. ದೊಡ್ದವರಾದಂತೆ ಅವರಿಬ್ಬರ ನಡುವಿನ ಜಗಳಗಳು ವಿವಿಧ ನಿರುಪದ್ರವೀ ರೂಪಗಳನ್ನು ತಾಳಿದ್ದವಾದರೂ, ಮತ್ತೆಂದಿಗೂ ಅವಳು ತಾನು ಸಾಕುಮಗುವೆಂಬ ವಿಚಾರ ಎತ್ತಿರಲಿಲ್ಲ. ಆದರೀಗ, ಏಕಾಏಕಿ ಅದೇ ವಿಚಾರವನ್ನು ಕೆದಕಿ ಹೂಂಕರಿಸುತ್ತಿದ್ದ ಅವಳ ಪರಿ ಬೇರೆಯದೇ ಎನಿಸಿತು. ಮಮ್ಮಿಯ ದೂರದ ಸಂಬಂಧಿಕಳಾಗಿದ್ದ, ರೋಸಮ್ಮ ಎಂಬ ತನ್ನ ತಾಯಿಯಯ ಬಗ್ಗೆಯಾಗಲೀ, ಅವಳ ಗಂಡನ ಬಗ್ಗೆಯಾಗಲೀ ಇವನಿಗೆ ಸರಿಯಾಗಿ ತಿಳಿದಿರಲಿಲ್ಲ, ಅವಳು ಬಾಣಂತಿ ಸನ್ನಿಯುಂಟಾಗಿ ಸತ್ತು ಹೋಗಿದ್ದಳು ಎಂಬುದಷ್ಟೇ ಅವನಿಗೆ ತಿಳಿದಿದ್ದುದು. ಅದನ್ನೂ ಮೀರಿದ ವಿಚಾರಗಳು ಮುಖ್ಯವೆನಿಸಿರಲೇ ಇಲ್ಲ. ಆದರೆ, ಇಂದು ಹೊತ್ತಲ್ಲದ ಹೊತ್ತಲ್ಲಿ ತನ್ನೆದುರು ಬಂದಿದ್ದ ಈ ಅನಗತ್ಯ ಸತ್ಯವನ್ನು ಹೇಗೆ ನಿಭಾಯಿಸುವುದೋ ತಿಳಿಯದೇ ತೊಳಲಿದ ಫಿಲಿಪನಿಗೆ ತನ್ನ ಮನೆಯ ಗರಂ ಮಸಾಲ, ಬಂಗುಡೆ ಸಾರು, ಗುಜ್ಜೆ ಸುಕ್ಕೆ, ಪ್ಲಂ ಕೇಕುಗಳವೇ ಮೊದಲಾದ ಪರಿಮಳಗಳ ನಡುವೆ ರೋಸಮ್ಮಳ ಅಜ್ನಾತ ಸುಗಂಧವೊಂದು ನುಸುಳಿದಂತಾಗಿ ಕಸಿವಿಸಿಯಾಯಿತು.
ಲ್ಯಾನ್ಗ್ಫರ್ಡ್ ರಸ್ತೆಯು ಹೊಸೂರು ರಸ್ತೆಯನ್ನು ಸೇರುವೆಡೆಯಲ್ಲಿ ಬಲಕ್ಕೆ ಹೊರಳಿ, ಕೊಂಚ ದೂರ ಸಾಗಿ ಬಲಭಾಗದಲ್ಲಿ ಗೋಚರವಾಗುವ ಕ್ರೈಸ್ತರ ಸ್ಮಶಾನದೊಳಗೆ ಬೇಸಗೆಯ ಆ ಮಧ್ಯಾಹ್ನ ಗೋರಿಗಳಿಗೆಲ್ಲ ಬಿಸುಲಿನ ಸ್ನಾನವಾಗುತ್ತಿತ್ತು. ಕಾಂಪೌಂಡಿನ ಅಂಚಿನಲ್ಲಿರುವ ಗೋರಿಗಳ ಹೆಸರುಗಳನ್ನೂ ಓದುತ್ತಾ ಮುಂದುವರೆಯುತ್ತಿದ್ದ ಫಿಲಿಪನ ಹಿಂದೆ ಕಾಲೆಳೆದುಕೊಂಡು ಸಾಗುತ್ತಿದ್ದ ಸುಮೀ, ತಿಳಿ ಹಳದಿ ಕುರ್ತಾದಲ್ಲಿ ಬಿಸಿಲಿನ ತುಣುಕಿನಂತೆ ಕಾಣುತ್ತಿದ್ದಳು. ಅವನ ಜೊತೆ ಹರಟೆ ಹೊಡೆಯಲು ಪ್ರಯತ್ನಿಸಿ ಬೇಸರವಾಗಿ, ಅಲ್ಲಿದ್ದ ಪಾಚಿ ಬೆಳೆದಿದ್ದ ಗೋರಿಯೊಂದರ ಮೇಲೆ ಕುಳಿತುಕೊಂಡಳು. ಮುಂದಿನವರೆಗೆ ಹೋಗಿದ್ದ ಫಿಲಿಪ, ಇವಳು ಹಿಂದೆಯೇ ಉಳಿದ್ದದ್ದನ್ನು ಗಮನಿಸಿ ಬಂದು ಪಕ್ಕ ಕುಳಿತುಕೊಂಡ. ಸ್ವಲ್ಪ ಸುಮ್ಮನಿದ್ದು, "ಈ ಸಾರ್ತಿಯಾದರೂ ಒಪ್ಪಿಸಬೇಕಿತ್ತು ನಿನ್ನ ಮನೆಯವರನ್ನು! ಮನೆಯಲ್ಲಿ ನೆಪ ಹೇಳಿ ಸಾಕಾಗಿದೆ”, ಎಂದಳು. ಇವನಿಗೆ ಏನೆನ್ನಬೇಕೆಂದು ತಿಳಿಯಲಿಲ್ಲ. ಗಿಡ್ಡ ನೀಲಿ ಜೀನ್ಸು ತೊಟ್ಟ ಕಾಲುಗಳ ಮೇಲೆ ಕಡುಗಂದು ಹ್ಯಾನ್ ಬ್ಯಾಗನ್ನಿಟ್ಟುಕೊಂಡು ಬಳಲಿದಂತೆ ಮಾತನಾಡುತ್ತಿದ್ದ ಸುಮಿ, ಬರುವ ಖಾತ್ರಿಯಿಲ್ಲದ ಬಸ್ಸು, ಬಂದೇ ಬಂದೀತೆಂಬ ಕೆಚ್ಚಿನಲ್ಲಿ ಗಂಟೆಗಟ್ಟಲೇ ಹಸಿವು ನಿದ್ರೆ ದಣಿವುಗಳನ್ನೂ ಲೆಕ್ಕಿಸದೇ ಒಬ್ಬಂಟಿ ನಿಲ್ದಾಣದಲ್ಲಿ ಮತ್ತಷ್ಟು ಒಬ್ಬಂಟಿಯಾಗಿ ಕಾಯುತ್ತ ಕುಳಿತವಳಂತೆ ಕಂಡಳು.
ರೋಸಮ್ಮಳ ಪೂರ್ತಿ ಹೆಸರಾಗಲೀ, ಅವಳನ್ನು ಎಲ್ಲಿ ಮಣ್ಣು ಮಾಡಿದ್ದಾರೆ ಎಂಬುದಾಗಲೀ, ಮತ್ತಾವುದೇ ವಿವರವಾಗಲೀ ಒಂದೂ ಗೊತ್ತಿಲ್ಲದೇ, ಅದನ್ನೆಲ್ಲ ಮನೆಯಲ್ಲಿ ಕೇಳುವ ಮನಸ್ಸೂ ಆಗದೇ ಒಂದು ಅಂದಾಜಿನಲ್ಲಿ ಶಾಂತಿನಗರದ ಈ ಸ್ಮಾಶಾನಕ್ಕೆ ಬಂದವನಿಗೆ ನೂರಾರು ಸಾಲುಗಳಲ್ಲಿ ಹರಡಿಕೊಂಡಿದ್ದ ಸಾವಿರಾರು ಗೋರಿಗಳ ನಡುವೆ ಅಂಚೆಲ್ಲ ಮಾಸಿ ಹರಿದು ನಡುವಿನ ಪದಗಳಷ್ಟೇ ಉಳಿದಿದ್ದ ಹಾಳೆಯೊಂದರಲ್ಲಿದ್ದಷ್ಟೇ ವಿವರಗಳೊಂದಿಗೆ ರೋಸಮ್ಮಳನ್ನು ಹುಡುಕುವುದು ಸಾಧ್ಯವಿಲ್ಲದ ಮಾತೆಂಬ ಅರಿವು ಬಂದ ಕೂಡಲೇ ಆಗಿತ್ತು. ಸ್ವಲ್ಪ ಹೊತ್ತಿಗೇ, ರೋಸಿ, ರೋಸ್, ರೋಸಿ ಮೇರಿ, ರೋಸಮ್ಮ ಎಂಬ ಹೆಸರಿನ ಫಲಕಗಳಿದ್ದ ಹಲವಾರು ಗೋರಿಗಳು ಸಿಕ್ಕವು, ಅವುಗಳಲ್ಲಿ ಎಷ್ಟೋ ಗೋರಿಗಳಡಿಯಲ್ಲಿ ಮಲಗಿದ್ದವರು ಇವನು ಹುಟ್ಟಿದ ವರ್ಷವೇ ತೀರಿಕೊಂಡಿದ್ದರು. ಹುಟ್ಟಿದ ಮತ್ತು ಸತ್ತ ಇಸವಿಗಳು ನಮೂದಾಗಿರದ ರೋಸಮ್ಮಂದಿರೂ ಇದ್ದರು. "ಕೆಲವೇ ಕಾಲ ನಮ್ಮೊಡನಿದ್ದು ಬದುಕು ಬದಲಿಸಿದ" ಒಂದು ವರ್ಷದ ರೋಸಿ, 'ಸದಾ ಆಶೀರ್ವದಿಸುತ್ತಿರು'ವ ತೊಂಬತ್ತೆರಡ ರೋಸಿ ಮೇರಿಯಮ್ಮ, 'ಪ್ರಭುವಿನಲ್ಲಿ ಲೀನಳಾದ ದೇವತೆ' ಯಾಗಿದ್ದ ನಲವತ್ತಾರರ ಡೆಲ್ಲಾ ರೋಸಿಯರ ಜೊತೆಗೆ, ಹೆಸರನ್ನಷ್ಟೇ ಕೆತ್ತಿಸಿಕೊಂಡಿದ್ದ ರೋಸಲಿನ, ರೋಸ್ ಜೇನ್, ರೋಸ್ ಡಿಮೆಲ್ಲೋರೆಲ್ಲರ ನಡುವೆ ತನ್ನ ಅಜ್ನಾತ ತಾಯಿಯನ್ನು ಹುಡುಕುವ ಕೆಲಸ ನಿಷ್ಫಲವಲ್ಲದೇ ಇನ್ನೇನಾಗಲು ಸಾಧ್ಯವಿತ್ತು?
ಬಿಸಿಲಿನಲ್ಲಿ ಕುಳಿತು ಮುಖ ಕೆಂಪಗಾಗಿದ್ದ ಸುಮಿ, ಮೈ ಬೆವೆತದ್ದರಿಂದ, ಕೂದಲನ್ನು ಮೇಲಕ್ಕೆ ಬಾಚಿ ತುರುಬಿನಂತೆ ಕಟ್ಟಿಕೊಂಡಿದ್ದಳು. ಮಧ್ಯಾಹ್ನವು ಸಂಜೆಯ ತೆಕ್ಕೆ ಸೇರುವಾಗ ಅವಳೊಂದಿಗೆ ಸ್ಕೂಟರಿನಲ್ಲಿ ಹೊರಟ ಫಿಲಿಪನಿಗೂ ದಣಿವಾಗಿತ್ತು. ಸ್ಕೂಟರ್ ಓಡಿಸುತ್ತಿದ್ದವಳ ಮೈಯಿಂದ ಬರುತ್ತಿದ್ದ ಬೆವರು ಬೆರೆತ ಮಂದವಾದ ಪರಿಮಳ ಹಿತವೆನಿಸಿತು. ಅವಳ ಉದ್ದನೇ ಕತ್ತಿನ ಸುತ್ತಲಿನ ಸಣ್ಣ ಸಣ್ಣ ಗೆರೆಗಳು ಸಂಜೆಯ ತಿಳಿಬೆಳಕಿನಲ್ಲಿ ಮುದ್ದಾಗಿ ಕಾಣಿಸಿದುವು. ಅವನನ್ನು ಮನೆಯಿಂದ ಸ್ವಲ್ಪ ದೂರ ಇಳಿಸಿ "ಸೋಮವಾರ ಹನ್ನೆರಡಕ್ಕೆ ಫ್ಲೈಟು" ಎಂದಳು. ಅವಳು ದಿಲ್ಲಿಯ ತನ್ನ ಇನ್ಸ್ಟಿಟ್ಯೂಟಿಗೆ ಹೊರಡುವ ದಿನ ಇನ್ನೇನು ಬಂತು ಎಂಬುದು ನೆನಪಾಗಿ ಫಿಲಿಪನಿಗೆ ನೋವಾಯಿತು. ಹೊರಡುವುದಕ್ಕೆ ಮುಂಚಿನ ಕೆಲವು ದಿನಗಳನ್ನಾದರೂ ಅವಳಿಗಿಷ್ಟವಾಗುವಂತೆ ಕಳೆಯಲಾಗಲೇ ಇಲ್ಲ ಎನಿಸಿ, "ಸಾರಿ ಸುಮೀ,.. ಎನ್ನಹೊರಟವನು ತಡೆದು, "ಐ ವಿಲ್ ಮಿಸ್ ಯು' ಎಂದ. "ಅಯ್ಯೋ ನಾಳೆಯ ನಂತರ ಮಿಸ್ ಮಾಡಿಕೊ, ನಾಳೆ ಸಿಗೋದಿದೆ ಇನ್ನು" ಎಂದು ನಕ್ಕಳು. "ಮಧ್ಯಾಹ್ನ ಉಟಕ್ಕೆ ಸಿಗೋಣ! ಸಿಮಿಟ್ರಿ ಹತ್ತಿರ, ಕೆಫೆ ಎಟ್ ಸಾಂಚಿಯಲ್ಲಿ, ಮೈ ಟ್ರೀಟ್" ಎನ್ನುವಷ್ಟರಲ್ಲಿ ಗಾಡಿ ಶುರು ಮಾಡಿ ಮುಂದೆ ಸಾಗಿದ್ದವಳು 'ಸರಿ' ಎಂಬಂತೆ ಕೈ ಎತ್ತಿದಳು.
ಸಂಜೆಯ ಬಾಂಗಿನ ಹೊತ್ತಿಗೆ ಮನೆಗೆ ಮರಳಿದಾಗ, ಗೇಟಿನ ಕಂಬಕ್ಕೊರಗಿ ಅಪ್ಪ ನಿಂತಿದ್ದರು. ಹತ್ತಿರ ಬಂದಾಗ ತಂಬಾಕಿನ ಘಾಟಿನ್ನೂ ಗಾಳಿಯಲ್ಲಿತ್ತು. ಮಮ್ಮಿ ವರಾಂಡಾದ ಮೆಟ್ಟಿಲಿನ ಮೇಲೆ ಕಾಲು ಚಾಚಿ ನೈಟೀಯನ್ನು ತೊಟ್ಟಿಲಿನಂತೆ ಮಾಡಿಕೊಂಡು ಅದರಲ್ಲಿ ತಾನು ಊಟ ಹಾಕುವ ಬೆಕ್ಕಿನ ಮರಿಯನ್ನು ಮಲಗಿಸಿಕೊಂಡು ಆಟವಾಡಿಸುತ್ತಿದ್ದಳು. ಕರ್ರಗಿನ ಉಣ್ಣೆಯ ಉಂಡೆಯಂತಹ ಆ ಮರಿ ಅವಳ ಹಳದಿ ಸ್ವೆಟರಿನ ತೋಳುಗಳನ್ನು ಕಚ್ಚುತ್ತಾ ಆಡುತ್ತಿತ್ತು. ಸ್ವಲ್ಪ ದೂರದಲ್ಲಿ ಅದರ ತಾಯಿ, ಕಪ್ಪು ಬಿಳುಪಿನ ದೊಡ್ಡ ಬೆಕ್ಕು ಹಿಂಗಾಲುಗಳ ಮೇಲೆ ಕುಳಿತು ಮುಂಗಾಲುಗಳನ್ನು ನೆಕ್ಕಿಕೊಳ್ಳುತ್ತಿತ್ತು. ಇವನು ಬಂದ ಸದ್ದಿಗೆ ಬೆಕ್ಕುಗಳು ಓಡಿಹೋದವು. ಮಮ್ಮಿ ಎದ್ದು, 'ಇವ ಬಂದ, ಕಾಫಿಗಿಡ್ತೇನೆ' ಎನ್ನುತ್ತಾ ಒಳಹೋದಳು. ಮೊದಲೆಲ್ಲ, ವರ್ಷಗಟ್ಟಲೆಯಿಂದ ಒಂದೇ ರೀತಿಯಲ್ಲಿ ಶುರುವಾಗಿ ಒಂದೇ ಬಗೆಯಲ್ಲಿ ಮುಗಿಯುವ ದೈನಿಕದ ಲಯಕ್ಕೆ ಶೃತಿಗೊಂಡಿರುವ ಮಮ್ಮಿ ಡ್ಯಾಡಿಯದ್ದು ಅತ್ಯಂತ ನೀರಸ ದಾಂಪತ್ಯ ಎನಿಸುತ್ತಿತ್ತು ಫಿಲಿಪನಿಗೆ. ಒಮ್ಮೊಮ್ಮೆ ಅವರಿಬ್ಬರೂ ಒಂದೇ ಬಸ್ಸಿನಲ್ಲಿ ಸುಧೀರ್ಘ ಪ್ರಯಾಣ ಹೊರಟ ಸಹಪ್ರಯಾಣಿಕರಂತೆ ಕಾಣುತ್ತಿದ್ದರು. ಆದರೆ, ಸುಮಿ ಹತ್ತಿರಾದಾಗಿನಿಂದ ಆ ನೀರಸ ಯಾನಕ್ಕೂ ಮಧ್ಯಾಹ್ನದ ಸಣ್ಣ ನಿದ್ರೆಗಿರುವ ಚೆಲುವಿದೆ ಎನಿಸತೊಡಗಿತ್ತು. ತಿಂಗಳುಗಟ್ಟಲೇ ಓಡಿಸದೇ ಬಿಟ್ಟ ಬೈಕಿನ ಮೇಲೆ ಅಪ್ಪನಿಗೆ ಎಂದಾದರೊಮ್ಮೆ ಪ್ರೀತಿ ಬಂದು ಅದರ ಅಂಗಾಂಗಳನ್ನೆಲ್ಲ ತಿಕ್ಕುತ್ತಾ ಕುಳಿತಾಗ ಅಮ್ಮ ಆ ವಾಹನ ಸ್ನಾನವನ್ನು ನೋಡುತ್ತಾ ಮನೆಯ ಮೆಟ್ಟಿಲ ಮೇಲೆ ಕೆಸುವಿನೆಲೆ ಗಂಟುಕಟ್ಟುತ್ತಾ ಕೂರುತ್ತಿದ್ದಳು. ಇಳಿಸಂಜೆಗೆ ಅಪ್ಪ ಗೇಟಿನ ಒಂದು ಬದಿಯಲ್ಲಿ ಸಿಗರೇಟು ಸೇದುತ್ತಾ ನಿಂತರೆ, ಮತ್ತೊಂದು ಬದಿಯಲ್ಲಿ ಮಮ್ಮಿ ಗೇಟಿನ ಮೇಲೆ ಹಬ್ಬಿಸಿದ್ದ ಚೀಟಿಹೂವಿನ ಬಳ್ಳಿ ಒಪ್ಪ ಮಾಡುತ್ತಲೋ, ಗಿಡಗಳಿಗೆ ನೀರು ಹಾಕುತ್ತಲೂ ಇರುತ್ತಿದ್ದಳು. ಅವರವರ ಏಕಾಂತಕ್ಕೆ ಎಡೆಮಾಡಿಕೊಡುತ್ತಲೇ ಪರಸ್ಪರರ ಜತೆಗಿರುವ ಅವರಿಬ್ಬರ ನಡುವೆ ಇರುವಂತಹದ್ದೇ ಹಗೂರವಾದ ಎಳೆಯೊಂದು ತನ್ನ ಮತ್ತು ಸುಮಿಯ ನಡುವೆಯೂ ಎಂದುಕೊಂಡ ಫಿಲಿಪನಿಗೆ, ತನಗೆ ಅತ್ಯಂತ ಪ್ರಿಯವಾದ ಶನಿವಾರ ಮಧ್ಯಾಹ್ನದ ನಿದ್ರೆಯನ್ನೂ ಬಿಟ್ಟು, ತನ್ನ ಜೊತೆಗೆ ಸ್ಮಶಾನಕ್ಕೆ ಬಂದು ಧೂಳು, ಬಿಸುಲಿನಲ್ಲಿ ಗೋರಿಗಳ ನಡುವೆ ತನ್ನ ಹುಡುಕಾಟ ಮುಗಿಯುವುದನ್ನೇ ಮೌನವಾಗಿ ಕಾಯುತ್ತ ಕೂತಿದ್ದ ಸುಮಿಯ ನೆನಪಾಯಿತು.
ರಾತ್ರಿ ಊಟದ ನಂತರ, ಎಲೆಯಡಿಕೆ ಹಾಕಿಕೊಂಡು ಬಂದ ಮಮ್ಮಿ ಒಂದಷ್ಟು ಮಾತನಾಡುತ್ತ ಇವನೊಟ್ಟಿಗೆ ಕುಳಿತಳು. ಮಾತು ಮುಗಿದರೂ, “ಮತ್ತೆ, ಮತ್ತೆ” ಎನ್ನುತ್ತಿದ್ದವಳ ಮೇಲೆ ಫಿಲಿಪನಿಗೆ ಅಕ್ಕರೆ ಮೂಡಿತು. 'ಎಂತದಾ ಹೇಳ್ಬೇಕಂತ ಇದ್ದಿ, ಅಲ್ವ ಮಮ್ಮಿ, ಎಂತ ನನ್ನ ಹತ್ರ ನಾಚಿಕೆಯಾ ನಿಂಗೆ' ಎಂದ. ಕದ್ದು ಸಿಕ್ಕಿಬಿದ್ದವಳಂತೆ "ಹೆಹೆ, ನೀ ಬಾರಿ ಹುಷಾರು, ಹೇಗೆ ಕಂಡು ಹಿಡಿದೇ ನೋಡು" ಎಂದು ಕ್ಷಣಕಾಲ ಸುಮ್ಮನಿದ್ದು, "ಮೊನ್ನೆ ತಂಗಿ ಹೇಳಿದನ್ನ ನೀನು ಮರೆತಿಲ್ಲ ಅಲ್ವೆನಾ" ಎಂದಳು. ಮತ್ತೊಂದಷ್ಟು ಹೊತ್ತು ಬಿಟ್ಟು, "ದೊಡ್ಡ ವಿಷಯ ಎಂತ ಇಲ್ಲವಾ. ಅವಳು ಗಂಡನೊಂದಿಗೆ ಮಸ್ಕತ್ತಿಗೆ ಹೋಗಿ ಬಿಸಿನೆಸ್ ಮಾಡ್ವಾ ಅಂತ ಇದ್ದದ್ದು ಗೊತ್ತಲ್ಲ? ಅವನಿಗೆ ಎಂತದಾ ಸಾಲವಂತೆ. ಅವನ ಮನೆಯದ್ದು ಗೊತ್ತಲ್ಲ, ಖಾಲಿ ಕೈ! ಅವಳ ನಾವು ಕೊಟ್ಟ ಪಾಲಿನದ್ದನ್ನೂ ಗಿರವಿಯಿಟ್ಟಾಗಿದೆ. ಈಗ ಪೀಣ್ಯದ ಸೈಟನ್ನ ಮಾರಿ ಕೊಡೀ, ಸಾಲ ತೀರ್ತದೆ, ಊರಿಗೆ ಹೋಗ್ಲಿಕ್ಕೆ ಆಗ್ತದೆ ಅಂತ ಒಂದೇ ಹಠ ಅವಳದ್ದು" ಎಂದಳು. ಸ್ವಲ್ಪ ವಿರಮಿಸಿ "ಅದಕ್ಕೆ ನಿನ್ನ ಅಪ್ಪ, ‘ಅದನ್ನ ಕ್ರಯಕ್ಕೆ ಕೊಡ್ಲಿಕ್ಕೆ, ಫಿಲಿಯನ್ನೂ ಒಂದು ಮಾತು ಕೇಳಬೇಕು, ಅವನ ಸೈನ್ ಬೇಕು, ಕೇಳ್ಲಿಕ್ಕೆ ಬೇಜಾರಾಗ್ತದೆ’, ಅಂತ ಉದಾಸೀನ ಮಾಡಿಬಿಟ್ರು. ಆಗಿಂದ ಅವಳಿಗೆ ತಲೆ ಬಿಂಗ್ರಿಯಾಗಿದೆ. ಅವ ನಿಮ್ಮ ಮಗ ಅಲ್ಲ, ಅವನನ್ನೇನು ಕೇಳುದು ಅಂತ ರಗಳೆ! ಅವಳು ಗೊತ್ತಲ್ಲ! ಮಹಾ ಸೂಟೆ!" ಎಂದು ಸುಮ್ಮನಾದಳು. ಇವನು ಮೌನವಾಗಿದ್ದನ್ನು ನೋಡಿ, “ದೇವರಾಣೆ ಮಗ, ನಾವು ಯಾವತ್ತೂ ನಿನ್ನ ಬೇರೆ ಅಂತ ನೋಡಿಲ್ಲ! ಈ ಮಕ್ಕಳ ಜಗಳದಲ್ಲಿ ನಾವು ಸಾಯಬೇಕು' ಎಂದು ಬಿಕ್ಕತೊಡಗಿದಳು. ಕೂಡಲೇ, "ಏ, ಎಂತ ಮಮ್ಮೀ ಹೀಗೆಲ್ಲ ಮಕ್ಕಳ ಹಾಗೆ" ಎಂದು ಅವಳನ್ನು ಸಮಾಧಾನ ಮಾಡಿದನು.
ಮಮ್ಮಿಯನ್ನು ಕಳುಹಿಸಿ ಬಾಲ್ಕನಿಗೆ ಬಂದವನಿಗೆ ಎಡ್ವಿನಾಳ ಬಗ್ಗೆ ಪಾಪ ಎನಿಸಿತು. ನಾನು ಮದುವೆಯಾದರೆ ತನಗೆ ಕಷ್ಟವಾದೀತು ಎಂಬ ಯೋಚನೆ ಅವಳಲ್ಲಿ ಮೂಡಿ ಬಿಟ್ಟಿತೇ? ಎನಿಸಿ ಖೇದವಾಯಿತು. ನಿನ್ನೆಯವರೆಗೂ ಎರಡು ಹೆಜ್ಜೆಯಿಟ್ಟರೂ ಎಡವಿಕೊಂಡು ಬೀಳುವ ಮಗುವಾಗಿದ್ದವಳು ಏಕಾಏಕಿ ಬೆಳೆದು ಪಕ್ಕಾ ವ್ಯವಹಾರಸ್ತೆಯಂತೆ ನಡೆದುಕೊಳ್ಳತೊಡಗಿದ್ದಾಳೆಂಬುದು ನಗು ತರಿಸಿತು, ಸಂಕಟವೂ ಆಯಿತು. ಎಳವೆಯುದ್ದಕ್ಕೂ ಬೆನ್ನಿಗಂಟಿಕೊಂಡೇ ಬೆಳೆದ ಕಂದ, ಯಾವ ಮಾಯದಲ್ಲಿ ದೊಡ್ಡ ಹೆಂಗಸಿನಂತೆ, ತಾನು, ತನ್ನ ಗಂಡ, ತನ್ನ ಜಗತ್ತು, ತನ್ನ ಮನೆ, ಸಂಸಾರ ಎಂದೆಲ್ಲ ಯೋಚಿಸಲು ಕಲಿತಳು? ಶಾಲೆಯಿಂದ ಹಿಂದಿರುಗುವಾಗ ಮಳೆ ಸುರಿದರೆ, ವ್ಯಾನಿಟೀ ಬ್ಯಾಗನ್ನು ಅಡ್ಡ ಹಿಡಿದು ಓಡುವ ಮಮ್ಮಿಯ ಹಿಂದೆ ಒಂದೇ ಕೊಡೆಯಡಿಯಲ್ಲಿ ಬೆದರಿದ ಬೆಕ್ಕಿನ ಮರಿಗಳಂತೆ ಒಬ್ಬರಿಗೊಬ್ಬರು ಅಂಟಿಕೊಂಡು ನಡೆಯುತ್ತಿದ್ದ ಅಂದಿನ ನಾವು ಎಲ್ಲಿ ಹೋದೆವು, ಎಂದೆಲ್ಲ ಯೋಚಿಸಿ ಖಿನ್ನನಾದ.
ಮೊದಲಿನಿಂದಲೂ ತಂಟೆಕೋರಿಯಾಗಿಯೇ ಇದ್ದು, ಎಲ್ಲವನ್ನೂ ಉದ್ಧಟ ವ್ಯಂಗ್ಯದಿಂದಲೇ ನೋಡುತ್ತಿದ್ದ ಎಡ್ವಿನಾಳಲ್ಲಿ ದುಷ್ಟತನವಿರಲಿಲ್ಲ. ಎಷ್ಟೇ ಕಿತ್ತಾಡಿಕೊಂಡರೂ ಕೊನೆಗೆ ಕೆಟ್ಟ ಜೋಕೊಂದನ್ನು ಒರಟೊರಟಾಗಿ ಹೇಳಿ ತನ್ನನ್ನು ನಗಿಸಿ ಎಲ್ಲ ತಳಿಯಾಗಿಸುತ್ತಿದ್ದವಳನ್ನು ಸಣ್ಣ ಮನಸ್ಸಿನ ಹೆಂಗಸಾಗಿ ಬದಲಾಯಿಸಿದ ಬದುಕಿನ ಕಷ್ಟವಾದರೂ ಎಂತಹುದ್ದಿರಬಹುದು?. ಮರುಕ್ಷಣವೇ, ಎಡ್ವಿನಾಳ ನಡವಳಿಕೆಗೂ, ತನ್ನ ಯೋಚನೆಗಳಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ ಎನಿಸಿತು. ತನ್ನ ತಂಗಿ ಒಂದು ರೀತಿಯಲ್ಲಿ ತಾನು ತನ್ನದು ಎಂದು ಗುದ್ದಾಡುತ್ತಿದ್ದರೆ, ತಾನೂ ಮತ್ತೊಂದು ಬಗೆಯಲ್ಲಿ ಅದನ್ನೇ ಮಾಡುತ್ತಿದ್ದೇನಲ್ಲ? ತನ್ನ ಮನಸ್ಸಿನಲ್ಲಿರುವ ಸ್ವಂತ ತಾಯಿ, ನನ್ನ ಸುಮಿ, ನನ್ನ ಮದುವೆ, ಪ್ರಪಂಚ, ಎಂಬೆಲ್ಲ ಪದಪುಂಜಗಳಿಗೂ, ಎಡ್ವಿನಾಳ ನನ್ನ ಅಮ್ಮ, ಸ್ವಂತ ಅಪ್ಪ, ನನ್ನ ಮನೆ, ಎಂಬ ಶಬ್ದಗಳಿಗೂ ಸಾಮ್ಯವಿದೆ ಎನಿಸಿತು. ತಮ್ಮ ತಮ್ಮದೇ ಲೋಕದ ಅನ್ವೇಷಣೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ತಮ್ಮಿಬ್ಬರ ನಡುವಿನ ನಿರ್ವಾತದಂತಹ ಬಿಂದುವಿನಲ್ಲಿ ನಿಂತ ಮಮ್ಮಿ, ಮತ್ತು ಅವಳ ಆ ಅವಸ್ಥೆಯನ್ನು ಅಸಹಾಯಕನಾಗಿ ನೋಡುತ್ತಿರುವ ಅಪ್ಪನ ಚಿತ್ರ ಮನಸ್ಸಿನಲ್ಲಿ ಮೂಡಿತು.
ಬೆಳಗ್ಗೆ ಎದ್ದು ಎಡ್ವಿನಾಳನ್ನು ಹುಡುಕುತ್ತಾ ಅಡುಗೆ ಮನೆಗೆ ಹೋದಾಗ ಪ್ಲಂ ಕೇಕಿನ ಹುಳಿ ಮಿಶ್ರಿತ ಸಿಹಿ ಪರಿಮಳ ಬಂತು, ಬೆನ್ನಿಗೇ ಮೀನಿನ ಕಟುವಾದ ಘಮವೂ ಸೇರಿಕೊಂಡಿತು. ಯಾರೂ ಇಲ್ಲದಿದ್ದಾಗ ಫ್ರಿಜ್ಜಿನಿಂದ ಕೇಕು ಕದ್ದು ತಿನ್ನುವ ಎಡ್ವಿನಾಳ ಚಿತ್ರ ಕಣ್ಣೆದುರು ಮೂಡಿ ನಕ್ಕ. ಮೆಟ್ಟುಗತ್ತಿಯ ಮೇಲೆ ಅಮ್ಮನಂತೆಯೇ ಕುಳಿತು ಮಧ್ಯಾಹ್ನಕ್ಕೆ ಮೀನು ಸ್ವಚ್ಛ ಮಾಡುತ್ತಿದ್ದವಳ ಪಕ್ಕದಲ್ಲಿ ಸ್ಟೂಲೆಳೆದುಕೊಂದು ಕುಳಿತು, "ಎಂತದೇ, ಪ್ಲಂ ಕೇಕ್ ಫ್ಲೇವರಿನ ಮೀನಾ" ಎಂದನು. ತಮಾಷೆ ಸಾಕೆನಿಸಿ "ವಿಷಯ ನೇರ ಹೇಳಿದ್ರೆ ಆಗ್ತಿತ್ತಲ್ಲ ಮಾರಾಯ್ತಿ! ಯೋಚೆನೆ ಬೇಡ! ಅದೆಂತದೋ ಸೈನು ಮಾಡಬೇಕಂತಲ್ಲ? ಎಲ್ಲ ಮಾಡ್ವ ಆಯ್ತ!" ಎಂದು ಅವಳ ಹೆಗಲ ಮೇಲೆ ಕೈಯಿಟ್ಟನು. ಇಲ್ಲಿವರೆಗೆ ಅವನನ್ನೇ ದಿಟ್ಟಿಸಿ ನೋಡುತ್ತಿದವಳು ಕಣ್ಣು ಕೆಳಗಿಳಿಸಿ "ಬಂಗುಡೆ ಸುಖ ಇಲ್ಲ! ಮೀನು ಆರಿಸ್ಲಿಕ್ಕೆ ಬರುದಿಲ್ಲ ನಿನಗೆ" ಎಂದು ಕೆಲಸ ಮುಂದುವರೆಸಿದಳು. ಎಂದಿನ ಉದ್ಧಟತನದ ವರಸೆಗೆ ಮರಳಿದಳಲ್ಲ ಸಧ್ಯ! ಎಂದುಕೊಂಡು ಹೊರಬಂದ.
ಮಮ್ಮಿಯನ್ನು ಹುಡುಕಿಕೊಂಡು ಅಂಗಳಕ್ಕೆ ಬಂದಾಗ, ಅವಳು ಕುಕ್ಕರುಗಾಲಿನಲ್ಲಿ ಕುಳಿತು ಸಂಪಿನ ಹತ್ತಿರದ ಗುಲಾಬಿ ಹೂವಿನ ಗಿಡಗಳ ರೆಂಬೆಗಳನ್ನು ಕತ್ತರಿಸುತ್ತಿದ್ದಳು. ನಾಲಿಗೆ ತುಸುವೇ ಮುಂಚಾಚಿ ಅತ್ಯಂತ ನಾಜೂಕಾಗಿ ಕತ್ತರಿಯಾಡಿಸುತ್ತಿದ್ದವಳು ಇವನನ್ನು ಕಂಡಿದ್ದೇ ಎನಾಯ್ತು ಎಂದು ಹುಬ್ಬೇರಿಸಿದಳು, ಎಲ್ಲ ಸರಿಯಾಗಿದೆ ಎಂದು ತಲೆಯಾಡಿಸಿದವ, ಮತ್ತೆ ಏನೋ ಹೊಳೆದವನಂತೆ "ಅಪ್ಪನಿಗೆಂತ ನಾನಂದ್ರೆ ಭಯವ ಮಮ್ಮಿ! ಸೈಟಿನ ಬಗ್ಗೆ ಕೇಳಿಕ್ಕೆ?" ಎಂದು ಕೇಳಿದ. ಪ್ರಯಾಸಪಟ್ಟು ಮೇಲೆದ್ದು ಪಕ್ಕ ಬಂದು ಕುಳಿತು 'ಭಯ ಅಲ್ವಾ! ಪಾಪ ಪ್ರಜ್ಞೆ, ನಿನ್ನ ಪಾಲಿಗೆಂತ ಇರಿಸಿರುವ ಸೈಟಲ್ಲವಾ ಅದು, ಅದನ್ನೂ ಕೊಟ್ಟುಬಿಟ್ರೆ, ನಿನಗೆಂತ ಮಾಡಲಿಲ್ಲ ಅಂತ ಆಗ್ತದಲ್ಲ ಅಂತ ಅವರಿಗೆ!" ಎಂದಳು. ಮೌನವಾಗಿ ಕುಳಿತಿದ್ದವನ ಹೆಗಲಿನ ಮೇಲೆ ಮೆಲ್ಲ ತಟ್ಟಿ, "ಮನಸ್ಸಿನಲ್ಲಿ ಪ್ರೀತಿ ಇರ್ತದೆ, ಆದರೆ ಸರಿಯಾಗಿ ಹೇಳ್ಲಿಕ್ಕೆ ಆಗಲ್ಲ ಅವರಿಗೆ..... ನೀ ಸ ಹಾಗೆಯೇ ಫಿಲೀ" ಎಂದು ಎದ್ದು ಒಳ ಹೋದಳು. ಸ್ವಲ್ಪ ಹೊತ್ತಿಗೆ ಕಾಫಿಯ ಮಂದ ಸುಗಂಧ ತೇಲಿಬಂತು. ಮಧ್ಯಾಹ್ನ ಸುಮಿಯನ್ನು ಕಾಣಲು ಹೊರಟಾಗ ಮಮ್ಮಿ ಹೆಂಚು ದಿಟ್ಟಿಸುತ್ತಾ ದಿವಾನದ ಮೇಲೆ ಕಾಲು ಚಾಚಿ ಮಲಗಿ ರೇಡಿಯೋದಲ್ಲಿ ಆಪ್ ಕೀ ಫರ್ಮಾಯಿಶ್ ಕೇಳುತ್ತಿದ್ದಳು, ನೆಲದ ಮೇಲೆ ದೀವಾನಕ್ಕೊರಗಿ ಕುಳಿತಿದ್ದ ಅಪ್ಪ ಪುಟ್ಟದಾಗಿ ಮಡಚಿದ್ದ ಪತ್ರಿಕೆಯಲ್ಲಿ ಪದಬಂಧ ಬಿಡಿಸುತ್ತಿದ್ದರು. ಇದನ್ನು ನೋಡಿದವನಿಗೆ ಹಿಂದಿನ ಸಂಜೆ ಇವರಿಬ್ಬರ ಮತ್ತು ತಮ್ಮಿಬ್ಬರ ಬಗ್ಗೆ ಎನಿಸಿದ್ದನ್ನು ಸುಮಿಯೊಂದಿಗೆ ಹಂಚಿಕೊಳ್ಳುವ ಉಮೇದು ಹೆಚ್ಚಾಯಿತು.
ಸಿಮೆಟ್ರಿಯೆದುರು ಬಂದವನಿಗೆ, ಹೊಸೂರು ರಸ್ತೆಯ ಅತಿವೇಗದ ಕರ್ಕಶ ಜಗತ್ತಿನ ಪಕ್ಕದಲ್ಲೇ ಇಂಥಾ ಪರಿ ಮೌನ ಹೊದ್ದ ಜಾಗೆಯೊಂದಿದೆ ಎಂಬುದು ಮಜವೆನಿಸಿತು. ಒಳ ಹೋಗದೆ, ಮೂಲೆಯಲ್ಲಿ ಬಿದ್ದುಕೊಂಡಿದ್ದ ಮರದ ದಿಮ್ಮಿಯ ಮೇಲೆ ಕುಳಿತು ಸುಮಿಯುನ್ನು ಕಾಯುತ್ತಿದ್ದವ, ಏನೋ ಕಾಣಿಸಿದವನಂತೆ ಎದ್ದು ಸ್ಮಶಾನದೊಳಗೆ ನಡೆದ. ಗೋರಿಗಳ ಸಾಲುಗಳ ನಟ್ಟ ನಡುವಿನಲ್ಲಿದ್ದ ಟಬೂಬಿಯಾ ಮರದಲ್ಲಿ ಒಂದು ಹಸಿರೆಲೆಯೂ ಕಾಣಿಸದಷ್ಟು ಒತ್ತೊತ್ತಾಗಿ ತಿಳಿ ಗುಲಾಬಿ ಬಣ್ಣದ ಹೂವುಗಳರಳಿದ್ದವು. ಸ್ವಚ್ಛ ನೀಲಿ ಆಕಾಶ ಮತ್ತು ಮಧ್ಯಾಹ್ನದ ಬಿಸುಲಿಗೆ ಹೊಳೆಯುತ್ತಿದ್ದ ಹಸುರೆಲೆಗಳ ಹಿನ್ನೆಲೆಯಲ್ಲಿ ಅವು ಮತ್ತಷ್ಟು ಮುದ್ದಾಗಿ ಕಾಣಿಸುತ್ತಿದ್ದುವು. ಅಕ್ಕಪಕ್ಕ ತಿರುಗಿದಾಗ ಹಳದಿ, ನೇರಳೆ, ಬಿಳುಪಿನ ಹೂವುಗಳನ್ನು ಹೊದ್ದು ನಿಂತಿದ್ದ ಎತ್ತರದ ಮರಗಳೂ ಹೀಗೇ ಕಾಣಿಸಿದುವು, ಮುಗಿಲ ಮಲ್ಲಿಗೆ ಹೂವುಗಳ ಅಸ್ಪಷ್ಟ ನರುಗಂಪು ಎಲ್ಲೆಲ್ಲೂ ಇತ್ತು. ಇದೆಲ್ಲ ತನಗೆ ಮೊದಲು ಬಂದಾಗಲೇ ಏಕೆ ಕಾಣಲಿಲ್ಲವೆಂದುಕೊಂಡ ಕ್ಷಣಕ್ಕೆ ಫಿಲಿಪನಿಗೆ ತಾನು ನಿರಾಸೆ ಮತ್ತು ವಸಂತ ಎಂಬ ವಿರುದ್ಧ ಬಿಂದುಗಳ ನಡುವಿನ ಸಂದಿಗ್ಧ ಸ್ಥಳದಲ್ಲಿ ನಿಂತಂತೆ, ಅವುಗಳಲ್ಲಿ ತಾನು ಯಾವುದನ್ನು ಆರಿಸಿಕೊಳ್ಳುತ್ತೇನೆ ಎಂಬುದರ ಮೇಲೆ ತನ್ನ ಮುಂದಿನ ಬದುಕೂ ನಿಂತಿರುವಂತೆ ಭಾಸವಾಯಿತು. ಅವನ ಎಡಬದಿಯಲ್ಲಿದ್ದ ಗೋಡೆಯ ಉದ್ದಕ್ಕೂ ದಟ್ಟವಾಗಿ ಹರಡಿದ್ದ ಕಡುಹಸಿರು ಬಳ್ಳಿಯನ್ನು ತುಂಬಿಕೊಂಡಿದ್ದ ಗಾಢ ಕೇಸರಿ ಬಣ್ಣದ ಉದ್ದುದ್ದ ಹೂವುಗಳ ಮೇಲೆ ಬಿಸಿಲು ಬಿದ್ದು ಫಕ್ಕನೇ ನೋಡಿದವರಿಗೆ ಕಂಪೌಂಡಿನ ಬದಿಯಲ್ಲಿ ಬೆಂಕಿ ಉರಿಯುತ್ತಿದ್ದಂತೆ ಕಾಣುತ್ತಿತ್ತು. ಯಾವಾಗಲೋ ಬಂದು, ಕಂಪೌಂಡಿನ ಬಲ ಕೊನೆಯಲ್ಲಿದ್ದ ಗಸಗಸೆ ಹಣ್ಣಿನ ಗಿಡ್ಡ ಮರದ ನೆರಳಿನಲ್ಲಿ ನಿಂತಿದ್ದ ಸುಮೀ, 'ಏ ಫಿಲೀ, ಹಣ್ಣು ಕಿತ್ತು ಕೊಡು ಬಾರೋ" ಎಂದು ಕೂಗಿ ಕರೆದಳು. ಎತ್ತರೆತ್ತರದ ಮರಗಳು ಚೆಲ್ಲಿದ್ದ ನೆರಳನ್ನು ಸೀಳಿಕೊಂಡು ಬರುತ್ತಿದ್ದ ಬಿಸಿಲಿನಲ್ಲಿ ಸ್ನಾನ ಮಾಡುತ್ತಾ ಧೂಳು ಕವಿದ ಮಬ್ಬು ಹಸಿರು ಪಾಚಿಹೊದ್ದು ಮಲಗಿದ್ದ ಗೋರಿಗಳ ಸಾಲುಗಳನ್ನು ದಾಟಿಕೊಂಡು ಸುಮಿಯ ಬಳಿ ಹೋದ ಫಿಲಿಪ್, ಮರದ ಕೊಂಬೆಯೊಂದನ್ನು ಎಡಗೈಯಿಂದ ಕೆಳಗೆಳೆದು ಗುಲಾಲಿ ಬಣ್ಣದ ಪುಟ್ಟಪುಟ್ಟ ಮುದ್ದಾದ ಗಸಗಸೆ ಹಣ್ಣುಗಳನ್ನು ಕಿತ್ತು ಕಿತ್ತು ಅವಳು ಮುಂದೊಡ್ಡಿದ್ದ ಸಲ್ವಾರಿನ ಸೆರಗಿನ ತುಂಬ ಸುರಿಯ ತೊಡಗಿದ.
]]>ಅಲಮೇಲಮ್ಮನ ಮಾರ್ಜಾಲ ಮಾಯೆ
(ಭಯಾನಕ ಕಥೆ)
ಭಾಗ-1
ಮಲೆನಾಡಿನ ಪಶ್ಚಿಮ ಘಟ್ಟಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಒಂದು ಚಿಕ್ಕದಾದ ಪುಟ್ಟಪ್ಪ ಟೀ ಅಂಗಡಿ, ಸುಮಾರು ವರುಷಗಳಿಂದಲೂ ಈ ಅಂಗಡಿ ಇದೆ, ಅಂದು ಅಮಾವಾಸ್ಯೆಯ ರಾತ್ರಿ ಎಂಟು ಗಂಟೆ ಇರಬಹುದು, ಮಳೆಗಾಲವಾದ್ದರಿಂದ ಜನರ ಓಡಾಟ ತುಂಬಾ ವಿರಳವಾಗಿತ್ತು, ಬೇರೆ ಸಮಯದಲ್ಲಾದರೆ, ಹೆದ್ದಾರಿಯಾದ್ದರಿಂದ ವಾಹನಗಳ ಓಡಾಟ ಹೆಚ್ಚೇ ಇರುತ್ತದೆ, ಆದರೆ ಇಂದು ವಾಹನಗಳ ಓಡಾಟ ತುಂಬಾ ಕಡಿಮೆ ಇದ್ದಿದ್ದರಿಂದ ಈ ಟೀ ಅಂಗಡಿ ಪಕ್ಕದಲ್ಲಿದ್ದ ಟೈರ್ ಪಂಕ್ಚರ್ ಅಂಗಡಿ, ಅಂದು ತುಂಬಾ ಜೋರು ಮಳೆ ಕಾರಣ ಆ ಅಂಗಡಿಯನ್ನು ಬೇಗನೇ ಮುಚ್ಚಿ ಮನೆಕಡೆ ಹೋಗಿದ್ದರು, ಈ ಟೀ ಅಂಗಡಿ ಬಿಟ್ಟರೆ ಮತ್ತೆ ಐದಾರು ಮೈಲುಗಳು ಯಾವುದೇ ವಸ್ತುಗಳು ದೊರೆಯುವುದಿಲ್ಲ, ಮುಂದೆ ಬರುವ ಹಳ್ಳಿಯಲ್ಲೇ ಏನಾದರೂ ದೊರಕುತ್ತಿದ್ದದ್ದು, ಕಾರಣ ಇಲ್ಲಿಂದ ಮುಂದೆ ರಸ್ತೆ ತಿರುವುಗಳು, ಪಶ್ಚಿಮ ಘಟ್ಟ
ರಸ್ತೆ ಪ್ರಾರಂಭವಾಗುತ್ತದೆ. ಈ ಟೀ ಅಂಗಡಿ ಮಾಲೀಕ ಪುಟ್ಟಪ್ಪನವರು ಮಾತ್ರ ರಾತ್ರಿವೇಳೆ ಇದೇ ಅಂಗಡಿಯಲ್ಲಿ ತಂಗುತ್ತಿದ್ಧರು, ಸರಿ ರಾತ್ರಿಯಲ್ಲಿ ಯಾವುದಾದರೂ ಜನರಿಗೆ, ವಾಹನಗಳಿಗೆ ತೊಂದರೆ ಎಂದು ಬಂದು ಬಾಗಿಲು ಬಡಿದರೆ ಅವರ ನೆರವಿಗೆ ಧಾವಿಸುತ್ತಿದ್ದರು, ಕಾಫಿ,ಚಹಾ, ಸಿಗರೇಟು, ವಗೈರೆ........ಏನಾದರೂ ಅತ್ಯವಶ್ಯಕ ವಸ್ತುಗಳುಬೇಕೆಂದರೆ, ವಾಹನಗಳ ಟೈರ್ ಗಳು ಪಂಚರ್ ಆದರೆ, ವಾಹನಗಳು ಕೆಟ್ಟು ನಿಂತರೆ, ಅದಕ್ಕೆ ಸಂಬಂಧಪಟ್ಟ ಮೆಕ್ಯಾನಿಕ್ ಗಳನ್ನು ಆ ರಾತ್ರಿಯಲ್ಲೂ ಹಳ್ಳಿಯಿಂದ ಕರೆಸಿ, ಪ್ರಯಾಣಿಕರಿಗೆ ತುಂಬಾ ಸಹಾಯ ಮಾಡುತ್ತಿದ್ದರು, ಇದರಿಂದ ಖುಷಿಯಾಗಿ ಇವರ ಕೆಲಸ ಮೆಚ್ಚಿ ಉದಾರವಾಗಿ, ತಮ್ಮ ತೊಂದರೆಗಳು ಪರಿಹಾರವಾದ್ದರಿಂದ ಸ್ವಲ್ಪ ಹೆಚ್ಚೇ ಹಣ ನೀಡುತ್ತಿದ್ದರು, ವ್ಯಾಪಾರವೂ ಆಯಿತು, ಕೈತುಂಬಾ ಕೆಲಸವೂ ದೊರೆಯಿತು, ಮನೆ ಖರ್ಚಿಗೆ ಹಣವೂ ಬಂದಂತಾಯಿತು, ಎನ್ನುವ ಖುಷಿ, ಈ ಪುಟ್ಟಪ್ಪನವರಿಗೆ. ಹೀಗೆ ಪುಟ್ಟಪ್ಪ ಟೀ ಅಂಗಡಿ ಒಂದು ಥರಾ ಜಂಕ್ಷನ್ ರೀತಿ ಇದ್ದು, ತುಂಬಾ ಹೆಸರು ಮಾಡಿತ್ತು, ಅವರ ಊರು ಇಲ್ಲೇ ಕಾಡಿನಲ್ಲಿ ಒಂದು ಮೈಲು ದೂರ ನಡೆದು ಹೋದರೆ ರಂಗನಾಥಪುರ ಎಂಬುದು.
ಅಂದೂ ಸಹ ಅಮಾವಾಸ್ಯೆಯ ಕಡು ಕತ್ತಲು, ಮಲೆನಾಡು ಪ್ರದೇಶದಲ್ಲಿ, ಅದರಲ್ಲೂ ಮಳೆಗಾಲದಲ್ಲಿ ಸಂಜೆಗೆಲ್ಲಾ ಕತ್ತಲಾವರಿಸಿ ರಾತ್ರಿಯ ಅನುಭವವಾಗುತ್ತದೆ, ಇನ್ನೇನು ಜನರು, ಪ್ರಯಾಣಿಕರು, ವಾಹನಗಳು ಎಲ್ಲವೂ ಕಡಿಮೆಯಾಯಿತು, ಈ ಜಿಟಿ ಜಿಟಿ ಮಳೆ ಕಾರಣ, ಇನ್ನು ಬಾಗಿಲು ಹಾಕಿಕೊಂಡು ಮಲಗೋಣವೆಂದು ಯೋಚಿಸಿದರು ಪುಟ್ಟಪ್ಪ, ಮಳೆ ಸುರಿಯುತ್ತಲೇ ಇದೆ, ಸಮಯ ಆಗ ಸುಮಾರು ಎಂಟು ಗಂಟೆ ಇರಬಹುದು, ಆಗ ಇದ್ದಕ್ಕಿದ್ದಂತೆ ಕತ್ತಲಿನಲ್ಲಿ ಗೆಜ್ಜೆ ಶಬ್ಬ ಎಂದಿಗಿಂತ ಸ್ವಲ್ಪ ಜೋರಾಗಿಯೇ ಕೇಳಿಸತೊಡಗಿತು, ಪುಟ್ಟಪ್ಪನವರಿಗೆ ಇದು ಮಾಮೂಲಿ....... ಕಾರಣ ಯಾವುದಾದರೂ ಪ್ರಯಾಣಿಕರು ಕಾಫಿ, ಚಹಾ ಕುಡಿಯಲು ಇವರ ಅಂಗಡಿಗೆ , ಕಾರಿನಿಂದ ಇಳಿದು ಬರುವ ಮಹಿಳಾ ಪ್ರಯಾಣಿಕರ ಕಾಲಿನ ಗೆಜ್ಜೆ ಹೀಗೇ ಶಬ್ದ ಮಾಡಿಕೊಂಡು ಬರುವುದು ರೂಢಿ, ಹಾಗೆಯೇ ಎಂದು ಯೋಚಿಸಿದ ಪುಟ್ಟಪ್ಪನವರು,
ಯಾರೋ ಪ್ರಯಾಣಿಕರು ಈ ಕತ್ತಲಿನಲ್ಲಿ ಬಂದಿರಬೇಕೆಂದುಕೊಂಡು ಅಂಗಡಿಯಿಂದ ತನ್ನ ತಲೆ ಹೊರಹಾಕಿ ನೋಡಿದರೆ ಯಾವುದೂ ಕಾರು ಇಲ್ಲ, ಆದರೆ ಇಬ್ಬರು ಮನುಷ್ಯ ಆಕೃತಿಗಳು ಮಾತ್ರ ತನ್ನ ಅಂಗಡಿ ಕಡೆಯೇ ಬರುತ್ತಿರುವಂತೆ ಕಂಡಿತು, ಹತ್ತಿರ
ಬಂದ ಅವರಲ್ಲೊಬ್ಬರು, ಪುಟ್ಟಪ್ಪಾ......ಪುಟ್ಟಪ್ಪಾ.... ಎಂದು ತನ್ನನ್ನೇ ಕೂಗಿದಂತಾಗಿ , ಯಾರೋ ನನ್ನನ್ನು ಕೂಗಿಕರೆದಂತಾಯಿತಲ್ಲಾ...... ಯಾರೋ ನನಗೆ ಚಿರ ಪರಿಚಿತರೇ ಇರಬೇಕು , ಪಾಪ ಈ ರಾತ್ರಿಯಲ್ಲಿ ಏನು ತೊಂದರೆಯೋ ಏನೋ, ನೋಡೋಣವೆಂದು ಕತ್ತಲೆಯಲ್ಲೇ ಅಂಗಡಿಯಿಂದ ಹೊರಗೆ ಬಂದು , ಯಾರು.......ಯಾರು......ಅದು..... ಎಂದು ಕೂಗುತ್ತಾ ಬಂದು ನೋಡಿದರು ಪುಟ್ಟಪ್ಪ, ಆಗ ಇವರ ಅಂಗಡಿ ಹತ್ತಿರವೇ ಬಂದಿದ್ದ ಆ ಇಬ್ಬರಲ್ಲಿ ಒಬ್ಬರು ಇವರ ಚಿರಪರಿಚಿತರೇ ಆದ ನೀರು ಗಂಟಿ ನಾಗಪ್ಪ, ಜೊತೆಗೆ ಒಂದು ಮಧ್ಯವಯಸ್ಕ ಹೆಣ್ಣು, ಇಬ್ಬರನ್ನೂ ಈ ಕಡುಗತ್ತಲು, ಜಡಿಮಳೆಯಲ್ಲಿಯೇ ನೆನೆಯುತ್ತಾ ಬಂದದ್ದು ನೋಡಿ ಸ್ವಲ್ಪಗಾಬರಿಯಾದರು ಪುಟ್ಟಪ್ಪ,
ಅರೇ...... ಏನು ನಾಗಪ್ಪಾ.....ಈ ಜಡಿ ಮಳೆಯಲ್ಲಿ..... ಸರಿ ರಾತ್ರಿಯಲ್ಲಿ....... ಇಷ್ಟುದೂರ ಬಂದಿದ್ದೀಯಾ...... ಅದೂ......ಅದೂ.....ಯಾರು.......ಅವರು.....ನಿನ್ನ ಜೊತೆ ಬಂದಿರೋದು....... ಎಂದು ಆಶ್ಚರ್ಯದಿಂದ ಕೇಳಿದರು.
ಅಯ್ಯೋ.......ಅದೊಂದು ದೊಡ್ಡ ಕಥೆ ಪುಟ್ಟಪ್ಪಾ...... ಈಗ ಹೇಳಲು ಸಮಯವಿಲ್ಲ, ಒಂದು ತೊಂದರೆಗೆ ಸಿಲುಕಿರುವೆವು ನಾವುಗಳು, ನೀನೇ ಕಾಪಾಡಬೇಕು..... ನನ್ನನ್ನು ಹಾಗೂ ಈ ಹೆಣ್ಣು
ಮಗಳನ್ನು.......ಇವಳ ಹೆಸರು ಚಂದ್ರಲೇಖಾ ಅಂತ, ಎಂದು ನಾಗಪ್ಪ ಒಂದೇ ಸಮನೆ ಹೇಳಿದ, ಆಗ ಕತ್ತಲೆಯಲ್ಲಿಯೇ ಆ ಹೆಣ್ಣು ಮಗಳು ಚಂದ್ರಲೇಖ ಕಡೆ ಕಣ್ಣು ಹಾಯಿಸಿದ ಪುಟ್ಟಪ್ಪ ಕ್ಷಣಕಾಲ ಭಯಗೊಂಡರು, ಕಾರಣ ಆ ಹೆಂಗಸಿನ ಕಣ್ಣುಗಳು ಈ ಕತ್ತಲೆಯಲ್ಲೂ ಬೆಕ್ಕಿನ ಕಣ್ಣಿನ ರೀತಿ ಫಳ-ಫಳ ಹೊಳೆಯುತ್ತಿದ್ದುದ್ದನ್ನು ನೋಡಿದರು, ಕ್ಷಣಕಾಲ ಇಡೀ ಮೈಯೆಲ್ಲಾ ಬೆವೆತು ಹೋದಂತಾಯಿತು, ಆದರೂ ತುಂಬಾ ಧೈರ್ಯವಂತ ಪುಟ್ಟಪ್ಪ ಮುಖ ಒರೆಸುತ್ತಾ, ಆ ಹೆಂಗಸನ್ನು ನೋಡದೆ, ನಾಗಪ್ಪನನ್ನುದ್ದೇಶಿಸಿ ಅದೇನು ಒಗಟಿನ ರೀತಿ ಇದೆ ನಿನ್ನ ಮಾತುಗಳು.......ಸರಿಯಾಗಿ ಹೇಳಬಾರದೇ.......
ಎಂದರು, ಅದಕ್ಕೆ ನಾಗಪ್ಪ , ಈಗ ಎಲ್ಲವನ್ನೂ ವಿವರಿಸಲು ಸಮಯವಿಲ್ಲ, ನಾಳೆಬೆಳಿಗ್ಗೆ ಬಂದು ಸವಿವರವಾಗಿ ಹೇಳುವೆ, ನೀನು ನನ್ನ ಆಪದ್ಭಾಂದವನೆಂದು ನಿನ್ನ ಬಳಿ ಸಹಾಯ ಬೇಡಿ ಬಂದೆ, ನಾನೀಗಲೇ ಹೊರಡಬೇಕು, ಬೆಳಗಿನಜಾವವೇ ನಾನು ಕೆರೆ ನೀರು, ಗದ್ದೆಗಳಿಗೆ ಬಿಡಬೇಕು, ತುಂಬಾ ಕೆಲಸವಿದೆ , ಈಗ ನಾನು ಹೇಳಿದಂತೆ ಈ ಹೆಣ್ಣುಮಗಳನ್ನು ನಿನ್ನ ಜೊತೆ ಇಟ್ಟುಕೋ ಈ ಒಂದು ರಾತ್ರಿ, ನಾಳೆ ಬೆಳಿಗ್ಗೆಯೇ ಬಂದು ಇವಳನ್ನು ಕರೆದುಕೊಂಡು ಹೋಗುವೆ , ಎಂದನು ನಾಗಪ್ಪ.
ಅರೇ.....ಈ ಸರೀ ರಾತ್ರೀಲಿ.......ಈ ಕಗ್ಗತ್ತಲಿನ ಕಾಡಿನಲ್ಲಿ....... ಜಿಟಿ ಜಿಟಿ ಮಳೆಯಲ್ಲಿ ........ಈ ಚಿಕ್ಕ ಪೆಟ್ಟಿ ಅಂಗಡೀಲಿ........ಏನು ತಮಾಷೆ ಮಾಡ್ತಿದ್ದೀಯಾ...... ನಾಗಪ್ಪಾ.....ಅದೂ ಅಲ್ಲದೇ.......ಇವಳೂ ಒಂಟಿ ಹೆಣ್ಣು, ನಾಗಪ್ಪಾ..... ಎಂದರು ಪುಟ್ಟಪ್ಪ. ಅಯ್ಯೋ ಮಾರಾಯ ಈ ಅಂಗಡೀಲಿ ಇಟ್ಕೋ ಅಂತ ಅಂತೀನಾ......... ಅಂದನು ನಾಗಪ್ಪ,
ಮತ್ತೇ.......ರಾಗವಾಡಿದರು, ಪುಟ್ಟಪ್ಪ,
ಈಕೆ ಬೇರಾರೂ ಅಲ್ಲ ಪುಟ್ಟಪ್ಪ........ಈ ಚಂದ್ರಲೇಖ ಬೇರೆ ಯಾರೂ ಅಲ್ಲ, ಖಾಸಾ ನನ್ನ ಅಣ್ಣನ ಮಗಳು, ದೂರದ ಊರಿನಲ್ಲಿ ಅವಳ ಅಜ್ಜಿ , ಅಂದರೆ ನನ್ನ ತಾಯಿ, ಹಾಗೂ ತಂಗಿ ಮನೇಲಿ ಇದ್ದಳು, ಈಗ್ಗೆ ನಾಲ್ಕು ದಿನದ ಕೆಳಗೆ ನಮ್ಮ ಊರಿಗೆ ಬಂದವಳನ್ನು ನಮ್ಮ ಊರ ಗೌಡ ಇದಾನಲ್ಲವ ಸಿದ್ದೇಗೌಡ, ಅವನ ಎರಡನೇ ಮಗ ಪೋಲಿ ಪರಮೇಶಿ ಇದ್ದಾನಲ್ವಾ....... ಅವನು ಕಣ್ಣಾಕಿಬಿಟ್ಟಿದ್ದಾನೆ, ಏನಾರಾ ಮಾಡಿ ನನಗೆ ಮದುವೆ ಮಾಡಿಕೊಡಿ ಎಂದು ಇವಳ ಹಿಂದೆ ಬಿದ್ದಿದ್ದಾನೆ, ಜೊತೆಗೆ ಇವಳು ಬೇರೆ ಮಾತು ಬಾರದ ಮೂಗಿ........ ಅವಳು ಮೂಗಿ ಎಂದರೂ ಬಿಡದೆ ತುಂಬಾ ಕಾಡುತ್ತಿದ್ದಾನೆ, ಬಡ್ಡೀ ಮಗ.....ಈ ಒಂದು ರಾತ್ರಿ ಕಾಪಾಡು ಮಾರಾಯ...... ನಿನ್ನ ಹಳ್ಳಿಯ ನಿನ್ನ ಮನೆಯಲ್ಲಿಟ್ಕೋ...ಈ ರಾತ್ರಿ, ನಾಳೆ ಬೆಳಿಗ್ಗೆಯೇ ನನ್ನ
ಕೆಲಸ ಮುಗೀತಿದ್ದಂಗೆ ನಾನೇ ಖುದ್ದು ಬಂದು ಇವಳನ್ನು ಕರೆದುಕೊಂಡು ಹೋಗಿ ನನ್ನ ತಾಯಿ ಮನೇಲಿ ಬಿಟ್ಟು ಬರ್ತೀನಿ ಕಣಯ್ಯಾ..... ದಯವಿಟ್ಟು ಅಷ್ಟು ಮಾಡಿ ಪುಣ್ಯ ಕಟ್ಕೊಳ್ಳಯ್ಯಾ........ ಎಂದು ಅಂಗಲಾಚಿದ ನಾಗಪ್ಪ.
ಈಗ ಏನೂ ಯೋಚಿಸುವ ಸ್ಥಿತಿಯಲ್ಲಿ ಇರಲಿಲ್ಲ ಪುಟ್ಟಪ್ಪ, ಕಾರಣ ನಾಗಪ್ಪ, ಇವನ ಖಾಸಾ ಗೆಳೆಯ, ಈ ನೀರು ಗಂಟಿ ನಾಗಪ್ಪ, ಹಳ್ಳಿಗಳಿಂದ ಇವನಿಗೇ ಅಂತ ಊರ ರೈತರು ದಾನವಾಗಿ ಕೊಡುವ ತೆಂಗಿನಕಾಯಿ, ಅಡಿಕೆ, ವೀಳ್ಯದೆಲೆ, ಮಾವು , ದವಸಧಾನ್ಯ, ತರಕಾರಿಗಳನ್ನೆಲ್ಲಾ ಕಡಿಮೆ ಬೆಲೆಗೆ ಇದೇ ಪುಟ್ಟಪ್ಪನ ಅಂಗಡಿಗೇ ಕೊಡೋದು, ಅವನು ಕೊಟ್ಟಷ್ಟು ಹಣ ತೆಗೆದುಕೊಂಡು ತನ್ನ ಖರ್ಚಿಗೆ ಇಟ್ಟುಕೊಳ್ಳೋದು ಮಾಮೂಲಿ.
ಈ ಗೆಳೆತನದಿಂದ ಇಂದು ನಾಗಪ್ಪ, ಪುಟ್ಟಪ್ಪ ನನ್ನು ನಂಬಿ ಬಂದಿದ್ದು, ಪುಟ್ಟಪ್ಪನೂ ಒಲ್ಲೆ ಎನ್ನುವಂತಿರಲಿಲ್ಲ, ಈಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದ ಪುಟ್ಟಪ್ಪ, ಸರಿ......ನಾಗಪ್ಪಾ......ಮನೇಲಿ ನಮಗೇ ಇರಲು ಜಾಗ ಕಡಿಮೆ ಇದೆ......ಹೇಗೋ ಈ ಒಂದು ರಾತ್ರಿ ನನ್ನ ಹೆಂಡತೀಗೆ ಒಪ್ಪಿಸಿ ಈ ಹೆಣ್ಣು ಮಗಳನ್ನು ಇಟ್ಕೊಳ್ತೀವಿ, ಅದೂ ಅವಳು ನಿನ್ನ ಅಣ್ಣನ ಮಗಳೂ......ಮಾತು ಬಾರದ ಮೂಗಿ.....ಅಂತ ಬೇರೆ
ಹೇಳುತ್ತಿದ್ದೀಯ, ಅದರಿಂದ ಸಹಾಯ ಮಾಡ್ತೀನಿ, ನಾಳೆಬೆಳಿಗ್ಗೇನೆ ಬಂದು ಕರೆದುಕೊಂಡು ಹೋಗಿಬಿಡು ಮಾರಾಯಾ....... ನಿನ್ನ ದಮ್ಮಯ್ಯ.......ಎಂದು ಪುಟ್ಟಪ್ಪನೇ ನಾಗಪ್ಪನನ್ನು ಅಂಗಲಾಚಿಬೇಡಿಕೊಂಡನು.
ಸರೀನಪ್ಪಾ.....ಪುಟ್ಟಪ್ಪಾ......ನೀನು ದೇವರು ಕಣಯ್ಯಾ, ನಮ್ಮಿಬ್ಬರ ಪಾಲಿಗೆ , ನಾನೀಗಾಗಲೇ ಹೋಗ್ತೀನಿ ಎಂದವನೇ ಆ ಹೆಣ್ಣು ಮಗಳನ್ನು ಬೆನ್ನು ತಟ್ಟಿ ಆ ಕತ್ತಲೆಯಲ್ಲಿಯೇ ಏನೋ ಸಂಜ್ಞೆ ಮಾಡಿ ಹೇಳಿ ಅದೇ ಕತ್ತಲೆಯ ಹಾದಿಯಲ್ಲಿಯೇ ನಡೆದು ಕಣ್ಮರೆಯಾದನು ನಾಗಪ್ಪ.
ಇತ್ತ ಪುಟ್ಟಪ್ಪ ತನ್ನ ಅಂಗಡಿ ಬಾಗಿಲು ಜಡಿದು ಆ ಹೆಣ್ಣು ಮಗಳ ಜೊತೆ ಕತ್ತಲಿನಲ್ಲಿ ಹೆಜ್ಜೆ ಹಾಕುತ್ತಾ ರಂಗನಾಥಪುರದ ತನ್ನ ಮನೆಕಡೆ ಹೊರಟನು , ಮುಂದೆ ಆ ಹೆಣ್ಣುಮಗಳು ನಡೆಯುತ್ತಿದ್ದಾಳೆ, ಅವಳ ಗೆಜ್ಜೆ ಸದ್ದು ಬರುಬರುತ್ತಾ ಹೆಚ್ಚಾಗುತ್ತಿದೆ, ಕಾಡಿನ ಕಲರವ, ಜಡಿಮಳೆಯ ಸದ್ದಿನೊಂದಿಗೆ ಬೆರೆತು ಮತ್ತೊಂದು ಸಂಗೀತ ಹೊರಹೊಮ್ಮಿದೆ, ಹಿಂದೆ ಒಂದು ಬ್ಯಾಟರಿಯ ಬೆಳಕಿನಲ್ಲಿ ಪುಟ್ಟಪ್ಪ ಹೋಗುತ್ತಿದ್ದಾರೆ. ಈ ಪುಟ್ಟಪ್ಪ ನವರಿಗೆ ಆಗಾಗ್ಗೆ ಒಂದು ಆಶ್ಚರ್ಯ ಕಾಡುತ್ತಿತ್ತು, ಅದೇನೆಂದರೆ ಆಗಾಗ್ಗೆ ಆ ಹೆಣ್ಣು ಮಗಳು ಕಣ್ಮರೆಯಾದಂತೆ ಅನುಭವ ಆಗುತ್ತಿತ್ತು, ಆದರೂ ಅವಳ ಗೆಜ್ಜೆ ಸದ್ದು ಮಾತ್ರ ನಿರಂತರವಾಗಿ ಕೇಳುತ್ತಿತ್ತು,
ಕ್ಷಣಕಾಲ ಅವರು ಭಯಗೊಂಡವರಂತೆ ಕಂಡರೂ ಛೇ.........ಈ ಕತ್ತಲೆಯಲ್ಲಿ ಇದೆಲ್ಲಾ ಮಾಮೂಲಿ, ವಯಸ್ಸುಬೇರೆ ಆಯ್ತಲ್ಲಾ, ಕಣ್ಣು ಮಂಜು ಮಂಜು ಎಂದು ತನಗೆ ತಾನೇ ಜರಿದುಕೊಂಡು ಹಾಗೂ ಹೀಗೂ ತಮ್ಮ ಊರು ತಲುಪಿದರು ಪುಟ್ಟಪ್ಪ.
ಇವರುಗಳು ಮನೆ ತಲುಪಿದಾಗ ತನ್ನ ಕೈಗಡಿಯಾರ ನೋಡಿಕೊಂಡರು ಪುಟ್ಟಪ್ಪ ಆಗ ಸಮಯ ರಾತ್ರಿ ಒಂಬತ್ತು ಗಂಟೆಯಾಗಿಬಿಟ್ಟಿದೆ. ಈಕೆಯನ್ನು ಮನೆಯ ಹೊರಗೆ ನಿಲ್ಲಿಸಿ ಮನೆಯೊಳಗೆ ಹೋದ ಪುಟ್ಟಪ್ಪ, ತನ್ನ ಹೆಂಡತಿಗೆ ಎಲ್ಲವನ್ನೂ ವಿವರಿಸಿ ಅವಳ ಜೊತೆ ಹೊರಗೆ ಬಂದರೆ ಅರೆ......ಆ ಹೆಣ್ಣು ಕಾಣುತ್ತಿಲ್ಲ, ಅವರಿಬ್ಬರೂ ಆ ಒಂದು ಗಳಿಗೆ ಗಾಬರಿಯಾದರು, ಪುಟ್ಟಪ್ಪ ನವರಿಗೆ ಮತ್ತಷ್ಟು ಗಾಬರಿಯಾಗಿ ಇಡೀ ಮನೆಯ ಸುತ್ತಮುತ್ತಲೂ ಹಾರಾಡಿದರು, ಹುಡುಕಿದರು, ಎಲ್ಲೂ ಕಾಣಲಿಲ್ಲ, ಭಯಗೊಂಡವರು ಬೆವೆತುಹೋದರು , ಈ ಮೊದಲೇ ಆ ಹೆಣ್ಣು ಇವರಿಗೆ ಅನುಮಾನಬರುವ ರೀತಿ ಕಂಡಿದ್ದಾಳೆ, ಆಕೆಯನ್ನು ಮೊದಲಬಾರಿಗೆ ನೋಡಿದಾಗ ಅವಳು ಬೆಕ್ಕಿನ ಕಣ್ಣಿನಿಂದ , ಆನಂತರ ಕಾಡು ರಸ್ತೆಯಲ್ಲಿ, ಕತ್ತಲೆಯಲ್ಲಿ ಬರಬೇಕಾದರೆ, ಆಗಾಗ್ಗೆ ಕಣ್ಮರೆಯಾದಂತೆ ಆಗಿ , ಈಗ ಸಂಪೂರ್ಣವಾಗಿ ಕಾಣುತ್ತಲೇ ಇಲ್ಲವಲ್ಲಾ.........ಏನು ಮಾಡೋದು ಎಂದು ಮತ್ತಷ್ಟು ಬೆವೆತುಹೋದರು
ಪುಟ್ಟಪ್ಪ. ಆಗ ಪುಟ್ಪಪ್ಪನವರ ಹೆಂಡತಿ ಕೇಳಿದಳು , ಅದ್ಯಾರೋ ನಾಗಪ್ಪನ ಮಗಳು ಬಂದಿದ್ದಾಳೆ ಎಂದಿರಿ......ಇಲ್ಯಾರೂ ಇಲ್ವಲ್ರೀ.......ಯಾವ ನಾಗಪ್ಪನ ಮಗಳೂ ಇಲ್ಲ, ಯಾವ ಮೂಗಿಯೂ ಇಲ್ಲ, ನಿಮಗೇನಾದರೂ ಈ ಸಾರಿ ರಾತ್ರೀಲಿ ತಲೆಏನಾದ್ರೂ ಕೆಟ್ಟುಹೋಗಿದೆಯಾ, ಎಂದು ಒಬ್ಬಳೇ ಗೊಣಗುತ್ತಾ ಮನೆಯೊಳಗೆ ಹೋದಳು , ಒಳಗೆ ಹೋದ ಪುಟ್ಟಪ್ಪನವರ ಹೆಂಡತಿ ಜೋರಾಗಿ ತನ್ನ ಗಂಡನನ್ನು ಕೂಗಿ ಕರೆದಳು, ರ್ರೀ.....ರ್ರೀ.....ಇಲ್ಲಿದ್ದಾರೆ ನಿಮ್ಮ ನಾಗಪ್ಪನ ಮಗಳು, ಬನ್ರೀ......ಎಂದು ಕರೆದಳು, ಹೊರಗೆ ಕತ್ತಲಿನಲ್ಲಿ ಹುಡುಕುತ್ತಿದ್ದ ಪುಟ್ಟಪ್ಪನವರು, ತನ್ನ ಹೆಂಡತಿ ಕೂಗಿದ ಶಬ್ಧಕ್ಕೆ ಮತ್ತಷ್ಟು ಭಯಗೊಂಡವರಂತೆ ಮನೆಯೊಳಗೆ ಓಡಿ ಬಂದರೆ, ಅಲ್ಲೇ ಮೂಲೆಯಲ್ಲಿ ತನ್ನ ಎರಡೂ ಕಾಲಿನ ಮಂಡಿಗಳ ಮೇಲೆ ತನ್ನ ಮುಖವನ್ನಿಟ್ಟುಕೊಂಡು ಸಣ್ಣಗೆ ಅಳುತ್ತಿರುವ ಶಬ್ಧ ಕೇಳಿಸಿತು, ಅವಳನ್ನು ನೋಡಿದ ಪುಟ್ಟಪ್ಪನವರಿಗೆ ಸ್ವಲ್ಪ ಧೈರ್ಯ ಬಂದಿತು , ಸಧ್ಯ ಎಲ್ಲೋ ಈ ಕತ್ತಲೆಯಲ್ಲಿ ಕಣ್ಮರೆಯಾಗಿದ್ದಾಳೆಂದು ಗಾಬರಿಯಾಗಿದ್ದರು ಪುಟ್ಟಪ್ಪ, ಅವಳ ಬಳಿ ಬಂದು ಪುಟ್ಟಪ್ಪ ದಂಪತಿಗಳು ಆ ಮನೆಯ ಮಂದ ಬೆಳಕಿನಲ್ಲಿ, ಅಳುತ್ತಿರುವ ಅವಳ ಭುಜ ತಡವುತ್ತಾ ಅವಳನ್ನು ಸಮಾಧಾನಿಸಲು ತೊಡಗಿ
ಅವಳ ಮುಖವನ್ನು ಎತ್ತಿನೋಡಿದರೆ , ಅವಳು ಇವರಿಬ್ಬರನ್ನೂ ನೋಡುತ್ತಾ ಗಹಗಹಿಸಿ ನಗುತ್ತಾ, ತನ್ನ ಹಲ್ಲುಗಳನ್ನು ಕಡಿಯುತ್ತಾ ಅವರನ್ನೇ ದುರುಗುಟ್ಟಿ ನೋಡಿದಳು, ಮತ್ತದೇ ಅವಳ ಕಣ್ಣುಗಳು ಬೆಕ್ಕಿನ ಕಣ್ಣಿನ ಹಾಗೆ ಹೊಳೆಯುವುದನ್ನು ಕಂಡು ಪುಟ್ಟಪ್ಪನ ಹೆಂಡತಿ ಕಿಟಾರನೆ ಕಿರುಚುತ್ತಾ ತನ್ನ ಅಡುಗೆ ಕೋಣೆಯೊಳಗೆ ಓಡಿದಳು, ಇತ್ತ ಪುಟ್ಟಪ್ಪನವರು ಸ್ವಲ್ಪ ಧೈರ್ಯ ತಂದುಕೊಂಡು ಆ ಹುಡುಗಿಯನ್ನು ಅಳದಂತೆ ಸಮಾಧಾನಪಡಿಸಿ , ತಿನ್ನಲು ಏನಾದರೂ ಬೇಕಾ ಎಂದು ಸಂಜ್ಞೆ ಮಾಡಿ ಕೇಳಿದರು, ಅದಕ್ಕವಳು ಹ್ಹೂಂ ಎಂದು ತಲೆಯಾಡಿಸಿದಳು , ಅಡುಗೆಕೋಣೆಯಲ್ಲಿದ್ದ ಅವನ ಹೆಂಡತಿಯನ್ನು ಸಮಾಧಾನಿಸಿ, ಅವಳ ಕಣ್ಣು ಗಳೇ ಹಾಗಿರಬೇಕು ಇದಕ್ಕೆಲ್ಲಾ ಭಯಪಡೋದಾ, ಪಾಪ ತುಂಬಾ ನೊಂದಿದ್ದಾಳೆ ಆ ಹುಡುಗಿ, ಅವಳಿಗೆ ಏನಾದರೂ ಊಟವಿದ್ದರೆ ಕೊಡು ಎಂದು ಕೇಳಿದರು, ಅವರು ಹಾಗೂ ಅವರ ಹೆಂಡತಿ ಸ್ವಲ್ಪ ಆಹಾರವನ್ನು ತಂದುಕೊಡಲು ಬಂದರೆ ಆ ದಂಪತಿಗಳಿಗೆ ಮತ್ತಷ್ಟು ಆಶ್ಚರ್ಯ ಕಾದಿತ್ತು, ಅದೇನೆಂದರೆ ಇದುವರೆಗೂ ಕುಳಿತ ಸ್ಥಳದಲ್ಲಿ ಆ ಹುಡುಗಿ ಇರಲಿಲ್ಲ, ಏನಪ್ಪಾ ಇವಳು ಹೀಗೆ ಆಟವಾಡಿಸುತ್ತಿದ್ದಾಳೆ, ಇವಳು ನಿಜವಾಗಿಯೂ ನಾಗಪ್ಪನ ಮಗಳೇನಾ......ಅಥವಾ ಅವಳ ರೂಪದಲ್ಲಿರುವ ದೆವ್ವ, ಭೂತವಾ......ಎಂದು ಕ್ಷಣಕಾಲ ಅನುಮಾನವಾಯಿತು, ಅವರ ಅನುಮಾನ
ಸುಳ್ಳುಮಾಡುವಂತೆ ಆ ಹುಡುಗಿ ಮುಖ ಕೈಕಾಲು ತೊಳೆಯಲು ಬಚ್ಚಲುಮನೆಗೆ ಹೋಗಿ ಮುಖ ತೊಳೆಯುತ್ತಿದ್ದ ಶಬ್ಧ ಕೇಳಿ ಬಂದಿದ್ದರಿಂದ ದಂಪತಿಗಳು ನಿರಾಳವಾದರು. ಅವಳಿಗೆ ಮುಖ ಒರೆಸಲು ಒಂದು ವಸ್ತ್ರ ವನ್ನು ಕೊಡಲು ಪುಟ್ಟಪ್ಪನವರು ಅವಳ ಬಳಿ ಬಂದರೆ ಆ ಹೆಣ್ಣು ತನ್ನ ಮುಖ ಎತ್ತಿ ಪುಟ್ಟಪ್ಪನವರನ್ನು ದುರುಗುಟ್ಟಿ ನೋಡಿದಂತೆ ಕಂಡಳು, ಅವಳ ಮುಖದಿಂದ ನೀರಿನ ಬದಲಿಗೆ ರಕ್ತ ಸುರಿಯುವಂತೆ ಭಾಸವಾಗಿ ಪುಟ್ಟಪ್ಪನವರು ಅವಳಿಗೆ ನೇರವಾಗಿ ನೋಡಲು ಹೆದರಿದರು, ಆದರೂ ಅವಳಿಗೆ ವಸ್ತ್ರಕೊಟ್ಟು ಹಿಂತಿರುಗಿ ಎರಡು ಹೆಜ್ಜೆ ಮುಂದೆ ಬಂದು ನಂತರ ಹಿಂತಿರುಗಿ ಅವಳ ಪಾದದ ಕಡೆ ಕಣ್ಣು ಹಾಯಿಸಿದ ಪುಟ್ಟಪ್ಪನವರು ಮತ್ತಷ್ಟು ದಿಗಿಲುಗೊಂಡರು ಕಾರಣ ಅವಳ ಪಾದಗಳು ಸಾಮಾನ್ಯ ಜನರಂತೆ ಮುಂಭಾಗಕ್ಕಿರದೆ ಶರೀರದ ಹಿಂಭಾಗಕ್ಕೆ ದೆವ್ವಗಳಿಗಿರುವ ರೀತಿ ಇದ್ದವು, ಜೊತೆಗೆ ಅವಳು ತನ್ನ ತಲೆ ಕೂದಲುಗಳನ್ನು ಮುಖದ ತುಂಬೆಲ್ಲಾ ಹರಡಿಕೊಂಡಿದ್ದಳು, ಈಗ ಪುಟ್ಟಪ್ಪನವರಿಗೆ ಸಂಪೂರ್ಣವಾಗಿ ಮನವರಿಕೆಯಾಯಿತು. ಇವಳು ಮನುಷ್ಯಳಲ್ಲ, ಮನುಷ್ಯರೂಪದಲ್ಲಿರುವ ದೆವ್ವ ಎಂದು.
( ಆದರೆ ಆಗ ಆದದ್ದಿಷ್ಟು ಪುಟ್ಟಪ್ಪನವರು ಚಂದ್ರಲೇಖಳಿಗೆ ಮುಖ ಒರೆಸಲು ವಸ್ತ್ರ ಕೊಟ್ಟು
ಹಿಂದೆ ಬಂದು ಮತ್ತೆ ಅವಳನ್ನು ಹಿಂತಿರುಗಿ ನೋಡುವಾಗ್ಗೆ ಆ ಚಂದ್ರಲೇಖ ಇವರಿಗೆ ಬೆನ್ನು ತೋರಿಸುವ ರೀತಿಯಲ್ಲಿ ತಿರುಗಿಕೊಂಡು ನಿಂತು ತನ್ನ ಮುಖ ಒರೆಸಿಕೊಳ್ಳುತ್ತಿದ್ದಾಗ ಅವಳನ್ನು ನೋಡಿದ ಪುಟ್ಟಪ್ಪನವರಿಗೆ ಅವಳ ಪಾದ ತಿರುಗಿರುವ ರೀತಿ ಕಂಡಿದೆ , ಮತ್ತು ಅವಳ ಕೇಶರಾಶಿ ಮಾಮೂಲಿಯಂತೆ ಹಿಂಭಾಗಕ್ಕೇ ಇದ್ದಿತು, ಅದು ಅವರ ಭ್ರಮೆ, ಅದಕ್ಕೆ ಅವರು ಭಯಪಟ್ಟು ಈಕೆ ಮಾನವರೂಪದಲ್ಲಿರುವ ದೆವ್ವವೇ ಇರಬಹುದೆಂದುಕೊಂಡರು.)
ಆದರೆ ಈ ವಿಷಯವನ್ನು ತನ್ನ ಹೆಂಡತಿಗೆ ಹೇಳಲಿಲ್ಲ, ಇನ್ನು ಈಗಲೇ ತುಂಬಾ ಭಯಪಟ್ಟಿದ್ದಾಳೆ, ಮತ್ತಷ್ಟು ಭಯಪಡಿಸುವುದೇಕೆಂದುಕೊಂಡು ಈ ವಿಷಯವನ್ನು ತನ್ನಲ್ಲೇ ಇಟ್ಟುಕೊಂಡರು, ಪುಟ್ಟಪ್ಪನವರೇನೋ ತುಂಬಾ ಭಂಡ ಧೈರ್ಯದವರು, ಆದ್ದರಿಂದಲೇ ಆ ದಟ್ಟ ಕಾಡಿನ ನಡುವೆ ಒಬ್ಬರೇ ಏಕಾಂತವಾಗಿ ಟೀ ಅಂಗಡಿ ನಡೆಸೋದು, ಸರಿ ಆ ಚಂದ್ರಲೇಖ ತನ್ನ ಮುಖ, ಕೈ, ಕಾಲುಗಳನ್ನು ಸ್ವಚ್ಛಗೊಳಿಸಿಕೊಂಡು ಬಂದು ಪುಟ್ಟಪ್ಪನವರ ಹೆಂಡತಿ ಕೊಟ್ಟ ಆಹಾರ ಸೇವಿಸಿದ ಚಂದ್ರಲೇಖಾಳು, ಗಬಗಬನೆ ತಿಂದು ಮುಗಿಸಿದ ನಂತರ ಸ್ವಲ್ಪ ಜೋರಾದ ಧ್ವನಿಯಲ್ಲಿ, ಲೇ ಪುಟ್ಟಪ್ಪಾ............ ಮತ್ತಿಷ್ಟು ಆಹಾರ ಇದ್ದರೆ ಕೊಡೊಲೇ.........ಎಂದು ಜೋರಾಗಿ
ಕೂಗಿದಳು, ಇವಳು ಕೂಗಿದ ರಭಸಕ್ಕೆ ಸರಕ್ಕೆಂದು ಹಿಂತಿರುಗಿ ನೋಡಿದ ಪುಟ್ಟಪ್ಪನವರಿಗೆ ಒಂದು ಸಂದೇಹ ಉಂಟಾಯಿತು, ಅದೇನೆಂದರೆ......ಆ ನೀರುಗಂಟಿ ನಾಗಪ್ಪನವರು ಹೇಳಿದ್ದು ಈ ಹುಡುಗಿ, ಚಂದ್ರಲೇಖಾ ಮಾತು ಬಾರದ ಮೂಗಿಯೆಂದು, ಆದರೆ ಈಗ ನೋಡಿದರೆ.......ನನ್ನನ್ನೇ ಹೆಸರಿಡಿದು ಕೂಗ್ತಿದ್ದಾಳಲ್ಲಪ್ಪಾ......ಏನಪ್ಪಾ ಇದು ಇನ್ನೂ ಏನೇನು ಗ್ರಹಚಾರ ಕಾದಿದೆಯೋ.......ಮಾತು ಬರುವುದೋ, ಮಾತು ಬಾರದವಳೋ ......ಮನುಷ್ಯಳೋ........ ದೆವ್ವವೋ.......ಭೂತವೋ......ಒಂದೂ ತಿಳಿಯುತ್ತಿಲ್ಲ, ಎಂದು ಪುಟ್ಟಪ್ಪನವರು ನಡುಗುವ ಕೈಗಳಿಂದ ಮತ್ತಷ್ಟು ಉಳಿದ ಆಹಾರ ತಂದು ಆಕೆಗೆ ಕೊಟ್ಟರು, ಅದನ್ನೂ ಒಂದೇ ಉಸಿರಿಗೆ ತಿಂದು ಮುಗಿಸಿದಳು, ಚಂದ್ರಲೇಖ.
ನಂತರ ಪುಟ್ಟಪ್ಪ ದಂಪತಿಗಳು, ಈ ರಾತ್ರಿಯಲ್ಲಿ ಏಕೆ ಅವಳೊಡನೆ ಮಾತನಾಡುವುದು, ಅದೂ ಮಾತು ಬಾರದ ಆ ಚಂದ್ರಲೇಖಳೊಡನೆ ಸಂಜ್ಞೆ ಯಲ್ಲಿಯೇ ವ್ವವಹರಿಸಬೇಕು, ಬೆಳಗಾಗಲಿ, ಹೇಗೂ ಈ ಮಳೆಯಲ್ಲಿ, ಹಾಗೂ ಆ ಪುಂಡ ಪರಮೇಶಿಯ ಪುಂಡಾಟಿಕೆ ಯಿಂದ ತುಂಬಾ ನೊಂದಿದ್ದಾಳೆ, ಈಗ ರಾತ್ರಿ ಹತ್ತು ಗಂಟೆ ಸಮಯ , ಮಲಗಿ ಚೆನ್ನಾಗಿ ನಿದ್ರಿಸಲಿ, ಬೆಳಗಾಗೆದ್ದು ಮಾತನಾಡುವ
ಎಂದುಕೊಂಡ ಪುಟ್ಟಪ್ಪ ದಂಪತಿಗಳು ಅವಳಿಗೂ ತಮ್ಮ ಮನೆಯ ವರಾಂಡದಲ್ಲಿ ಮಲಗಲು ಅನುವು ಮಾಡಿಕೊಟ್ಟು, ತಾವು ತಮ್ಮ ಮಲಗುವ ಕೋಣೆಗೆ ಹೋಗಿ ಮಲಗಿದರು, ಚಂದ್ರಲೇಖಳೂ ಮಲಗಿದಳು.
ಮನೆಯಲ್ಲಿಯೇ ಇದ್ದರೆ ಪುಟ್ಟಪ್ಪ ಬೆಳಗಿನಜಾವ ಐದಕ್ಕೇ ಎದ್ದು ತನ್ನ ಚಹಾ ಅಂಗಡಿ ತೆರೆಯಲು ಹೋಗೋದು ವಾಡಿಕೆ, ಅದರಂತೆ ಅಂದೂ ಸಹ ತನ್ನ ಮಲಗುವ ಕೋಣೆಯಿಂದ ಎದ್ದು ಹೊರಬಂದು ನೋಡಿದರೆ ಚಂದ್ರಲೇಖ ತಾನು ಮಲಗಿದ್ದ ಜಾಗದಲ್ಲಿ ಇರಲಿಲ್ಲ, ಬಾಗಿಲು ಹಾಕಿದ್ದು ಹಾಗೇ ಇದೆ ಆದರೆ ಚಂದ್ರಲೇಖ ಮಾತ್ರ ಕಣ್ಮರೆಯಾಗಿದ್ದಾಳೆ, ಈಗಲೂ ತುಂಬಾ ದಿಗಿಲಾಯಿತು ಪುಟ್ಟಪ್ಪನವರಿಗೆ, ಏನಪ್ಪಾ ದೇವರೇ ಈ ಹುಡುಗಿಯ ಮಾಯಾಜಾಲ ಈಕೆಯೇನು ಮನುಷ್ಯಳೋ, ಮಾಂತ್ರಿಕಳೋ, ಭೂತ ಪ್ರೇತ ಪಿಶಾಚಿ ಏನಾಗಿರಬಹುದು ಇವಳು, ಎಂದು ಮನದಲ್ಲೇ ಯೋಚಿಸತೊಡಗುತ್ತಾ, ಭಯದಿಂದ ಇಡೀ ಮನೆಯನ್ನೆಲ್ಲಾ ತಡಕಾಡಿದರು , ಅವಳ ಸುಳಿವಿಲ್ಲ, ಆದರೆ ಅವಳು ಮಲಗಿದ್ದ ಜಾಗದಿಂದ ಅವರ ಮನೆಯ ಅಡುಗೆ ಕೋಣೆಯ ಕಿಟಕಿವರೆಗೂ ಅವಳ ರಕ್ತಸಿಕ್ತ ಪಾದದ ಗುರುತುಗಳು ಕಂಡವು, ಅದೂ ಕಿಟಕಿ, ಗೋಡೆ ಮೇಲೆಲ್ಲಾ ರಕ್ತದ ಕಲೆಗಳು ಯಥೇಚ್ಛವಾಗಿ ಕಂಡೆವು, ಈಗಂತೂ ಪುಟ್ಟಪ್ಪನವರು
ಇವರ ಜೀವಮಾನದಲ್ಲಿ ಮೊದಲಬಾರಿಗೆ ತುಂಬಾ ಭಯಭೀತರಾದರು.
ಹಾಕಿದ್ದು ಬಾಗಿಲು ಹಾಕಿದಂತೆಯೇ ಇದೆ, ಆದರೆ ಕಿಟಕಿವರೆಗೂ ನಡೆದುಕೊಂಡು ಹೋಗಿ, ಚಿಕ್ಕ ಕಿಟಕಿಯಲ್ಲಿ ಅವಳು ಹೋಗಿರುವ ಪಾದದ ಗುರುತುಗಳಿವೆ, ಅದಾವ ಸಮಯದಲ್ಲಿ ಅದೇಗೆ ಇಷ್ಟು ಚಿಕ್ಕಜಾಗದಲ್ಲಿ ಹೇಗೆ ನುಸುಳಿಕೊಂಡು ಹೋಗಿರುವಳು, ಒಂದು ಬೆಕ್ಕೂ ಸಹ ಹೋಗಲು ಆಗದ ಈ ಕಿಟಕಿಯಲ್ಲಿ ಹೇಗೆ ಹೋದಳು, ಎಂದು ತುಂಬಾ ಭಯಗೊಂಡು ಆ ಬೆಳಗಿನ ಜಾವದ ಕತ್ತಲಿನಲ್ಲಿ ಅಂಗಡಿಗೆ ಹೋಗಲೂ ಭಯಪಟ್ಟು ಪುನಃ ಮಲಗುವ ಕೋಣೆಗೆ ಹೋಗಿ ಮಲಗಿದರು ಪುಟ್ಟಪ್ಪ.
ಇವರು ಮಲಗಲು ಹಿಂತಿರುಗಿ ಬಂದಿದ್ದು ಗಮನಿಸಿದ ಅವರ ಹೆಂಡತಿ, ಏಕ್ರೀ.....ಅಂಗಡೀ ತೆರೆಯೊಲ್ವೇ.....ಎಂದು ನಿದ್ರೆಯಿಂದ ಹೊರಳಾಡುತ್ತಾ ಕೇಳಿದಳು, ಇಲ್ಲ ಕಣೇ ......ಯಾಕೋ ತುಂಬಾ ಭಯವಾಗ್ತಿದೆ ಕಣೇ.......ಅಂದರು ಪುಟ್ಟಪ್ಪ.
ಯಾಕ್ರೀ......ಎಂದು ಮರುಪ್ರಶ್ನೆ ಮಾಡಿದಳು ಅವರ ಹೆಂಡತಿ,
ಲೇ........ಆ ಚಂದ್ರಲೇಖ ಮತ್ತೆ ಕಾಣ್ತಿಲ್ಲ ಕಣೇ........
ಯಾಕೋ ಭಯವಾಗುತ್ತಿದೆ, ಎಂದರು, ಹೌದಾ......ಎಂದು ಭಯದಿಂದ ಮಲಗಿದ್ದಲ್ಲಿಂದ
ಮೇಲೇದ್ದು ಬನ್ರೀ........ಹೊರಗೆಲ್ಲಾದರೂ ಹೋಗಿರಬೇಕು, ಹುಡುಕೋಣ....... ಎಂದಳು,
ಈ ರಾತ್ರಿಯಲ್ಲಿ ಅದೆಲ್ಲಿಗೆ ಹೋಗ್ತಾಳೋ.......ಅದೂ ಬಾಗಿಲಿನಿಂದ ಹೋಗಿಲ್ಲ, ಎಂದರು.
ಮತ್ತೆ........? ಮತ್ತೆಲ್ಲಿಂದು ಹೋದಳು, ಎಂದು ಮರು ಪ್ರಶ್ನೆ ಹಾಕಿದಳು, ಪುಟ್ಟಪ್ಪನವರ ಹೆಂಡತಿ,
ಅದೇ ಅಡುಗೆ ಕೋಣೇಲಿ........ಅಡುಗೆ ಕೋಣೇಲಿ ಒಂದು ಚಿಕ್ಕ ಕಿಟಕಿಯ ಮುಖಾಂತರ ಹೋಗಿದ್ದಾಳೆ ಕಣೇ......ಎಂದು ಭಯಗೊಂಡವರಂತೆ ಹೇಳಿದರು ಪುಟ್ಟಪ್ಪ , ಏನ್ರೀ.....ನೀವ್ ಹೇಳ್ತಿರೋದು, ನಿಜಾನಾ....
ಬನ್ನಿ ವರಾಂಡಾದಲ್ಲಿ ನೋಡೋಣ ಎಂದು ಇಬ್ಬರೂ ಚಂದ್ರ ಲೇಖಳು ಮಲಗಿದ್ದ ಜಾಗಕ್ಕೆ ಇಬ್ಬರೂ ಬಂದು ಲೈಟ್ ಸ್ವಿಚ್ ಹಾಕಿ ಬೆಳಕಿನಲ್ಲಿ ನೋಡಿದರೆ.......... ನೋಡಿದರೆ.........ಅಲ್ಲೇ ಅದೇ ಹಾಸಿಗೆ ಮೇಲೆ ಮಲಗಿ ಗೊರಕೆ ಸಮೇತ ನಿದ್ರಿಸುತ್ತಿದ್ದಾಳೆ ಚಂದ್ರಲೇಖ.
ಇಲ್ಲೇ ಇದಾಳಲ್ರೀ......ನಿಮ್ಮ ಗೆಳೆಯನ ಅಣ್ಣನ ಮಗಳು, ಮೂಗಿ ಚಂದ್ರಲೇಖ, ಎಂದು ಗೊಣಗುತ್ತಾ, ಗಂಡನನ್ನು ಶಪಿಸುತ್ತಾ ಮತ್ತೆ ತನ್ನ ಹಾಸಿಗೆಮೇಲೆ ಹೋಗಿ ಮಲಗಿದಳು ಪುಟ್ಟಪ್ಪನ ಹೆಂಡತಿ, ಈಗ ನಿಜವಾಗಿಯೂ ಪುಟ್ಟಪ್ಪನವರು ಮತ್ತಷ್ಟು ದಿಗಿಲು ಗೊಂಡು ಅಡುಗೆ ಕೋಣೆಯ ಕಿಟಕಿ ಬಳಿ, ಹೋಗಿ ನೋಡಿದರೆ ಅಲ್ಲಿ ಯಾವ ರಕ್ತದ, ಪಾದದ ಕಲೆಗಳೂ ಇಲ್ಲ, ಅಲ್ಲೇ ಏಕೆ ವರಾಂಡದಿಂದ ಕಿಟಕಿವರೆಗೂ
ಯಾವುದೇ ರಕ್ತದ ಕಲೆಗಳಿಲ್ಲದ್ದನ್ನು ನೋಡಿದ ಪುಟ್ಟಪ್ಪನವರ ತಲೆ ವಿಪರೀತ ಕೆಟ್ಟು ಹೋಯಿತು.
ಈ ದಿನ ಅಂಗಡಿಗೆ ಹೋಗೋದೇನು ಬೇಡ, ಯಾಕೋ ತುಂಬಾ ತಲೆನೋವು ಎಂದುಕೊಂಡು ವರಾಂಡದ ಲೈಟುಗಳನ್ನು ಆಫ್ ಮಾಡಿಕೊಂಡು ಮತ್ತೆ ಅವರೂ ಹೋಗಿ ಹೆಂಡತಿಯ ಪಕ್ಕದಲ್ಲಿ ಮತ್ತೆ ಮಲಗಿದರು, ಆದರೂ ಎಷ್ಟು ಪ್ರಯತ್ನಪಟ್ಟರೂ ನಿದ್ರೆ ಮಾತ್ರ ಬರಲಿಲ್ಲ ಇಬ್ಬರಿಗೂ, ಇಷ್ಟೆಲ್ಲಾ ಗಲಿಬಿಲಿಯಲ್ಲಿ ಹೇಗೆ ನಿದ್ರಿಸೋದು, ಹಾಗೇ ಬೆಳಿಗ್ಗೆ ಆರು ಗಂಟೆವರೆಗೂ ಹೊರಳಾಡಿ ಎದ್ದು ಹಾಗೇ ಊರಿನಲ್ಲಿ ಒಮ್ಮೆ ತಿರುಗಾಡಿಕೊಂಡು ಬರೋಣವೆಂದುಕೊಂಡು ಮತ್ತೆ ಹಾಸಿಗೆಯಿಂದ ಎದ್ದು ಸೌಚಾಲಯದ ಕಡೆ ಹೊರಟು ಹಾಗೇ ಒಮ್ಮೆ ಚಂದ್ರಲೇಖ ಮಲಗಿದ್ದ ಜಾಗದಕಡೆ ಕಣ್ಣಾಡಿಸಿದರೆ ಮತ್ತದೇ ರಾಗ , ಮತ್ತದೇ ಹಾಡು ಎನ್ನುವಂತಾಯಿತು, ಪುಟ್ಟಪ್ಪನವರಿಗೆ .
ಏನಪ್ಪಾ ಎಂದರೆ ಚಂದ್ರಲೇಖ ಅವಳು ಮಲಗಿದ್ದ ಜಾಗದಲ್ಲಿ ಅವಳಿಲ್ಲ, ಬದಲಿಗೆ ಆಕೆಯ ಹಾಸಿಗೆ, ಹೊದಿಕೆ ಎಲ್ಲವೂ ರಕ್ತಸಿಕ್ತವಾಗಿ ಮುದುರಿಬಿದ್ದಿದೆ, ಆದರೆ ಅವಳಿಲ್ಲ, ಹೇಳದೆ ಕೇಳದೆ ಮಾಯವಾಗಿದ್ದಳು, ಮತ್ತೆ ಮನೆಯ ಬಾಗಿಲು ಹಾಕಿದಂತೆಯೇ ಇದೆ, ಮತ್ತಷ್ಟು ಭಯಗೊಂಡು ಪುಟ್ಟಪ್ಪ ನಡುಗುತ್ತಾ ಅಡುಗೆ ಕೋಣೆ ಕಡೆ ನಡೆದು ನೋಡಿದರೆ ಆ ಕಿಟಕಿ, ಗಾಜು
ತುಂಬೆಲ್ಲಾ ರಕ್ತಮಯವಾಗಿದೆ, ಆ ಗೋಡೆಯೆಲ್ಲವೂ ರಕ್ತಮಯ, ಅವಳು ಮಲಗಿದ್ದಲ್ಲಿಂದ ಆ ಕಿಟಕಿ ವರೆಗೂ ರಕ್ತದ ಕಲೆಗಳು ತುಂಬಿದೆ, ಆದರೆ ಹೇಗೆ ಹೋದಳು, ಇಷ್ಟು ಚಿಕ್ಕ ಕಿಟಕಿಯಲ್ಲಿ ಎಂದು, ತನ್ನ ಹೆಂಡತಿಯನ್ನು ನಿದ್ರೆಯಿಂದ ಎಬ್ಬಿಸಿದರು, ಅವಳೂ ಕೋಪದಿಂದಲೇ ಗೊಣಗುತ್ತಾ ಎದ್ದು ಹೊರಬಂದು ನೋಡಿದರೆ ಈಬಾರಿ ಖಂಡಿತಾ ಅವಳ ಕಣ್ಣಿಗೆ ರಕ್ತದ ಕಲೆಗಳು ಯಥೇಚ್ಛವಾಗಿ ಕಂಡವು, ಆದರೆ ಚಂದ್ರಲೇಖಾ ಸುಳಿವಿಲ್ಲ, ಅವಳಂತೂ ಗಾಬರಿಯಿಂದ ಕಿಟಾರನೆ ಕಿರುಚುತ್ತಾ ತನ್ನ ಮನೆಯ ಬಾಗಿಲು ತೆಗೆಯಲು ಓಡಿದಳು, ಆದರೆ ಬಾಗಿಲು ತೆಗೆಯಲಾಗುತ್ತಿಲ್ಲ,
ಆಗ ಇವರ ಮನೆಯ ಗೋಡೆಗಡಿಯಾರದಲ್ಲಿ ಸಮಯವೇನೋ ಬೆಳಗಿನ ಆರೂವರೆ ಗಂಟೆ ಇಷ್ಟರಲ್ಲಿ ಇಡೀ ಊರಿಗೆ ಬೆಳಗು ಆಬೇಕಿತ್ತು , ಆದರೆ ಇಡೀ ಊರಿಗೆ ಊರೇ ಇನ್ನೂ ನಿದ್ರಿಸುತ್ತಿದೆ, ಇನ್ನೂ ಕತ್ತಲೆಯೇ ಇದೆ, ಕೋಳಿಗಳೂ ಕೂಗಿಲ್ಲ, ಆದರೆ ಹೊರಗೆ ನಾಯಿಗಳು ಗೊಳೋ ಎಂದು ಅಳುವ ಶಬ್ದ ಮಾತ್ರ ಬರುತ್ತಿದೆ, ಅಂಥಾ ಸಮಯವದು, ಒಳಗೆ ಚಂದ್ರಲೇಖ ಇಲ್ಲ, ಇಡೀ ಮನೆಯಲ್ಲಿ, ಹಾಸಿಗೆ, ಹೊದಿಕೆಗಳಲ್ಲಿ ರಕ್ತದ ಕಲೆಗಳಿವೆ, ಕಿಟಕಿಯಲ್ಲಿಯೂ ಸಹ, ಆದರೆ ಹೊರಗೆ ಹೋಗೋಣವೆಂದರೆ ಬಾಗಿಲು
ತೆರೆಯಲಾಗುತ್ತಿಲ್ಲ, ಜೊತೆಗೆ ಇನ್ನೂ ಬೆಳಗಾಗಿಲ್ಲ,
ಈಗ ಪುಟ್ಟಪ್ಪ ದಂಪತಿಗಳು ಒಂದು ನಿರ್ಧಾರಕ್ಕೆ ಬಂದಿದ್ದರು ಓಹೋ ಇದು ದೆವ್ವದ ಕಾಟವೇ, ಅವಳೂ ಸಹ ದೆವ್ವವೇ ಎಂದು ಮನವರಿಕೆಯಾಯಿತು, ಆದರೆ ಇವಳೇನೋ ದೆವ್ವವೆಂದು ನಂಬಿಸಿದ್ದಳು, ಆದರೆ ಅವಳನ್ನು ಕರೆತಂದು ಆಸಾಮಿ ಇವಳ ಚಿಕ್ಕಪ್ಪ, ಅದೇ...... ನೀರು ಗಂಟಿ ನಾಗಪ್ಪ.........ಅವನನ್ನು ಈಗ ಹುಡುಕಬೇಕು, ಅವನಾದರೂ ನಿಜವಾದ ನಾಗಪ್ಪನಾ.....ಅಥವಾ ಅವನ ವೇಷದಲ್ಲಿರುವ ದೆವ್ವವಾ...... ಎಂದುಕೊಂಡು ಇತ್ತ ಮಲಗುವ ಹಾಗೂ ಇಲ್ಲ, ಹೊರಗೆ ಹೋಗುವ ಹಾಗೂ ಇಲ್ಲ, ಇನ್ನು ಇಂಥಾ ಕಷ್ಟ ಪರಿಸ್ಥಿತಿಯಲ್ಲಿ ಇವರುಗಳಿಗೆ ಹೇಗೆ ತಾನೆ ನಿದ್ರೆ ಬಂದೀತು, ಹೇಗೋ ಧೈರ್ಯ ತಂದುಕೊಂಡು ಬೆಳಗಾಗುವವರೆಗೂ ತುದಿಗಾಲಲ್ಲಿ ಅವರ ಮಲಗುವ ಕೋಣೆಯಲ್ಲಿ ಕುಳಿತರು ಪುಟ್ಟಪ್ಪ ದಂಪತಿಗಳು. ಬೆಳಗಾಗುವರೆಗೂ ಹಾಗೇ ಚಿಂತಿಸಿ, ಕೊನೆಗೆ ಬೆಳಗಾದ ನಂತರ ಎದ್ದು ಚಂದ್ರಲೇಖಳು ಮಲಗಿದ್ದ ಜಾಗದಲ್ಲಿ ಏನೂ ಆಗೇಇಲ್ಲವೆನ್ನುವಂತೆ ಆಕೆಯ ಹಾಸಿಗೆ, ಹೊದಿಕೆಗಳು ಶುಭ್ರವಾಗೇಇವೆ, ಅಡುಗೆ ಕೋಣೆಯಲ್ಲಿಯೂ ಕಿಟಕಿಯ ಹತ್ತಿರವೂ ಯಾವುದೇ ರಕ್ತದ ಕಲೆಗಳಿಲ್ಲದೇ ಯಥಾಪ್ರಕಾರ ವಾಗಿವೆ, ಆದರೆ ಆ ಮಾರ್ಜಾಲ ಚಂದ್ರಲೇಖ ಮಾತ್ರ ಹೇಗೆ
ಮನೆಯಿಂದ ಹೊರಗೆಹೋದಳು ಎಂಬುದೇ ಯಕ್ಷಪ್ರಶ್ನೆ ಆಯಿತು ಪುಟ್ಟಪ್ಪ ದಂಪತಿಗಳಿಗೆ. ನಂತರ ಮನೆಯ ಬಾಗಿಲು ತೆರೆದರೆ ಅದು ತೆರೆದುಕೊಂಡಿತು,
ಏನಪ್ಪಾ ಪವಾಡ ದೇವರೇ.....ಎಂದು , ಸಧ್ಯ ಬೆಳಗಾಯಿತಲ್ಲ, ಈಗ ಹೋಗಿ ಆ ನೀರು ಗಂಟಿ ನಾಗಪ್ಪನನ್ನು ಪತ್ತೆ ಮಾಡಿಕೊಂಡು ಬರಬೇಕೆಂದು ಕೊಂಡು ಹಾಗೇ ರಂಗನಾಥಪುರದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು ಪುಟ್ಟಪ್ಪ, ಆ ಊರಿನ ಸುಮಾರು ಜನರನ್ನು ಕೇಳಿದರೂ ನಾಗಪ್ಪನ ಸುಳಿವೇ ಇಲ್ಲ, ಕೆಲವರು, ಅವನನ್ನು ನೋಡಿಯೇ ತಿಂಗಳಾಯಿತು ಎಂದರೆ , ಮತ್ತೆ ಕೆಲವರು ಅವನು ಕೆಲಸ ಬಿಟ್ಟು ಆರು ತಿಂಗಳಾಯಿತು, ಎನ್ನುವವರು, ಕೆಲವರಂತೂ ಆತನನ್ನು ನೋಡಿದರೆ, ನಾನು ಕೇಳಿದೆನೆಂದು ಹೇಳು ಎಂದು ಪುಟ್ಟಪ್ಪನಿಗೇ ಮರುಪ್ರಶ್ನೆ ಹಾಕುತ್ತಿದ್ದರು, ಆದರೂ ನಾಗಪ್ಪನ , ಚಂದ್ರಲೇಖಾ ಸುಳಿವಿಲ್ಲ.
ಪುಟ್ಟಪ್ಪ ಹೀಗೇ ಹೋಗುತ್ತಾ ಊರ ಮಧ್ಯದ ಒಂದು ಚಹಾ ಅಂಗಡಿಗೆ ಹೋಗಿ ಬಿಸಿ ಬಿಸಿ ಚಹಾ ಕುಡಿಯೋಣವೆಂದು ಹೋಗಿ ಕುಳಿತರು, ಅದರ ಮಾಲೀಕರು ರಾಮಪ್ಪನವರು ಅವರೂ ಈ ಪುಟ್ಟಪ್ಪನವರ ಗೆಳೆಯರೇ, ಅವರೇ ಮಾತು ಪ್ರಾರಂಭಮಾಡಿದರು, ಏನು ಪುಟ್ಟಪ್ಪಾ...... ಅಪರೂಪಕ್ಕೆ ಊರೊಳಗೆ ಬಂದುಬಿಟ್ಟಿರುವಿರಿ, ಏಕೆ
ಚಹಾ ಅಂಗಡಿ ತೆರೆದಿಲ್ಲವೇ.......ಕಾರಣ ಏನು, ಏನಾದರೂ ಮನೆಯಲ್ಲಿ ಶುಭ ಕಾರ್ಯವೇ, ಹಬ್ಬವೇ.....ಎಂದು ಒಂದೇ ಸಮನೆ ಐದಾರು ಪ್ರಶ್ನೆಗಳನ್ನು ಕೇಳಿದರು ಅವರು, ಪುಟ್ಟಪ್ಪ ಮಾತನಾಡಲೂ ಬಿಡದೆ.
ನಂತರ ಪುಟ್ಟಪ್ಪನವರೇ ಮಾತು ಪ್ರಾರಂಭಿಸಿದರು, ಹೀಗೆ ಹಿಂದಿನ ರಾತ್ರಿ ನಡೆದ ವೃತ್ತಾಂತಗಳನ್ನೆಲ್ಲಾ ಸವಿವರವಾಗಿ ಹೇಳಿದರು,
ಹೌದಾ ಪುಟ್ಟಪ್ಪಾ........ಕಳೆದವಾರ ನೀವು ಅನುಭವಿಸಿದಂತಹ ಅದೇ ತೆರನಾದ ಸಮಸ್ಯೆಯನ್ನು ಈ ಊರು ಮುಂದಿನ ಹೆಬ್ಬಾಗಿಲಿನ ಪಕ್ಕದಲ್ಲಿರುವ ಚಹಾ ಅಂಗಡಿ ಮಾಲೀಕರಿದ್ರಲ್ವಾ........ಅದೇ ರಾಜಾಭಟ್ರು.......ಅಂತಾ......ನಿನಗೂ ಗೊತ್ತಲ್ಲಾ ಮಾರಾಯ.......ಪಕ್ಕದ ಊರು ಶಿವಪುರದವರು ಅವರು.....ಹೀಗೇ ನೀರು ಗಂಟಿ ನಾಗಪ್ಪನೇ ಒಂದು ಹೆಣ್ಣುಮಗಳನ್ನು ಕರೆತಂದು ಈಕೆ ನನ್ನ ಮಾವನ ಮಗಳು, ಇವಳ ಕಿವಿ ಸಂಪೂರ್ಣ ಕೇಳಿಸೊಲ್ಲ, ಹಾಗೆ ಹೀಗೆ ಅಂತ ರಾತ್ರಿ ಅಂಗಡಿ ಮುಚ್ಚುವ ಸಮಯಕ್ಕೆ ಬಂದು ಅವರ ಕಾಲು ಹಿಡಿದುಕೊಂಡು ಆ ಒಂದು ರಾತ್ರಿ, ಅವರ ಮನೇಲಿ ಇಟ್ಟುಕೊಳ್ಳಲು ಕೋರಿಕೊಂಡರಂತೆ, ಅದೂ ಆಕೆ ಹೆಸರು ಅದೇನೋ.......ಅದೇನೋ.........ಮರೆತು
ಬಿಟ್ಟೆನಲ್ಲಾ.....ಆಕೆ ಹೆಸರು....ಎಂದು ತುಂಬಾ ತಲೆ ಕೆಡೆಸಿಕೊಂಡರು, ಆಗ ಪುಟ್ಟಪ್ಪ ನವರು ಕೇಳಿದರು, ಆಕೆ ಹೆಸರು ಚಂದ್ರಲೇಖ ಅಂತಾನಾ ......ಎಂದು,
ಅಲ್ಲಪ್ಪಾ.......ಆಕೆ ಹೆಸರು ನಾಗಲೇಖ........ಅಂತಾ.
ಅಂದರು.
ಮತ್ತೆ ಮುಂದೇನಾಯಿತು, ಹೇಳು ಮಾರಾಯ, ನನಗೂ ತುಂಬಾ ಭಯವಾಗುತ್ತಿದೆ, ಎಂದು ಅವರು ಕೊಟ್ಟ ಬಿಸಿ, ಬಿಸಿ ಚಹಾ ಕುಡಿಯುತ್ತಾ ಹಾಗೇ ಒಂದು ಸಿಗರೇಟನ್ನು ಕಚ್ಚಿ, ಅದರ ಹೊಗೆ ಬಿಡುತ್ತಾ ಪುಟ್ಟಪ್ಪ ಕೇಳಿದರು. ಅಯ್ಯೋ....ಅದರ ಕಥೆ ಏನ್ ಕೇಳ್ತೀಯಪ್ಪಾ.......ನೀನೇ ಅದೃಷ್ಟವಂತ, ಅವಳಿಂದ ಬಿಡಿಸಿಕೊಂಡು ಬದುಕಿಬಂದಿರುವೆ, ಆ ರಾಜಾಭಟ್ರು........ಪಾಪ, ಅವರು ತುಂಬಾ ಭಯಗೊಂಡು ತನ್ನ ಪ್ರಾಣ ಕಳಕೊಂಡ್ರು........
ಹೇಗಾಯ್ತು ಅವರ ಅಂತ್ಯ, ಎಂದು ತುಂಬಾ ಭಯಗೊಂಡು ಮತ್ತೆ ಮತ್ತೆ ಕೇಳಿದರು ಪುಟ್ಟಪ್ಪ,
ನಿನ್ನ ಹಾಗೇ ಅದೇ ನೀರು ಗಂಟಿ ನಾಗಪ್ಪ ಈ ನಾಗಲೇಖ ಜೊತೆ ಬಂದು ಈ ಒಂದು ರಾತ್ರಿ ನಿನ್ನ ಮನೇಲಿಟ್ಕೋ ಅಂತ ಅಂದು ಆ ನಾಗಲೇಖಾ ನಾ ರಾಜಾಭಟ್ರ ಬಳಿ ಬಿಟ್ಟು ಹಿಂತಿರುಗಿ ಹೋಗಿದ್ದಾನೆ, ಈ ರಾಜಾಭಟ್ರು, ಆ ಹೆಂಗಸು , ನಾಗಲೇಖಾಳನ್ನು ಜೊತೆಯಲ್ಲಿ ಕರೆದುಕೊಂಡು ಶಿವಪುರದ ತನ್ನ ಮನೆಕಡೆ ಆ ಮಳೆಯ ಕಳೆದ ತಿಂಗಳ
ಅಮಾವಾಸ್ಯೆಯ ರಾತ್ರಿಯಲ್ಲಿ ಕತ್ತಲಿನಲ್ಲಿಯೇ ಹೊರಟಿದ್ದಾರೆ, ಮನೇನೂ ತಲುಪಿ ಆಗಿದೆ, ಆಗ ಒಳಗಡೆ ಇದ್ದ ತನ್ನ ಮಗನನ್ನು ಹೊರಕ್ಕೆ ಕರೆದು ನಡೆದ ವಿಷಯವನ್ನು ವಿವರಿಸಿದ್ದಾರೆ, ಮಗ ಶಂಕರಭಟ್ಟರ ಹತ್ತಿರ, ಆ ಮಗನಿಗೇಕೋ ತುಂಬಾ ಅನುಮಾನ ಬಂದಿದೆ, ಈ ನಾಗಲೇಖಾಳನ್ನು ನೋಡಿ, ಕಾರಣ ರಾಜಾಭಟ್ರ ಮಗ ಶಂಕರಭಟ್ಟರು ಆಂಜನೇಯನ ದೇವಾಲಯದ ಪೂಜಾರಿ, ಅವರೂ ಕೆಲವು ಮಂತ್ರ, ತಂತ್ರಗಳನ್ನು ಬಲ್ಲವರು, ಅವರಿಗೆ ಈಕೆ ನರಮನುಷ್ಯಳಲ್ಲ ಎಂದು ತನ್ನ ಮಂತ್ರ ಶಕ್ತಿಯಿಂದ ಗೊತ್ತಾಗುತ್ತಿದ್ದಂತೆ ಮನೆಯ ಒಳಗೆ ಹೋಗಿ, ಅವಳನ್ನು ಹದ್ದುಬಸ್ತಿನಲ್ಲಿಡಲು ಕೆಲವು ಮಂತ್ರ ಹಾಕಿ ದೆವ್ವಕ್ಕೆ ದಿಗ್ಬಂಧನ ಮಾಡಲು ಪೂಜೆ ಸಾಮಾನು, ಹುಣಸೆ ಪೊರಕೆ ತರಲು ಒಳಗೆ ಹೋಗಿದ್ದಾರೆ, ಅಷ್ಟೇ... ಅಷ್ಟರಲ್ಲಿ ಈ ನಾಗಲೇಖಾಳಿಗೆ ಇದೆಲ್ಲವೂ ಅರ್ಥವಾಗಿ ಇನ್ನು ನನ್ನ ಕಥೆ ಮುಗಿಯಿತು, ನನಗೆ ಈ ಮಂತ್ರವಾದಿ ದಿಗ್ಬಂಧನ ಮಾಡಿ ಸೆರೆಯಲ್ಲಿರಿಸುವನೆಂದು ಅರಿತು, ಕೂಡಲೇ ರಾಜಾಭಟ್ರ ಕುತ್ತಿಗೆಗೆ ಕೈ ಹಾಕಿ ಬಿಗಿಯಾಗಿ ಹಿಸುಕಲು ಅವರ ಕುತ್ತಿಗೆ ಹಿಡಿದಿದ್ದಾಳೆ, ಆದರೆ ರಾಜಾಭಟ್ರ ಮಗ ಬರುವುದು ಸ್ವಲ್ಪ ತಡವಾಗಿದ್ದರಿಂದ ರಾಜಾಭಟ್ರು ಉಸಿರು ಕಟ್ಟಿ ಬಾಯಿಯಿಂದ ರಕ್ತಕಾರಿ ಜೋರಾಗಿ ಕಿರುಚಿಕೊಳ್ಳುತ್ತಾ ಪ್ರಾಣಬಿಟ್ಟಿದ್ದಾರೆ,
ಅಲ್ಲದೇ ಆ ನಾಗಲೇಖ ಅದೇ ಕತ್ತಲೆಯಲ್ಲಿ ಓಡಿ ಮಾಯವಾಗಿದ್ದಾಳೆ.
ಬೆಳಗಾಗುತ್ತಿದ್ದಂತೆ ಈ ವಿಷಯ ಊರೊಳಗೆಲ್ಲಾ ಹೊರಡಿ, ಇದು ದೆವ್ವದ ಮಾಯೆಯೇ ಅಂದುಕೊಂಡು ರಾಜಾಭಟ್ಟರ ಅಂತ್ಯಸಂಸ್ಕಾರ ಮಾಡಿ ಮುಗಿಸಿದ ಶಂಕರಭಟ್ಟರು, ತನ್ನ ತಂದೆ ರಾಜಾಭಟ್ರು ಇದೇ ನಾಗಲೇಖಾಳ ಸಹವಾಸದಿಂದ ತನ್ನ ಪ್ರಾಣ ಕಳೆದುಕೊಂಡರು, ಇದಕ್ಕೆಲ್ಲಾ ಕಾರಣ ಆ ನೀರು ಗಂಟಿ ನಾಗಪ್ಪ, ಹೋಗಿ ಅವನನ್ನು ಹುಡುಕಿಕೊಂಡು ಬರೋಣವೆಂದರೆ ಆತ ಇದುವರೆಗೂ ಎಲ್ಲೂ ಕಾಣುತ್ತಿಲ್ಲ, ಅದೆಲ್ಲಿ ಮಾಯವಾದನೋ ಆ ನಾಗಪ್ಪ, ಅದೇ ನಾಗಲೇಖಾಳೊಂದಿಗೆ........ ಒಟ್ನಲ್ಲಿ ಒಂದು ಬಲಿಪಡೆಯಿತು ದೆವ್ವ, ಎರಡನೆಯದು ನಿನ್ನನ್ನು ಪಡೆಯಬೇಕಿತ್ತು, ಅದು ನಿನ್ನದು, ನಿನ್ನ ಆಯಸ್ಸು ಗಟ್ಟಿ ಇದೆ ಬಿಡು ಮಾರಾಯ, ಇನ್ನಾದರೂ ಜಾಗರೂಕತೆಯಿಂದ ಇದ್ದು, ಯಾರನ್ನೂ ನಂಬಬೇಡ ಎಂದರು ಚಹಾ ಅಂಗಡಿ ಮಾಲೀಕ, ಪುಟ್ಟಪ್ಪ ನವರಿಗೆ ಧೈರ್ಯ ತುಂಬಿ ಕಳಿಸಿದರು.
ಈಗ ಪುಟ್ಟಪ್ಪ ನವರಿಗೆ ಮತ್ತಷ್ಟು ಭಯ ಆವರಿಸಿತು, ಇಂದೇನೋ ಬಚಾವಾದೆ ಮುಂದೆ ಇದೇ ರೀತಿಯಾದರೆ ಏನು ಗತಿ.......ದೇವರೇ.......ಕಾಪಾಡಪ್ಪಾ....ಎಂದು ಮನದಲ್ಲೇ ಮನೆದೇವರು ನೆನೆಯುತ್ತಾ, ಮೊದಲು
ನಾಗಪ್ಪ ನನ್ನು ಹುಡುಕಿ ಕರೆತರಲೇಬೇಕೆಂದು ನಿಶ್ಚಯಿಸಿ ಇವರ ಊರಿನ ಸುತ್ತಮುತ್ತಲ ಐದಾರು ಹಳ್ಳಿಗಳ ಕೆರೆಗಳ ಹತ್ತಿರ ಎಲ್ಲಾ ಕಡೆ ನಾಗಪ್ಪ ನನ್ನು ಹುಡುಕಲಾರಂಭಿಸಿದರು ಪುಟ್ಟಪ್ಪ, ಸಿಕ್ಕಸಿಕ್ಕವರನ್ನು ಕೇಳುತ್ತಾ ಇಡೀ ಐದಾರು ಹಳ್ಳಿಗಳಲ್ಲಿ ಹುಡುಕಿದರೂ ಅವನ ಸುಳಿವಿಲ್ಲ, ಕೊನೆಗೆ ಅವನ ಊರು ಬೆಳಗಾವಿ, ಕರ್ನಾಟಕ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಒಂದು ಹಳ್ಳಿ ಅವನ ಊರು ಎಂದು ಈ ಮೊದಲೇ ಪುಟ್ಟಪ್ಪನವರಿಗೆ ತಿಳಿದಿತ್ತು, ಆದರೆ ಪುಟ್ಟಪ್ಪನವರ ಊರು ಮಲೆನಾಡಿನ ಪಶ್ಚಿಮಘಟ್ಟಗಳ ಮಡಿಲಲ್ಲಿರುವ ಒಂದು ಊರು, ಸರಿ ಅಲ್ಲಿಗೇ ಹೋಗಿ ಅವನನ್ನೇ ಭೇಟಿಯಾಗಲು ನಿರ್ಧರಿಸಿದರು ಅವರು.
ಮರುದಿನ ರಾತ್ರಿ ಬಸ್ಸಿನಲ್ಲಿ, ಅವನ ಹಳ್ಳಿಗೇ ಹೋಗಲು ತಯಾರಾದರು, ಪುಟ್ಟಪ್ಪ ನವರು, ಅವರ ಜೊತೆಗೆ ದೆವ್ವದ ಭಯದಿಂದ ಸಾವನ್ನಪ್ಪಿದ ರಾಜಾಭಟ್ಟರ ಮಗ ಶಂಕರ್ ಭಟ್ಟರು ಹಾಗೂ ಮತ್ತಿಬ್ಬರು ಗೆಳೆಯರೊಡನೆ ನಾಗಪ್ಪನ ಊರಿಗೆ ಪ್ರಯಾಣ ಬೆಳೆಸಿದರು ಪುಟ್ಟಪ್ಪನವರು.
]]>
ಇನ್ನು ಕಾಯಬೇಕಿಲ್ಲ..
ಮೈಲ್ಯಾಂಗ್ ನಿಮಗಾಗಿ ತಂದಿದೆ "ನಿಮ್ಮಿಷ್ಟದ ಕತೆಗೆ ನಿಮ್ಮದೇ ದನಿ" ಯೋಜನೆ. ನೀವು ಮಾಡಬೇಕಿರುವುದು ಇಷ್ಟೇ:
ಪ್ರಕಟಣೆಯ ಅಂತಿಮ ನಿರ್ಧಾರ ಮೈಲ್ಯಾಂಗ್ನದ್ದಾಗಿರಲಿದೆ.
ಇನ್ನೇಕೆ ತಡ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿ ನಿಮ್ಮ ದನಿಯ ಸೊಬಗಿನಲ್ಲಿ !
]]>